ಸವದತ್ತಿ: ಸಮೀಪದ ಉಗರಗೋಳ ಗ್ರಾಮದ ಬಸವಜ್ಯೋತಿ ಶಾಲೆಯಲ್ಲಿ ಸೋಮವಾರ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ದಾಸಶ್ರೇಷ್ಠ ಭಕ್ತ ಕನಕದಾಸರ 534ನೇ ಜಯಂತ್ಯೋತ್ಸವನ್ನು ಆಚರಿಸಲಾಯಿತು.
ಗ್ರಾ.ಪಂ ಉಪಾಧ್ಯಕ್ಷ ಶಿವನಗೌಡ ಗಡಾದಗೌಡ್ರ ಮಾತನಾಡಿ, 15ನೇ ಶತಮಾನದಲ್ಲಿ ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಸಮಾನತೆಯ ವಿರುದ್ಧ ಹೋರಾಡಿ ದಾಸಶ್ರೇಷ್ಠ ಕನಕದಾಸರು, ಕರ್ನಾಟಕ ಸಂಗೀತಕ್ಕೆ ಅತ್ಯುನ್ನತ ಕೊಡುಗೆ ನೀಡಿದ್ದಾರೆ.ಕನಕರ ರಾಮಧಾನ್ಯ ಚರಿತೆ ಕೃತಿಯ ಮೂಲಕ ಸಮಾಜದ ಅಂಕುಡೊಂಕು ತಿದ್ದಿ, ಸಮಾನತೆಯ ಸಂದೇಶ ಸಾರಿದ್ದಾರೆ. ಮೇಲ್ವರ್ಗದವರ ಧಾನ್ಯ ಅಕ್ಕಿ ಮತ್ತು ಕೆಳವರ್ಗದವರ ಧಾನ್ಯ ರಾಗಿಯ ನಡುವಿನ ಸಂಭಾಷಣೆ ನಿರೂಪಿಸುವಲ್ಲಿ ಕನಕರ ಸೃಜನಶೀಲತೆ ಅತಿಶಯ. ಈ ರಾಮಧಾನ್ಯ ಚರಿತೆಯೂ ಬಂಡಾಯ ಸಾಹಿತ್ಯದ ಬೇರು ಅಥವಾ ನವ್ಯೋತ್ತರದ ಸೂರು ಎಂದರೆ ತಪ್ಪಾಗಲಾರದು.
ಕೇವಲ ಒಂದೇ ಸಮುದಾಯಕ್ಕೆ ಸೀಮಿತರಾಗಿರದ ಕನಕದಾಸರು ಸಮಾಜದ ಉನ್ನತಿಗಾಗಿ ತಮ್ಮದೇ ಆದ ಕೊಡುಗೆ ನೀಡಿ, ಜಾತ್ಯತೀತ ಪರಿಕಲ್ಪನೆಯಲ್ಲಿ ಜೀವಿಸಿದ್ದಾರೆ. ಮೌಢ್ಯ ಹಾಗೂ ಕಂದಾಚಾರಗಳ ವಿರುದ್ದ ಹೋರಾಡಿದ ಅವರ ಜೀವನಾದರ್ಶಗಳನ್ನು ಇಂದಿನ ಯುವಕರು ಅಳವಡಿಸಿಕೊಂಡು ಉತ್ತಮ ಸಮಾಜ ರೂಪಿಸಬೇಕಿದೆ ಎಂದರು.
ಈ ವೇಳೆ ಶಾಲಾ ಸಂಸ್ಥೆಯ ಅಧ್ಯಕ್ಷ ಡಿ.ಎಸ್.ಕೊಪ್ಪದ, ಗ್ರಾ.ಪಂ ಸದಸ್ಯರಾದ ವಿಠ್ಠಲ ಸಿದ್ದಕ್ಕನವರ, ರಾಜೇಸಾಬ ಬಾರಿಗಿಡದ, ರೇಣಪ್ಪ ಭಜಂತ್ರಿ, ಶರೀಪಸಾಬ ಬಾರಿಗಿಡದ, ಮಾರುತಿ ಕುದರಿ, ಮಲ್ಲಪ್ಪ ಪತ್ರಾವಳಿ, ಈರಪ್ಪ ಹೂಲಿ, ನಿಂಗಪ್ಪ ಸಿದ್ದಕ್ಕನವರ, ಮುದಕಪ್ಪ ಹೂಲಿ, ಮುತ್ತಯ್ಯ ತೊರಗಲ್ಲಮಠ, ದ್ಯಾಮಣ್ಣ ಹೂಲಿ, ಯಂಕಪ್ಪ ಕೊಪ್ಪದ ಹಾಗೂ ಶಾಲಾ ಸಿಬ್ಬಂದಿ ಇದ್ದರು