ಸಿಂದಗಿ: ಕರ್ನಾಟಕ ಜನನ ಮತ್ತು ಮರಣ ನೋಂದಣಿ ತಿದ್ದುಪಡಿ ಕಾಯ್ದೆ2022 ಇದನ್ನು ರದ್ದುಗೊಳಿಸಿ ಹಿಂಪಡೆಯುವಂತೆ ಆಗ್ರಹಿಸಿ ವಕೀಲರ ಸಂಘದ ಪದಾಧಿಕಾರಿಗಳು ಕಾರ್ಯಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿ ಘನವೆತ್ತ ರಾಜ್ಯಪಾಲರಿಗೆ ತಹಶಿಲ್ದಾರ ನಿಂಗಣ್ಣ ಬಿರಾದಾರ ಅವರ ಮೂಲಕ ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ದೊಡಮನಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಕೀಲರಾದ ಎಂ.ಕೆ.ಪತ್ತಾರ,ಆರ್.ಎಂ.ಚೌರ, ಬಿ.ಜಿ.ನೆಲ್ಲಗಿ, ದಾನಪ್ಪಗೌಡ ಚನ್ನಗೊಂಡ, ಎಸ್.ಬಿ.ಖಾನಾಪುರ ಮಾತನಾಡಿ, ರಾಜ್ಯ ಸರಕಾರ ಪ್ರತಿಮನೆಗೆ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಹೇಳಿ ಜನಸಾಮಾನ್ಯರಿಗೆ ಎಟುಕದ ರೀತಿಯಲ್ಲಿ ಕಾಯ್ದೆಗಳನ್ನು ತಿದ್ದಪಡಿ ಮಾಡುತ್ತಿದೆ. ಈ ಹಿಂದೆ ಸಾಮಾನ್ಯವಾಗಿ ದಾಖಲಾಗದ ಮತ್ತು ವಿಳಂಬ ದಾಖಲೆಗಳಿಗೆ ಕಾರಣವಾದ ಜನನ ಮತ್ತು ಮರಣ ನೋಂದಣಿಯನ್ನು ಘೋಷಣೆ ಮಾಡುವ ಮತ್ತು ನಿರ್ದೇಶನ ಮಾಡುವ ಅಧಿಕಾರ ಮಾನ್ಯ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ಅಧಿಕಾರ ವ್ಯಾಪ್ತಿಗೆ ನಿಗದಿಗೊಳಿಸಲಾಗಿತ್ತು. ಇದರಿಂದಾಗಿ ಪ್ರತಿ ತಾಲೂಕಿಗೆ ಮತ್ತು ಕೆಲವು ಹೋಬಳಿಗಳಲ್ಲಿ ಮಾನ್ಯ ನ್ಯಾಯಾಲಯಗಳು ಕಾರ್ಯನಿರ್ವಹಿಸುವದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಿತ್ತು ಆದರೆ 18-07-2022 ರಂದು ಜಾರಿಗೆ ತಂದ ತಿದ್ದುಪಡಿ ಕಾನೂನಿನ ಪ್ರಕಾರ ಮಾನ್ಯ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ತೆಗೆದುಹಾಕಿ ಕಂದಾಯ ಇಲಾಖೆ ಉಪ-ವಿಭಾಗಾಧಿಕಾರಿಗಳ ಕಚೇರಿ ನೀಡಿರುವದು ಅವೈಜ್ಞಾನಿಕ ಆಗಿರುತ್ತದೆ. ಉಪ-ವಿಭಾಗಾಧಿಕಾರಿಗಳ ಕಚೇರಿ ಪ್ರತಿ ತಾಲೂಕಿಗೆ ಇರುವದಿಲ್ಲ, 2, 3 ತಾಲೂಕುಗಳ ಮಧ್ಯದಲ್ಲಿ ಒಂದು ಕಚೇರಿ ಇರುವದರಿಂದ ಹಲವಾರು ತಾಲೂಕಿನ ನಾಗರಿಕರು ಕಛೇರಿಗೆ ದೂರದಿಂದ ಅಲೆಯಬೇಕಾಗುತ್ತದೆ. ಚುನಾವಣೆ ಬಂದಾಗಲೆಲ್ಲ ಉಪ-ವಿಭಾಗಾಧಿಕಾರಿಗಳು ಯಾವುದೇ ಸಿಟಿಂಗ್ ನಡೆಸುವದಿಲ್ಲ, ಈಗಾಗಲೇ ಹಲವಾರು ಕಾರ್ಯಬಾಹುಳ್ಳ ಉಪ- ವಿಭಾಗಾಧಿಕಾರಿಗಳ ಮೇಲೆ ಇರುತ್ತದೆ. ಮೇಲಿಂದ ಮೇಲೆ ವಿ ಸಿ ಮತ್ತು ಸಭೆಗಳು ಜರುಗುವದರಿಂದ ಮೇಲಾಗಿ ಉನ್ನತಾಧಿಕಾರಿಗಳು ಮತ್ತು ಸಚಿವ ಸಂಪುಟದ ಸಚಿವರು ಪ್ರವಾಸ ಕೈಕೊಂಡಾಗ ನಿಗದಿತವಾದ ದಿನದಂದು ಅಸಂಖ್ಯಾತ ಕಾರ್ಯಕಲಾಪಗಳು ರದ್ದಾಗುತ್ತವೆ ಮತ್ತು ಮುಂದೂಡುತ್ತವೆ ಇದರಿಂದ ಮತ್ತಷ್ಟು ಆರ್ಥಿಕ ಮತ್ತು ಸಮಯ ಹಾನಿಗೆ ಕಾರಣವಾಗುತ್ತದೆ. ಜನರ ಹತ್ತಿರಕ್ಕೆ ನ್ಯಾಯ ಎಂದು ಹೇಳುವ ಸರ್ಕಾರವೇ ಜನರಿಗೆ ಈ ಕಾಯ್ದೆಯಿಂದ ಸದರ ತಿದ್ದುಪಡಿ ಕುರಿತು ಈಗಾಗಲೇ ರಾಜ್ಯಾದ್ಯಂತ ನಾಗರಿಕರು ಮತ್ತು ನ್ಯಾಯವಾದಿಗಳು ಹಾಗೂ ಸಾಮಾಜಿಕ ಹೋರಾಟಗಾರರು ವಿರೋಧ ಮಾಡುತ್ತಿದ್ದಾರೆ. ಕಾರಣ ಘನತೆವೆತ್ತ ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ಸದರ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಕೀಲರಾದ ಎಸ್.ಬಿ.ಪಾಟೀಲ ಗುಂದಗಿ, ಎಂ.ಎಸ್.ಪಾಟೀಲ, ಎಸ್.ಎಸ್.ಕಕ್ಕಳಮೇಲಿ, ಜಿ.ಎಸ್.ಮನ್ನಾಪುರ, ಎಂ.ಸಿ.ಯಾತನೂರ, ಎಸ್.ಎಸ್.ಬಮ್ಮನಜೋಗಿ, ಪಿ.ಆರ್.ಯಾಳವಾರ, ಎಂ.ಎನ್.ಪಾಟೀಲ, ವ್ಹಿ.ಎಂ.ಹುಲ್ಲಿಕೇರಿ, ಬಿ.ಎಸ್.ಚಾವರ, ವಿ.ಎಲ್.ಮೊಪಗಾರ, ಪಿ.ವ್ಹಿ.ದೇಶಪಾಂಡೆ, ಎಂ.ಎಸ್.ಬಿರಾದಾರ, ಸಿ.ಎಂ.ಸೂರ್ಯವಂಶಿ, ಆರ್.ಎಂ.ಶಿರಬೂರ ಸೇರಿದಂತೆ ಅನೇಕರು ಇದ್ದರು.