ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ ಉದ್ಘಾಟನೆಯಲ್ಲಿ ಸಿದ್ದಲಿಂಗ ಕಿಣಗಿ ಅಭಿಪ್ರಾಯ
ಸಿಂದಗಿ – ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಮರದಂತೆ. ಮಕ್ಕಳು ಆರೋಗ್ಯವಂತರಾಗಿ ಬೆಳೆಯಬೇಕಾದರೇ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅವಶ್ಯವಿದೆ ಎಂದು ಪತ್ರಕರ್ತ, ಎಚ್.ಜಿ.ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಸಿದ್ದಲಿಂಗ ಕಿಣಗಿ ಹೇಳಿದರು.
ಇಲ್ಲಿನ ಲೊಯೋಲ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಕ್ರೀಡೆಗಳು ಅತಿ ಅವಶ್ಯಕವಾಗಿವೆ ಎಂದರು.
ರಾಗರಂಜಿನಿ ಸ್ಟುಡಿಯೋದ ನಿರ್ದೇಶಕ ಪ್ರಕಾಶ ರಾಗರಂಜನಿ ಮಾತನಾಡಿ, ಪಠ್ಯದ ಜೊತೆಗೆ ಕ್ರೀಡೆಗಳಿಗೆ ನಾವು ಹೆಚ್ಚಿನ ಮಹತ್ವದ ಸ್ಥಾನ ನೀಡಬೇಕು. ಕ್ರೀಡೆಯು ಮನುಷ್ಯನ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ತಿಳಿಸಿ ಉತ್ತಮವಾದ ಗೀತೆಯನ್ನು ಹಾಡಿ ಎಲ್ಲರನ್ನು ರಂಜಿಸಿದರು.
ಫಾದರ್ ಅರುಣ ಲೋಬೋರ ಸಮಾರಂಭದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವದ ಗುಣ ಹಾಗೂ ನಿರ್ಧಾರ ತೆಗೆದುಕೊಳ್ಳುವ ಬುದ್ಧವಂತಿಕೆ ಬೆಳೆಯಲು ಕ್ರೀಡಾ ಚಟುವಟಿಕೆಗಳು ತುಂಬಾ ಅವಶ್ಯವಾಗಿವೆ. ಇಂಥ ಕ್ರೀಡಾಕೂಟದ ಮೂಲಕ ನಾವು ಉತ್ತಮ ಕ್ರೀಡಾಪಟುಗಳನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶಾಲಾ ಪ್ರಾಚಾರ್ಯ ಫಾದರ್ ಲ್ಯಾನ್ಸಿ ಫರ್ನಾಂಡಿಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಅರ್ಧವಾರ್ಷಿಕ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ವೇದಿಕೆಯ ಮೇಲೆ ಫಾದರ್ ಥಾಮಸ್ ಡಿಸೋಜ್, ಶಾಲೆಯ ಪೋಷಕರ ಪ್ರತಿನಿಧಿಯಾದ ಮಹೇಂದ್ರಸಿಂಗ್ ರಾಣಾವತ್ ಶಾಲಾ ಉಪಪ್ರಾಂಶುಪಾಲೆಯರಾದ ಸಿಸ್ಟರ್ ಗ್ರೇಸಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಆಟೋಟ ಸ್ಪರ್ಧೆಗಳು ನಡೆದವು.
ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಸಿದ್ದಪ್ಪ ಶಿಕ್ಷಕರು ನಿರೂಪಿಸಿದರು. ಸಿಸ್ಟರ್ ದಿವ್ಯ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಮಂಜುಳಾ ಸ್ವಾಗತಿಸಿದ್ದರು. ಜೆನ್ನಿಫರ್ ವಂದಿಸಿದರು.