ಬೆಳಗಾವಿ ಕ. ಸಾ. ಪ.ಜಿಲ್ಲಾ ಘಟಕದ ವತಿಯಿಂದ ತಿಂಗಳ ಕಾರ್ಯಕ್ರಮ
ನಾಟಕ,ಕಲೆ ಸಾಹಿತ್ಯ ಚುಟುಕು,ವ್ಯಕ್ತಿತ್ವ ಚಿತ್ರಣ, ಸಾಂಸ್ಕೃತಿಕ ಲೇಖನ ಜನಪದ ಸೊಗಡಿನ ಕೃತಿಗಳು ಹೀಗೆ ಎಲ್ಲಾ ಆಯಾಮಗಳಲ್ಲೂ ಸಾಹಿತ್ಯಕ ಸೇವೆ ಮಾಡಿರುವ ಬೆಳಗಾವಿಯ ಸಾಹಿತಿ ಶಿ. ಗು.ಕುಸುಗಲ್ಲರ ಸಾಹಿತ್ಯಿಕ ಸೇವೆ ನಿಜಕ್ಕೂ ಅನನ್ಯವಾದುದು ಎಂದು ಬೆಳಗಾವಿಯ ಹಿರಿಯ ಸಾಹಿತಿ ಮತ್ತು ಪ್ರಾಧ್ಯಾಪಕ ಡಾ. ಹೆಚ್ ಬಿ ಕೋಲ್ಕಾರ್ ಹೇಳಿದರು.
ಬೆಳಗಾವಿ ಜಿಲ್ಲಾ ಕ.ಸಾ.ಪ ಮತ್ತು ಕನ್ನಡ ಸಾಂಸ್ಕೃತಿಕ ಭವನ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ರವರ ವತಿಯಿಂದ ಬೆಳಗಾವಿಯ ನೆಹರು ನಗರದ ಕನ್ನಡ ಭವನದಲ್ಲಿ ದಿ 5 ರಂದು ಹಮ್ಮಿಕೊಳ್ಳಲಾದ ‘ನುಡಿತೇರಿಗೆ ನೂರೊಂದು ನಮನ’ ತಿಂಗಳ ಕಾರ್ಯಕ್ರಮದಲ್ಲಿ ಬೆಳಗಾವಿಯ ಸಾಹಿತಿ ಶಿ. ಗು.ಕುಸುಗಲ್ ರವರ ಬದುಕು ಬರಹ ಕುರಿತು ಮಾತನಾಡಿದರು.
ಬಡತನದಲ್ಲಿ ಬೆಳೆದ ಕುಸುಗಲ್ ರವರು ತಮ್ಮ ಜೀವನದ ಕಲಿಕೆಗಳನ್ನೇ ವಿರಸ, ಹತಾಶೆ,ನೋವು, ಅನ್ಯಾಯ,ದೌರ್ಜನ್ಯ ಮುಂತಾದವುಗಳ ಕುರಿತು ಬರೆಯುತ್ತಾ ಕಳಕಳಿಯಿಂದ ಮತ್ತು ಕಾಳಜಿಯಿಂದ ಬರೆದಿರುವುದು ಅವರ ಎಲ್ಲಾ ಕಾವ್ಯಗಳಲ್ಲಿ ಕಂಡು ಬರುತ್ತದೆ. ಅವರ ಜೀವನದ ಎಲ್ಲಾ ಆಯಾಮಗಳ ಅರಿವಿನ ಪರಿಚಯ ಕುರಿತಾದ ಚಿಂತನ ಗ್ರಂಥ ‘ಜೀವನ್ಮುಖಿ’ ನಿಜಕ್ಕೂ ಅವರ ನೈಜತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರ ಜೀವನ ಮತ್ತು ಬರಹಗಳ ಕುರಿತು ಕೋಲ್ಕಾರ ರವರು ವಿಶ್ಲೇಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಯ. ರು.ಪಾಟೀಲ ಮಾತನಾಡಿ ಕೆಲವರು ಬೋಧಕ ಸಾಹಿತಿಗಳಾದರೆ ಇನ್ನೂ ಕೆಲವರು ಜೀವನದ ಅನುಭವದ ಆಯಾಮದಲ್ಲಿ ಸಾಹಿತಿಕ ಕೃಷಿ ಮಾಡಿದವರಿದ್ದಾರೆ ಅವರಲ್ಲಿ ಶಿ. ಗು.ಕುಸುಗಲ್ ರವರು ಒಬ್ಬರು ಎಂದರು.
ಲೇಖಕರ ಸಂಘದ ಮಾಜಿ ಅಧ್ಯಕ್ಷೆ ಜಯಶೀಲ ಬ್ಯಾಕೊಡ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕ ಅಧ್ಯಕ್ಷರಾದ ಸುರೇಶ ಹಂಜಿ,ಪ್ರಕಾಶ ಅವಲಕ್ಕಿ ಬಸವರಾಜ ಸುಣಗಾರ, ಅ. ಬ.ಇಟಗಿ ಬಿ ಬಿ ಮಠಪತಿ,ಮಂಜುಳಾ ಕುಸುಗಲ್ಲ,ಬಿ ಡಿ ಹಂಚಿನಮನಿ ಆರ್ ಸಿ ಗಾಣಿಗೇರ್ ಎಂ ಕೆ ಮಲಾಬಾದಿ,ಸಚಿನ ಸಂಪಗಾವಿ ಸೇರಿದಂತೆ ಕ ಸಾ ಪ ಜಿಲ್ಲಾ ಘಟಕದ ಪದಾಧಿಕಾರಿಗಳು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾ ಘಟಕದ ವೀರಭದ್ರ ಅಂಗಡಿ ಸ್ವಾಗತಿಸಿದರು ಆರ್ ಬಿ ಬನಶಂಕರಿ ಪರಿಚಯಿಸಿದರು. ಎಂ ವೈ ಮೆಣಸಿನಕಾಯಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಡಾ ಹೇಮಾ ಸೋಮನಹಳ್ಳಿ ನಿರೂಪಿಸಿದರು ಕೊನೆಯಲ್ಲಿ ಶಿವಾನಂದ ತಲ್ಲೂರ ವಂದಿಸಿದರು.