ಸಿಂದಗಿ: ಮಹಿಳೆಯರು ಶಿಕ್ಷಣವಂತರಾದರೆ ಇಡೀ ಮನೆಯೇ ಶಿಕ್ಷಣ ಕಲಿತಂತೆ ಹಾಗಾಗಿ ಮಹಿಳೆಯರು ವಿದ್ಯಾವಂತರಾಗಬೇಕು ಅಲ್ಲದೆ ಹಿಂದೆ ಗುರು ಮುಂದೆ ಗುರಿ ಇದ್ದರೆ ಮಾತ್ರ ಯಶಸ್ಸು ಸಾಧ್ಯ ಎಂದು ಸಂಸ್ಥೆಯ ಕಾರ್ಯದರ್ಶಿ ನೆಹರು ಪೋರವಾಲ್ ಹೇಳಿದರು.
ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಸ್ವತಂತ್ರ ಕಲಾ, ವಾಣಿಜ್ಯ, ಹಾಗೂ ವಿಜ್ಞಾನ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಂಡ ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿನಿಯರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಕಷ್ಟಪಟ್ಟು ಶಿಕ್ಷಣವನ್ನು ಕಲಿತರೆ ಮಾತ್ರ ಉನ್ನತ ವ್ಯಾಸಂಗ ಅಥವಾ ಹುದ್ದೆಯನ್ನು ಅಲಂಕರಿಸಲು ಸಾಧ್ಯ. ಶ್ರೀ ಮಠದಲ್ಲಿ ಅಧ್ಯಯನ ಮಾಡಿದ ಅದೆಷ್ಟೋ ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಈ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಉತ್ತಮವಾದ ಸಂಸ್ಕಾರ, ಶಿಕ್ಷಣ ಸೇರಿದಂತೆ ಎಲ್ಲವನ್ನು ಒದಗಿಸುವಲ್ಲಿ ನಿರತವಾಗಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಶಾಂತೂ ಹಿರೇಮಠ ಮಾತನಾಡಿ, ಚನ್ನವೀರ ಮಹಾಸ್ವಾಮಿಗಳು ನಡೆದಾಡಿದ ಈ ಪುಣ್ಯ ಭೂಮಿ ಅತೀ ಉನ್ನತವಾದ ಪುಣ್ಯಭೂಮಿಯಾಗಿದೆ. ಇಂತಹ ನೆಲದಲ್ಲಿ ಶಿಕ್ಷಣ ಪಡೆದುಕೊಳ್ಳುತ್ತಿರುವುದು ನಿಮ್ಮ ಪೂರ್ವಜನ್ಮದ ಪುಣ್ಯವೇ ಸರಿ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನಕ್ಕೆ ಹೆಚ್ಚಿನ ಮಹತ್ವವಿದೆ. ಇಂದಿನ ದಿನಮಾನಗಳಲ್ಲಿ ಮೊಬೈಲ್ ದುರ್ಬಳಕೆಯಾಗುತ್ತಿದೆ. ಅದನ್ನು ವಿದ್ಯಾರ್ಥಿಗಳು ಜಾಗರೂಕತೆಯಿಂದ ಬಳಸಬೇಕು ಎಂದರು.
ಸಾನ್ನಿಧ್ಯ ವಹಿಸಿದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಸಾರಂಗಮಠದ ಚೇರಮನ್ನರಾದ ಗುರುಕುಲ ಭಾಸ್ಕರ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಸಂಸ್ಥೆಯ ಸಹ ಕಾರ್ಯದರ್ಶಿ ಅಶೋಕ ವಾರದ ಮಾತನಾಡಿದರು. ಪ್ರಾಚಾರ್ಯ ಎಂ.ಎಸ್. ಹೈಯಾಳಕರ ಅಧ್ಯಕ್ಷೀಯ ಮಾತುಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ಮಹಾಂತೇಶ ನೂಲಾನವರ, ಜಿ.ಎ.ನಂದಿಮಠ, ಜಿ.ಎಸ್.ಕುಲಕರ್ಣಿ, ಸಾಯಬಣ್ಣ ಸಜ್ಜನ, ರೇವಣಸಿದ್ದ ಹಾಲಕೇರಿ, ಪಿ.ಎಮ್ ಮಾಲಿಪಾಟೀಲ್, ಅನೀಲಕುಮಾರ ರಜಪೂತ, ಎಸ್.ಎಮ್. ಹೂಗಾರ, ಎಮ್.ಕೆ. ಬಿರಾದಾರ, ಎಸ್.ಸಿ ದುದ್ದಗಿ, ಎಲ್.ಎಮ್ ಮಾರ್ಸನಳ್ಳಿ, ಹೇಮಾ ಕಾಸರ, ಹೇಮಾ ಹಿರೇಮಠ, ಜಿ.ವಿ ಪಾಟೀಲ್, ವರ್ಷಾ ಪಾಟೀಲ್, ಎಂ.ಪಿ ಸಾಗರ, ಶ್ರೀದೇವಿ ದುದ್ದಗಿ, ಬಸಮ್ಮ ಧರಿ, ಯು.ಸಿ ಪೂಜೇರಿ, ಎ.ಎ.ಕೊಕನಿ, ಮಂಗಳಾ ಈಳಗೇರ, ಸತೀಶ ಕಕ್ಕಸಗೇರಿ, ಡಿ.ಎಂ. ಪಾಟೀಲ, ಮಮತಾ ಹರನಾಳ, ಶಂಕರ ಕುಂಬಾರ, ವಿಜಯಲಕ್ಷ್ಮೀ ಭಜಂತ್ರಿ ಸೇರಿದಂತೆ ಮಹಾವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.