ಬೈಲಹೊಂಗಲ: ಕಾವ್ಯ, ಕಥೆ, ನಾಟಕ, ಜೀವನಚರಿತ್ರೆ, ಸಂಶೋಧನೆ, ಸಂಪಾದನೆ, ಜಾನಪದ ಹಾಗೂ ವಿಮರ್ಶೆ ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ರಚಿಸಿದ ಡಾ. ಪ್ರಕಾಶ ಖಾಡೆ ಅವರ ಕನ್ನಡ ಸೇವೆ ಶ್ಲಾಘನೀಯ ಎಂದು ಕೇಂದ್ರ ಬಸವ ಸಮಿತಿ ಕಾರ್ಯಕಾರಿ ಸದಸ್ಯ ಮೋಹನ ಬಸನಗೌಡ ಪಾಟೀಲ ಹೇಳಿದರು.
ಬೆಂಗಳೂರಿನ ಕೇಂದ್ರ ಬಸವ ಸಮಿತಿ ವತಿಯಿಂದ ‘ಬೆಳಕಾಯಿತು ಬಾಗಲಕೋಟೆ’ ಖ್ಯಾತಿಯ ಡಾ. ಪ್ರಕಾಶ ಖಾಡೆ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. ತಮ್ಮ ಕ್ರಿಯಾಶೀಲತೆ, ಅಧ್ಯಯನಶೀಲತೆಯಿಂದ ಅವರು ಅಪಾರ ಜ್ಞಾನ ಮತ್ತು ಅನುಭವ ಹೊಂದಿದ್ದು ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿರುವುದು ಅಭಿಮಾನದ ಸಂಗತಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಕಾಶ ಖಾಡೆ ಬೈಲಹೊಂಗಲ ಕ್ರಾಂತಿಯ ನೆಲವಾಗಿದ್ದು ಕಲೆ, ಸಾಹಿತ್ಯ, ಸಂಸ್ಕೃತಿಗಳ ಬೀಡಾಗಿದೆ. ಇಲ್ಲಿನ ಮಣ್ಣಿನಲ್ಲಿ ಅದ್ಭುತ ಶಕ್ತಿಯಿದೆ ಎಂದು ಸಂತಸ ವ್ಯಕ್ತಪಡಿಸಿದರು.ಇಂತಹ ನಾಡಿನಲ್ಲಿ ಕೆಲವು ವರ್ಷಗಳ ಸೇವೆ ಸಲ್ಲಿಸಿದ್ದು ನನ್ನ ಸೌಭಾಗ್ಯ ಎಂದು ಸುಮಾರು ಮೂವತ್ತು ವರ್ಷಗಳ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು.
ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಆರ್. ಠಕ್ಕಾಯಿ ಮಾತನಾಡಿ ಖಾಡೆ ಅವರ ಬಾಳುಕುನ ಪುರಾಣ ಕಥಾ ಸಂಕಲನಕ್ಕೆ ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅರಕೇರಿ ದತ್ತಿ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ವಿಚಾರ. ಅವರಿಂದ ಕನ್ನಡ ಸಾಹಿತ್ಯ ಇನ್ನಷ್ಟು ಶ್ರೀಮಂತವಾಗಲಿ ಎಂದು ಶುಭ ಕೋರಿದರು.
ಸಾಹಿತಿಗಳಾದ ಡಾ. ಮಲ್ಲಿಕಾರ್ಜುನ ಛಬ್ಬಿ ಮಾತನಾಡಿ ಖಾಡೆ ಅವರು ಸಾಕಷ್ಟು ವಿದ್ಯಾರ್ಥಿ ಬಳಗ ಹೊಂದಿದ್ದು ಶಿಕ್ಷಣದ ಜೊತೆಗೆ ಸಾಹಿತ್ಯದ ಅಭಿರುಚಿ ಬೆಳೆಸುವಲ್ಲಿ ಸ್ಪೂರ್ತಿಯಾಗಿದ್ದಾರೆ. ಅವರ ಆತ್ಮೀಯತೆ, ಕಾಳಜಿ ಹಾಗೂ ಒಡನಾಟ ಖುಷಿ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.