ಬೀದರ – ಫುಲ್ ಟೈಮ್ ಕೆಲಸ ಕೊಡಿಸುವುದಾಗಿ ಹೇಳಿ ಆನ್ ಲೈನ್ ನಲ್ಲಿ ಪರಿಚಯವಾದ ವ್ಯಕ್ತಿ ವಂಚನೆ ಮಾಡಿದ ಹಿನ್ನೆಲೆ ಬಾವಿಗೆ ಹಾರಿ ಉಪನ್ಯಾಸಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಸವಕಲ್ಯಾಣ ನಗರದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಆರತಿ ಕನಾಟೆ (28) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಉಪನ್ಯಾಸಕಿ.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಆನ್ ಲೈನ್ ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಹಣ ವ್ಯವಹಾರ ನಡೆಸಿ ಇವರು ವಂಚನೆಗೆ ಒಳಗಾಗಿದ್ದಾರೆ.
ಆನ್ ಲೈನ್ ನಲ್ಲಿ ಮನೆಯಲ್ಲೆ ಕುಳಿತು ಉದ್ಯಮ ಮಾಡಲು ಹಣ ಹೂಡಿಕೆ ಮಾಡಿ ಎಂದು ಹೇಳಿದ ವ್ಯಕ್ತಿಯ ಮಾತು ನಂಬಿ ರೂ. 2.50 ಲಕ್ಷದ ವರೆಗೆ ಹಣ ಕಳಿಸಿದ ಉಪನ್ಯಾಸಕಿ ಅಲ್ಲಿ ಇಲ್ಲಿ ಸಾಲ ಮಾಡಿಕೊಂಡಿದ್ದರು. ಬಳಿಕ ಇನ್ನೂ 82 ಸಾವಿರ ಹಣ ಕಳಿಸಿದರೆ ಉದ್ಯೋಗದ ಜೊತೆಗೆ ಹೂಡಿಕೆ ಹಣ ಎಲ್ಲಾ ವಾಪಸ್ ನೀಡುತ್ತೇವೆ ಎಂದು ಸಂದೇಶ ಕಳುಹಿಸಿದ ವ್ಯಕ್ತಿ. ತಾನು ವಂಚನೆಗೆ ಒಳಗಾದದ್ದು ಗೊತ್ತಾಗುತ್ತಲೇ ನೊಂದುಕೊಂಡ ಉಪನ್ಯಾಸಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ಹೂಡಿಕೆ ಮಾಡಿದ್ದ ಏಜೆನ್ಸಿ ಬಗ್ಗೆ ಡೆತ್ ನೋಟ್ ನಲ್ಲಿ ಬರೆದಿದ್ದು ತನ್ನ ಬಗ್ಗೆ ಯಾರೂ ತಪ್ಪು ತಿಳಿಯಬಾರದೆಂಬುದಾಗಿಯೂ ಹೃದಯಸ್ಪರ್ಶಿ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಬಸವಕಲ್ಯಾಣ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೈಬರ್ ಪೊಲೀಸ್ ಸ್ಟ್ರಾಂಗ್ ಆಗಲಿ:
ಸಾಲ ನೀಡುವುದಾಗಿ, ಉದ್ಯೋಗ ನೀಡುವುದಾಗಿ ಇನ್ನೂ ಮುಂತಾದ ಆಮಿಷಗಳನ್ನೊಡ್ಡಿ ವಂಚನೆ ಮಾಡುವ ಜಾಲಗಳು ಹೆಚ್ಚಿಕೊಂಡಿವೆ. ದಿನೇ ದಿನೇ ಇವುಗಳ ಹಾವಳಿ ಹೆಚ್ಚುತ್ತಿದ್ದರೂ ಸಾಕಷ್ಟು ಸುದ್ದಿಗಳು ಬರುತ್ತಿದ್ದರೂ ಕಲಿತವರೇ ಇಂಥ ಜಾಲಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸ.
ಬ್ಯಾಂಕುಗಳು, ಸರ್ಕಾರಗಳು ಇಂಥ ವಂಚನೆಗಳಿಂದ ದೂರವಿರಲು ಮೇಲಿಂದ ಮೇಲೆ ಮನವಿ ಮಾಡಿಕೊಳ್ಳುತ್ತವೆ. ಯಾರೇ ಕೇಳಿದರೂ ಬ್ಯಾಂಕ್ ಡಿಟೇಲ್ಸ್, ಡೆಬಿಟ್ ಕಾರ್ಡ್ ಸಿವಿವಿ, ಓಟಿಪಿ ಸಂಖ್ಯೆಗಳನ್ನು ನೀಡಬಾರದೆಂದು ಹೇಳುತ್ತವೆ ಆದರೂ ಇಂಥ ಘಟನೆಗಳು ನಡೆಯುತ್ತಿವೆ.
ಇನ್ನೂ ವಿಚಿತ್ರವೆಂದರೆ ಬ್ಯಾಂಕ್ ಖಾತೆಯಿಂದ ಮತ್ತೊಂದು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿದ್ದರೂ ಇಂಥ ವಂಚಕರನ್ನು ಕಂಡು ಹಿಡಿಯಲು ಸೈಬರ್ ಪೊಲೀಸರಿಗೆ ಆಗುತ್ತಿಲ್ಲ. ಸೈಬರ್ ಪೊಲೀಸ್ ಇನ್ನೂ ಸ್ಟ್ರಾಂಗ್ ಆಗಬೇಕಿದೆ. ಇಂಥ ಘಟನೆಗಳಿಗೆ ಅಮಾಯಕರು ಬಲಿಯಾಗುವುದನ್ನು ತಪ್ಪಿಸಬೇಕಿದೆ.
ವರದಿ: ನಂದಕುಮಾರ ಕರಂಜೆ, ಬೀದರ