ಯಾದವಾಡದಲ್ಲಿ ಸಾಂಸ್ಕೃತಿಕ ಉತ್ಸವ ಸಂಭ್ರಮ
ಮೂಡಲಗಿ: ನಾಡಿನ ತುಂಬೆಲ್ಲ ಚೆನ್ನಾಗಿ ಮಳೆಯಾಗಿದೆ. ರೈತರನ್ನು ಹಾಗೂ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿರಬಹುದು ಆದರೆ ನಾವು ಕೈಕಟ್ಟಿಕೊಂಡು ಕೂರುವ ಜಾಯಮಾನದವರಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಮೂಡಲಗಿ ತಾಲೂಕಿನ ಯಾದವಾಡದಲ್ಲಿ ಸಾಂಸ್ಕೃತಿಕ ಉತ್ಸವಕ್ಕೆ ಉದ್ಘಾಟಕರಾಗಿ ಆಗಮಿಸಿದ್ದ ಲಕ್ಷ್ಮೀ ಹೆಬ್ಬಾಳ್ಕರ ಜನರನ್ನು ಉದ್ದೇಶಿಸಿ ಮಾತನಾಡಿದರು.
ಯಾದವಾಡ ಗ್ರಾಮದಿಂದಲೇ ಹೆಚ್ಚಾಗಿ ನಮಗೆ ಮತ ಬಂದಿವೆ. ನಾವು ಯಾವುದೇ ಕೆಲಸ ಮಾಡಲು ಮುಂದಾದರೆ ಅದಕ್ಕೆ ಕೆಲ ವಿಘ್ನ ಇದ್ದೇ ಇರುತ್ತವೆ.16 ವರ್ಷದಿಂದ ಕನ್ನಡ ಭಾಷೆಯ ಉಳಿವಿಗಾಗಿ ಕಾರ್ಯಕ್ರಮ ಮಾಡಿಕೊಂಡು ಬರುತ್ತಿರುವುದು ನಮಗೆಲ್ಲ ಹೆಮ್ಮೆ. ಕನ್ನಡ ಮೇಲಿನ ಪ್ರೀತಿ,ದೇಶಭಕ್ತಿ ಮತ್ತು ನಾಡ ಭಕ್ತಿ ಕೂಡಾ ನಮಗಿದೆ.ಪಕ್ಷ ಭೇದ ಮರೆತು ಎಲ್ಲರೂ ಒಂದೇ ಕಡೆ ಕೂಡಿರುವುದು ಗ್ರಾಮದ ಒಗ್ಗಟ್ಟಿನ ಶಕ್ತಿ ತೋರಿಸಿದ್ದೀರಿ. ನಾನು ನಿಮಗೆ ಸದಾ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಯಾದವಾಡ ಗ್ರಾಮದಲ್ಲಿ ಕನ್ನಡ ಹೋರಾಟಗಾರರಾದ ಯುವ ಪಡೆಯಿಂದ ಕನ್ನಡ ಭಾಷೆಯ ಉಳಿವಿಗಾಗಿ “2024-ಯಾದವಾಡ ಸಾಂಸ್ಕೃತಿಕ ಉತ್ಸವ” ಹೆಸರಿನಿಂದ ಕಾರ್ಯಕ್ರಮ ಅದ್ಧೂರಿಯಾಗಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಸಂಘಟಕರಿಂದ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕ ಕಲ್ಮೇಶ ಗಾಣಗಿ, ಯಾದವಾಡದ ಗ್ರಾಮದ ಜನರ ಪ್ರೋತ್ಸಾಹದಿಂದ, ನಿಮ್ಮ ಸಹಕಾರ ಹಾಗೂ ನಮ್ಮ ಸಂಘಟಕರ ಪರಿಶ್ರಮದಿಂದ ಸತತ ೧೬ ವರ್ಷಗಳಿಂದ “ಯಾದವಾಡ ಸಾಂಸ್ಕೃತಿಕ ಉತ್ಸವ” ಮಾಡಿಕೊಂಡು ಬರುತ್ತಿರುವುದು ನಮ್ಮ ಹೆಮ್ಮೆ ಎಂದರು.
ಗೋಕಾವಿ ನಾಡಿನ ಕೆಲ ಕವಿಗಳ ಹೆಸರು ಹಾಗೂ ಇತಿಹಾಸದ ಬಗ್ಗೆ ಕಾಂಗ್ರೆಸ್ ಮುಖಂಡರಾದ ಡಾ. ಮಹಾಂತೇಶ ಕಡಾಡಿ ಮೆಲುಕು ಹಾಕಿದರು. ಯಾದವಾಡ ಚೌಕಿಮಠದ ಶ್ರೀ ಶಿವಯೋಗಿ ದೇವರು, ಶಿವಾನಂದ ಮಠದ, ಶ್ರೀಬಸವರಾಜ ಸ್ವಾಮೀಜಿಗಳ ಸಾನ್ನಿಧ್ಯ ದಲ್ಲಿ ಸಾಂಸ್ಕೃತಿಕ ಹಬ್ಬ ನಡೆಯಿತು.
ಯಾದವಾಡ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಶಿವಪ್ಪಗೌಡ ನ್ಯಾಮಗೌಡ, ಈರಣ್ಣ ಕೊಣ್ಣೂರ, ಮಲ್ಲಪ್ಪ ಮದಗುಣಕಿ, ಬಿ.ಬಿ.ಹಂದಿಗುಂದ, ಶ್ರೀಹರ್ಷಾ ನಿಲೋಪಂತ, ರಾವಸಾಬ ಬೆಳಕೂಡ, ಶಿವನಗೌಡ ಪಾಟೀಲ, ರಮೇಶ ಕತ್ತಿ, ಮಲ್ಲಿಕಾರ್ಜುನ ಚೌಕಾಶಿ, ಈರಣ್ಣ ಮುದ್ದಾಪೂರ, ಹಣಮಂತ ಚಿಕ್ಕನಗೌಡ್ರು, ಪ್ರಕಾಶ ಕಾಳಶಟ್ಟಿ, ಘಟಕದ ಅಧ್ಯಕ್ಷ ಅಜಯ ಜಾಧವ, ಕುಮಾರ ಹಿರೇಮಠ, ಮೌನೇಶ ಪತ್ತಾರ, ಮಂಜುನಾಥ ರೊಟ್ಟಿ ಇನ್ನೂ ಅನೇಕ ಕನ್ನಡಪರ ಹೋರಾಟಗಾರರು ಮತ್ತು ಗಣ್ಯರು ಉಪಸ್ಥಿತರಿದ್ದರು.
ಸಮಾರಂಭದ ನಂತರ “ರಾಷ್ಟ್ರ ಮಟ್ಟದ ನೃತ್ಯ ಸ್ಫರ್ಧೆ” ನಡೆಯಿತು.