ಮಧ್ವ ಜಯಂತಿ ಅಂಗವಾಗಿ ಬೃಹತ್ ಶೋಭಾಯಾತ್ರೆ
ಶ್ರೀಮಧ್ವ ಜಯಂತಿ ಅಂಗವಾಗಿ ವ್ಯಾಸ-ದಾಸ ಸಾಹಿತ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ವಿದ್ವನ್ಮಣಿಗಳಿಗೆ ಬೆಂಗಳೂರು ಚಾಮರಾಜಪೇಟೆ ಶ್ರೀಮನ್ಮಾಧ್ವ ಸಂಘದಲ್ಲಿ ‘ಶ್ರೀಮಧ್ವ ವಿಜಯ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಿಶ್ವ ಮಧ್ವಮತ ವೆಲ್ಫೇರ್ ಅಸೋಸಿಯೇಷನ್ ಆಯೋಜಿಸಿತ್ತು.
ಕನ್ನಡನಾಡಿನ ಹೆಮ್ಮೆಯ ಆಚಾರ್ಯರಾದ ವಿಶ್ವಗುರು ಮಧ್ವಾಚಾರ್ಯರ ಸಂದೇಶದ ಪ್ರಸಾರ ತನ್ಮೂಲಕ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕೈಂಕರ್ಯ ಮಾಡುತ್ತಿರುವ ವಿಎಂಡ್ಲ್ಯೂಎ ವತಿಯಿಂದ ಈ ಸಮಾರಂಭ ಏರ್ಪಡಿಸಿದ್ದು, ಗಾಂಧಿ ಬಜಾರ್ ಸೋಸಲೇ ವ್ಯಾಸರಾಜ ಮಠದಿಂದ ಚಾಮರಾಜಪೇಟೆ ಶ್ರೀಮನ್ಮಾಧ್ವ ಸಂಘದವರೆಗೆ ಬೃಹತ್ ಶೋಭಾಯಾತ್ರೆಗೆ ಚಿಕ್ಕಪೇಟೆ ಶಾಸಕ ಉದಯಗರುಡಾಚಾರ್ , ಗರುಡಾ ಫೌಂಡೇಷನ್ ಮುಖ್ಯಸ್ಥೆ ಮೇದಿನಿ ಉದಯಗರುಡಾಚಾರ್ ಚಾಲನೆ ನೀಡಿದರು.
ಸಭಾ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಬಾಳಗಾರು ಶ್ರೀಆರ್ಯ ಅಕ್ಷೋಭ್ಯ ತೀರ್ಥ ಮಠದ ಶ್ರೀ ಅಕ್ಷೋಭ್ಯರಾಮಪ್ರಿಯ ತೀರ್ಥರು ವಹಿಸಿ ವ್ಯಾಸ-ದಾಸ ಸಾಹಿತ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ವಿದ್ವನ್ಮಣಿಗಳಾದ ಮೈಸೂರಿನ ಹಿರಿಯ ಹರಿದಾಸ ಸಂಶೋಧಕರಾದ ಡಾ.ಟಿ.ಎನ್ ನಾಗರತ್ನ , ನ್ಯಾಷನಲ್ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಜಯಸಿಂಹ(ತಿರುಮಲೇಶ ಹರಿವಿಠಲದಾಸರು), ಹರಿದಾಸ ಸಾಹಿತ್ಯ ಪ್ರಚಾರಕರು ಸರೋಜಮ್ಮ , ಖ್ಯಾತ ಚಲನಚಿತ್ರ ನಿರ್ದೇಶಕ ಡಾ.ಮಧುಸೂದನ ಹವಲ್ದಾರ್ರವರುಗಳಿಗೆ ‘ಶ್ರೀಮಧ್ವ ವಿಜಯ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತ ಶ್ರೀಮನ್ಮಧ್ವಚಾರ್ಯರ ದಿವ್ಯ ಸಂದೇಶವನ್ನು ಅವರ ಸಿದ್ಧಾಂತದ ಸರ್ವಮೂಲಗ್ರಂಥ ವಿಚಾರಧಾರೆಗಳಾದ ಮಹಾಭಾರತತ್ಪರ್ಯ ನಿರ್ಣಯ ಅದರ ಜೊತೆಗೆ ರಾಮಾಯಣ ಮಹಾಭಾರತದ ಕುರಿತಾಗಿ ಬೆಳಕನ್ನು ಚೆಲ್ಲಿದರು . ಶ್ರೀ ಮನ್ಮಧ್ವಜಯಂತಿಯ ಮಹತ್ವವನ್ನು ಅದರ ಪ್ರಾಮುಖ್ಯತೆಯನ್ನು ವಿವರಿಸಿ ಹೇಳಿ ಆಸ್ತಿಕ ಸಮುದಾಯಕ್ಕೆ ಸನಾತನ ಧರ್ಮದ ಆರ್ಷ ತತ್ವವಾದದ ಪರಂಪರೆಯ ಕುರಿತಾಗಿ ಭಕ್ತರನ್ನು ಉದ್ದೇಶಿಸಿ ಅನುಗ್ರಹ ಸಂದೇಶವನ್ನು ನೀಡಿದರು.
ವಿಎಂಡ್ಲ್ಯೂಎ ಸಂಸ್ಥಾಪಕ ಅಧ್ಯಕ್ಷ ಬಿ.ಕೆ.ವೆಂಕೋಬ ರಾವ್ ,ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ , ಪ್ರಾಧ್ಯಾಪಕಿ ಡಾ.ಬಿ.ಎಂ.ವಾಣಿಶ್ರೀ , ಸಂಚಾಲಕ ಡಾ.ಎಸ್.ಆರ್.ರಾಘವೇಂದ್ರ , ಅನಿರುದ್ಧ , ಆದಿತ್ಯ ಮೈಸೂರು ಮೊದಲಾದವರು ವೇದಿಕೆಯಲ್ಲಿದ್ದರು.
ವಿವರಗಳಿಗೆ : 91138 53325