ನಾಡಿನ ಸಾತ್ವಿಕ ರಾಜಕಾರಣಿಗಳ ಪಟ್ಟಿಯಲ್ಲಿ ಎದ್ದು ಕಾಣುವ ಹೆಸರೆಂದರೆ ಮಾಜಿ ಸಂಸದರಾದ ದಿವಂಗತ ಬಿ.ಕೆ.ಗುಡದಿನ್ನಿಯವರು ಓರ್ವರು. ಮೂರು ಬಾರಿ ಸಂಸದ, ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದ ಬಿ.ಕೆ. ಗುಡಿದಿನ್ನಿ ಅವರದ್ದು ಬಹುಮುಖ ವ್ಯಕ್ತಿತ್ವ. ನಾಟಕ ಅಭಿಯನವೆಂದರೆ ಇವರಿಗೆ ಪಂಚಪ್ರಾಣವಾಗಿತ್ತು. ತರುಣಾವಸ್ಥೆಯಲ್ಲಿ ನಾಟಕ ಅಭಿನಯದ ಹವ್ಯಾಸ ಇವರಿಗಿತ್ತು. ನೀಡಿದ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸುವ ಕಲೆ ಇವರಿಗೆ ಕರತಾಲಾಮಲಕವಾಗಿತ್ತು. ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ “ಅಕ್ಷಯಾಂಬರ” ಎಂಬ ನಾಟಕದಲ್ಲಿ ವಿಕರ್ಣನಾಗಿ ಅಭಿನಯಿಸಿದ್ದನ್ನು ಸಾರವಾಡ ಗ್ರಾಮದ ಹಿರಿಯರು ಇಂದಿಗೂ ಸ್ಮರಿಸುತ್ತಾರೆ. ಇವರು ಕಲಾವಿದರಷ್ಟೇ ಆಗದೇ ಪತ್ರಕರ್ತರಾಗಿಯೂ ಮಿಂಚಿದರು.
ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಸೇವೆಗೈಯ್ಯುತ್ತಿದ್ದ ಬಿ.ಕೆ. ಗುಡದಿನ್ನಿಯವರು ಜನತೆಯನ್ನು ಜಾಗೃತಗೊಳಿಸಲು “ಕರ್ನಾಟಕ ಸಂದೇಶ” ವಾರ ಪತ್ರಿಕೆ ಆರಂಭಿಸುವ ಮೂಲಕ ಪತ್ರಿಕಾ ರಂಗಕ್ಕೂ ಕಾಲಿಟ್ಟರು. ಅಂದಿನಿಂದ ನಿಷ್ಠುರ ಪತ್ರಕರ್ತರಾಗಿಯೂ ಹೊರಹೊಮ್ಮಿದರು. ಲೋಕಸಭಾ ಸದಸ್ಯರಾಗಿ,ವಿಧಾನಪರಿಷತ್ ಸದಸ್ಯರಾಗಿ ಅಲ್ಲದೆ, ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಆಡಂಬರದ ಬದುಕನ್ನು ಇಷ್ಟಪಡದ ಅವರು ಸರಳವಾದ ಜೀವನ ನಡೆಸಿ ಸಾಮಾನ್ಯರಂತೆ ಓರ್ವ ಜನಪ್ರತಿನಿಧಿ ಇರಲು ಸಾಧ್ಯವೆಂಬುದನ್ನು ನಿರೂಪಿಸಿದ ಧೀಮಂತ ಜನನಾಯಕರಾಗಿದ್ದರು. ಅವರ ಒಟ್ಟಾರೆ ಬದುಕನ್ನು ಗಮನಿಸಿದರೆ, ಶಿಕ್ಷಕರಾಗಿ, ಕಲಾವಿದರಾಗಿ, ಪತ್ರಕರ್ತರಾಗಿ, ರಾಜಕಾರಣಿಯಾಗಿ ಹಾಗೂ ಸಹಕಾರಿ ಧುರೀಣರಾಗಿ ಸಮಾಜಕ್ಕೆ ಸಲ್ಲಿಸಿದ ಸೇವೆ ಅವಿಸ್ಮರಣೀಯ. ಇಂಥ ಮಹೋನ್ನತ ನಾಯಕ 1995 ಡಿಸೆಂಬರ್ 01ರಂದು ಹೃದಯಾಘಾತದಿಂದ ದೈವಾಧೀನರಾದರು.
ಇಂದು ಅವರ 26ನೇ ಪುಣ್ಯ ಸ್ಮರಣೋತ್ಸವ. ಅದರಂಗವಾಗಿ (ಡಿಸೆಂಬರ್ 01,2021) ಅವರ ಸ್ವಗ್ರಾಮ ಸಾರವಾಡದಲ್ಲಿ ಅವರ ಸ್ಮರಣಾರ್ಥ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ಜರುಗುವವು.
ರಾಜಶೇಖರ ಎಸ್.ಬಿರಾದಾರ(ಬಬಲೇಶ್ವರ)