“ಇಂದಿನ ದಿನಮಾನದ ಮೇಲೊಂದು ಹಾಸ್ಯಕವಿತೆ. ಪ್ರಸ್ತುತ ವಿದ್ಯಮಾನಗಳ ಮೇಲಿನ ನಗೆಗವಿತೆ. ಇಲ್ಲಿ ಹಾಸ್ಯವಿದೆ, ಲಾಸ್ಯವಿದೆ, ವ್ಯಂಗ್ಯವಿದೆ, ವಿನೋದವಿದೆ, ವಿಡಂಬನೆಯಿದೆ ಜೊತೆಜೊತೆಗೆ ವಾಸ್ತವವೂ ಇದೆ. ಬದುಕಿನ ಬದಲಾವಣೆಯ ಹಾದಿಯ ನಿಚ್ಚಳ ಸತ್ಯಗಳಿವೆ. ಓದಿ ನೋಡಿ.. ಮೊಗವರಳಿಸಿ ಮುದಗೊಳಿಸುವ ನಗುವಿನ ಲಹರಿಯಿದೆ. ಜೊತೆಗೆ ಮನವನ್ನು ಚಿಂತನೆಗೆ ಒರೆಹಚ್ಚುವ ಸತ್ಯ ಲಹರಿಯೂ ಇದೆ. ಏನಂತೀರಾ.?”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಲಾಕ್ಡೌನ್ ಸತ್ಯಗಳು..!
ಮನೆಗೆಲಸದವರಿಲ್ಲದೆ ಮನೆಯಾಕೆಗೆ
ಅಡಿಗಡಿಗೆ ಹೈರಾಣಾಗಿ ತ್ರಾಸಾಗುತಿದೆ
ಪಿತ್ತ ನೆತ್ತಿಗೇರುತಿದೆಯೆಂಬ ಕಟುಸತ್ಯ
ಗಂಡನ ಅರಿವಿಗೀಗ ನಿಚ್ಚಳ ಬರುತಿದೆ..
ಕೇಳಿ ಕೇಳಿ ಅವಳ ಸಿಡಿಮಿಡಿ ಬೈಗುಳ.!
ಬ್ಯೂಟಿಪಾರ್ಲರಿನ ವರದಾನಗಳಿಲ್ಲದೆ
ಕನಿಷ್ಟ ಹೇರ್ಡೈ ಫೇಶಿಯಲ್ಲೂ ಇಲ್ಲದೆ
ಹೆಂಡತಿಯ ಮುಖ ನೋಡಲೆಷ್ಟು ಕಷ್ಟ
ಎಂಬ ಕಠೋರಸತ್ಯ ಅರ್ಥವಾಗುತಿದೆ
ದಿನಾ ಬೆಳಗಾಗೆದ್ದು ಕಂಡೊಡನೆ ಅವಳ.!
ಪತಿರಾಯ ಕಛೇರಿಗೋಗಿ ಪ್ರತಿದಿನವು
ಅದೇನೇನುನು ದಬ್ಬಾಕಿ ಬರುತಿದ್ದ ಎಂಬ
ವಾಸ್ತವ ಹೆಂಡತಿಗೆ ತಿಳಿಯುತ್ತಿದೆ ಅವನು
ಗಂಟೆಗೊಮ್ಮೆ ಚಹಾಹೀರುವುದ ಕಂಡಾಗ
ಕುಳಿತಲ್ಲೆ ತೂಕಡಿಸುವುದ ನೋಡಿದಾಗ.!
ತಾನಿಲ್ಲದೆ ಕಛೇರಿ ನಡೆಯುವುದಿಲ್ಲವೆಂಬ
ಎಂಬ ಮಹಾಬಿಲ್ಡಪ್ಪು ಕೊಡುತ್ತಿದ್ದ ಗಂಡ
ನಾಲ್ಕುಹೊತ್ತು ತಿಂದುಂಡು ನಿಶ್ಚಿಂತನಾಗಿ
ಮಲಗಿ ಗೊರಕೆ ಹೊಡೆವುದ ಕಾಣುವಾಗ
ಭ್ರಾಂತಿಕರಗಿ ನಿಜದರಿವಾಗುತಿದೆ ಸತಿಗೀಗ.!
ಶಾಲೆ ಪಠ್ಯಗಳಿಲ್ಲದೆಯೂ ಇರಬಹುದು
ಪರೀಕ್ಷೆಗಳಿಲ್ಲದೆಯೂ ಪಾಸಾಗಬಹುದು
ಬರೀ ಮೊಬೈಲು ಟಿವಿ ನೋಡುತ್ತ ಹಾಗೆ
ಬದುಕಿಬಿಡಬಹುದೆಂಬ ಕಲ್ಪನೆ ಭ್ರಮೆಗಳು
ಹುಟ್ಟತೊಡಗಿವೆ ಮಕ್ಕಳ ಮನದೊಳಗೆ.!
ಒಬ್ಬರ ಮನೆಗೊಬ್ಬರು ಹೋಗದೆಯೂ
ಭೇಟಿಯಾಗದೆಯೂ ಜೀವಿಸಬಹುದು
ವಿಡಿಯೋಕಾಲಿನಿಂದಲೇ ಸಂಬಂಧಗಳ
ಉಳಿಸಿಕೊಳ್ಳಬಹುದೆಂಬ ಹೊಸ ಸತ್ಯ
ನಂಬಿಕೆ ಪ್ರಚಲಿತವಾಗುತಿದೆ ಎಲ್ಲರೊಳಗೆ.!
ಲಾಕ್ಡೌನ್ ಎಂಬ ಅಜ್ಞಾತವಾಸದಿಂದ
ಗೋಚರಿಸುತ್ತಿವೆ ಹೊಸಹೊಸ ಸತ್ಯಗಳು
ಬಯಲಾಗುತ್ತಿವೆ ಮನುಜ ಸಂಬಂಧಗಳು
ಬದಲಾಗುತ್ತಿವೆ ಬದುಕಿನ ವಿನ್ಯಾಸಗಳು
ಬಿಚ್ಚಿಕೊಳ್ಳುತ್ತಿವೆ ನವನವೀನ ಹಾದಿಗಳು.!
ಎ.ಎನ್.ರಮೇಶ್. ಗುಬ್ಬಿ.