ಮೂಡಲಗಿ: ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೀತಿ, ಶಿಸ್ತಿನ ಬದುಕು, ಸೇವಾ ಮನೋಭಾವ, ಆತ್ಮ ಸ್ಥೈರ್ಯಗಳನ್ನು ತುಂಬುವಲ್ಲಿ ಎನ್ನೆಸ್ಸೆಸ್ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಮೂಡಲಗಿ ಎಸ್.ಎಸ್.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಬಸಪ್ಪ ಹೆಬ್ಬಾಳ ಹೇಳಿದರು.
ರಾಜಾಪೂರ ಗ್ರಾಮದಲ್ಲಿ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಮ್ಮಿಕೊಂಡಿದ್ದ ೨೦೨೪-೨೫ನೇ ಸಾಲಿನ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವ್ಯಕ್ತಿ ಮತ್ತು ಸಮಾಜಕ್ಕೂ ಒಳ್ಳೆಯದಾಗುವ ವರ್ತನೆಗಳೆ ಮೌಲ್ಯಗಳಾಗಿದ್ದು, ಅಂತಹ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕನ್ನು ಅರ್ಥಪೂರ್ಣವಾಗಿಸಿಕೊಳ್ಳಬೇಕು ಎಂದರು.
ಮತ್ತೋರ್ವ ಅತಿಥಿ ರಾಜಾಪೂರದ ರಾಜು ಬೈರುಗೋಳ ಮಾತನಾಡಿ ಶಿಕ್ಷಣ, ಕಲಿಕೆ, ತರಭೇತಿ ಮೂಲಕ ಬದುಕನ್ನು ಚೆನ್ನಾಗಿ ರೂಪಿಸಿಕೊಳ್ಳುವಲ್ಲಿ ಎನ್ನೆಸ್ಸೆಸ್ ಶಿಬಿರ ಸಹಕಾರಿಯಾಗಿದೆ. ಸಾವಯವ ಹಾಗೂ ವೈಜ್ಞಾನಿಕ ಕೃಷಿ ವಿಧಾನಗಳೆರಡು ಆರ್ಥಿಕ ಅಭಿವೃದ್ಧಿಗೆ ಅನೂಕೂಲವಾಗಿವೆ. ಜೀವನದಲ್ಲಿ ಗುರು, ಅನ್ನದಾತ, ತಂದೆ-ತಾಯಿಗಳನ್ನು ಗೌರವದಿಂದ ಕಾಣಬೇಕು ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಮಾತನಾಡಿ ವಿಶೇಷ ಶಿಬಿರದ ಮೂಲಕ ಕಲಿತ ಹೊಸ ಅನುಭವಗಳನ್ನು ತಮ್ಮ ಜೀವನದ್ದುದ್ದಕ್ಕೂ ಅನ್ವಯಿಸಿಕೊಳ್ಳಬೇಕು. ಶಿಬಿರಗಳು ನಮ್ಮಲ್ಲಿರುವ ನಕಾರಾತ್ಮಕ ಚಿಂತನೆ ಹೋಗಲಾಡಿಸಿ, ಸಕಾರಾತ್ಮಕವಾಗಿ ಚಿಂತಿಸುವಂತೆ ಮಾಡುತ್ತವೆ ಎಂದರು.
ಸಮಾರಂಭದಲ್ಲಿ ರಾಜಾಪೂರ ಸರ್ಕಾರಿ ಪ್ರೌಢ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಕಾಶ ಹುನ್ನೂರ, ಸಹ ಶಿಬಿರಾಧಿಕಾರಿ ಬಿ.ಕೆ. ಸೊಂಟನವರ, ಅಧ್ಯಾಪಕರುಗಳಾದ ಡಾ. ಎಂ.ಬಿ. ಕುಲಮೂರ, ವಸುಂಧರಾ ಕಾಳೆ, ಆರ್.ಎಸ್. ಪಂಡಿತ, ವಿ.ಪಿ. ಕೆಳಗಡೆ, ಬಿ.ಸಿ. ಮಾಳಿ, ಸಾಗರ ಐದಮನಿ, ಸಂತೋಷ ಬಂಡಿ, ಎಂ.ಎನ್. ಮುರಗೋಡ, ಎ.ಎಸ್. ಮೀಶಿನಾಯ್ಕ, ಕಚೇರಿ ಸಿಬ್ಬಂದಿಗಳಾದ ಬಿ.ಎಂ. ಶೀಗಿಹಳ್ಳಿ, ಮಂಜುನಾಥ ಗೋರಗುದ್ದಿ, ಮಹೇಂದ್ರ ಹೊಸಮನಿ, ರಾಣಿ ನಿಡೋಣಿ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಕು. ರಾಧಿಕಾ ಕರೆಪ್ಪಗೋಳ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸೃಷ್ಟಿ ನಾಯಿಕವಾಡಿ ಹಾಗೂ ಸಂಗಡಿಗರು ಎನ್ನೆಸ್ಸೆಸ್ ಗೀತೆ ಹಾಡಿದರು. ಸಹ ಶಿಬಿರಾಧಿಕಾರಿ ಡಿ.ಎಸ್. ಹುಗ್ಗಿ ಸ್ವಾಗತಿಸಿದರು. ಲಕ್ಷ್ಮೀ ಕಲ್ಲೋಳಿ ಹಾಗೂ ರಾಜಶ್ರೀ ಕುಂಬಾರ ನಿರೂಪಿಸಿದರು, ಕಾರ್ಯಕ್ರಮಾಧಿಕಾರಿ ಶಂಕರ ನಿಂಗನೂರ ವಂದಿಸಿದರು.