spot_img
spot_img

ಕಲಬುರ್ಗಿ  ಮಹಾದಾಸೋಹಿ ಶ್ರೀಶರಣಬಸವೇಶ್ವರರು

Must Read

    ಹನ್ನೆರಡನೆಯ ಶತಮಾನದ ಮುಂದುವರೆದ ಕಾಯಕ ದಾಸೋಹ ಸಿದ್ಧಾಂತದ ಮೇರು ವ್ಯಕ್ತಿ ಶಿವಯೋಗ ಸಾಧಕರು ಮಹಾದಾಸೋಹಿ ಶ್ರೀ ಶರಣ ಬಸವೇಶ್ವರರು.ಇವರ ಜೀವನ ಚರಿತ್ರೆ
ಸಾಮಾಜಿಕ ಸೇವೆ ಅನುಪಮಾ 18 ನೆಯ ಶತಮಾನದ ಶ್ರೇಷ್ಠ ಶರಣ.ಶರಣರ ಬದುಕು ಆಶಯ ಚಿಂತನೆಗಳನ್ನು ಪುನುರುಜ್ಜೀವನ ಮಾಡಿದಾದ ಮಹಾಮಣಿಹರು.

- Advertisement -

ಇತಿಹಾಸ
——————————
18ನೇ ಶತಮಾನದ ಸಂತ ಹಾಗೂ ಸಮಾಜ ಸುಧಾರಕ ಶರಣಬಸವೇಶ್ವರರ ಪುಣ್ಯಸ್ಮರಣೆಯ ಅಂಗವಾಗಿ ಕಲಬುರಗಿಯಲ್ಲಿ ನಡೆಯುತ್ತಿರುವ ಶರಣಬಸವೇಶ್ವರ ಜಾತ್ರೆಯು ಸಮಾನತೆ ಮತ್ತು ಕೋಮು ಸೌಹಾರ್ದತೆಯ ಪ್ರತೀಕವಾಗಿದೆ
ಮೂಲತಃ ಜೀವರ್ಗಿ ತಾಲ್ಲೂಕಿನ ಅರಳಗುಂಡಿಯವರಾದ ಶರಣಬಸವೇಶ್ವರರು ( 1746-1822) ಇವರ ತಂದೆ ಮಲಕಪ್ಪಾ ಹಾಗೂ ತಾಯಿ ಸಂಗಮ್ಮ.

ಬಾಲ್ಯ

ಶರಣಬಸವೇಶ್ವರರು ಕಲಿಕೆಯ ದಿನಗಳಲ್ಲಿ ಆದ್ಯಾತ್ಮದ ಕಡೆಗೆ ಹೆಚ್ಚಿನ ಒಲವನ್ನು ತೋರಿದರು. ಕಲಿಕೆಗೆ ಸೇರಿದ ಕೆಲವು ದಿನಗಳಲ್ಲಿಯೇ ಓಂ ಕಾರದ ಮಹಾ ಅರ‍್ತವನ್ನು ಗುರುಗಳಿಗೆ ಪ್ರಶ್ನಿಸಿದರು. ಪ್ರಶ್ನೆ ಮಾಡುವ ಮತ್ತು ಉತ್ತರವನ್ನು ಹುಡುಕುವ ಅವರ ನಡವಳಿಕೆ ಚಿಕ್ಕಂದಿನಿಂದಲೇ ಬೆಳೆದು ಬಂದಿತ್ತು. ಗುರುಗಳು ಕಲಿಸಿದ ಎಲ್ಲಾ ವಿದ್ಯೆಗಳನ್ನು ನಿಷ್ಠೆಯಿಂದ ಕಲಿತು, ಗುರುವಿನಲ್ಲಿಯೇ ದೇವರನ್ನು ಕಂಡರು. ವಿಭೂತಿ , ರುದ್ರಾಕ್ಶಿ, ಗುರು, ಲಿಂಗ, ಜಂಗಮ, ದಾಸೋಹ ಹಾಗೂ ಕಾಯಕ ಎಲ್ಲವುದರ ಹಿರಿಮೆಯನ್ನು ಅರಿತುಕೊಂಡು ತಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡರು.

ಕುಟುಂಬ ಜೀವನಕ್ಕೆ ಕಾಲಿಟ್ಟರು
———————————–
ಶರಣಬಸವೇಶ್ವರರು ಮಹಾದೇವಿ ಎಂಬುವವರನ್ನು ಮದುವೆಯಾದರು. ಸಾಂಸಾರಿಕ ಜೀವನದಲ್ಲಿಯೂ ದಾಸೋಹ, ಲಿಂಗ ಪೂಜೆ, ಶಿವಾನುಭಾವ ಗೋಷ್ಠಿ , ಬಡವರಿಗೆ – ರೋಗಿಗಳಿಗೆ ಸೇವೆ ಮಾಡಿ ಎಲ್ಲರಿಗೂ ಮಾದರಿಯಾದರು. ಅವರ ಮಡದಿಯೂ ಇವಕ್ಕೆ ಬೇಕಾದ ನೆರವನ್ನು ನೀಡುತ್ತಾ ಶರಣರ ಕೆಲಸದಲ್ಲಿ ಕೈಜೋಡಿಸಿದರು. ಶರಣಬಸವೇಶ್ವರದ್ದು ಒಂದು ಅವಿಭಕ್ತ  ಕುಟುಂಬ, ಅಣ್ಣತಮ್ಮಂದಿರೆಲ್ಲಾ ಒಟ್ಟಾಗಿ ಬಾಳುವೆ ಮಾಡುತ್ತಿದ್ದರು. ಆದರೆ ಶರಣಬಸವೇಶ್ವರರ ದಾಸೋಹ ಕಾಯಕ ಅವರ ಒಡಹುಟ್ಟಿದವರಿಗೆ ಇಷ್ಟವಾಗಲಿಲ್ಲ. ಇದನ್ನು ಗಮನಿಸಿದ ಶರಣಬಸವೇಶ್ವರರು ಆಸ್ತಿಯಲ್ಲಿ ತಮ್ಮ ಪಾಲಿಗೆ ಬಂದಿದ್ದನ್ನು ಪಡೆದು ಅವರಿಂದ ದೂರವಾಗಿ ಮತ್ತೆ ದಾಸೋಹ ನಡೆಸಿದರು.

ಅವರ ದಾಸೋಹ ಕಾಯಕ ಬರೀ ಮನುಜರಿಗೆ ಮಾತ್ರವೇ ಸೀಮಿತವಾಗಿರಲಿಲ್ಲ. ಇತರ ಪ್ರಾಣಿ ಹಾಗೂ ಹಕ್ಕಿಗಳಿಗೂ ನಡೆಯುತ್ತಿತ್ತು. ಅವರು ಕೃಷಿಯನ್ನು ತಮ್ಮ ಕಾಯಕವನ್ನಾಗಿಸಿ ಕೊಂಡಿದ್ದರು. ಹೊಲದಲ್ಲಿ ಹಕ್ಕಿಗಳ ಕಾಟದಿಂದ ಎಲ್ಲರೂ ಹಕ್ಕಿಗಳನ್ನು ಓಡಿಸುತ್ತಿದ್ದರು. ಹಕ್ಕಿಗಳು ಬೆಳೆಗಳಿಗೆ ಅಂಟಿಕೊಂಡಿರುವ ಹುಳುಗಳನ್ನು ತಿನ್ನುವುದರಿಂದ ಬೆಳೆಗಳು ಹಾಳಾಗುವುದು ಕಡಿಮೆಯಾಗುತ್ತದೆ ಎಂದರಿತ ಇವರು, ಹಕ್ಕಿಗಳ ಸಹಾಯದಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದೆಂದು ಹೊಲಕ್ಕೆ ಬರುವ ಹಕ್ಕಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದರು. ಇವರು ಜೋಳದ ಬೆಳೆಯನ್ನು ಬಿತ್ತಿದ್ದರು. ಹಕ್ಕಿಗಳು ಸಾಮಾನ್ಯ ಆಹಾರವಾದ ಕ್ರಿಮಿಕೀಟಗಳನ್ನು ತಿಂದದ್ದರಿಂದ ಒಳ್ಳೆಯ ಜೋಳದ ಬೆಳೆ ಬೆಳೆಯಿತು. ಇವರ ಜೋಳದ ಇಳುವರಿ ಊರಿನ ಮಂದಿಯನ್ನು ಬೆರಗಾಗಿಸಿತ್ತು. ಪರಿಸರದಲ್ಲಿನ ಜೀವ ವೈವಿದ್ಯಗಳ ನೆರವಿನಿಂದ ಕೃಷಿಯನ್ನು ಮಾಡಿ ಎಲ್ಲರಿಗೂ ಮಾದರಿಯಾದರು.

- Advertisement -

ಹೂವಿನ ಹಾರವನ್ನು ಮಾಡಲು ಹೊಸ ಹೂವುಗಳನ್ನು ಹಾಗೂ ಎಲೆಗಳನ್ನು ಉಪಯೋಗಿಸದೇ, ಗಿಡದಿಂದ ಉದುರಿ ಬಿದ್ದ ಹೂವುಗಳು ಹಾಗೂ ಎಲೆಗಳನ್ನು ಉಪಯೋಗಿಸಿ, ಅವುಗಳ ಮಹತ್ವವನ್ನು ಮಂದಿಗೆ ಸಾರಿ ಹೇಳಿದರು. ಶರಣಬಸವೇಶ್ವರರ ಒಳ್ಳೆಯ ಆಚಾರಗಳಿಂದ ಹಾಗೂ ಭೋದನೆಯಿಂದ ಪ್ರಭಾವಿತರಾಗಿ ಕಳ್ಳತನ, ಮೋಸ ಹಾಗೂ ವಂಚನೆ ಮಾಡುವುದನ್ನು ಕಾಯಕವನ್ನಾಗಿಸಿಕೊಂಡಿದ್ದ ಹಲವಾರು ಮಂದಿ ಅವರಿಂದ ಲಿಂಗ ಧೀಕ್ಷೆಯನ್ನು  ಪಡೆದು ಶರಣರಾಗಿ ಮಾರ್ಪಾಟಾದರು.

ಹೀಗಿರುವಾಗ, ಶರಣಬಸವೇಶ್ವರರ ಮಡದಿ ಹಾಗೂ ಮಗನು ಅಕಾಲಿಕ ಸಾವನ್ನಪ್ಪಿದರು. ಬಳಿಕ ಅರಳಗುಂಡಗಿ ಗ್ರಾಮದ  ಋಣ  ತೀರಿತೆಂದು ಊರಿನ ಜನರಿಗೆ ತಿಳಿಸಿ ಹಣೆಯ ಮೇಲೆ ವಿಭೂತಿ , ಹೆಗಲ ಮೇಲೆ ಒಂದು ಕಂಬಳಿ, ಕೊರಳಲ್ಲಿ ರುದ್ರಾಕ್ಷಿ , ತಲೆಯ ಮೇಲೆ
ಶಿವಾನುಭವದ  ಹೊತ್ತಿಗೆಗಳನ್ನು  ಹೊತ್ತು ನಡೆದರು. ಶರಣಬಸವೇಶ್ವರ ದಾಸೋಹದಿಂದ ಪ್ರೇರಣೆಗೊಂಡು ಕಲಬುರಗಿಯ ಪ್ರತಿ ಮನೆಯಲ್ಲಿ ದಾಸೋಹ ಕಾರ‍್ಯ ಆರಂಭಗೊಂಡಿತು. ಕಲಬುರಗಿಯ ಪ್ರತಿ ಮನೆಯು ದಾಸೋಹದ ಮಹಾಮನೆಯಾಗಿ   ಪರಿವರ್ತನೆಗೊಂಡಿತ್ತು.

ವಿಶ್ವಗುರು ಬಸವೇಶ್ವರ ಅವರಿಂದ ಸ್ಥಾಪಿತ ಲಿಂಗಾಯತ ಧರ್ಮದ ಸಂದೇಶಗಳ ಬಗೆ ಪ್ರಚಾರ ಮಾಡುತ್ತ ಗುಲಬರ್ಗಾಕ್ಕೆ ಬಂದು ನೆಲೆ ನಿಂತು ಅದನ್ನೇ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ತ್ರಿವಿಧ ದಾಸೋಹ ಮೆರೆದು ಮಡಿದರು. ಶರಣಬಸವೇಶ್ವರರು ಕಾಯಕದಿಂದ ಸಂಪಾದಿಸಿದ್ದನ್ನು ಅನ್ನ ಹಾಗೂ ಜ್ನಾನ ದಾಸೋಹದಲ್ಲಿ ತೊಡಗಿಸಿ, ಸಮಾಜಸೇವೆಯನ್ನು ಮಾಡುತ್ತಾ ಬದುಕ ಬೇಕೆಂದು ಸಂದೇಶವನ್ನು ಸಾರಿ, ಅವರೂ ಅದೇ ರೀತಿಯಲ್ಲಿ ಬದುಕಿ ತೋರಿಸಿ ಎಲ್ಲರಿಗೂ ಮಾದರಿಯಾದರು. ಬದುಕಿನಲ್ಲಿ ಶಿವನನ್ನು ಹೇಗೆ ಕಂಡುಕೊಳ್ಳಬಹುದು ಎಂದು ತಿಳಿಸಿದ ಅವರೇ ಒಂದು ಜ್ನಾನದ ವಿಶ್ವವಿದ್ಯಾಲಯವಾಗಿದ್ದರು. ಅದರಲ್ಲಿ ಶುದ್ದ ಹಾಗೂ ನಿಸ್ವಾರ್ಥ ಜೀವನವನ್ನು ನಡೆಸಲು ಬೇಕಾದ ಎಲ್ಲವೂ ಇದ್ದವು. ಯಾವುದೇ ರೀತಿಯ ಹೊಸ ತತ್ವಗಳನ್ನು ಹೇಳದೇ, ಮೌನವಾಗಿಯೇ ಎಲ್ಲವನ್ನೂ ತಾವೇ ಅನುಸರಿಸಿ ತೋರಿಸಿದರು. ಹಸಿವಿನಿಂದ ಬಂದವರಿಗೆ ಅನ್ನ ದಾಸೋಹ, ರೋಗದಿಂದ ಬಳಲುತ್ತಿರುವವರ ರೋಗಗಳ ನಿವಾರಣೆ, ಲಿಂಗಾಯತ ತತ್ವಗಳನ್ನು ಅನುಸರಿಸಿ ಬದುಕಲು ಬಯಸಿ ಬಂದವರಿಗೆ ಲಿಂಗ ದೀಕ್ಷೆ  ನೀಡುತ್ತಾ ಬದುಕು ನಡೆಸಿದರು.
ಶರಣಬಸವೇಶ್ವರರು ಬೀಮಾ ನದಿಯನ್ನು ದಾಟಿ ಅವರಾದ ಹಳ್ಳಿಯನ್ನು ತಲುಪಿದರು. ಅವರಾದ ಊರಿನ ಗೌಡ ದಂಡರಾಯರು ಇವರ ದಾಸೋಹ ಕಾಯಕಕ್ಕೆ ಕೈಜೋಡಿಸಿದರು. ಇವರ ದಾಸೋಹದ ಅಡುಗೆಗೆ ಮಳೆಯು ಅಡಿಪಡಿಸಿದ್ದಾಗ ಗೌಡ ದಂಡರಾಯರರು ತಮ್ಮ ಮನೆಯ ಚಾವಣೆಯಲ್ಲಿನ ಕಟ್ಟಿಗೆಗಳನ್ನು ಉರಿಸಿ ಅಡಿಗೆ ಮಾಡಿ ಬಡಿಸಿ, ಶರಣಬಸವೇಶ್ವರ ಪ್ರೀತಿಗೆ ಪಾತ್ರರಾದರು.

- Advertisement -

ಒಂದು ದಿನ ಹೈದ್ರಬಾದಿನ ನವಾಬನು ತನ್ನ ಸೈನಿಕರೊಂದಿಗೆ ಕಂದಾಯದ ಕರವನ್ನು ಕೇಳಲು ಬಂದನು. ಆದರೆ ಶರಣಬಸವೇಶ್ವರರ ದಾಸೋಹವನ್ನು ಕಂಡು ಬೆರಗಾಗಿ ಅವರ ಪಾದಗಳಿಗೆ ನಮಿಸಿ ಬರಿಗೈಯಲ್ಲಿ ಹೊರಟುಹೋದನು. ಜನರಿಗೆ ಶಿವಾನುಬವದ ಗೋಶ್ಟಿಯನ್ನು ಹಾಗೂ ಹಸಿವಿನಿಂದ ಬಂದವರಿಗೆ ಅನ್ನ ದಾಸೋಹವನ್ನು ಮಾಡುತ್ತಾ ಇವರು ಸಾಗಿದ್ದರು. ಈ ಕಾಯಕದಿಂದ ಅವರ ಹೆಸರು ಎಲ್ಲೆಡೆ ಹರಡಿತು. ಇದನ್ನು ಗಮನಿಸಿದ ಕಲಬುರಗಿಯ ದೊಡ್ಡಪ್ಪಗೌಡರು ಶರಣಬಸವೇಶ್ವರರಿಗೆ ಕಲಬುರಗಿಗೆ ಬರಲು ಬೇಡಿಕೊಂಡರು. ಅದನ್ನೊಪ್ಪಿಕೊಂಡು ಕಲಬುರಗಿಯ ಕಡೆಗೆ ಇವರು ಹೊರಟರು. ದಾರಿಯ ಮದ್ಯದಲ್ಲಿ ಬರುವ ಪರತಾಬಾದ್ ಹಳ್ಳಿಯ ಮಂದಿ ಆ ಹೊತ್ತಿಗೆ ಬರದಿಂದ ಕಂಗೆಟ್ಟಿದ್ದರು. ಇದನ್ನು ಗಮನಿಸಿ ಅವರ ಹಸಿವಿನ ದಾಹವನ್ನು ನೀಗಿಸಲು ಅಂಬಲಿ ಮಾಡಿ ಕುಡಿಸಿ, ನಂತರ ಅಲ್ಲಿಂದ ಅವರು ತಮ್ಮ ಪಯಣವನ್ನು ಮುಂದುವರೆಸಿ ಕಲಬುರಗಿಗೆ ಬಂದು ತಲುಪಿದರು.

ಒಮ್ಮೆ, ಶರಣಬಸವೇಶ್ವರರು ತತ್ವಜ್ಞಾನಿ  ಕಡಕೊಳ್ಳ ಮಡಿವಾಳಪ್ಪನರಿಗೆ ಸಹಾಯ ಮಾಡಲು ಮುಂದಾದರು ಇದನ್ನು ಗಮನಿಸಿದ ವಿರೋಧಿ ದಂಗೆಕೋರರ ಗುಂಪು ಅವರ ಮೇಲೆ ಆಕ್ರಮಣ ಮಾಡಲು ಬಂದಿತು. ಆದರೆ ಶರಣಬಸವೇಶ್ವರರು ಮಾತ್ರ ತಮ್ಮ ಪ್ರೀತಿಯಿಂದಲೇ ಅವರನ್ನು ಗೆದ್ದರು. ದಂಗೆಕೋರರ ಗುಂಪು ಇವರಿಗೆ ಶರಣಾಗಿ ಪಾದಗಳಿಗೆ ನಮಿಸಿ ಹೊರಟಿತು. ಪ್ರಸಿದ್ದ ತತ್ವಜ್ಞಾನಿ  ಕಡಕೋಳ ಮಡಿವಾಳಪ್ಪನವರಿಗೂ ಲಿಂಗ ದೀಕ್ಶೆಯನ್ನು ನೀಡಿದರು. ಶರಣಬಸವೇಶ್ವರ ದಾಸೋಹದಿಂದ ಪ್ರೇರಣೆಗೊಂಡು ಕಲಬುರಗಿಯ ಪ್ರತಿ ಮನೆಯಲ್ಲಿ ದಾಸೋಹ ಕಾರ‍್ಯ ಆರಂಬಗೊಂಡಿತು. ಕಲಬುರಗಿಯ ಪ್ರತಿ ಮನೆಯು ದಾಸೋಹದ ಮಹಾಮನೆಯಾಗಿ ಪರಿವರ್ತನೆಗೊಂಡಿತ್ತು.

ಶರಣಬಸವೇಶ್ವರರು 11-03-1822, ಸೋಮವಾರದಂದು ಅನಾರೋಗ್ಯದಿಂದ ಲಿಂಗೈಕ್ಯರಾದರು. ನಂತರ ಅವರ ಸಮಾದಿಯ ಮೇಲೆ ಗೋಪುರವನ್ನು ಕಟ್ಟಲಾಯಿತು. ಅದುವೇ ಇಂದಿನ ಕಲಬುರಗಿಯಲ್ಲಿನ ಪವಿತ್ರವಾದ ಶ್ರೀ ಶರಣಬಸವೇಶ್ವರ ದೇವಸ್ತಾನ. ಅವರ ದಾಸೋಹ ಪರಂಪರೆಯನ್ನು ಜನತೆಯ ಮನದಲ್ಲಿ ಹಸಿರಾಗಿ ಉಳಿಸಲು, ಅವರು ಲಿಂಗೈಕ್ಯರಾದ ದಿನದಂದು ಪ್ರತಿವರ್ಷವೂ  ರಥೋತ್ಸವವವನ್ನು ನಡೆಸಲಾಗುತ್ತದೆ. ದೇವಸ್ತಾನದ  ಗರ್ಭಗುಡಿಯಲ್ಲಿ ಶರಣಬಸವೇಶ್ವರ ಸಮಾದಿಯಿದ್ದು, ಅಲ್ಲಿ ಶರಣಬಸವೇಶ್ವರರ ಅವಳಿ ದಿವ್ಯಬಿಂಬಗಳಿರುವ ವಿಗ್ರಹವಿದೆ. ಅವುಗಳಲ್ಲಿ ಒಂದು ಅವರ ಬಿಂಬ, ಇನ್ನೊಂದು ಅವರ ಪರಮ ಆತ್ಮೀಯ ಶಿಷ್ಯ  ದೊಡ್ಡಪ್ಪಗೌಡರ ಬಿಂಬ. ಗುರು-ಶಿಷ್ಯರ  ಮಧ್ಯೆ  ಒಂದು ಅವಿನಾಬಾವದ ಸಂಬಂಧವಿತ್ತು, ಶಿಷ್ಯರು ಗುರುವಿನ ಪ್ರತಿಬಿಂಬವಾಗಿರಬೇಕೆಂದು ಹೇಳುತ್ತಾರೆ. ಅದರಂತೆ ದೊಡ್ಡಪ್ಪಗೌಡರು ಶರಣಬಸವೇಶ್ವರರ ಪ್ರತಿಬಿಂಬವಾಗಿ ಬದುಕಿ ತೋರಿಸಿದರು. ಶರಣಬಸವೇಶ್ವರರು ಹುಟ್ಟಿದ ಅರಳಗುಂಡಗಿ ಹಳ್ಳಿಯಲ್ಲಿಯೂ ಅವರ ಪವಿತ್ರವಾದ ದೇವಸ್ತಾನವಿದೆ. ಇಂದಿಗೂ ಅಲ್ಲಿ ಶರಣಬಸವೇಶ್ವರರ ದಾಸೋಹ ಕಾಯಕವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಶರಣಬಸವೇಶ್ವರರ ಹೊಲದಲ್ಲಿ ಬೆಳೆದ ಬೆಳೆಗಳಲ್ಲಿ ಒಂದು ಭಾಗವನ್ನು  ದಾಸೋಹಕ್ಕೆ ಉಪಯೋಗಿಸುತ್ತಾರೆ. ಅವರು ಲಿಂಗೈಕ್ಯರಾದ ದಿನದಂದು ಪ್ರತಿ ವರ್ಷವೂ ಅರಳಗುಂಡಗಿ ಹಳ್ಳಿಯಲ್ಲಿಯೂ  ರಥೋತ್ಸವವನ್ನು ಸಂಬ್ರಮ ಹಾಗೂ ಸಡಗರದಿಂದ ಆಚರಿಸುತ್ತಾರೆ. ಶರಣಬಸವೇಶ್ವರರು ತಮ್ಮ ಕಾಯಕದಲ್ಲಿಯೇ ಕೈಲಾಸವನ್ನು ಕಂಡರು. ಮಹಾದಾಸೋಹಿ, ಕಲಬುರಗಿಯ ಕಣ್ಣು, ಶ್ರೀ ಶರಣಬಸವೇಶ್ವರರು ಕಲಬುರಗಿ ಜನತೆಯ ಮನದಲ್ಲಿ ಅಮರರಾಗಿ ಉಳಿದಿದ್ದಾರೆ.

. ಶರಣ ಬಸವೇಶ್ವರರ ಸಮಾಧಿಗೆ ನಂತರದಲ್ಲಿ ಗೋಪುರ ರಚಿಸಿದ್ದು ಇದೇ ಇಂದಿನ ಶರಣಬಸವೇಶ್ವರ ದೇವಾಲಯವಾಗಿದೆ. ಶರಣ ಬಸವೇಶ್ವರರಿಗೆ ಕಲ್ಬುರ್ಗಿಯಲ್ಲಿ ನೆಚ್ಚಿನ ಶಿಷ್ಯರಾಗಿ ನಿಂತವರು ದೊಡ್ಡಪ್ಪ ಶರಣರು.ಶರಣಬಸವೇಶ್ವರರ ಸಮಾಧಿ ಇರುವ ಗರ್ಭ ಗೃಹದಲ್ಲಿ ಗದ್ದುಗೆಯ ಮೇಲೆ ಗುರು ಶಿಷ್ಯರ ಅವಿನಾಭಾವ ಸಂಬಂಧ ಹಾಗೂ ಸಾಮರಸ್ಯಗಳನ್ನು ಸೂಚಿಸಲು ಶರಣಬಸವೇಶ್ವರ ಹಾಗೂ ಅವರ ಗುರುಗಳ ಬೆಳ್ಳಿಮುಖಗಳನ್ನುಳ್ಳ ಜೋಡಿ ಮೂರ್ತಿಯನ್ನು ಪ್ರಾತಿನಿಧಿಕವಾಗಿ ಪ್ರತಿಷ್ಠಾಪಿಸಿದ್ದು, ಇಂದು ಇದೇ ಭಕ್ತರ ಆರಾಧನಾ ಬಿಂದುವಾಗಿದೆ. ಇದನ್ನು ಬಳಸಿ ವಿಶಾಲವಾದ ಸಭಾ ಮಂಟಪವಿದ್ದು ಪ್ರದಕ್ಷಿಣಾ ಪಥವೂ ಇದೆ. ಅರೆ ಕಂಬ, ಬಿಡ ಕಂಬ, ಜೋಡಿ ಕಂಬ ಹಾಗೂ 36  ಕಮಾನುಗಳನ್ನು ಬಳಸಿ ನಿರ್ಮಿಸಿದ್ದು ಹಾಗೂ ವಿಶಿಷ್ಟ ಹೂ – ಬಳ್ಳಿಗಳಿಂದ ನಿರ್ಮಿಸಿದ್ದು, ಛಾವಣಿಯೂ ವಿಶಿಷ್ಟವಾಗಿದೆ.ಶ್ರಾವಣ ಮಾಸದಲ್ಲಿ ನಡುವಣ ಸೋಮವಾರ ಶರಣಬಸವೇಶ್ವರರ ಪಲ್ಲಕ್ಕಿ ಉತ್ಸವ ಜರುಗುತ್ತಿದ್ದು,ಅಂದು ಸಾವಿರಾರು ಜನ ಬಂದು ಪಾಲ್ಗೊಳ್ಳುತ್ತಾರೆ. ಶರಣ ಬಸವೇಶ್ವರ ಮಹಾದಾಸೋಹ ಪೀಠವು ಇಂದು ಜ್ಞಾನದಾಸೋಹ ಕಾರ್ಯದಲ್ಲೂ ತನ್ನನ್ನು ತೊಡಗಿಸಿಕೊಂಡಿದೆ.

ಶರಣಬಸವೇಶ್ವರ ಜಾತ್ರೆ
————————————–
ರಥೋತ್ಸವದ  ಹಿನ್ನೆಲೆ:
ಕಲಬುರಗಿಯ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರರ ದಿನಾಂಕ 11-03-1822, ಸೋಮವಾರದಂದು ಲಿಂಗೈಕ್ಯರಾದರು. ಪರಹಿತದಲ್ಲಿಯೇ ಪರಮಾತ್ಮನನ್ನು ಕಂಡ ಶರಣಬಸವೇಶ್ವರರು 1882 ರಲ್ಲಿ ಲಿಂಗೈಕ್ಯರಾದರು. ನಂತರದಲ್ಲಿ ಶರಣಬಸವೇಶ್ವರರ ದಾಸೋಹ ಕಾರ್ಯವನ್ನು ಆದಿ ದೊಡ್ಡಪ್ಪ ಶರಣರು ಮುನ್ನಡೆಸಿದರು.
ಬಳಿಕ ಅವರ ಸಮಾದಿಯ ಮೇಲೆ ಗೋಪುರವನ್ನು ಕಟ್ಟಲಾಯಿತು. ಅದುವೇ ಇಂದಿನ ಕಲಬುರಗಿಯಲ್ಲಿನ ಪವಿತ್ರವಾದ ಶ್ರೀ ಶರಣಬಸವೇಶ್ವರ ದೇವಸ್ಥಾನ ಅವರ ದಾಸೋಹ ಪರಂಪರೆಯನ್ನು ಜನತೆಯ ಮನದಲ್ಲಿ ಹಸಿರಾಗಿ ಉಳಿಸಲು, ಅವರು ಲಿಂಗೈಕ್ಯರಾದ ದಿನದಂದು ಪ್ರತಿ ವರ್ಷವೂ ರಥೋತ್ಸವವನ್ನು ನಡೆಸಲಾಗುತ್ತದೆ.

ಶರಣ ಬಸವೇಶ್ವರ ಜಾತ್ರೆ
—————————————–
ಸುಮಾರು 17 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಮೊದಲ ದಿನದಂದು ಅಡ್ಡಪಲ್ಲಕಿ ಉತ್ಸವ ನಡೆಯುತ್ತದೆ. ಈ ಉತ್ಸವದಲ್ಲಿ ಶ್ರೀ ಶರಣಬಸವೇಶ್ವರರ ದಿವ್ಯಬಿಂಬಗಳಿರುವ ಅವಳಿ ವಿಗ್ರಹವನ್ನು ಅಡ್ಡಪಲ್ಲಕಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಮೆರವಣಿಗೆಯಲ್ಲಿ ನಂದಿಕೋಲುಗಳ ಕುಣಿತ, ಡೊಳ್ಳು ಕುಣಿತ, ಜಾನಪದ ಕಲಾ ತಂಡಗಳ ಪ್ರದರ‍್ಶನ ಹಾಗೂ ಬಜನೆಯ ತಂಡದವರಿಂದ ಬಜನೆ ನಡೆಯುತ್ತದೆ. ಅಡ್ಡಪಲ್ಲಕಿಯಲ್ಲಿ ದೇವಸ್ತಾನದ ಸುತ್ತ 5 ಸುತ್ತುಗಳನ್ನು ಹಾಕಲಾಗುತ್ತದೆ. ಈ ಉತ್ಸವದಲ್ಲಿ ಸಾವಿರಾರು ಬಕ್ತರು ಶ್ರದ್ದೆಯಿಂದ ಪಾಲ್ಗೊಳ್ಳುತ್ತಾರೆ.ಎರಡನೇ ದಿನ ಶ್ರೀ ಶರಣಬಸವೇಶ್ವರರ ರತೋತ್ಸವ ಕಾರ‍್ಯಕ್ರಮ ನಡೆಯುತ್ತದೆ. ಈ ದಿನದಂದು ಬೆಳಿಗ್ಗೆ ಶ್ರೀ ಶರಣಬಸವೇಶ್ವರರಿಗೆ ವಿಶೇಶವಾದ ಪೂಜೆ ಸಲ್ಲಿಸಲಾಗುತ್ತದೆ. ಸಂಜೆ ವೇಳೆ ರತೋತ್ಸವ ಕಾರ‍್ಯಕ್ರಮ ನಡೆಯುತ್ತದೆ. ಶರಣಬಸವೇಶ್ವರ ಸಂಸ್ತಾನದ ಪೀಠಾದಿಪತಿಗಳು ಪೂಜೆ ಸಲ್ಲಿಸುವ ಮೂಲಕ ರಥೋತ್ಸವ  ಕಾರ‍್ಯಕ್ರಮಕ್ಕೆ ಚಾಲನೆ ನೀಡುತ್ತಾರೆ. ಜಾತ್ರೆಯ ಪ್ರತಿದಿನವೂ ದೇವಸ್ತಾನದ ಸಂಕೀರ್ಣದಲ್ಲಿರುವ ಅನುಭವ ಮಂಟಪದಲ್ಲಿ ವಿಶೇಶ ಉಪನ್ಯಾಸಕರಿಂದ ಶರಣಬಸವೇಶ್ವರರ ತತ್ವ ಸಿದ್ದಾಂತಗಳ ಕುರಿತು ಚರ್ಚೆ , ಮಾತುಗಳು ಹಾಗು ಇನ್ನಿತರ ಉಪನ್ಯಾಸ ಕಾರ‍್ಯಕ್ರಮಗಳು ನಡೆಯುತ್ತವೆ. ಇನ್ನೊಂದು ಕಡೆ ಹಲವಾರು ಊರುಗಳಿಂದ ಬಂದಿರುವ ಬಜನೆ ತಂಡಗಳಿಂದ ರಾತ್ರಿಯಿಡೀ ಶರಣಬಸವೇಶ್ವರರ ಭಜನೆ ಹಾಗೂ ಕೀರ್ತನೆಗಳು ನಡೆಯುತ್ತವೆ. ಜಾತ್ರೆಯಲ್ಲಿ ಸಿಹಿತಿಂಡಿ, ಬಳೆ, ಮಕ್ಕಳ ಆಟಿಕೆ ಹಾಗೂ ಇನ್ನೂ ಹಲವಾರು ಬಗೆಯ ಮಳಿಗೆಗಳನ್ನು ಹಾಕುತ್ತಾರೆ. ಇದರ ಜೊತೆಯಲ್ಲಿಯೇ ವಿವಿದ ಬಗೆಯ ಜೋಕಾಲಿಗಳು ಬರುತ್ತವೆ. ಎಲ್ಲವೂ ಸೇರಿ ಹದಿನೈದು ದಿನದ ಜಾತ್ರೆಯನ್ನು ಕಳೆಗಟ್ಟಿಸುತ್ತವೆ. ಇನ್ನು ಶರಣಬಸವೇಶ್ವರರ ಹುಟ್ಟಿದ ಊರು ಅರಳಗುಂಡಗಿಯಲ್ಲಿಯೂ ಇದೇ ಮಾದರಿಯಲ್ಲಿ 5 ದಿನಗಳ ಕಾಲ ಜಾತ್ರೆ ನಡೆಯುತ್ತದೆ.ಸಾವಿರಾರು ಭಕ್ತರು  ಜೈಘೋಷವನ್ನು ಹಾಕುತ್ತಾ ಬಕ್ತಿಯಿಂದ ತೇರು ಎಳೆಯುತ್ತಾರೆ. ತೇರು ಸಾಗುವ ಹಾದಿಯಲ್ಲಿ ಹೂವು-ಹಣ್ಣುಗಳನ್ನು ಮೇಲೆ ಹಾರಿಸುತ್ತ, ಜೈಗೋಶವನ್ನು ಮೊಳಗಿಸುತ್ತಾ ಭಕ್ತಿ  ಬಾವದ ಅಲೆಯಲ್ಲಿ ಮೀಯುತ್ತಾರೆ. ಹೀಗೆ ಸಾಗುವ ತೇರು ಶರಣಬಸವೇಶ್ವರರ ದೇವಸ್ತಾನದ ಸಂಕೀರ್ಣದಲ್ಲಿ ಸುಮಾರು 100 ಮೀಟರ್ ದೂರದಲ್ಲಿರುವ ಬಸವಣ್ಣನ ಗುಡಿಯವರಿಗೂ ತಲುಪಿ ಮತ್ತೆ ದೇವಸ್ತಾನದ ಕಡೆಗೆ ಹಿಂತಿರುಗುತ್ತದೆ.ಉಳಿದ ಹದಿಮೂರು ದಿನಗಳ ಕಾಲ ಜಾತ್ರೆಯ ಮೆರೆಗು ಹಾಗೆಯೇ ಇರುತ್ತದೆ. ಈ ಜಾತ್ರೆಗೆ ಕಲಬುರಗಿ ಜಿಲ್ಲೆಯಿಂದಲ್ಲದೇ ನೆರೆಯ ಜಿಲ್ಲೆಗಳಿಂದ ಹಾಗೂ ಹೊರ ನಾಡಿನಿಂದ ಹಲವಾರು ಭಕ್ತರು ಭಜನೆ  ಮಾಡುತ್ತಾ ಕಾಲ್ನಡಿಗೆಯಲ್ಲಿ ಬರುತ್ತಾರೆ. ಅವರು ಬರುವ ದಾರಿಯಲ್ಲಿ ಸಿಗುವ ಊರುಗಳಲ್ಲಿ ಜನರನ್ನು ಭೇಟಿಮಾಡಿ, ಶರಣಬಸವೇಶ್ವರರ ತತ್ವ ಸಿದ್ದಾಂತಗಳ ಬಗ್ಗೆ ಅರಿವು ಮೂಡಿಸುತ್ತಾ ಬರುತ್ತಾರೆ. ಜಾತ್ರೆಗೆ ಬರುವ ಬಕ್ತರಿಗೆ ಅನ್ನ ದಾಸೋಹದ ಏರ‍್ಪಾಡನ್ನು ದೇವಸ್ತಾನದ ಕಡೆಯಿಂದ ಮಾಡಲಾಗಿರುತ್ತದೆ. ಇದ್ದಕ್ಕಾಗಿಯೇ ಬಕ್ತರು ತಾವು ಬೆಳೆದ ಬೆಳೆಗಳಲ್ಲಿ ಒಂದಿಷ್ಟು ಭಾಗವನ್ನು  ಶರಣಬಸವೇಶ್ವರರ ದಾಸೋಹಕ್ಕೆ ನೀಡಿ, ಅವರ ದಾಸೋಹ ಕಾಯಕಕ್ಕೆ ಕೈಜೋಡಿಸಿ ಪುನೀತರಾಗುತ್ತಾರೆ.

ಶ್ರಾವಣ ಮಾಸದ ಸೋಮವಾರ
—————————————-
ಶ್ರಾವಣ ಮಾಸ ಪೂರ್ತಿ ಶ್ರೀ ಶರಣ ಬಸವೇಶ್ವರ ದೇವಸ್ಥಾನಕ್ಕೆ ಭಕ್ತರು ಬರುತ್ತಾರೆ. ಸೋಮವಾರ ಶರಣಬಸವೇಶ್ವರರ ವಾರವಾಗಿರುವುದರಿಂದ ಈ ದಿನ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ವಿಶೇಷವಾಗಿ 3ನೇ ಸೋಮವಾರದಂದು ರಾಜ್ಯದ ಮಾತ್ರವಲ್ಲದೇ, ಪಕ್ಕದ ಮಹಾರಾಷ್ಟ್ರ, ಆಂಧ್ರಪ್ರದೇಶದಿಂದಲೂ ಭಕ್ತರು ಬರುತ್ತಾರೆ. ಅದೆಷ್ಟೋ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿ ಕಲಬುರಗಿಯ ಶರಣರ ದರ್ಶನ ಪಡೆಯುತ್ತಿದ್ದಾರೆ.

ಶರಣಬಸವೇಶ್ವರ ದೇವಸ್ಥಾನ
——————————————-
ಶರಣಬಸವೇಶ್ವರ ದೇವಸ್ಥಾನ ಸಂಪೂರ್ಣ ಕಪ್ಪು ಕಲ್ಲಿನಿಂದ ಕೂಡಿದ್ದು ಅದರ ಸಂಪೂರ್ಣ ವಸ್ತು ಶಿಲ್ಪವು  ಭಾರತಿಯ ಮತ್ತು ಆರೆಬಿಕ್ ಮಿಶ್ರ ಹೋಲುತ್ತದೆ.

————————————————
ಡಾ ಶಶಿಕಾಂತ ಪಟ್ಟಣ ರಾಮದುರ್ಗ

- Advertisement -
- Advertisement -

Latest News

ವಿದ್ಯಾರ್ಥಿ ಜೀವನದ ನಿಜವಾದ ಕೌಶಲ ಆಲಿಸುವಿಕೆ – ನಟ ಮಾಸ್ಟರ್ ಮಂಜುನಾಥ ಅಭಿಮತ

ವಿದ್ಯಾರ್ಥಿ ಜೀವನದಲ್ಲಿ ಕೇಳುವಿಕೆ ಹಾಗೂ ಅರ್ಥಮಾಡಿಕೊಳ್ಳುವಿಕೆಯು ನಿಜವಾದ ಕೌಶಲ್ಯವಾಗಿದೆ ಎಂದು ಕನ್ನಡದ ಪ್ರಸಿದ್ಧ ನಟ ಮಾಸ್ಟರ್ ಮಂಜುನಾಥ ಅಭಿಪ್ರಾಯಪಟ್ಟರು. ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಸಮಾಜ ವಿಜ್ಞಾನ...
- Advertisement -

More Articles Like This

- Advertisement -
close
error: Content is protected !!
Join WhatsApp Group