ರಾಷ್ಟ್ರೋದ್ಧಾರಕ ಧೀಮಂತ ನಾಯಕ ಡಾ.ಬಾಬು ಜಗಜೀವನರಾಮ್- ಪ್ರೊ.ಸಂಗಮೇಶ ಗುಜಗೊಂಡ

0
243

ಮೂಡಲಗಿ: ಡಾ:ಬಾಬು ಜಗಜೀವನರಾಮ್ ಅವರು ಈ ದೇಶ ಕಂಡ ಅನುಪಮ ವ್ಯಕ್ತಿತ್ವದ ಧೀಮಂತ ನಾಯಕರು, ಸ್ವಾತಂತ್ರ್ಯ ಸೇನಾನಿಯಾಗಿ ದಲಿತ ವರ್ಗದ ಧ್ವನಿಯಾಗಿ, ಸಂಘಟಕರಾಗಿ, ಶ್ರೇಷ್ಠ ಸಂಸತ್ ಪಟುವಾಗಿ ಸಮರ್ಥ ಆಡಳಿತಗಾರರಾಗಿ ಅರ್ಪಣಾಭಾವದ ರಾಜಕಾರಣಿಯಾಗಿ, ವಾಗ್ಮಿಯಾಗಿ, ಸಮತಾವಾದಿ, ಸಮಾಜವಾದಿ ಮಿಗಿಲಾಗಿ ಮಾನವತಾವಾದಿಯಾಗಿ ಬಹುಕೃತ ಮೇರು ವ್ಯಕ್ತಿತ್ವ ಅವರದು ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಪ್ರೊ.ಸಂಗಮೇಶ ಗುಜಗೊಂಡ ಅಭಿಪ್ರಾಯ ವ್ಯಕ್ತ ಪಡಿಸಿದರು.

ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಭಾ ಭವನದಲ್ಲಿ ತಾಲೂಕಾ ಆಡಳಿತ, ತಾ.ಪಂ, ಪುರಸಭೆ, ಮೂಡಲಗಿ ತಾಲೂಕಿನ ಸ್ಥಳೀಯ ಸಂಸ್ಥೆಗಳ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ  ಜರುಗಿದ ಡಾ.ಬಾಬು ಜಗಜೀವನರಾಮ್ ಅವರ ಜನ್ಮ ದಿನಾಚರಣೆಯಲ್ಲಿ ಅತಿಥಿ ಉಪನ್ಯಾಸ ನೀಡಿದ ಅವರು, ಡಾ.ಬಾಬು ಜಗಜೀವನರಾಮ್ ಬಡತನ, ಅಶ್ಪೃಶ್ಯತೆಗಳ ವಿರುದ್ಧ ಹೋರಾಡುತ್ತ , ಪ್ರತಿಭೆ ಮತ್ತು ಪರಿಶ್ರಮಗಳ ಮೂಲಕ ಸ್ವಾತಂತ್ರ್ಯ ಹೋರಾಟದ ಮುಖಾಂತರ ಮುಂಚೂಣಿ ನಾಯಕರಾಗಿ ರೂಪಗೊಂಡು ಸಂವಿಧಾನ ರಚನಾ ಸಮಿತಿ ಸದಸ್ಯರಾಗಿ ಮತ್ತು ಕಾರ್ಮಿಕ ವರ್ಗದ ವಕ್ತಾರರಾಗಿ ಸಂಸದರಾಗಿ, ಮಂತ್ರಿಯಾಗಿ, ಉಪಪ್ರಧಾನಿಯಾಗಿ ಅವರು ಮಾಡಿದ ಕಾರ್ಯ ಸೇವೆಗಳು ಮಹತ್ವದ ಮೈಲುಗಲ್ಲುಗಳಾಗಿವೆ. ಅಂಚೆ ಸೇವೆ, ವಿಮಾನ ಸೇವೆ, ರೈಲ್ವೆ ಸೇವೆಗಳ ವಿಸ್ತರಣೆ, ಹಸಿರು ಕ್ರಾಂತಿ ಮೂಲಕ ಆಹಾರ ಸ್ವಾವಲಂಬನೆ, ಕಾರ್ಮಿಕರ ಹಿತರಕ್ಷಣೆ ಕಾಯ್ದೆಗಳು ಡಾ.ಬಾಬೂಜಿಯವರ ಅಮೂಲ್ಯ ಕೊಡುಗೆಗಳಾಗಿವೆ. ಅವರೊಬ್ಬ ಮರೆಯಲಾಗದ, ಮರೆಯಬಾರದ ಮಹಾಚೇತನರಾಗಿದ್ದಾರೆ ಎಂದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿ.ಇ.ಒ ಅಜೀತ ಮನ್ನಿಕೇರಿ ಮಾತನಾಡಿದರು. 

ವೇದಿಕೆಯಲ್ಲಿ ತಾಪಂ ಎ.ಒ ಎಫ್.ಜಿ.ಚಿನ್ನನವರ, ಸಿ.ಡಿ.ಪಿ.ಒ ಯಲ್ಲಪ್ಪ ಗದಾಡಿ, ಡಾ. ಭಾರತಿ ಕೋಣಿ, ಪಿಎಸ್‌ಐ ಶಿವುಕುಮಾರ ಬಿರಾದಾರ ಇದ್ದರು.

ಸಮಾರಂಭದಲ್ಲಿ ಮೂಡಲಗಿ ತಾಲೂಕಿನ ದಲಿತ ಸಮಾಜದ ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.