ಮೂಡಲಗಿ: ದೊಡ್ಡ ದೊಡ್ಡವರ ಮಾತುಗಳನ್ನು ಕೇಳಿದರೆ ಮನುಷ್ಯ ದೊಡ್ಡ ವ್ಯಕ್ತಿಯಾಗುವುದಿಲ್ಲ, ಬದಲಾಗಿ ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು, ಆ ಕನಸಿನ ಮೇಲೆ ಆತ್ಮವಿಶ್ವಾಸ ಇರಬೇಕು, ಜೊತೆ ಜೊತೆಗೆ ತ್ಯಾಗ ಮನೋಭಾವದಿಂದ ನೀತಿ ಮಾರ್ಗದಲ್ಲಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತ ಪ್ರಯತ್ನಶೀಲರಾಗ ಬೇಕು ಆಗ ಕೀರ್ತಿ ಗೌರವಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ಬೀದರ್ ಚಿದಂಬರಾಶ್ರಮ ಸಿದ್ಧಾರೂಢ ಮಠದ ಡಾ. ಶಿವಕುಮಾರ ಸ್ವಾಮೀಜಿಗಳು ಹೇಳಿದರು.
ಸೋಮವಾರದಂದು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆಯ್.ಕ್ಯೂಎ.ಸಿ, ಯುತ್ ರೆಡ್ ಕ್ರಾಸ್, ಎನ್.ಎಸ್. ಎಸ್ ಮತ್ತು ರೋವರ್ ಸ್ಕೌಟ್ಸ ಘಟಕಗಳ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ ೧೬೦ನೇ ಜಯಂತಿ ಹಾಗೂ ರಾಷ್ಟ್ರೀಯ ಯುವ ಸಪ್ತಾಹ ದಿನಾಚರಣೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ತಂದೆ-ತಾಯಿ ಮತ್ತು ಗುರುಗಳು ಈ ಜಗತ್ತಿನ ಜೀವಂತ ದೇವರು ಅವರನ್ನು ಪೂಜ್ಯನೀಯವಾಗಿ ಕಾಣಿರಿ ಎಂದ ಅವರು ಕೇವಲ ತನ್ನ ಶ್ರೇಯಸ್ಸಿಗೆ ದುಡಿಯುವವನಿಗೆ ಜಗಮನ್ನಣೆ ಸಿಗುವುದಿಲ್ಲ ತನ್ನನ್ನು ಮರೆತು ಜಗತ್ತಿನ ಒಳಿತಿಗೆ ಶ್ರಮಿಸುವವನನ್ನು ಜಗತ್ತು ಗೌರವಿಸುತ್ತದೆ ಎಂದರು.
ಕೇವಲ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಸಕ್ಕೂಬಾಯಿ, ಅಕ್ಕಮಹಾದೇವಿ, ಬಸವಣ್ಣ ನಂತಹ ಮಹಾತ್ಮರ ಕುರಿತು ಮಾತನಾಡುತ್ತ ಜೀವನ ಕಳೆಯುವ ಬದಲು ನಾವೇ ಅವರಾಗಲು ಪ್ರಯತ್ನಿಸೋಣ ಎಂದರು.
ಮುಖ್ಯ ಅತಿಥಿ ನಾಗನೂರ ಅಥರ್ವ ವಿಜ್ಞಾನ ಮಹಾವಿದ್ಯಾಲಯದ ಉಪನ್ಯಾಸಕ ಪ್ರೊ. ಚೇತನ ಜೋಗನವರ ಅವರು ಸುಸ್ಥಿರ ಅಭಿವೃದ್ಧಿಯಲ್ಲಿ ಯುವಶಕ್ತಿಯ ಪಾಠ ಕುರಿತು ಮಾತನಾಡಿ, ಹೀಗಿರುವ ನೈಸರ್ಗಿಕ ಸಂಪನ್ಮೂಲಗಳನ್ನು ನಾವು ಬಳಸಿಕೊಂಡು ಅಭಿವೃದ್ಧಿ ಹೊಂದುವದರೊಂದಿಗೆ ಮುಂದಿನ ಜನಾಂಗಕ್ಕೆ ನೈಸರ್ಗಿಕ ಸಂಪನ್ಮೂಲಗಳನ್ನು ಬಿಟ್ಟು ಕೊಡುವುದೇ ಸುಸ್ಥಿರ ಅಭಿವೃದ್ಧಿಯ ಸೂತ್ರ ಆ ನಿಟ್ಟಿನಲ್ಲಿ ಯುವಶಕ್ತಿ ಅರಿತು ಸಾಗಬೇಕು ಎಂದರು.
ಸ್ವಾಮಿ ವಿವೇಕಾನಂದರ ಕುರಿತು ವಿದ್ಯಾರ್ಥಿಗಳಾದ ಮಹಾಲಿಂಗ ಪಾಟೀಲ ಮತ್ತು ಆರತಿ ನೂಲಿ ಮಾತನಾಡಿದರು.
ಅಧ್ಯಕ್ಷತೆಯನ್ನು ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ ವಹಿಸಿದ್ದರು.
ಸಮಾರಂಭದ ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ವೀರಣ್ಣ ಹೊಸೂರು, ಎ.ಟಿ.ಗಿರಡ್ಡಿ, ಬಿ. ಎಚ್. ಸೋನವಾಲ್ಕರ, ಪ್ರದೀಪ್ ಲಂಕೆಪ್ಪನವರ, ಅನೀಲ ಸತರಡ್ಡಿ, ರವಿ ನಂದಗಾಂವಿ ಇದ್ದರು.
ಗೋಪಾಲ ದರೂರ ಪ್ರಾರ್ಥಿಸಿದರು, ಪ್ರಾಚಾರ್ಯ ಎ.ಪಿ.ರಡ್ಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರೊ.ಎಸ್.ಎಮ್.ಗುಜಗೊಂಡ ಪರಿಚಯಿಸಿದರು, ಸುಜಾತಾ ಹಿರೇಕೋಡಿ ಮತ್ತು ಅರ್ಪಿತ ಜೇನಕಟ್ಟಿ ನಿರೂಪಿಸಿದರು, ಪ್ರೊ.ಎಸ್.ಜಿ.ನಾಯಿಕ ವಂದಿಸಿದರು.