ಅನುಭಾವ ಗೋಷ್ಠಿ, ಸನ್ಮಾನ, ಪೂಜ್ಯರ ಧರ್ಮ ಸಭೆ ರಸಮಂಜರಿ, ಜಂಗಿ ಕುಸ್ತಿಗಳು…..
ಮೂಡಲಗಿ: ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಪುಣ್ಯಾರಣ್ಯ ಸಿದ್ಧ ಸಂಸ್ಥಾನಮಠದ ಜಾತ್ರೆಯು ಪೀಠಾಧಿಪತಿ ಗುರುಬಸವಲಿಂಗ ಸ್ವಾಮಿಗಳ ಸಾನ್ನಿಧ್ಯದಲ್ಲಿ ಮಾ. ೨೯ರಿಂದ ಏ. ೧ರ ವರೆಗೆ ಜರುಗಲಿದೆ.
ಮಾ. ೨೯ರಂದು ಸಂಜೆ ೬ಕ್ಕೆ ಹುಕ್ಕೇರಿಯ ವಿರಕ್ತಮಠದ ಶಿವಬಸವ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಶಿವಾನುಭವ ಕಾರ್ಯಕ್ರಮ ಇರುವುದು. ಪ್ರಜಾವಾಣಿ ಪತ್ರಿಕೆಯ ಬೆಳಗಾವಿ ಜಿಲ್ಲಾ ಹಿರಿಯ ವರದಿಗಾರ, ಸಾಹಿತಿ ಸಂತೋಷ ಚಿನಗುಡಿ ಅವರು ‘ವಚನ ಮತ್ತು ಪ್ರಮಾಣ ವಚನ: ಆಧುನಿಕ ಜೀವನ ಮತ್ತು ಅನುಷ್ಠಾನ” ಕುರಿತು ಉಪನ್ಯಾಸ ನೀಡುವರು.

ಮಾ. ೩೦ರಂದು ಬೆಳಿಗ್ಗೆ ೮ಕ್ಕೆ ಷಟ್ಸ್ಥಲ ಧ್ವಜಾರೋಹಣ ಹಾಗೂ ಯುಗಾದಿ ಪಾಡ್ಯ ಪಂಚಾಂಗ ಶ್ರವಣ. ಬೆಳಿಗ್ಗೆ ೯ಕ್ಕೆ ಗುಡಗುಂಟಿಯ ಸದಾನಂದ ಶಿವಾಚಾರ್ಯರಿಂದ ಅಯ್ಯಾಚಾರ ದೀಕ್ಷಾ ಕಾರ್ಯಕ್ರಮ. ಮಧ್ಯಾಹ್ನ ೧೨ಕ್ಕೆ ಪಾದ ಪೂಜೆ, ಮಹಾಪ್ರಸಾದ ಇರುವುದು. ಸಂಜೆ ೬.೩೦ಕ್ಕೆ ಡಂಬಳ ಗದಗದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ಮತ್ತು ಬೆಳಗಾವಿಯ ಡಾ. ಅಲ್ಲಮಪ್ರಭು ಸ್ವಾಮೀಜಿಗಳ ಸಮ್ಮುಖದಲ್ಲಿ ಸನ್ಮಾನ ಕಾರ್ಯಕ್ರಮ ಇರುವುದು.
ಮುಖ್ಯ ಅತಿಥಿಗಳಾಗಿ ಸಂಸದ ಜಗದೀಶ ಶೆಟ್ಟರ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭಾಗವಹಿಸುವರು. ರಾಜ್ಯಪ್ರಶಸ್ತಿ ಪುರಸ್ಕೃತ ಆಶು ಕವಿ ಸಿದ್ದಪ್ಪ ಬಿದರಿ ಅವರಿಗೆ ಸನ್ಮಾನ ಇರುವುದು.
ಮಾ. ೩೧ರಂದು ಬೆಳಿಗ್ಗೆ ೬ಕ್ಕೆ ದುರದುಂಡೀಶ್ವರ ಗದ್ದುಗೆಗೆ ಮಹಾರುದ್ರಾಭಿಷೇಕ, ಬೆಳಿಗ್ಗೆ ೧೧ಕ್ಕೆ ಪಲ್ಲಕ್ಕಿ ಉತ್ಸವ ಜರುಗಲಿದೆ. ಮಧ್ಯಾಹ್ನ ೧ಕ್ಕೆ ಮಹಾಪ್ರಸಾದ ಇರುವುದು. ಸಂಜೆ ೬ಕ್ಕೆ ಧರ್ಮ ಚಿಂತನ ಗೋಷ್ಠಿ ಇರುವುದು. ಕಡಕೋಳದ ಸಚ್ಛಿದಾನಂದ ಸ್ವಾಮೀಜಿ, ಹಂದಿಗುಂದ ಅಡಿ ಶಿವಾನಂದ ಸ್ವಾಮೀಜಿ, ಶೇಗುಣಶಿಯ ಡಾ. ಮಹಾಂತ ಸ್ವಾಮೀಜಿಯವರ ಸಾನ್ನಿಧ್ಯ ಇರುವುದು. ಮುಖ್ಯ ಅತಿಥಿಗಳಾಗಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಭಾಗವಹಿಸುವರು. ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಸನ್ಮಾನ ಇರುವುದು. ಮಠದ ಸದ್ಭಕ್ತರಿಗೆ ಸನ್ಮಾನ ಇರುವುದು. ರಾತ್ರಿ ೧೦.೩೦ಕ್ಕೆ ರಸಮಂಜರಿ ಇರುವುದು. ಏ. ೧ರಂದು ಮಧ್ಯಾಹ್ನ ೧೨ಕ್ಕೆ ಪಾದಪೂಜೆ, ಮಹಾಪ್ರಸಾದ ಮತ್ತು ಸಂಜೆ ೫ಕ್ಕೆ ಜಂಗಿ ಕುಸ್ತಿ ಜರುಗುವವು ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.