ಬೀದರ – ಉಪಮುಖ್ಯಮಂತ್ರಿ ಸ್ಥಾನ ಕುರಿತಂತೆ ನಾವು ನಮ್ಮ ಅಭಿಪ್ರಾಯ ಹೇಳಿದ್ದೇವೆ ತೀರ್ಮಾನ ತೆಗೆದುಕೊಳ್ಳುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ನಮ್ಮದು ಹೈಕಮಾಂಡ್ ಇರುವ ಪಕ್ಷ ಎಂದು ಸಚಿವ ಜಮೀರ ಅಹ್ಮದ ಹೇಳಿದರು.
ಬೀದರನಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಮತ್ತೆ ಡಿಸಿಎಂ ಕೂಗು ಕೇಳಿ ಬಂದ ವಿಚಾರದ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.
ನಮ್ಮ ಅಭಿಪ್ರಾಯ ನಾವು ಹೇಳಿದ್ದೇವೆ. ಪರಮೇಶ್ವರ್, ರಾಜಣ್ಣ, ಸತೀಶ್ ಜಾರಕಿಹೊಳಿ ಅವರವರ ಅಭಿಪ್ರಾಯ ಹೇಳಿದ್ದಾರೆ. ಎಂಬಿ ಪಾಟೀಲ್, ನಾನು ರಹೀಂಖಾನ್ ನಮ್ಮ ಅಭಿಪ್ರಾಯ ಹೇಳಿದ್ದೇವೆ. ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ದರ್ಶನ್ ಪ್ರಕರಣ ಕುರಿತಂತೆ, ಅವರಿಗೆ ಶಿಕ್ಷೆಯಾಗಿದೆ ಈಗಾಗಲೇ ಜೈಲಿನಲ್ಲಿ ಇದ್ದಾರೆ. ಸೂರಜ್ ರೇವಣ್ಣ ಪ್ರಕರಣ ಬಗ್ಗೆ ತನಿಖೆ ನಡೆಯುತ್ತಿದೆ. ಹೀಗಾಗಿ ಈ ಬಗ್ಗೆ ಕಾಮೆಂಟ್ ಮಾಡಲ್ಲ ಎಂದು ಸಚಿವ ಜಮ್ಮೀರ್ ಅಹಮ್ಮದ್ ಖಾನ್ ಹೇಳಿದರು
ಈ ದೇಶಕ್ಕೆ ಸ್ವಾತಂತ್ರ್ಯ ತಂದಿದ್ದು ನಾವು. ಸ್ವಾತಂತ್ರ್ಯ ತರಲು ಬಿಜೆಪಿ ಏನು ಮಾಡಿದೆ ಎಂಬುದು ಇತಿಹಾಸವಿದೆ. ಬಿಜೆಪಿ ಹಾಗೂ ಆರ್ ಎಸ್ ಎಸ್ ಯಾರ ಜೊತೆ ಇದ್ದರು ಎಂಬುದು ಇತಿಹಾಸವಿದೆ. ಈ ದೇಶ ನಮ್ಮದು ರೀ ಎಂದು ಬಿಜೆಪಿಗೆ ಟಾಂಗ್ ನೀಡಿದ ಸಚಿವ ಜಮ್ಮೀರ್ ಅಹಮ್ಮದ್ ಖಾನ್, ಬೆಳಗಾವಿಯಲ್ಲಿ ವಕ್ಫ್ ಅದಾಲತ್ ಮಾಡುತ್ತೇವೆ ಎಂದರು.
ವಕ್ಫ್ ಆಸ್ತಿ ರದ್ದುಪಡಿಸಬೇಕು ಎಂಬ ಬಿಜೆಪಿ ಮುಖಂಡ ಯತ್ನಾಳ ಹೇಳಿಕೆ ಖಂಡಿಸಿದ ಅವರು, ಯತ್ನಾಳಗೆ ಏನೂ ಜ್ಞಾನವಿಲ್ಲ. ಮುಸ್ಲಿಮರ ಬಗ್ಗೆ ಮಾತನಾಡಿದರೆ ಖುಷ್ ಆಗುತ್ತಾರೆ ಎಂಬ ಭಾವನೆ ಇದೆ. ಯತ್ನಾಳರಿಗೆ ಮುಸ್ಲಿಮರೂ ಬೇಕಿಲ್ಲ, ಹಿಂದೂಗಳೂ ಬೇಕಿಲ್ಲ ಬರೀ ರಾಜಕೀಯ ಮಾತ್ರ ಬೇಕು ಎಂದು ಟಾಂಗ್ ನೀಡಿದರು.
ವರದಿ : ನಂದಕುಮಾರ ಕರಂಜೆ, ಬೀದರ