spot_img
spot_img

ಹೊಸಪುಸ್ತಕ ಓದು: ಲೋಕಮಾನ್ಯರನ್ನೆ ನಡುಗಿಸಿದ ಧೀಮಂತನ ಯಶೋಗಾಥೆ

Must Read

- Advertisement -
  • ಪುಸ್ತಕದ ಹೆಸರು : ಅರಟಾಳ ರುದ್ರಗೌಡರ ಚರಿತ್ರೆ
  • ಲೇಖಕರು : ಬಸವಯ್ಯ ಚನ್ನಬಸವಯ್ಯ ಹಿರೇಮಠ ಊರ್ಫ ಕಂಬಿ (ಕಂಬಿ ಬಸವಾರ್ಯರು)
  • ಪ್ರಕಾಶಕರು : ಪ್ರಸಾರಾಂಗ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ, ಬೆಳಗಾವಿ, ೨೦೨೩ (ಮರುಮುದ್ರಣ)
  • ಪುಟ : ೬೦೭ ಬೆಲೆ : ರೂ. ೧೦೦೦

[ಇಂದು ಅರಟಾಳ ರುದ್ರಗೌಡರ ಜನ್ಮದಿನ. ಲಿಂಗಾಯತ ಸಮಾಜಸೂರ್ಯನಾಗಿ ಬಂದ ಅರಟಾಳರು ಮಾಡಿದ ಲೋಕಸೇವೆ ಅನುಪಮವಾದುದು. ಕೆ.ಎಲ್.ಇ. ಸಂಸ್ಥೆ, ಕರ್ನಾಟಕ ಕಾಲೇಜು, ವೀರಶೈವ ಮಹಾಸಭೆ, ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ ಮೊದಲಾದ ಸಂಸ್ಥೆಗಳನ್ನು  ಸ್ಥಾಪಿಸಿದ ಪುಣ್ಯ ಪುರುಷರು. ಲೋಕಮಾನ್ಯ ಟೀಳಕರ ಗರ್ವಭಂಗ ಮಾಡಿದ ಧೀಮಂತ ವ್ಯಕ್ತಿ. ಇಂತಹ ಮಹಾತ್ಮರನ್ನು ನೆನೆಯುವುದೇ ಲಿಂಗಾಯತ ಸಮಾಜಕ್ಕೆ ಉದಯ; ಮರೆಯುವುದೇ ಅಸ್ತಮಾನ!]

೧೯-೨೦ನೇ ಶತಮಾನದ ಮಧ್ಯಕಾಲದಲ್ಲಿ ಲಿಂಗಾಯತ ಸಮಾಜವು ಅಜ್ಞಾನ ಅನಕ್ಷರತೆಗಳಿಂದ ದಿಕ್ಕುಗಾಣದೆ ತೊಳಲಾಡುತ್ತಿದ್ದ ಸಂದರ್ಭದಲ್ಲಿ ಸಮಾಜಸೂರ್ಯನಾಗಿ ಬಂದವರೇ ಅರಟಾಳ ರುದ್ರಗೌಡರು. ಸ್ಥಗಿತಗೊಂಡಿದ್ದ ಭಾರತೀಯ ಜನಜೀವನಕ್ಕೆ ಬ್ರಿಟಿಷರ ಸಂಪರ್ಕವು ವಿದ್ಯುತ್ ಸ್ಪರ್ಶದಂತೆ ಬಂದೊದಗಿತು. ಜಿಡ್ಡುಗಟ್ಟಿದ ವಾತಾವರಣದಲ್ಲಿ ಹೊಸ ಉಸುರಿನ ಸುಳಿದಾಟ ಆರಂಭವಾಯಿತು. ಬ್ರಿಟಿಷರು ಪರಿಚಯಿಸಿದ ಹೊಸ ಜಗತ್ತು ನಮ್ಮವರನ್ನು ದಿಗಿಲುಗೊಳಿಸಿತು. ವೈಜ್ಞಾನಿಕ ಸೌಲಭ್ಯ ಹಾಗೂ ಆಧುನಿಕತೆಯ ಲವಲವಿಕೆಗಳಿಂದ ಸುಖೀ ಜೀವನ ಸಾಗಿಸುತ್ತಿದ್ದ ಪಾಶ್ಚಿಮಾತ್ಯ ದೇಶಗಳೊಡನೆ ತಮ್ಮನ್ನು ಹೋಲಿಸಿ ನೋಡಿದ ನಮ್ಮ ಹಿರಿಯರು ತಮ್ಮ ಹೀನಾಯ ಸ್ಥಿತಿಯ ಬಗ್ಗೆ ತಳಮಳಗೊಂಡರು. ಸಾಂಪ್ರದಾಯಿಕ ಮತ್ತು ವಂಶಪರಂಪರೆಯಿಂದ ಬಂದ ವೃತ್ತಿ-ಉದ್ದಿಮೆಗಳ ಸೀಮಿತ ಪರಿಧಿಯೊಳಗೆ ಒದ್ದಾಡುತ್ತಿದ್ದ ಜನಸಮುದಾಯಗಳು ಪ್ರಗತಿಯತ್ತ ಹೆಜ್ಜೆ ಹಾಕಲು ಹುರುಪುಗೊಂಡವು. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಈ ಪ್ರಕ್ರಿಯೆ ಭರದಿಂದ ಸಾಗಿತು. ಕಾಲಮಹಿಮೆಯೋ ಯುಗಧರ್ಮದ ಅನಿವರ್ಯತೆಯೋ ಎಂಬಂತೆ ಈ ಅವಧಿಯಲ್ಲಿ ಅನೇಕ ಪುಣ್ಯಪುರುಷರು ಜನಿಸಿ ಸರ್ವಾರ್ಪಣ ಭಾವದಿಂದ ದುಡಿದು ನಮ್ಮ ನಾಡಿನ ಪುನಶ್ಚೇತನಕ್ಕೆ ಕಾರಣರಾದರು. ಇಂಥ ಮಹನೀಯರಲ್ಲಿ ಯುಗಪುರುಷ ಅರಟಾಳ ರುದ್ರಗೌಡರು ಪ್ರಮುಖರು. 

೧೯ನೇ ಶತಮಾನದ ಉತ್ತರಾರ್ಧ, ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಕನ್ನಡ ನಾಡು ಬ್ರಿಟಿಷರ ಆಡಳಿತಕ್ಕೆ ಒಳಪಟ್ಟ ಪ್ರದೇಶವಾಗಿತ್ತು. ಇಲ್ಲಿ ಎರಡು ರೀತಿಯ ಹೋರಾಟಗಳು ನಡೆಯುತ್ತಿದ್ದವು. ಒಂದು- ಬ್ರಿಟಿಷರ ವಿರುದ್ಧ ಹೋರಾಟ, ಮತ್ತೊಂದು-ಸಾಮಾಜಿಕ ಶ್ರೇಣಿಯಲ್ಲಿ ಲಿಂಗಾಯತರನ್ನು ಶೂದ್ರರು ಎಂದು ಕಡೆಗಣಿಸಿದರ ವಿರುದ್ಧದ ಹೋರಾಟ. ಆಂಗ್ಲರ ವಿರುದ್ಧದ ಹೋರಾಟಕ್ಕಿಂತ, ಒಳಗಿನವರ ಸಾಮಾಜಿಕ ಜಾತಿ ಶ್ರೇಣಿಯ ನೆಪದಲ್ಲಿ ಮಾಡುತ್ತಿದ್ದ ಲಿಂಗಾಯತರ ಶೋಷಣೆಯ ವಿರುದ್ಧದ ಹೋರಾಟದಲ್ಲಿ ಅರಟಾಳ ರುದ್ರಗೌಡರು ನಿರ್ವಹಿಸಿದ ಪಾತ್ರ, ಕೊಟ್ಟ ಕೊಡುಗೆ ಅನನ್ಯವಾದುದು. 

- Advertisement -

ಅಜ್ಞಾನ-ಅನಕ್ಷರತೆ-ಮೌಢ್ಯಗಳಿಂದ ತುಂಬಿದ ಲಿಂಗಾಯತ ಸಮಾಜಕ್ಕೆ ತನ್ಮೂಲಕ ಕನ್ನಡ ನಾಡಿಗೆ ಜಾಗೃತಿಯ ಪ್ರಜ್ಞೆಯನ್ನು ಮೂಡಿಸಲು ಮುಂದೆ ಬಂದವರೇ ಅರಟಾಳ ರುದ್ರಗೌಡರು. ಕ್ರಿ.ಶ.೧೮೬೮ರಲ್ಲಿ ಡೆಪ್ಯೂಟಿ ಚೆನ್ನಬಸಪ್ಪನವರು ಲಿಂಗಾಯತ ಬಡಮಕ್ಕಳಿಗಾಗಿ ಒಂದು ಉಚಿತ ಪ್ರಸಾದ ನಿಲಯವನ್ನು ಬೆಳಗಾವಿಯಲ್ಲಿ ಪ್ರಾರಂಭಿಸಿ, ನಾಡಿನ ಜಾಗೃತಿಗಾಗಿ ನಾಂದಿಹಾಡಿದ್ದರು. ಈ ಪರಂಪರೆಯನ್ನು ಅತ್ಯಂತ ವ್ಯವಸ್ಥಿತವಾಗಿ ಮುನ್ನಡೆಸಿ, ಲಿಂಗಾಯತ ಸಮಾಜವನ್ನು ಒಂದು ದಡಮುಟ್ಟುವಂತೆ ಮಾಡಿದ ಕೀರ್ತಿ ಅರಟಾಳ ರುದ್ರಗೌಡರಿಗೆ ಸಲ್ಲುತ್ತದೆ. 

ಏಳು ಜನ ಸಪ್ತರ್ಷಿಗಳು ಕೆ.ಎಲ್.ಇ. ಸಂಸ್ಥೆಯನ್ನು ಸ್ಥಾಪಿಸಲು ಆಲೋಚನೆ ಮಾಡಿದಾಗ, ಅವರಿಗೆ ಯೋಗ್ಯ ಮಾರ್ಗದರ್ಶನ ಮಾಡಿದ ಪ್ರಾತಃಸ್ಮರಣೀಯ ವ್ಯಕ್ತಿಯೇ ಅರಟಾಳ ರುದ್ರಗೌಡರು. ಅವರು ಆ ಕಾಲದ ಅನೇಕ ಮಹೋನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದರು. ತಮ್ಮ ಜೀವನದ ಯಶೋಗಾಥೆಯನ್ನು ಕಂಬಿ ಬಸವಾರ್ಯ ಮಾಸ್ತರರ ಮುಂದೆ ಸವಿಸ್ತಾರವಾಗಿ ಆಧಾರ ಸಮೇತ ಹೇಳಿದರು. ಈ ವಿಷಯವನ್ನು ಕವಿಮನಸ್ಸಿನ ಕಂಬಿ ಬಸವಾರ್ಯ ಮಾಸ್ತರರು ಸಮಗ್ರವಾಗಿ ದಾಖಲಿಸಬೇಕೆಂದು ‘ಅರಟಾಳ ರುದ್ರಗೌಡರ ಚರಿತ್ರೆ’ ಕೃತಿಯನ್ನು ಬರೆದರು. ರುದ್ರಗೌಡರ ಬದುಕಿನ ಒಟ್ಟು ಇತಿಹಾಸವನ್ನು ಅತ್ಯಂತ ರಸಮಯವಾಗಿ ನಿರೂಪಿಸಿದರು. ಇಂತಹ ಬೃಹತ್ ಹೊತ್ತಿಗೆಯನ್ನು ಪ್ರಕಟಿಸುವಂತಹ ಯಾವ ಸೌರ್ಯಗಳು ಆ ಕಾಲದಲ್ಲಿ ಇಲ್ಲದ ಕಾರಣ, ನೂರು ವರ್ಷಗಳ ಕಾಲ ಈ ಹಸ್ತಪ್ರತಿ ಅಜ್ಞಾತವಾಸವನ್ನು ಅನುಭವಿಸಿತು. ಈ ನಡುವೆ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯವರು ಈ ಹಸ್ತಪ್ರತಿ ಹಾಳಾಗಿ ಹೋಗಬಾರದೆಂದು ಟೈಪು ಮಾಡಿಸಿ ಎರಡು ಸಂಪುಟಗಳಲ್ಲಿ ಸಂಗ್ರಹಿಸಿ ಇಟ್ಟಿದ್ದರು. ಅರಟಾಳ ರುದ್ರಗೌಡರ ಕೆಲವು ಅಪರೂಪದ ಮೂಲ ಹಸ್ತಪ್ರತಿಗಳು ನಾಗನೂರು ರುದ್ರಾಕ್ಷಿಮಠದ ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯದಲ್ಲಿ ಸಂಗ್ರಹವಾಗಿದ್ದವು. ಅರಟಾಳ ರುದ್ರಗೌಡರ ಮೂಲ ಕನ್ನಡ ಚರಿತ್ರೆಯನ್ನು ಆಧರಿಸಿ ವಿನಾಯಕ ಪುರಾಣಿಕ ಎನ್ನುವವರು ಇಂಗ್ಲಿಷ್ ಭಾಷೆಯಲ್ಲಿ ಒಂದು ಅತ್ಯುತ್ಕೃಷ್ಟ ಕೃತಿಯನ್ನು ರಚಿಸಿದ್ದಾರೆ. ಆಶ್ರ್ಯವೆಂದರೆ ಈ ಕೃತಿ ನಮ್ಮ ಕನ್ನಡ ವಿದ್ವಾಂಸರ ಗಮನ ಸೆಳೆಯದೇ ಹೋದುದು ದುರಂತದ ವಿಷಯ. ವಿನಾಯಕ ಪುರಾಣಿಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಕೆ.ಎಲ್.ಇ. ಸಂಸ್ಥೆಯಲ್ಲಿ ಶಿಕ್ಷಕರಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಕಾರಣವಾಗಿ, ಶಿಕ್ಷಕ ವೃತ್ತಿಯಿಂದ ಅವರನ್ನು ಹೊರಗೆ ಹಾಕಿದಾಗ, ವೈರಾಗ್ಯ ಹೊಂದಿದ ಪುರಾಣಿಕರು ಋಷಿಕೇಶಕ್ಕೆ ಹೋಗಿ ವಾಸವಾದರು ಎಂಬ ಇತಿಹಾಸ ತಿಳಿಯುತ್ತದೆ.

ಕೆ.ಎಲ್.ಇ. ಸಂಸ್ಥೆಯ ಕಾಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರ ಇಚ್ಛಾಶಕ್ತಿ ಕಾರಣವಾಗಿ, ಕೆ.ಎಲ್.ಇ. ಪ್ರಸಾರಾಂಗದಿಂದ ಈ ಕೃತಿ  ೨೦೦೨ರಲ್ಲಿ ಮೊದಲ ಬಾರಿಗೆ ಮುದ್ರಣ ಭಾಗ್ಯ ಕಂಡಿತು. ಬಹಳ ವರ್ಷಗಳ ತರುವಾಯ ಈಗ ಮತ್ತೆ ಈ ಕೃತಿಯನ್ನು ಡಾ. ಪ್ರಭಾಕರ ಕೋರೆ ಅವರು ಕೆ.ಎಲ್.ಇ. ಸಂಸ್ಥೆಯ ಪ್ರಸಾರಾಂಗದಿಂದ ಮತ್ತೆ ಮರುಮುದ್ರಣ ಮಾಡಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. 

- Advertisement -

ನಿನ್ನಂದದ ಸತ್ಕವಿಗಳ್ | ನಿನ್ನಂದದ ಸುಂದರಾಕ್ಷರಗಳಂ ಲಿಖಿಪರ್

ನಿನ್ನಂದದ ಗುಣಶಾಲಿಗ| ಳಿನ್ನೇಂ ಕರ್ನಾಟಕಾಂಬೆಯುದರದೊಳುದಿಪರ್

ಕನ್ನಡ ಭಾಷಾ ಪಂಡಿತರೂ, ಆದರ್ಶ ಶಿಕ್ಷಕರೂ, ಸಜ್ಜನ ಕವಿಗಳೂ ಆಗಿದ್ದ ಬಸವಾರ್ಯ ಕಂಬಿ ಅವರ ಮರಣ ಸಂದರ್ಭದಲ್ಲಿ ಅವರ ಪ್ರೀತಿಯ ಶಿಷ್ಯರಾದ ಶ್ರೀ ವೀರಪ್ಪ ನಾಗಶೆಟ್ಟಿ ಮಾಸ್ತರರು ಬರೆದ ಶೋಕ ಗೀತೆಗಳು ಸಾಲುಗಳಿವು. ಈ ಗೀತೆಯಲ್ಲಿ ಹೇಳಿದಂತೆ ಬಸವಾರ್ಯರು ಗುಣಶಾಲಿಗಳೂ ಸತ್ಕವಿಯೂ ಆಗಿದ್ದರು. ಬಸವಾರ್ಯರ ಪೂರ್ವಜರು ಮೂಲತಃ ಮಲಪ್ರಭಾ ನದಿ ತೀರದಲ್ಲಿರುವ ಖಾನಾಪೂರ ತಾಲೂಕಿನ ಲಕ್ಕೀಬೈಲ ಗ್ರಾಮದ ಹಿರೇಮಠದವರು. ಕಾರಣಾಂತರದಿಂದ ಪಾರಿಶ್ವಾಡ ಗ್ರಾಮಕ್ಕೆ ಬಂದು ನೆಲೆಸಿದ್ದರು. ಅಲ್ಲಿ ಕಂಬಿ ಮನೆತನದವರ ಸ್ಥಳದಲ್ಲಿ ವಾಸ ಮಾಡುತ್ತಿದ್ದುದರಿಂದ ‘ಕಂಬಿ’ ಎಂಬ ಅಡ್ಡ ಹೆಸರು ಪ್ರಚಲಿತವಾಯಿತು.

ಕಂಬಿ ಬಸವಾರ್ಯರು ಅನೇಕ ಕವನ ಸಂಕಲನಗಳನ್ನು ರಚಿಸಿದ್ದಾರೆ. ಅರಟಾಳ ರುದ್ರಗೌಡರನ್ನೇ ಕುರಿತು ‘ರುದ್ರಪ್ರಭುನೀತಿ’ ಎಂಬ ಕೃತಿಯನ್ನು ರಚಿಸಿದ್ದಾರೆ. ಪ್ರಾಯಶಃ ಕನ್ನಡದಲ್ಲಿ ಪೂರ್ಣಪ್ರಮಾಣದಲ್ಲಿ ಸಾಕ್ಷ್ಯಾಧಾರಗಳನ್ನು ಇಟ್ಟುಕೊಂಡು ರಚಿಸಿದ ಮೊಟ್ಟ ಮೊದಲ ಜೀವನ ಚರಿತ್ರೆಯೆಂದರೆ ಕಂಬಿ ಬಸವಾರ್ಯರ ‘ಅರಟಾಳ ರುದ್ರಗೌಡರ ಚರಿತ್ರೆ’ ಎಂದರೆ ಅತ್ಯುಕ್ತಿಯಾಗಲಾರದು.

೨೩ ಭಾಗಗಳಲ್ಲಿ ಈ ಬೃಹತ್ ಕೃತಿ ವಿಸ್ತಾರಗೊಂಡಿದೆ. ರುದ್ರಗೌಡರ ಮನೆತನ, ಜನನ, ಬಾಲ್ಯ, ಶಿಕ್ಷಣ ಎರಡು ಅಧ್ಯಾಯಗಳಲ್ಲಿ ಮೂಡಿ ಬಂದಿದೆ. ಮೂರನೆಯ ಅಧ್ಯಾಯದಲ್ಲಿ ಮ್ಯಾಟ್ರಿಕ್ ಪಾಸಾದ ಗೌಡರು ಗೌಡಕಿ ಕೆಲಸದೊಡನೆ ಕಾರಕೂನರಾಗಿ ಸೇವೆ ಸಲ್ಲಿಸತೊಡಗಿದರು. ನಂತರ ಚಿಟ್ನಿಸ್ ರಾದರು. ಆ ಕಾಲದಲ್ಲಿ ಲಿಂಗಾಯತ ಪದವೀಧರರ ಸಂಖ್ಯೆ ಅತ್ಯಂತ ವಿರಳವಾಗಿತ್ತು. ಆಗ ಸರಕಾರಿ ಹುದ್ದೆಯಲ್ಲಿ ಹೆಚ್ಚು ವಿರಾಜಮಾನರಾದವರು ಬ್ರಾಹ್ಮಣ ಸಮುದಾಯದವರು. ಅವರ ಮತ್ಸರ ಬುದ್ಧಿ ಕಾರಣವಾಗಿ ಅರಟಾಳ ರುದ್ರಗೌಡರಿಗೆ ಆಗಾಗ ಕಿರುಕುಳ ಕೊಡುವ ಸಂಗತಿ ನಾಲ್ಕನೆಯ ಅಧ್ಯಾಯದಲ್ಲಿ ಬರುತ್ತದೆ.

ಲಿಂಗಾಯತ ಸಮಾಜದ ಉದ್ಧಾರಕ್ಕಾಗಿ ೧೮೮೩ರಲ್ಲಿ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯನ್ನು ಹುಟ್ಟು ಹಾಕಿದ ಘಟನೆ ಐದನೆಯ ಅಧ್ಯಾಯದಲ್ಲಿ ಬಂದಿದೆ. ಗೌಡರ ಮದುವೆ, ಗೌಡರು ಕಾರವಾರ ಜಿಲ್ಲೆಯಲ್ಲಿ ದಪ್ತರದಾರರಾದದ್ದು, ಗದಗ ತೋಂಟದಾರ್ಯ ಸಂಸ್ಕೃತ ಪಾಠಶಾಲೆಯ ಸ್ಥಾಪನೆ ಮೊದಲಾದ ಸಂಗತಿಗಳು ಆರು ಏಳನೆಯ ಅಧ್ಯಾಯದಲ್ಲಿ ಬಂದಿವೆ. ಎಂಟನೆಯ ಭಾಗದಿಂದ ರುದ್ರಗೌಡರ ಆಡಳಿತದ ಉನ್ನತೋನ್ನತ ಹುದ್ದೆಗಳಲ್ಲಿ ಏರಿ ಹೋದ ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ. ದಕ್ಷಿಣ ವಿಭಾಗದ ಕಮೀಶನ, ಡಿಸ್ಟ್ರಿಕ್ಟ್ ಡೆಪ್ಯೂಟಿ ಕಲೆಕ್ಟರ್ ವಿಜಯಪುರ, ಡಿಸ್ಟ್ರಿಕ್ಟ್ ಡೆಪ್ಯೂಟಿ ಕಲೆಕ್ಟರ್ ನಾಡಿಕ, ಡಿಸ್ಟ್ರಿಕ್ಟ್ ಡೆಪ್ಯೂಟಿ ಕಲೆಕ್ಟರ್ ಬೆಳಗಾವಿ ಹೀಗೆ ಸರಕಾರದ ಉನ್ನತೋನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಸಂಗತಿಗಳನ್ನು ಮುಂದಿನ ಅಧ್ಯಾಯಗಳಲ್ಲಿ ವಿಸ್ತಾರವಾಗಿ ಕಂಬಿ ಬಸವರ್ಯಾರು ಬರೆಯುತ್ತಾರೆ.

 ವ್ಯಾಸನ ತೋಳು ಮತ್ತು ಅಡ್ಡಪಲ್ಲಕ್ಕಿ ಪ್ರಕರಣ

ಅರಟಾಳ ರುದ್ರಗೌಡರು ಲಿಂಗಾಯತ ಸಮುದಾಯವನ್ನು ಎಲ್ಲ ರೀತಿಯ ಶೋಷಣೆಗಳಿಂದ ಮುಕ್ತಗೊಳಿಸಬೇಕೆಂದು ಪಣತೊಟ್ಟಿದ್ದರು. ಬ್ರಾಹ್ಮಣರು ಲಿಂಗಾಯತ ಸಮಾಜವನ್ನು ಆ ಕಾಲದಲ್ಲಿ ಅತ್ಯಂತ ಕೀಳರಿಮೆಯಿಂದ ಕಾಣುತ್ತಿದ್ದರು. ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ಲಿಂಗಾಯತರನ್ನು ಆಗಾಗ ಅವಮಾನಿಸುವ ಪ್ರಕರಣಗಳು ನಡೆಯುತ್ತಿದ್ದವು. ಅವುಗಳಲ್ಲಿ ಮುಖ್ಯವಾದ ಎರಡು ಘಟನೆಗಳೆಂದರೆ- ೧. ವ್ಯಾಸನ ತೋಳು ಪ್ರಕರಣ, ೨. ಚಿತ್ರದುರ್ಗ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ. 

ವ್ಯಾಸನ ತೋಳು ಪ್ರಕರಣ ಜಾತಿ ಶ್ರೇಷ್ಠತೆಯ ವ್ಯಸನಕ್ಕೆ ವಾದವಾಗಿ ರೂಪಗೊಂಡ ಒಂದು ಪ್ರಕರಣ. ವ್ಯಾಸ ಮಹರ್ಷಿಯು ಅನೇಕ ಪುರಾಣಗಳನ್ನು ಬರೆದು ಶಿವನಿಗಿಂತಲೂ ವಿಷ್ಣು ಸರ್ವಶ್ರೇಷ್ಠ ಎಂದು ಪ್ರತಿಪಾದಿಸಿದ. ಆಗ ನಂದಿಯು ವ್ಯಾಸನ ತೋಳುಗಳನ್ನು ಕತ್ತರಿಸಿದ. ಇದರಿಂದ ಪಶ್ಚಾತ್ತಾಪ ಪಟ್ಟ ವ್ಯಾಸನು ಶಿವನೇ ಅಧಿಕನೆಂದು ಒಪ್ಪಿಕೊಂಡನು. ಇದರ ಪರಿಣಾಮವಾಗಿ ಆತನ ಕೈಗಳು ಮತ್ತೆ ಮೂಡಿದವು ಎಂಬ ಘಟನೆ ಸ್ಕಾಂದಪುರಾಣದ ಕಾಶೀಕಾಂಡದಲ್ಲಿ ಬರುತ್ತದೆ. ಅಂದಿನಿಂದ ಲಿಂಗಾಯತ ಸಮುದಾಯದವರು ಯಾವುದೇ ಸಾರ್ವಜನಿಕ ಮೆರವಣಿಗೆ ಮಾಡುವ ಕಾಲಕ್ಕೆ ವ್ಯಾಸನ ತೋಳಿನ ಮೆರವಣಿಗೆಯನ್ನೂ ಮಾಡುತ್ತ ಬಂದಿದ್ದರು. ವಿಶೇಷವೆಂದರೆ ಇದು ಐದು ನೂರು ವರ್ಷಗಳಿಂದ ಚಾಲ್ತಿಯಲ್ಲಿರುವ ಘಟನೆ. ೧೬ನೇ ಶತಮಾನದ ಪದ್ಮರಾಜ ಪುರಾಣದಲ್ಲಿ ಕೆರೆಯ ಪದ್ಮರಸನು ದ್ವಾರ ಸಮುದ್ರದ ನರಸಿಂಹ ಬಲ್ಲಾಳನ ಆಸ್ಥಾನಕ್ಕೆ ವಾದ ಮಾಡಲು ಬರುತ್ತಾನೆ. ಆಗ ಆತ ವ್ಯಾಸನ ತೋಳ ಸಹಿತ ಬಂದಿರುತ್ತಾನೆ ಎಂಬ ಸಂಗತಿ ತಿಳಿಯುತ್ತದೆ. ಈ ಪರಂಪರೆ ಬ್ರಿಟಿಷ್ ಆಡಳಿತದಲ್ಲಿಯೂ ಮುಂದುವರೆದುಕೊಂಡು ಬಂದಿತ್ತು. ಆದರೆ ಕೆಲವು ಬ್ರಾಹ್ಮಣರು ಇದನ್ನು ತೀವ್ರವಾಗಿ ವಿರೋಧಿಸುತ್ತಿದ್ದರು. ಅಥಣಿಯಲ್ಲಿ ೧೯೧೧ ಏಪ್ರಿಲ್ ತಿಂಗಳಲ್ಲಿ ವ್ಯಾಸನ ತೋಳು ಮೆರವಣಿಗೆ ಮತ್ತು ಚಿತ್ರದುರ್ಗ ಜಗದ್ಗುರುಗಳ ಅಡ್ಡಪಲ್ಲಕಿ ನೆರವೇರಿಸಲು ಲಿಂಗಾಯತ ಸಮುದಾಯದವರು ಆಲೋಚಿಸಿದರು. ಈ ವಿಷಯ ತಿಳಿದ ಬ್ರಾಹ್ಮಣರು ತಂತ್ರ ಕುತಂತ್ರಗಳಿಂದ ಹೇಗಾದರೂ ಮಾಡಿ ಈ ಮೆರವಣಿಗೆಯನ್ನು ನಿಲ್ಲಿಸಬೇಕೆಂದು ಪ್ರಯತ್ನ ಮಾಡತೊಡಗಿದರು. 

ಒಂದು ಅರಟಾಳ ರುದ್ರಗೌಡರು ಅಥಣಿಗೆ ಹೋದಾಗ ಲಿಂಗಾಯತ ಸಮುದಾಯದವರು ಭೇಟಿಯಾಗಿ, ಹೇಗಾದರೂ ಮಾಡಿ ಮೆರವಣಿಗೆ ಮಾಡಲು ತಾವು ಅನುಮತಿ ದೊರಕಿಸಿಕೊಡಬೇಕು ಎಂದು ವಿನಂತಿಸಿಕೊಂಡರು. ಅದೇ ಸಂದರ್ಭದಲ್ಲಿ ಬ್ರಾಹ್ಮಣರ ಒಂದು ಗುಂಪು ರುದ್ರಗೌಡರನ್ನು ಭೇಟಿಯಾಗಿ ವ್ಯಾಸನ ತೋಳು ಮತ್ತು ಅಡ್ಡಪಲ್ಲಕ್ಕಿ ಮೆರವಣಿಗೆಗೆ ಅನುಮತಿ ನೀಡಿದರೆ ರಕ್ತಪಾತವಾಗುವುದು. ಆದ್ದರಿಂದ ತಾವು ಅನುಮತಿ ನೀಡಬಾರದೆಂದು ವಿನಂತಿಸಿಕೊಂಡರು. ಬೆರಳಣಿಕೆಯ ಬ್ರಾಹ್ಮಣ ಸಮುದಾಯದವರು ದೊಡ್ಡ ಸಮುದಾಯದವರನ್ನು ಹೀಗೆ ಹೆದರಿಸುತ್ತಿದ್ದರು. ಅರಟಾಳ ರುದ್ರಗೌಡರು ಕೊನೆಗೆ ಲಿಂಗಾಯತ ಸಮಾಜದ ಪರವಾಗಿ ನಿಂತು ಸರಕಾರದಿಂದ ಮೆರವಣಿಗೆ ಮಾಡಲು ಅನುಮತಿ ದೊರಕಿಸಿಕೊಟ್ಟರು. ಈ ಅನುಮತಿಯನ್ನು ರದ್ದುಪಡಿಸಬೇಕೆಂದು ಆ ಸಮುದಾಯದವರು ಶತಗತಾಯ ಪ್ರಯತ್ನ ಮಾಡಿದರು. ಆದರೆ ರುದ್ರಗೌಡರ ಚಾಣಾಕ್ಷತೆ ಕಾರಣವಾಗಿ ಕಾರ್ಯಕ್ರಮ ಸುಸೂತ್ರವಾಗಿ ಜರುಗಿತು. ತದನಂತರ ಅಥಣಿ ಭಾಗದ ತೆಲಸಂಗ, ಅನಂತಪುರ, ಕಿನ್ನಾಳ. ಹಿಪ್ಪರಗಿ, ಇಂಗಳಗಾವಿ ಮೊದಲಾದ ಕಡೆ ಈ ರೀತಿಯ ಭವ್ಯ ಮೆರವಣಿಗೆಗಳು ಜರುಗಿದವು.

ಇದರಿಂದ ಕುಪಿತರಾದ ಬ್ರಾಹ್ಮಣರು ಮುಂಬೈ ಸರಕಾರಕ್ಕೆ ಮನವಿ ಕೊಟ್ಟರು. ಈ ರೀತಿಯ ಮೆರವಣಿಗೆಯಾದರೆ ದಂಗೆಯಾಗುವುದೆಂದು ಹೆದರಿಸಿದರು. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಮುಂಬೈ ಸರಕಾರ ಬಂದೋಬಸ್ತ ಮಾಡಿ ಮೆರವಣಿಗೆ ಮಾಡಿದರೆ ಯಾವುದೇ ತೊಂದರೆಯಾಗುವುದಿಲ್ಲವೆಂದು ಠರಾವು ಪಾಸು ಮಾಡಿತು. ಈ ವಿಷಯವಾಗಿ ರುದ್ರಗೌಡರ ಚರಿತ್ರೆ ಬರೆದ ಕಂಬಿ ಬಸವಾರ್ಯರು ಹೀಗೆ ವಿವರಿಸುತ್ತಾರೆ- ‘ಬ್ರಾಹ್ಮಣರು ಎಂದೂ ದಂಗೆ ಮಾಡುವವರಲ್ಲ. ಎಲ್ಲಿಯಾದರೂ ದಂಗೆಯಾಗುವ ಲಕ್ಷಣ ಕಂಡರೆ; ಕೂಡಲೆ ಓಡಿ ಹೋಗಿ ಕೋಣೆಗಳನ್ನು ಸೇರುವುದೇ ಅವರಿಗೆ ಸಾಕುಸಾಕಾಗುತ್ತದೆ. ಅವರ ದಂಗೆಯೆಂದರೆ ಕಾಗದ ಪತ್ರದೊಳಗಿನ ದಂಗೆಯೇ ದಂಗೆಯು. ಕಾಗದದಲ್ಲಿ ಅವರಷ್ಟು ದಂಗೆಯು ಯಾರಿಂದಲೂ ಆಗುವುದಿಲ್ಲ. ಆದರೆ ಅವರು ಎದುರು ನಿಂತು ಬಡಿದಾಡಲಿಕ್ಕೆ ಎಂದೂ ಬರುವುದಿಲ್ಲ. ಕಾಗದದಲ್ಲಿ ಮಾತ್ರ ಕಡ್ಡಿಯಿದ್ದದ್ದನ್ನು ಗುಡ್ಡ ಮಾಡಿ ಬೆಳೆಸಿ, ಅಪ್ರಮಾಣವಾದ ದಂಗೆಯನ್ನು ಹಬ್ಬಿಸಲಿಕ್ಕೆ ಮಾತ್ರ ಅವರು ಬಹು ಜಾಣರು. ಅನೇಕ ಅರ್ಜಿಗಳಿಂದಲೂ ಪುಷ್ಕಳ ತಾರುಗಳಿಂದಲೂ ಸರಕಾರದಲ್ಲಿ ಸುಳ್ಳು ಸುಳ್ಳೇ ಕೂಗಾಟವನ್ನೆಬ್ಬಿಸುವರು. ಇದರ ನಿಜತ್ವವು ಅಥಣಿಯಲ್ಲಿ ನಡೆದ ವ್ಯಾಸನ ತೋಳಿನ ಪ್ರತಿಬಂಧದ ಪ್ರಕರಣದಲ್ಲಿ ಸ್ಪಷ್ಟವಾಗಿ ಕಂಡುಬರುವುದು.” (ಪು. 250) ನಂತರ ಬ್ರಾಹ್ಮಣರು ಈ ವಿಷಯವಾಗಿ ಮುಂಬೈ ಹೈಕೋರ್ಟಿಗೆ ಹೋದರು. ಅಲ್ಲಿಯೂ ವಾದ ವಿವಾದ ನಡೆದು, ಲಿಂಗಾಯತ ಪರವಾಗಿ ನಿರ್ಣಯ ಹೊರಬಂದಿತು. ಈ ಸಂದರ್ಭದಲ್ಲಿ ಅರಟಾಳ ರುದ್ರಗೌಡರು ತೆಗೆದುಕೊಂಡ ಅಚಲ ನಿರ್ಧಾರಗಳು ಅನನ್ಯ ಅಪರೂಪವಾಗಿವೆ.

ಅರಟಾಳ ರುದ್ರಗೌಡರ ಧರ್ಮಪತ್ನಿ ಗುರುಪಾದವ್ವನವರು ಲಿಂಗೈಕ್ಯರಾದಾಗ ಬೆಳಗಾವಿಯಲ್ಲಿ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ, ಮೆರವಣಿಗೆ ಮಾಡಲಾಯಿತು. ಈ ಮೆರವಣಿಗೆ ಸಂದರ್ಭದಲ್ಲಿ ವ್ಯಾಸನ ತೋಳು ಕಟ್ಟಲಾಗಿತ್ತು. ಅಲ್ಲದೆ ಈ ಅಂತ್ಯಕ್ರಿಯೆ ಮೆರವಣಿಗೆಯು ಬ್ರಾಹ್ಮಣರ ಓಣಿಯಲ್ಲಿ ಹಾದು ಹೋಯಿತು. ಇಷ್ಟು ವಿಷಯ ಸಿಕ್ಕ ತಕ್ಷಣ ಬ್ರಾಹ್ಮಣರು ತಕ್ಷಣ ಸರಕಾರಕ್ಕೆ ಪತ್ರ ಬರೆದು, ರುದ್ರಗೌಡರು ವ್ಯಾಸನ ತೋಳು ಕಟ್ಟಿ ನಮ್ಮನ್ನು ಅವಮಾನಿಸಿದ್ದಾರೆ ಎಂದು ದೂರು ಕೊಟ್ಟರು. ಆಗ ರುದ್ರಗೌಡರು ಬ್ರೌನ್ ಸಾಹೇಬರನ್ನು ಭೇಟಿಯಾಗಿ ವಸ್ತುಸ್ಥಿತಿ ವಿವರಿಸಿದರು. ನಮ್ಮ ಲಿಂಗಾಯತ ಸಮಾಜದಲ್ಲಿ ಯಾವುದೇ ಮೆರವಣಿಗೆ ಇರಲಿ, ಅಲ್ಲಿ ವ್ಯಾಸನ ತೋಳು ಕಟ್ಟಲಾಗುವುದು. ಅದನ್ನು ತಾವು ಬಲ್ಲವರು. ಹೀಗಾಗಿ ಕೇವಲ ದ್ವೇಷಭಾವದಿಂದ ನನ್ನ ಮೇಲೆ ದೂರು ಕೊಟ್ಟಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ವಿವರಿಸಿ ಹೇಳಿದರು. ಹೀಗಾಗಿ ಈ ವಿಷಯ ಅಲ್ಲಿಗೆ ನಿಂತಿತು. 

ಲೋಕಮಾನ್ಯರನ್ನೆ ನಡುಗಿಸಿದ ಧೀಮಂತ

ಅರಟಾಳ ರುದ್ರಗೌಡರು ಆಂಗ್ಲ ಸರಕಾರದ ಭಾಗವಾಗಿ ಡೆಪ್ಯೂಟಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ದಕ್ಷತೆ ಪ್ರಾಮಾಣಿಕತೆಗಳಿಂದ ದುಡಿಯುತ್ತಿದ್ದ ರುದ್ರಗೌಡರು ಸರಕಾರದಕ್ಕೂ ಸಮಾಜಕ್ಕೂ ಒಳಿತನ್ನುಂಟು ಮಾಡುತ್ತಿದ್ದರು. ಗೋಕಾಕದಲ್ಲಿ ಮಹಾಜನ ಮತ್ತು ದೇಶಪಾಂಡೆ ಎಂಬ ಇಬ್ಬರು ವ್ಯಕ್ತಿಗಳು ಅಧಿಕಾರಿಗಳಿಗೆ ಲಂಚ ನೀಡಿ ವಿಪರೀತ ಭ್ರಷ್ಟಾಚರವನ್ನು ಮಾಡುತ್ತಿದ್ದರು. ಯಾವ ಅಧಿಕಾರಿಯನ್ನೂ ಅವರು ಬಿಟ್ಟಿರಲಿಲ್ಲ. ಆದರೆ ರುದ್ರಗೌಡರು ಬಂದ ನಂತರ, ಅವರ ಆಟಗಳೆಲ್ಲ ನಿಂತು ಹೋದವು. ರುದ್ರೌಡರ ಹೆಸರನ್ನು ಹೇಗಾದರೂ ಮಾಡಿ ಕೆಡಿಸಬೇಕೆಂದು ಅವರು ಹೊಂಚು ಹಾಕಿದರು. ಅರಟಾಳ ರುದ್ರಗೌಡರು ಬ್ರಾಹ್ಮಣ ಸಮುದಾಯದವರಿಗೆ ಕಿರುಕುಳ ನೀಡುತ್ತಿದ್ದಾರೆ. ಬ್ರಾಹ್ಮಣ ಸಮುದಾಯದ ಮೇಲೆ ಅವರಿಗೆ ಉದ್ದೇಶ ಪೂರ್ವಕ ದ್ವೇಷವಿದೆ ಎಂಬ ಸುಳ್ಳು ಸುದ್ದಿಯನ್ನು ಹರಡಿದರು. ಈ ವಿಷಯವಾಗಿ ಟಿಳಕರು ಸಂಪಾದಕರಾಗಿದ್ದ ‘ಕೇಸರಿ’ ಮತ್ತು ‘ಮರಾಠಾ’ ಪತ್ರಿಕೆಗಳಲ್ಲಿ ಪ್ರಕಟವಾಗುವಂತೆ ನೋಡಿಕೊಂಡರು. ಮಹಾಜನ ಮತ್ತು ದೇಶಪಾಂಡೆ ಅವರು ಕರ್ನಾಟಕದಿಂದ ಟಿಳಕರ ಕೇಸರಿ ಪತ್ರಿಕೆಗೆ ಚಂದಾ ಹಣ ಸಂಗ್ರಹಿಸಿ ಕಳಿಸುತ್ತಿದ್ದರು. ಹಣದಾಸೆಗೆ ಬಿದ್ದ ಟಿಳಕರು, ಇವರ ಮಾತನ್ನು ನಂಬಿ ತಮ್ಮ ಪತ್ರಿಕೆಯಲ್ಲಿ ರುದ್ರಗೌಡರ ವಿಷಯವಾಗಿ ಖಾರವಾಗಿ ನಾಲ್ಕಾರು ಲೇಖನಗಳನ್ನು ಪ್ರಕಟಿಸಿದರು. ಆ ಕಾಲದಲ್ಲಿ ಟಿಳಕರ ಕೇಸರಿ ಪತ್ರಿಕೆ ತುಂಬ ಜನಪ್ರಿಯವಾಗಿತ್ತು. ಲೋಕಮಾನ್ಯರೆನಿಸಿದ ಟಿಳಕರು ತಮ್ಮ ಪತ್ರಿಕೆಯಲ್ಲಿ ಬರೆಯುವುದೆಲ್ಲವೂ ಅಕ್ಷರಶಃ ನಿಜವೆಂದು ಜನರು ನಂಬಿದ್ದರು. ಆದರೆ ಟಿಳಕರು ತಮ್ಮ ಪತ್ರಿಕೆಗೆ ವಂತಿಗೆ ಸಂಗ್ರಹಿಸಿ ಕೊಡುತ್ತಿದ್ದವರ ಮಾತಿಗೆ ಜೋತು ಬಿದ್ದು, ರುದ್ರಗೌಡರ ಚಾರಿತ್ರ್ಯ ಹರಣ ಮಾಡುವ ಲೇಖನಗಳನ್ನು ಸತ್ಯಾಸತ್ಯ ವಿಚಾರ ಮಾಡದೆ ಪ್ರಕಟಿಸಿದರು. ಇದರಿಂದ ಮುಂಬೈ ಕರ್ನಾಟಕದಲ್ಲಿ ಅಲ್ಲೊಲ ಕಲ್ಲೋಲವಾಯಿತು. ಟಿಳಕರು ಕೇಸರಿ ಪತ್ರಿಕೆಯಲ್ಲಿ ರುದ್ರಗೌಡರ ವಿರುದ್ಧ ಬರೆದಿದ್ದಾರೆ ಎಂದ ಬಳಿಕ, ಸರಕಾರ ರುದ್ರಗೌಡರ ಮೇಲೆ ಸೂಕ್ತ ಕ್ರಮ ಕೈಕೊಳ್ಳುವುದು ಎಂದು ಬಹುತೇಕ ಜನರು ನಂಬಿದ್ದರು.

ಚಚಡಿ ಗ್ರಾಮದಲ್ಲಿ ನರಸಿಂಹಾಚಾರ್ಯ ಪುಣೇಕರ್ ಎಂಬ ಗಣ್ಯ ವ್ಯಕ್ತಿಗಳಿದ್ದರು. ಅವರಿಗೂ ಟಿಳಕರಿಗೂ ಒಳ್ಳೆಯ ಸಂಬಂಧವಿತ್ತು. ಒಂದು ಅರಟಾಳ ರುದ್ರಗೌಡರು ನರಸಿಂಹಾಚಾರು ಪುಣೇಕರ್ ಅವರನ್ನು ಕರೆದು, ವಸ್ತುಸ್ಥಿತಿಯನ್ನು ವಿವರಿಸಿದರು. ಗೋಕಾಕದ ಮಹಾಜನ ಮತ್ತು ದೇಶಪಾಂಡೆ ಇಬ್ಬರೂ ನಿಜವಾಗಿಯೂ ಭ್ರಷ್ಟಾಚಾರಿ ಆಗಿದ್ದಾರೆ. ಇಲ್ಲಿ ಎಲ್ಲ ದಾಖಲೆಗಳಿವೆ. ಹೀಗಿದ್ದೂ ಸತ್ಯಾಸತ್ಯತೆ ವಿಚಾರ ಮಾಡದೆ ಟಿಳಕರು ತಮ್ಮ ಪತ್ರಿಕೆಯಲ್ಲಿ ನನ್ನ ವಿರುದ್ಧ ಲೇಖನ ಬರೆದದ್ದು ತಪ್ಪು, ಈ ವಿಷಯವಾಗಿ ನೀವು ಟಿಳಕರಿಗೆ ವಾಸ್ತವ ಸತ್ಯವನ್ನು ತಿಳಿಸಬೇಕೆಂದು ರುದ್ರಗೌಡರು ನರಸಿಂಹಾಚಾರ್ಯ ಪುಣೇಕರ್ ಅವರನ್ನು ವಿನಂತಿಸಿಕೊಂಡರು. ಟಿಳಕರ ಬಗ್ಗೆ ಅಪಾರ ಗೌರವ ಹೊಂದಿದ್ದ ಪುಣೇಕರ್ ಅವರು ತಕ್ಷಣ ಟಿಳಕರಿಗೆ ಪತ್ರ ಬರೆದು, ನೀವು ರುದ್ರಗೌಡರ ಬಗ್ಗೆ ಬರೆದ ಲೇಖನಗಳೆಲ್ಲವೂ ಸುಳ್ಳು ಸುದ್ಧಿಗಳಾಗಿವೆ. ಆದ್ದರಿಂದ ನಾನು ಬರೆದ ಒಂದು ಸ್ಷಷ್ಟೀಕರಣವನ್ನು ಕೇಸರಿ ಪತ್ರಿಕೆಯಲ್ಲಿ ಪ್ರಕಟಿಸಿ ಎಂದು ಪುಣೇಕರ್ ಅವರು ಕಳಿಸಿಕೊಟ್ಟರು. ದುರ್ದೈವವೆಂದರೆ ಟಿಳಕರು ಪುಣೇಕರ್ ಅವರ ಸ್ಪಷ್ಟಿಕರಣ ಲೇಖನವನ್ನು ಪ್ರಕಟಿಸಲಿಲ್ಲ. ರಾಗ-ದ್ವೇಷಗಳಿಂದ ತುಂಬಿತುಳುಕುತ್ತಿದ್ದ ಟಿಳಕರು ಲಿಂಗಾಯತನೊಬ್ಬ ಇಷ್ಟು ದೊಡ್ಡ ಹುದ್ದೆ ಏರಿದ್ದು ಸಹಿಸಲಾರದ ನೋವಾಗಿತ್ತು. ಕೇವಲ ತಮ್ಮ ಸಮುದಾಯದ ವ್ಯಕ್ತಿಗಳು ಇಂಥ ಹುದ್ದೆಯಲ್ಲಿ ಇರಬೇಕೆಂದು ಟಿಳಕರು ಆಶಿಸುತ್ತಿದ್ದರು.

ಆದರೆ ಬ್ರಾಹ್ಮಣನಲ್ಲದ ವ್ಯಕ್ತಿಯೊಬ್ಬ ದೊಡ್ಡ ಹುದ್ದೆಯಲ್ಲಿ ಕುಳಿತದ್ದು ಟಿಳಕರಿಗೆ ವೈಯಕ್ತಿಕವಾಗಿ ಇಷ್ಟವಿರಲಿಲ್ಲ. ಹೀಗಾಗಿ ಅರಟಾಳರ ಕುರಿತು ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ಮಾಡಿ ಲೇಖನ ಪ್ರಕಟಿಸಿದ ಟಿಳಕರಿಗೆ ಸರಕಾರದಿಂದ ಒಂದು ರೀತಿಯಲ್ಲಿ ಮುಖಭಂಗವಾಯಿತು.

ಕರ್ನಾಟಕ ಕಾಲೇಜು ಸ್ಥಾಪನೆ

ಧಾರವಾಡದಲ್ಲಿ ಕರ್ನಾಟಕ ಕಾಲೇಜು ಸ್ಥಾಪನೆಯ ವಿಷಯವಾಗಿ ಕೆಲವರು ತಪ್ಪು ಅಭಿಪ್ರಾಯಗಳನ್ನು ಬರೆದಿರುವುದು ಖಂಡನಾರ್ಹ. ಲೋಕಶಿಕ್ಷಣ ಟ್ರಸ್ಟನವರು ಪ್ರಕಟಿಸಿದ ರೊದ್ದ ಶ್ರೀನಿವಾಸರಾಯರ ಚರಿತ್ರೆಯಲ್ಲಿ ಕರ್ನಾಟಕ ಕಾಲೇಜು ಸ್ಥಾಪನೆ ರೊದ್ದ ಅವರಿಂದಲೇ ಆಯಿತ್ತೆಂದು ಬರೆದಿದ್ದಾರೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ೧೯೧೬ರಲ್ಲಿ ಕರ್ನಾಟಕ ಕಾಲೇಜು ಸ್ಥಾಪನೆಯ ವಿಷಯವಾಗಿ ಚರ್ಚೆಗಳು ನಡೆದಿದ್ದವು. ಪುಣೆಯಲ್ಲಿದ್ದ ಡೆಕ್ಕನ ಕಾಲೇಜು, ಫರ್ಗ್ಯೂಸನ್ ಕಾಲೇಜುಗಳ ಹೊರತಾಗಿ ಬೇರೆ ಕಾಲೇಜು ಬೇಡವೆಂದು ಪುಣೆಯ ಪೇಶ್ವೆ ಮನಸ್ಥಿತಿಯ ಬ್ರಾಹ್ಮಣರು ವಾದಿಸುತ್ತಿದ್ದರು. ಆದರೆ ಬ್ರಿಟಿಷ್ ಸರಕಾರ ಒಂದು ಕರಾರಿನ ಮೇಲೆ ಕಾಲೇಜು ಸ್ಥಾಪನೆಗೆ ಮುಂದಾಯಿತು. ಲಿಂಗಾಯತ ಸಮಾಜದಿಂದ ಅರಟಾಳ ರುದ್ರಗೌಡರು ಒಂದು ಲಕ್ಷ ರೂ.ಗಳನ್ನು ಕೂಡಿಸಬೇಕು, ರೊದ್ದ ಶ್ರೀನಿವಾಸರಾಯರು ಬ್ರಾಹ್ಮಣ ಸಮಾಜದಿಂದ ಒಂದು ಲಕ್ಷ ರೂ.ಗಳನ್ನು ಕೂಡಿಸಿ ಕೊಟ್ಟರೆ ಕಾಲೇಜು ಅನುಮತಿ ನೀಡುವ ಭರವಸೆ ನೀಡಿದ್ದರು. ಅದರಂತೆ ಕೆಲವೇ ದಿನಗಳಲ್ಲಿ ಅರಟಾಳ ರುದ್ರಗೌಡರು ಒಂದು ಲಕ್ಷ ರೂ.ಗಳನ್ನು ಸಂಗ್ರಹಿಸಿ ಸರಕಾರಕ್ಕೆ ಸಲ್ಲಿಸಿದರು. ಸಂಖ್ಯೆಯಲ್ಲಿಯೂ ಕಡಿಮೆಯಿದ್ದ ಬ್ರಾಹ್ಮಣ ಸಮುದಾಯದಿಂದ ರೊದ್ದರಿಗೆ ಒಂದು ಲಕ್ಷ ರೂ. ಸಂಗ್ರಹಿಸುವುದು ಆಗಲಿಲ್ಲ. ಆಗ ಸುಖಾಸುಮ್ಮನೆ ಅರಟಾಳರ ಮೇಲೆ ಆರೋಪ ಮಾಡತೊಡಗಿದರು. ಬ್ರಿಟಿಷ್ ಅಧಿಕಾರಿಗಳು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಅರಟಾಳರ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡು, ರೊದ್ದ ಶ್ರೀನಿವಾಸರ ಅನುಚಿತ ಕಾರ್ಯವನ್ನು ಖಂಡಿಸಿದರು. ಕೊನೆಗೆ ರೊದ್ದ ಶ್ರೀನಿವಾಸರಾಯರು ಲಿಂಗಾಯತ ಸಮುದಾಯದ ಶ್ರೀಮಂತರಿಂದ ದೇಣಿಗೆ ಸಂಗ್ರಹಿಸಿ ಕೊಟ್ಟರು. ಕರ್ನಾಟಕ ಕಾಲೇಜು ಸ್ಥಾಪನೆಯ ಬೆನ್ನಹಿಂದಿನ ಶಕ್ತಿಯಾಗಿ ನಿಂತವರು ಅರಟಾಳ ರುದ್ರಗೌಡರು ಎಂಬುದನ್ನು ಸಿದ್ಧಪಡಿಸಲು ಇನ್ನೊಂದು ಪ್ರಮುಖ ಸಾಕ್ಷಿ ಎಂದರೆ. ಕರ್ನಾಟಕ ಕಾಲೇಜು ಉದ್ಘಾಟನೆಯ ಆಮಂತ್ರಣ ಪತ್ರಿಕೆಯಲ್ಲಿ ಅರಟಾಳ ರುದ್ರಗೌಡರ ಹೆಸರು ಮಾತ್ರ ಇದೆ. ರೊದ್ದ ಶ್ರೀನಿವಾಸರಾಯರ ಹೆಸರೇ ಅದರಲ್ಲಿ ಇಲ್ಲ. ಇದನ್ನು ಗಮನಿಸಿದಾಗ ಕಾಲೇಜು ಸ್ಥಾಪನೆಯಲ್ಲಿ ರುದ್ರಗೌಡರ ಪಾತ್ರ ಎಷ್ಟು ದೊಡ್ಡದಿತ್ತು ಎನ್ನುವುದರ ಅರಿವು ನಮಗಾಗುತ್ತದೆ. ಈ ವಿಷಯವಾಗಿ ಅವರ ಚರಿತ್ರೆಯನ್ನು ಅವರ ಬಾಯಿಂದಲೇ ಕೇಳಿ ಬರೆದ ಕಂಬಿ ಬಸವಾರ್ಯರ ಅಧಿಕೃತ ಮಾಹಿತಿಯನ್ನು ಗಮನಿಸಿ ಹೇಳುವುದಾದರೆ- ೧೬-೬-೧೯೧೩ ರಂದು ಅರಟಾಳ ಸಾಹೇಬರು ಸರಕಾರಿ ಸೇವೆಯಿಂದ ನಿವೃತ್ತರಾದರು. ೨೮-೭-೧೯೧೩ ರಂದು ಮುಂಬೈ ಕಾಯಿದೆ ಕೌನ್ಸಿಲ್ ನಡೆದಿತ್ತು. ಅದೇ ಸುಮಾರು ಅರಟಾಳ ಸಾಹೇಬರ ಗೌರವಾರ್ಥ ಗೋಕಾಕದಲ್ಲಿ ತಾಂಬೂಲ ಸಮಾರಂಭವೇರ್ಪಟ್ಟಿತ್ತು. ಕೌನ್ಸಿಲ್ ಕೂಡಿದ ದಿನವೇ ರಾ.ಬ. ಅರಟಾಳ ಸಾಹೇಬರು ಗೋಕಾವಿಯಿಂದ “ಲಿಂಗವಂತ ಸಮಾಜದವರು ಕರ್ನಾಟಕ ಕಾಲೇಜ ಸ್ಥಾಪನೆಗೆ ಕೊಡಬೇಕೆನ್ನುವ ಕರಾರಿನ ಪ್ರಕಾರ ಒಂದು ಲಕ್ಷ ವರ್ಗಣಿ ಕೊಡಲಿಕ್ಕೆ ಒಪ್ಪಿಕೊಳ್ಳುತ್ತಾರೆ’’ ಎಂದು ಕೌನ್ಸಿಲ್ ಸದಸ್ಯರೆಂದು ಅಲ್ಲಿಗೆ ಹೋಗಿದ್ದ ಬೆಳಗಾವಿ ಕಮಿಶನರ ಮಿ. ಶೆಪರ್ಡರಿಗೆ ತಂತಿ ಕಳಿಸಿದರು. ಅದು ಮಿ. ಶೆಪರ್ಡರು ಕೌನ್ಸಿಲಗೆ ಹೋಗುವ ದಾರಿಯಲ್ಲಿಯೇ ಅವರ ಕೈಸೇರಿತು. ಅವರು ಸಂತೋಷಪಟ್ಟು ಬಜೆಟ್ಟಿನ ಮೇಲೆ ಮಾಡಿದ ತಮ್ಮ ಭಾಷಣದಲ್ಲಿ ಅರಟಾಳ ಸಾಹೇಬರನ್ನು ಪ್ರಶಂಸಿಸಿ ಕೆಳಗಿನಂತೆ ನುಡಿದರು. ಅದು ೨-೯-೧೯೧೩ರ ಬಾಂಬೆ ಗವ್ಹರ್ನಮೆಂಟ ಗ್ಯಾಜೆಟ್ ಭಾಗ || ಪುಟ ೫೧೯-೫೩೧ ರಲ್ಲಿ ಪ್ರಕಟವಾಗಿದೆ. “ಎರಡು ವರ್ಷಗಳ ಹಿಂದೆ ಕಾಲೇಜ ಸ್ಥಾಪನೆಗಾಗಿ ಕೆಲವೊಂದು ಹಣ ಸಂಗ್ರಹಿಸಿ, ಸರಕಾರವನ್ನು ಕಂಡು, ಇದಕ್ಕೆ ಸಾಕಷ್ಟು ಪೂರಕ ಗ್ರ್ಯಾಂಟ್ ಒದಗಿಸಬೇಕೆಂದು ಕೇಳಿಕೊಳ್ಳುವ ಉದ್ದೇಶದಿಂದ ಉತ್ತರ ಕರ್ನಾಟಕದ ಜನತೆ ಸಂಘವನ್ನು ನಿರ್ಮಿಸಿಕೊಂಡರು. ಆದರೆ ಇಲ್ಲಿಯವರೆಗೆ ಕೇವಲ ಅವರು ೧೩,೦೦೦-೦೦ ರೂಪಾಯಿಗಳನ್ನು ಸಂಗ್ರಹಿಸಿದುದನ್ನು ಕೇಳಿ ನನಗೆ ವಿಷಯದವೆನಿಸಿದೆ. ಕಳೆದ ಕೆಲವು ತಿಂಗಳುಗಳಿಂದ ಆ ಭಾಗದ ದೊಡ್ಡ ಸಮಾಜದವರನ್ನು ಅಂದರೆ ಲಿಂಗವಂತ ಈ ವಿಷಯದಲ್ಲಿ ವಿಶೇಷ ಆಸ್ಥೆಯನ್ನು ವಹಿಸುತ್ತಲಿದ್ದಾರೆ. ಹೋದ ವರುಷ ಆಯ್.ಎಸ್.ಓ. ಎಂಬ ಪದವಿಯನ್ನಿತ್ತು ಚಕ್ರವರ್ತಿಗಳು ಗೌರವಿಸಿದ, ನಿವೃತ್ತ ಡಿಸ್ಟ್ರಿಕ್ಟ ಡೆಪ್ಯುಟಿ ಕಲೆಕ್ಟರ ರಾವಬಹದ್ದೂರ ಅರಟಾಳ ಹೆಸರನ್ನು ನೀವೆಲ್ಲ ಕೇಳಿರಬಹುದು. ಅವರು ನಲವತ್ತು ವರ್ಷಗಳವರೆಗೆ ಶ್ರೇಷ್ಠದರ್ಜೆಯ ಆಡಳಿತಾಧಿಕಾರಿಯ ಸರ್ವೋತ್ತಮ ಲಕ್ಷಣಗಳಿಂದ ಕೂಡಿದ ಗಣ್ಯವಾದ ಸೇವೆಯನ್ನು ಸಲ್ಲಿಸಿ ಹೋದ ಜೂನ ತಿಂಗಳಲ್ಲಿ ನಿವೃತ್ತರಾಗಿದ್ದಾರೆ. ಅಂದಿನಿಂದ ಅವರು ಈ ಪ್ರಶ್ನೆಯ ಬಗೆಗೆ ಆ ಸಮಾಜದಲ್ಲಿ ಆಸಕ್ತಿ ಹುಟ್ಟಿಸಲು ಯತ್ನಿಸುತ್ತಲಿದ್ದಾರೆ. ನಾನು ಈ ಸಭೆಗೆ ಬಂದ ನಂತರ ಅವರಿಂದ ಬಂದ ತಂತಿ ನನಗೆ ಸಮಾಧಾನ ತಂದಿದೆ. ಅದರಲ್ಲಿ ಲಿಂಗವಂತ ಸಮಾಜದವರು ಕಾಲೇಜ ಸ್ಥಾಪನೆಗಾಗಿ ಒಂದು ಲಕ್ಷ ವರ್ಗಣಿ ಕೂಡಿಸಿ ಕೊಡಲು ಒಪ್ಪಿದ್ದಾರೆಂದು ತಿಳಿಸಿದ್ದಾರೆ. ಈ ಪ್ರಕಟನೆ ಈ ಕೌನ್ಸಿಲಿಗೂ ಸಂತೃಪ್ತಿಯನ್ನು ಒದಗಿಸುತ್ತದೆಂದು ಆಶಿಸಿದ್ದೇನೆ. ನನ್ನ ಸಹ ಸದಸ್ಯರಾದ ಮಿಸ್ಟರ ರೊದ್ದ ಮತ್ತು ಬೆಳಗಾವಿಯವರು ತಮ್ಮ ಬ್ರಾಹ್ಮಣ ಸಮಾಜ ಅಭಿವಚನವಿತ್ತಷ್ಟು ಹಣವನ್ನು ಸಂಗ್ರಹಿಸುವಂತೆ ಈ ಪ್ರಕಟಣೆ ಪ್ರೇರಣೆಯನ್ನೀಯುತ್ತದೆಂದು ಆಶಿಸುತ್ತೇನೆ.’’ (೨೮ ಜುಲೈ ೧೯೧೩).

ಈಗ ನಾಮದಾರ ಶ್ರೀ ರೊದ್ದ ಹಾಗೂ ಶ್ರೀ ನಾಯಕ ಮೊದಲಾದವರು “ಕರಾರಿನ ಪ್ರಕಾರ ೨,೬೪,೦೦೦-೦೦ ರೂ.ಗಳ ವರ್ಗಣಿಯನ್ನು ಅಪೇಕ್ಷಿಸದೆ ಇಷ್ಟೇ ವಂತಿಗೆಯ ಬಲದಿಂದ ಕಾಲೇಜ ಸ್ಥಾಪಿಸುವ ಕಾರ್ಯವನ್ನು ಕೈಕೊಳ್ಳಬೇಕು.” ಎಂಬ ಸೂಚನೆಯನ್ನು ತಂದರು.

ಅದನ್ನು ಕೇಳಿ ಸರ್ ರಿಚರ್ಡ ಲ್ಯಾಂಪರು ಅವರ ಇಂಗಿತವನ್ನು ತಿಳಿದುಕೊಂಡು ಹಾಗೆ ಎಂದಿಗೂ ಮಾಡಲಿಕ್ಕಾಗದು ಹೇಗೆ ವಚನವಿತ್ತಿರುವರೊ ಅದರಂತೆ ನಿಮ್ಮ ಬ್ರಾಹ್ಮಣ ಸಮಾಜದವರು ಒಂದು ಲಕ್ಷ ಕೊಡುತ್ತೇವೆಂದು ವಚನ ಕೊಟ್ಟ ನಂತರ ಅರ್ಥಾತ್ ೨ ಲಕ್ಷ ರೂಪಾಯಿಗಳ ವಂತಿಗೆ ಬರುವತನಕ ಕಾಲೇಜದ ಕಟ್ಟಡವನ್ನು ಕಟ್ಟಲಾಗದು’’ ಎಂದು ನಿಷ್ಠುರವಾಗಿ ಉತ್ತರ ಕೊಟ್ಟದ್ದರಿಂದ ಬ್ರಾಹ್ಮಣ ನಾಯಕರ ಜಾರಿಕೊಳ್ಳುವ ಪ್ರಯತ್ನ ಹಾಗೂ ವಿಚಾರಗಳು ಕುಂಠಿತಗೊಂಡವು.

ಮಾರ್ಚ ೧೯೧೬ ರ ಒಳಗಾಗಿ ರಾ.ಬ. ರವರು ಕರ್ನಾಟಕ ಕಾಲೇಜ ಸ್ಥಾಪನೆಗಾಗಿ ಕೇವಲ ಲಿಂಗವಂತ ಸಮಾಜ ಒಂದರಿಂದ ಒಂದು ಲಕ್ಷ ರೂಪಾಯಿಗಳನ್ನು ಸರಕಾರಕ್ಕೆ ಸಲ್ಲಿಸಿದರು. ಸರಕಾರದ ಪರವಾಗಿ ಒಂದು ಲಕ್ಷ ಹಣ ಮುಟ್ಟಿದ ಬಗ್ಗೆ ಜಿ.ಎಸ್. ಥಾಮಸ ಆಯ್. ಸಿ.ಎಸ್. ಇವರಿಂದ ಪಾವತಿ ನಂ.  ೯೫೩/೫-೪-೧೯೧೭ ರಂದು ಬಂತು. ಉಳಿದ ಒಂದು ಲಕ್ಷ ಹಣವನ್ನು ರಾ.ಬ. ರೊದ್ದರು ಕೇವಲ ಬ್ರಾಹ್ಮಣ ಸಮಾಜ ಒಂದರಿಂದಲೆ ಕೂಡಿಸಿಕೊಡಬೇಕೆಂದು ಕರಾರು ಇದ್ದರೂ ಇತರ ಸಮಾಜದಿಂದಲೂ ವಸೂಲಿ ಮಾಡಿಕೊಟ್ಟರು. ಏನೇ ಆಗಲಿ ಹಣ ಸಂಗ್ರಹಿಸಿಕೊಟ್ಟವರು ಅರಟಾಳ ರುದ್ರೌಡರ ಪರಿಶ್ರಮ ಪ್ರಯತ್ನಗಳಿಂದ ಕರ್ನಾಟಕ ಕಾಲೇಜು ೨೦-೯-೧೯೧೭ರಲ್ಲಿ ಅಸ್ತಿತ್ವದಲ್ಲಿ ಬಂತು. ಅದರ ಉದ್ಘಾಟನೆಯ ಕಾಲಕ್ಕೆ ರಾ.ಬ. ರೊದ್ದರು ತಮ್ಮ ಭಾಷಣದಲ್ಲಿ “ಒಂದು ರೀತಿಯಿಂದ ರಾ.ಬ. ಅರಟಾಳ ಸಾಹೇಬರು ಈ ಸಂಸ್ಥೆಯ ಜನಕರೆಂದೆನ್ನಬಹುದು’’ ಎಂದು ಕೊಂಡಾಡಿದರು. ಆದ್ದರಿಂದ ರುದ್ರಗೌಡರ ಕೀರ್ತಿ ಧ್ವಜವಾಗಿ ಕಾಲೇಜು ಇಂದಿಗೂ ಶೋಭಿಸುತ್ತಲಿದೆ. ಅಲ್ಲದೆ ಅವರ ಉಪಕಾರ ಸ್ಮರಣಾರ್ಥವಾಗಿ ತನ್ನ ಸುವರ್ಣ ಮಹೋತ್ಸವ ಕಾಲಕ್ಕೆ ಮಂಗಳ ಮೂರ್ತಿಗಳನ್ನು ತನ್ನ ಆವರಣದಲ್ಲಿ ನಿಲ್ಲಿಸಿದೆ.

ಇದು ಕರ್ನಾಟಕ ಕಾಲೇಜು ವಿಷಯದ ನಿಜವಾದ ಇತಿಹಾಸ. ಆದರೆ ಕೆಲವು ಲಿಂಗಾಯತ ವಿರೋಧಿಗಳು ಬೇರೆಯಾದ ಇತಿಹಾಸ ರಚನೆಗೆ ತೊಡಗಿರುವುದು ಅಕ್ಷಮ್ಯವಾಗಿದೆ. ಸತ್ಯ ಯಾವಾಗಲೂ ಶುದ್ಧವಾಗಿರುತ್ತದೆ. ಅದು ಎಂದಾದರೊಮ್ಮೆ ಹೊರಬರಲೇಬೇಕು. ನೂರು ವರ್ಷಗಳ ಹಿಂದೆ ಲಿಂಗಾಯತ ಸಮಾಜ ಇನ್ನೂ ಅಜ್ಞಾನ ಅನಕ್ಷರತೆಯ ಮಡುವಿನಲ್ಲಿ ಹೊರಳಾಡುತ್ತಿತ್ತು. ಇಂದು ಲಿಂಗಾಯತ ಸಮಾಜ ಸುಶಿಕ್ಷಿತವಾಗಿದೆ. ಸತ್ಯವನ್ನು ಶೋಧಿಸುವ, ಸತ್ಯವನ್ನು ಪ್ರತಿಪಾದಿಸುವ ಸಾಮರ್ಥ್ಯವನ್ನು ಗಳಿಸಿಕೊಂಡಿದೆ. ಇದಕ್ಕೆಲ್ಲ ಅರಟಾಳ ರುದ್ರಗೌಡರಂತಹ ಪ್ರಾತಃಸ್ಮರಣೀಯರೇ ಮುಖ್ಯ ಕಾರಣರು.

ಇಂತಹ ಅನೇಕ ರೋಚಕ ಘಟನೆಗಳು ಈ ಕೃತಿಯಲ್ಲಿವೆ. ನಿಜವಾಗಿಯೂ ಪ್ರತಿಯೊಬ್ಬ ಲಿಂಗಾಯತನೂ ಈ ಕೃತಿಯನ್ನು ಅವಶ್ಯವಾಗಿ ಓದಬೇಕು. ಅಷ್ಟೇ ಅಲ್ಲ, ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಇದನ್ನು ಪವಿತ್ರ ಗ್ರಂಥಗಳ ಸ್ಥಾನದಲ್ಲಿಟ್ಟು ಅಧ್ಯಯನ ಮಾಡಬೇಕು. ನೂರು ವರ್ಷಗಳ ಹಿಂದೆ ನಮ್ಮ ಹಿರಿಯರು ನಮ್ಮ ಸಮಾಜದ ಏಳ್ಗೆಗಾಗಿ ಎಷ್ಟೆಲ್ಲ ನೋವುಗಳನ್ನು ಅನುಭವಿಸಿದ್ದಾರೆ ಎಂಬುದರ ಅರಿವು ನಮಗಾಗುತ್ತದೆ. ಇಂತಹ ಅಪರೂಪದ ಕೃತಿಯನ್ನು ಮರುಮುದ್ರಣ ಮಾಡಿದ ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರಿಗೆ ಅಭಿನಂದನೆಗಳು. ಕೃತಿ ಮುದ್ರಣ ಕಾರ್ಯದಲ್ಲಿ ಅಹೋರಾತ್ರಿ ಶ್ರಮಿಸಿದ ಪ್ರಸಾರಾಂಗದ ನಿರ್ದೇಶಕರಾದ ಡಾ. ಮಹೇಶ ಗುರನಗೌಡರ ಅವರ ಶ್ರಮ-ಶ್ರದ್ಧೆಗೆ ಶರಣುಗಳು.


ಪ್ರಕಾಶ ಗಿರಿಮಲ್ಲನವರ

ಬೆಳಗಾವಿ

ಮೊ: ೯೯೦೨೧೩೦೦೪೧

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group