ಮೂಡಲಗಿ – ಇತ್ತೀಚೆಗೆ ನಡೆದ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಮತದಾನವಾದ ನಂತರ ಮತದಾನ ಪೆಟ್ಟಿಗೆಗಳನ್ನು ಬದಲಾಯಿಸಲಾಗಿದೆ ಎಂದು ಬಿಜೆಪಿಯ ಅಧಿಕೃತ ಕಾರ್ಯಕರ್ತರು ಆರೋಪ ಮಾಡಿರುವುದು ಆತಂಕಕಾರಿ ಬೆಳವಣಿಗೆ ಎಂದು ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಹೇಳಿದರು.
ಇಲ್ಲಿನ ಪ್ರೆಸ್ ಕ್ಲಬ್ ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಮೂಡಲಗಿಯ ಶಿವಬೋಧರಂಗ ಕಾಲೇಜಿನಲ್ಲಿ ಇಡಲಾಗಿದ್ದ ಮತಪೆಟ್ಟಿಗೆಗಳನ್ನು ಬದಲಾಯಿಸಿ ಚುನಾವಣಾ ಅಕ್ರಮ ಎಸಗಲಾಗಿದೆ ಎಂದು ಭಾರತೀಯ ಜನತಾ ಪಕ್ಷದ ಅಧಿಕೃತ ಕಾರ್ಯಕರ್ತರು ಆರೋಪ ಮಾಡಿ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದು ಅಚ್ವರಿಯಾಗಿದೆ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಕೂಡ ಬಿಜೆಪಿಯದೇ ಅಧಿಕಾರವಿದೆ. ಶಾಸಕರು ಬಿಜೆಪಿಯವರು, ರಾಜ್ಯ ಸಭಾ ಸದಸ್ಯರು ಬಿಜೆಪಿಯವರು ಹೀಗಿದ್ದೂ ಮತಪೆಟ್ಟಿಗೆಗಳ ಬದಲಾವಣೆಯಾಗಿದೆ ಎಂಬ ಗಂಭೀರ ಆರೋಪ ಬಂದಿದ್ದು ಅರಭಾವಿ ಕ್ಷೇತ್ರವು ಕರ್ನಾಟಕದಲ್ಲಿದೆಯೋ, ಬಿಹಾರದಲ್ಲಿದೆಯೋ ಎಂಬ ಅನುಮಾನ ಮೂಡುತ್ತಿದೆ ಆದ್ದರಿಂದ ಚುನಾವಣಾ ಆಯೋಗ ಇದನ್ನು ಗಂಭಿರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದರು.
ಮತಪೆಟ್ಟಿಗೆಗಳು ತಹಶೀಲ್ದಾರ ಸೇರಿದಂತೆ ಸಂಪೂರ್ಣ ತಾಲೂಕಾಡಳಿತ ಹಾಗೂ ಸ್ಥಳೀಯ ಪೊಲೀಸರ ನಿಯಂತ್ರಣದಲ್ಲಿರುತ್ತವೆ. ಆದರೂ ಮತಪೆಟ್ಟಿಗೆಗಳ ಬದಲಾಯಿಸಾಲಾಗಿದೆ ಎಂಬ ಆರೋಪ ಬಿಜೆಪಿ ಕಾರ್ಯಕರ್ತರಿಂದಲೇ ಬಂದಿದ್ದು ವಿಚಿತ್ರವಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ನಾವು ಚುನಾವಣಾ ಆಯೋಗ ಹಾಗೂ ರಾಜ್ಯಪಾಲರಿಗೆ ಪತ್ರ ಬರೆಯುವುದಾಗಿ ಲಕ್ಕಣ್ಣ ಸವಸುದ್ದಿ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಗುರುನಾಥ ಗಂಗಣ್ಣವರ ಹಾಗೂ ಶಿವಾನಂದ ಮಡಿವಾಳರ ಇದ್ದರು.