ಸಿಂದಗಿ: ಇಂದಿನ ಜಾಗತೀಕರಣ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿದ್ದು ಆದರೆ ಶ್ರೀ ಸಿದ್ದೇಶ್ವರ ಜಾತ್ರಾ ನಿಮಿತ್ತ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿದ್ದು ರೈತರ ಬಾಳಿಗೆ ತುಂಬಾ ಖುಷಿಯ ವಿಷಯ, ಮುಂದಿನ ಪೀಳಿಗೆಗೆ ಇಂತಹ ಗ್ರಾಮೀಣ ಕ್ರೀಡೆಗಳನ್ನು ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ತಾಲೂಕಿನ ಚಾಂದಕವಠೆ ಗ್ರಾಮದ ಹಾಲಮರಡಿ ಜಾತ್ರಾ ಮಹೋತ್ಸವದ ನಿಮಿತ್ತ ರೈತರ ಎತ್ತಿನ ಗಾಡಿ ಓಡಿಸುವ ಹಾಗೂ ಭಾರ ಎತ್ತುವ ಸ್ಪರ್ಧೆಗಳ ಉದ್ಘಾಟನೆ ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹಿಂದಿನ ಹಿರಿಯರು ವರ್ಷವಿಡಿ ಬರುವ ಹಬ್ಬ ಹರಿದಿನಗಳಲ್ಲಿ ಇಂದಿನ ಗ್ರಾಮೀಣ ಸೊಗಡಿನ ಕಾರ್ಯಕ್ರಮಗಳನ್ನು ಹಾಕಿಕೊಂಡು ಬರುತ್ತಿದ್ದರು ಆದರೆ ಇಂದಿನ ಯುವಕರಿಗೆ ಪಾಶ್ಚಿಮಾತ್ಯ ಕ್ರೀಡೆಗಳು ಮಾತ್ರ ನೆನಪಿನಲ್ಲಿವೆ ಆ ಕಾರಣಕ್ಕೆ ಇಂತಹ ಜಾತ್ರೆಗಳಲ್ಲಿ ಗ್ರಾಮೀಣ ಕ್ರೀಡೆಗಳನ್ನು ಏರ್ಪಡಿಸುವುದರಿಂದ ಗ್ರಾಮೀಣ ಕ್ರೀಡೆಗಳನ್ನು ಉಳಿಸಿದಂತಾಗುತ್ತದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರ ನಾಗಪ್ಪ ಶಿವೂರ, ನಾನಾಗೌಡ ಪಾಟೀಲ, ಭಾಜಪ ಹಿಂದೂಳೀದ ವರ್ಗಗಳ ಅಧ್ಯಕ್ಷ ರವಿ ನಾಯ್ಕೋಡಿ, ಪಂಡಿತ ಚೌಧರಿ, ಧರೆಪ್ಪ ಕಂಟಿಗೊಂಡ, ಮಡ್ಡಪ್ಪ ಸೊನ್ನದ, ಧರ್ಮಣ್ಣ ಹಿರೇಕುರುಬರ ಸೇರಿದಂತೆ ಹಾಲುಮತದ ಬಾಂಧವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.