ಬಿಡಿಸಿಸಿ ಬ್ಯಾಂಕ್ ಚುನಾವಣೆ
ಬೆಳಗಾವಿ- ಅಕ್ಟೋಬರ್ 19 ರಂದು ನಡೆಯುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಿಪ್ಪಾಣಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿರುವ ನಿಯೋಜಿತ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆಯವರ ಆಯ್ಕೆ ನಿಶ್ಚಿತವೆಂದು ಬೆಮುಲ್ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಸೋಮವಾರದಂದು ನಗರದ
ಹೊರವಲಯದಲ್ಲಿರುವ ಖಾಸಗಿ ಹೊಟೇಲ್ ನಲ್ಲಿ ಆಯೋಜಿತಗೊಂಡಿರುವ ನಿಪ್ಪಾಣಿ ಕ್ಷೇತ್ರದ ಪಿಕೆಪಿಎಸ್ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕ್ ಅಧಿಕಾರ ಚುಕ್ಕಾಣಿ ಹಿಡಿಯಲು ಈಗಾಗಲೇ ರಣತಂತ್ರಗಳನ್ನು ರೂಪಿಸಿದ್ದೇವೆ ಎಂದು ತಿಳಿಸಿದರು.
ನಿಪ್ಪಾಣಿ ಕ್ಷೇತ್ರದಲ್ಲಿ ಸುಮಾರು 119 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು, ಅವುಗಳಲ್ಲಿ ನಮ್ಮ ಪೆನೆಲ್ ಅಭ್ಯರ್ಥಿಯಾಗಿರುವ ಅಣ್ಣಾಸಾಹೇಬ ಜೊಲ್ಲೆಯವರಿಗೆ ಈಗಾಗಲೇ 72 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಬೆಂಬಲಿಸಿವೆ. ಇದರಿಂದ ಜೊಲ್ಲೆಯವರ ಆಯ್ಕೆಯು ಬಹುತೇಕ ಖಚಿತವಾಗಿದೆ. ಜಿಲ್ಲೆಯ ಎಲ್ಲ ಪಕ್ಷಗಳ ನಾಯಕರು ಪಕ್ಷ ಬೇಧ ಮರೆತು ಸಹಕಾರ ಮನೋಭಾವನೆಯಿಂದ ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಜಿಲ್ಲೆಯ ಎಲ್ಲ ಹಿರಿಯರ ಮುಂದಾಳುತನದಲ್ಲಿ ಈ ಚುನಾವಣೆಯು ನಡೆಯಲಿದೆ. ಒಟ್ಟು 16 ಸ್ಥಾನಗಳ ಪೈಕಿ 12 ಸ್ಥಾನಗಳನ್ನು ಗೆಲ್ಲಿಸಲು ನಾವುಗಳು ಪಣ ತೊಟ್ಟಿದ್ದು, ಬ್ಯಾಂಕಿನ ಆಡಳಿತ ಚುಕ್ಕಾಣಿಯನ್ನು ನಾವೇ ಹಿಡಿಯುತ್ತೇವೆ. ಇದರಲ್ಲಿ ಯಾವ ಸಂಶಯವೂ ಇಲ್ಲವೆಂದು ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಮಾಜಿ ಸಂಸದ, ನಿಪ್ಪಾಣಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆಯವರು ಮಾತನಾಡಿ, ರೈತರ ಸಂಸ್ಥೆಯಾಗಿರುವ ಡಿಸಿಸಿ ಬ್ಯಾಂಕಿನ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ರೈತರ ಸೇವೆಯೇ ನಮ್ಮ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.
ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗೋಡೆ, ನಿಪ್ಪಾಣಿ ಹಾಲ ಸಿದ್ದನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಎಂ.ಕೆ.ಪಾಟೀಲ, ನಿಪ್ಪಾಣಿ ಮಾಜಿ ನಗರಾಧ್ಯಕ್ಷ ಜಯವಂತ ಪಾಟೀಲ, ನಿಪ್ಪಾಣಿ ಕ್ಷೇತ್ರದ ಪಿಕೆಪಿಎಸ್ ಅಧ್ಯಕ್ಷರು, ಮತ್ತು 72 ಡೆಲಿಗೇಟರ್ಸ್ ಸಂದರ್ಭದಲ್ಲಿ ಉಪಸ್ಥಿತರಿದ್ದರು.