Homeಸುದ್ದಿಗಳುಸಮಾಜದಲ್ಲಿ ಮಹಿಳೆ ಅಬಲೆಯಲ್ಲ ಸಬಲೆ: ಭಾರತಿ ಮಧಬಾವಿ

ಸಮಾಜದಲ್ಲಿ ಮಹಿಳೆ ಅಬಲೆಯಲ್ಲ ಸಬಲೆ: ಭಾರತಿ ಮಧಬಾವಿ

ಮಹಿಳಾ ಸಬಲೀಕರಣ ಎಂದರೆ ಮಹಿಳೆಯರ ಸುರಕ್ಷತೆಗೆ ಒತ್ತು ನೀಡುವುದಾಗಿದೆ. ಮಹಿಳೆಯರ ಮೇಲೆ ಸಮಾಜದಲ್ಲಿ ನಡೆಯುವ ದೌರ್ಜನ್ಯದ ಬಗ್ಗೆ ಅರಿವು ಮೂಡಿಸಿ ಧೈರ್ಯ ತುಂಬಿ ಸ್ವಾವಲಂಬಿಗಳಾಗಿಸಬೇಕು. ವೇದಗಳ ಕಾಲದಲ್ಲೂ ಮಹಿಳೆಯರಿಗೆ ಸಮಾನ ಅವಕಾಶಗಳಿದ್ದವು. ಮಹಿಳೆಯರನ್ನು ಕುಟುಂಬಕ್ಕೆ ಸೀಮಿತಗೊಳಿಸದೆ ಎಲ್ಲಾ ಕ್ಷೇತ್ರದಲ್ಲೂ ಭಾಗವಹಿಸುವಂತೆ ಅವಕಾಶ ಕಲ್ಪಿಸಬೇಕು ಎಂದು ಗೋಕಾಕದ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷರಾದ ಶ್ರೀಮತಿ ಭಾರತಿ ಮಧಬಾವಿ ಹೇಳಿದರು.

ಅವರು ತುಕ್ಕಾನಟ್ಟಿ ಗ್ರಾಮದಲ್ಲಿ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ನಾಲ್ಕನೆಯ ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಮಹಿಳೆ ಎಲ್ಲ ಕೆಲಸ ನಿಭಾಯಿಸಲು ಸಶಕ್ತಳಾಗಿದ್ದಾಳೆ. ಮಗಳಾಗಿ, ಸೊಸೆಯಾಗಿ, ತಾಯಿಯಾಗಿ ವಿವಿಧ ಸ್ತರಗಳಲ್ಲಿ ತನ್ನ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದ್ದಾಳೆ. ಆದರೆ, ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೆ ಭಾರತದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಇನ್ನೋರ್ವ ಅತಿಥಿ ಗೋಕಾಕದ ಭಾವಯಾನ ಮಹಿಳಾ ವೇದಿಕೆ ಅಧ್ಯಕ್ಷರಾದ ಡಾ. ಮಹಾನಂದಾ ಪಾಟೀಲ ಮಾತನಾಡಿ, ನ್ಯೂಯಾರ್ಕ್‌ನಲ್ಲಿ 1908 ರಂದು ಸುಮಾರು 15 ಸಾವಿರ ಮಹಿಳೆಯರು ತಮ್ಮ ವಿರುದ್ಧದ ಶೋಷಣೆಯಿಂದ ಹೊರಬರಲು ಪ್ರತಿಭಟನೆಯಲ್ಲಿ ತೊಡಗಿದ್ದರು. ನಂತರದ ಬೆಳವಣಿಗೆಯಲ್ಲಿ ವಿಶ್ವಸಂಸ್ಥೆಯು 1975 ಮಾರ್ಚ್‌ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲು ಕರೆಕೊಟ್ಟಿದ್ದು ಸಂತೋಷದ ಸಂಗತಿ. ಮಹಿಳೆಯು ನಾಲ್ಕು ಗೋಡೆಗಳ ಮಧ್ಯೆ ಕುಟುಂಬ ನಿರ್ವಹಣೆಗಷ್ಟೇ ಸೀಮಿತವೆಂಬ ಕಾಲ ಬದಲಾಗಿದೆ. ಮಹಿಳೆಯರು ಈಗ ಪುರುಷರಿಗೆ ಸರಿ ಸಮಾನ. ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಉನ್ನತ ಸ್ಥಾನ ಅಲಂಕರಿಸಿ ಪುರುಷರಿಗೆ ಸಮನಾಗಿ ಬೆಳೆಯಬೇಕು ಎಂದು ನುಡಿದರು.

ಶ್ರೀಮತಿ ಸುಲೋಚನಾ ಶಿ. ಮರ್ದಿ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿ, ನಮ್ಮ ದೇಶ ನಿಂತು ನೀರಾಗದ ಚಲನಾಶೀಲ ಸಾಮಾಜಿಕ ವ್ಯವಸ್ಥೆ ರೂಪಿಸಿಕೊಂಡಿದೆ. ಒಂದು ಸಮಾಜದ ಏಳಿಗೆಗೆ ಜೋಡೆತ್ತಿನ ರೀತಿಯಲ್ಲಿ ಹೆಣ್ಣು ಮತ್ತು ಗಂಡು ಇಬ್ಬರೂ ಪ್ರಮುಖರಾಗುತ್ತಾರೆ. ಈ ದೇಶದಲ್ಲಿ ಅವಕಾಶಗಳು ಸಾಕಷ್ಟಿವೆ. ಅವುಗಳನ್ನು ಬಳಸಿಕೊಳ್ಳುವ ಮೂಲಕ ಎತ್ತರಕ್ಕೆ ಬೆಳೆಯಬೇಕು ಎಂದು ಹೇಳಿದರು.

ಸಹ ಕಾರ್ಯಕ್ರಮಾಧಿಕಾರಿ ಡಿ. ಎಸ್. ಹುಗ್ಗಿ ಪ್ರಾಸ್ತಾವಿಕ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡುತ್ತಿರುವ ಮಹಿಳೆ ಸಬಲೆಯೇ ಹೊರತು ಅಬಲೆಯಲ್ಲ. ಮಹಿಳೆಯರು ಯಾವುದೇ ಕಾರಣಕ್ಕೂ ಅಸ್ತಿತ್ವ ಕಳೆದುಕೊಳ್ಳದೆ ಸ್ವಾಭಿಮಾನದಿಂದ ಬದುಕಬೇಕು ಎಂದರು.

ಕಾರ್ಯಕ್ರಮದಲ್ಲಿ  ಡಾ. ಪ್ರಮೀಳಾ ಉಪ್ಪಾರ, ಗ್ರಾಮ ಪಂಚಾಯತ ಸದಸ್ಯರಾದ ಯಲ್ಲವ್ವ ರಾ. ಬಿಳಿಗೌಡ್ರ, ಮಹಾದೇವಿ ರ. ಗದಾಡಿ, ಗಾಯತ್ರಿ ರಾ. ಬಾಗೇವಾಡಿ, ಕಲಾವತಿ ಗದಾಡಿ, ಸುನಂದಾ ಭಜಂತ್ರಿ, ಸಿದ್ದವ್ವ ಸಿ. ಸಂಗಾನಟ್ಟಿ, ರತ್ನವ್ವ ಮ. ನಾಂವಿ, ಅಧ್ಯಾಪಕರಾದ ವಸುಂಧರಾ ಕಾಳೆ, ರಾಜಶ್ರೀ ತೋಟಗಿ, ಪರ್ವೀಣ ಅತ್ತಾರ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ಶಂಕರ ಎಂ. ನಿಂಗನೂರ, ಎಂ. ಬಿ. ಕುಲಮೂರ  ಮುಂತಾದವರು ಉಪಸ್ಥಿತರಿದ್ದರು.

ಶಿಬಿರಾರ್ಥಿ ಪೂಜಾ ಗಂಗಾರಾಮ ಗುಡಗುಡಿ ನಿರೂಪಿಸಿದರು.  ಸುಮತಿ ಪತ್ತಾರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಗಾಯತ್ರಿ ಹಾಗೂ ಸಂಘಡಿಗರು ಎನ್ಎಸ್ಎಸ್ ಗೀತೆ ಹಾಡಿದರು. ಕೀರ್ತಿ ಗದಾಡಿ ಸ್ವಾಗತಿಸಿದರು. ಕೀರ್ತಿ ಬೆಳಗಲಿ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group