ಬೆಳಗಾವಿ: ವಿಶ್ವ ಪರಂಪರೆ ದಿನಾಚರಣೆ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ರಾಣಿ ಚನ್ನಮ್ಮ ಸ್ಮಾರಕ ಸರಕಾರಿ ವಸ್ತು ಸಂಗ್ರಹಾಲಯ ಕಿತ್ತೂರು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಕಿತ್ತೂರ ಇವುಗಳ ಆಶ್ರಯದಲ್ಲಿ ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಕಿತ್ತೂರಿನ ರಾಣಿ ಚನ್ನಮ್ಮ ಕೋಟೆ ಅವರಣದಲ್ಲಿ ಪರಂಪರೆ ಮತ್ತು ಐತಿಹಾಸಿಕ ಸ್ಮಾರಕಗಳ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಚಿತ್ರಕಲಾ ಸ್ಪರ್ಧೆ ಮತ್ತು ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆಯನ್ನು ವಿಶ್ರಾಂತ ಪ್ರಾಚಾರ್ಯರು ಮತ್ತು ಕಿತ್ತೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷರಾದ ಡಾ. ಎಸ್ ಬಿ ದಳವಾಯಿ ಉದ್ಘಾಟಿಸಿದರು.
ಸುಮಾರು 40 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ಮತ್ತು ಕಿತ್ತೂರು ಇತಿಹಾಸಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ನೀಡಲಾಯಿತು.
ಬಹುಮಾನ ವಿತರಕರಾಗಿ ಆಗಮಿಸಿದ ಕಿತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್ ಟಿ ಬಳಿಗಾರ ಮಾತನಾಡಿ, ವಿದ್ಯಾರ್ಥಿಗಳು ರಜಾ ದಿನಗಳಲ್ಲಿ ಇಂತಹ ಸೃಜನಶೀಲ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಕ್ಕೆ ಅಭಿನಂದಿಸಿದರು.
ರಾಜಶೇಖರ ರಗಟಿ ಸ್ವಾಗತಿಸಿದರು. ಕ್ಯೂರೆಟರ್ ರಾಘವೇಂದ್ರ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಮಹೇಶ ಚನ್ನಂಗಿ, ಶ್ರೀಮತಿ ಸೌಮ್ಯ ರಾಘವೇಂದ್ರ,ಪಾಲಕರು, ವಿವಿಧ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.