ಬಸವಣ್ಣವನವರ ಅನುಭವ ಮಂಟಪದಿಂದ ಇಂದಿನ ಪ್ರಜಾಪ್ರಭುತ್ವಕ್ಕೆ ಬುನಾದಿ- ಡಾ.ಭೇರ್ಯ ರಾಮಕುಮಾರ್

ಸುಮಾರು ಹನ್ನೆರಡನೆಯ ಶತಮಾನದಲ್ಲಿಯೇ ಜಾತ್ಯತೀತ ಚಿಂತನೆಯ ಅನುಭವ ಮಂಟಪ ಸ್ಥಾಪಿಸುವ ಮೂಲಕ ಅಂದಿನ ಕಾಲದಲ್ಲೇ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ ಹಾಕಿದ ಕೀರ್ತಿ ಭಕ್ತಿ ಭಂಡಾರಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಹಿರಿಯ ಸಾಹಿತಿ, ಪತ್ರಕರ್ತರು ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ನುಡಿದರು.

ಕೆ.ಆರ್.ನಗರದ ಸಾರಿಗೆ ನಗರದಲ್ಲಿನ ಶ್ರೀ ಮಾತೃಶ್ರೀ ಶಿಕ್ಷಣ ಸಂಸ್ಥೆಯು ನಡೆಸುತ್ತಿರುವ ಶ್ರೀ ಮಾತೃಶ್ರೀ ವೃದ್ದಾಶ್ರಮದಲ್ಲಿ ನಡೆದ ಬಸವಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಕಾಯಕ ತತ್ವ, ಸಮಾನತೆ, ಮಹಿಳೆಯರಿಗೂ ಸರ್ವಸಮಾನತೆ, ಜಾತ್ಯತೀತ ನಿಲುವು ,ಮೂಢನಂಬಿಕೆಗಳ ಖಂಡನೆಗಳ ಮೂಲಕ ಬಸವಣ್ಣನವರು ಸಾಮಾಜಿಕ ಕ್ರಾಂತಿ ಮೂಡಿಸಿದರು.ತಮ್ಮ ಸರಳ ವಚನಗಳ ಮೂಲಕ ಅಂದಿನ ಸಾಮಾಜಿಕ ಸಮಸ್ಯೆಗಳನ್ನು ಚಿತ್ರಿಸಿ ಅವುಗಳ ನಿವಾರಣೆಗೆ ದಾರಿ ತೋರಿದರು.ವಿಶ್ವದ ಬಹುತೇಕ ಸಾಧಕರ ಮೇಲೆ ಬಸವಣ್ಣನವರ ಚಿಂತನೆಗಳು ಪ್ರಭಾವ ಬೀರಿವೆ ಎಂಬುದು ಗಮನಾರ್ಹ ಸಂಗತಿ ಎಂದವರು ನುಡಿದರು.

ಬಸವಣ್ಣನವರು ಆರಂಭಿಸಿದ ಅನುಭವ ಮಂಟಪಕ್ಕೆ ಅಲ್ಲಮಪ್ರಭು ಪ್ರಥಮ ಅಧ್ಯಕ್ಷರಾಗಿ ತಮ್ಮ ವಚನಗಳ ಮೂಲಕ ಜನಜಾಗೃತಿ ಮೂಡಿಸಿದರು. ನಂತರ ಅಕ್ಕಮಹಾದೇವಿ, ಮಡಿವಾಳ ಮಾಚಯ್ಯ, ಹಡಪದ ಅಪ್ಪಣ್ಣ, ಮಾದರ ಚನ್ನಯ್ಯ, ಸಮಗಾರ ಹರಳಯ್ಯ, ಅಂಬಿಗರ ಚೌಡಯ್ಯ ಮೊದಲಾದವರು ಅನುಭವ ಮಂಟಪದ ಪ್ರಮುಖರಾಗಿ, ವಚನಗಳ ಕ್ರಾಂತಿ ನಡೆಸಿದರು. ಬಸವಣ್ಣನವರ ವಚನಗಳು ಇಂದಿನ ಯುವಜನಾಂಗಕ್ಕೆ ದಾರಿದೀಪವಾಗಿವೆ ಎಂದವರು ನುಡಿದರು.

ದಾನಿಗಳಾದ ಹುಲ್ಯಾಳು ಚನ್ನಬಸಪ್ಪ ಹಾಗೂ ಶ್ರೀಮತಿ ದೇವೀರಮ್ಮ ದಂಪತಿಗಳು ವೃದ್ಧಾಶ್ರಮದಲ್ಲಿ ಬಸವಜಯಂತಿ ಕಾರ್ಯಕ್ರಮ ವನ್ನು ಏರ್ಪಡಿಸಿದ್ದರು. ಇದರ ಅಂಗವಾಗಿ ವೃದ್ದಾಶ್ರಮದಲ್ಲಿ ಇರುವ ಎಲ್ಲ ಹಿರಿಯ ನಾಗರೀಕರಿಗೂ ಚನ್ನಬಸಪ್ಪ ದಂಪತಿಗಳು ವಸ್ತ್ರಗಳನ್ನು ದಾನ ಮಾಡಿದರು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಡಾ.ಭೇರ್ಯ ರಾಮಕುಮಾರ್ ಅವರನ್ನು ಸನ್ಮಾನಿಸಲಾಯಿತು. ಶ್ರೀ ಮಾತೃಶ್ರೀ ವೃದ್ದಾಶ್ರಮದ ಕಾರ್ಯದರ್ಶಿಗಳಾದ ಮಂಜುನಾಥ್. ಕೆ.ಜಿ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಅಂಚೆ ಇಲಾಖೆ ನೌಕರರಾದ ಚನ್ನಬಸವದೇವರು, ಶಿಕ್ಷಕ ರಾದ ಲಕ್ಷ್ಮಿದೇವಿ, ನಟರಾಜ್ ಮುಳ್ಳೂರು, ಗೀತಾ,ಸಹನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.