ಮೂಡಲಗಿ: ಬುಧವಾರದಂದು ಪಟ್ಟಣದಲ್ಲಿ ಜರುಗಿದ ಕಿತ್ತೂರ ಚನ್ನಮ್ಮ ವೀರ ಜ್ಯೋತಿ ಯಾತ್ರೆಯ ಆಗಮನ ಹಾಗೂ ಬೀಳ್ಕೊಡುವ ಸಮಾರಂಭದಲ್ಲಿ ಕೆಲವು ಲೋಪದೋಷಗಳು ಜರುಗಿವೆ ಎಂದು ಸಾಮಾಜಿಕ ಹೋರಾಟಗಾರ ಎಮ್.ಎಸ್.ನಂದಗಾಂವಮಠ ಆರೋಪಿಸಿದರು.
ಶುಕ್ರವಾರದಂದು ತಹಶೀಲ್ದಾರ ಅವರಿಗೆ ಈ ವಿಷಯವಾಗಿ ಮನವಿ ನೀಡಿ ಮಾತನಾಡಿದ ಅವರು, ಚನ್ನಮ್ಮಾಜಿಯ ವೀರ ಜ್ಯೋತಿ ಯಾತ್ರೆಯ ಸಮಾರಂಭದ ವೇದಿಕೆಯಲ್ಲಿ ಮೂಡಲಗಿ ಸ್ಥಳೀಯರಿಗೆ ಮಾನ್ಯತೆ ಕೊಡದೆ ಹೊರಗಿನವರಿಗೆ ಪ್ರಾಧಾನ್ಯತೆ ಕೊಟ್ಟಿದ್ದಾರೆ ಇದರಿಂದ ಮೂಡಲಗಿಯ ಪ್ರಮುಖರಿಗೆ ಹಾಗೂ ಸಾಧಕರಿಗೆ ಅಪಮಾನ ಎಸಗಿದಂತಾಗಿದೆ.ವೀರರಾಣಿ ಕಿತ್ತೂರು ಚೆನ್ನಮ್ಮ ಕನ್ನಡ ನಾಡಿಗಾಗಿ ಹೋರಾಡಿದ ದಿಟ್ಟ ಮಹಿಳೆ, ಅವರನ್ನು ಕೇವಲ ಒಂದೇ ಜಾತಿಗೆ ಸೀಮಿತ ಮಾಡುತ್ತ ಕೆಲವು ಜನ ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿಯಾಗಿದ್ದು,ಬರುವ ದಿನಗಳಲ್ಲಿ ಪಟ್ಟಣದಲ್ಲಿ ಜರುಗುತ್ತಲಿರುವ ಕಿತ್ತೂರು ಉತ್ಸವ ನೆನಪಿನ ಕಾರ್ಯಕ್ರಮದ ವೇದಿಕೆಯಲ್ಲಿ ಜನಪ್ರತಿನಿಧಿಗಳನ್ನು ಹೊರತುಪಡಿಸಿ ಇನ್ನಾರಿಗೂ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಹೊಳೆಪ್ಪ ಶಿವಾಪೂರ, ಶಿವಾನಂದ ಕುಂಬಾರ, ಚುಟುಕುಸಾಬ್ ಜಾತಗಾರ್ ಮಂಟೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.