spot_img
spot_img

ಲೋಕ ದೃಷ್ಟಿ ಕಲಾ ಸೃಷ್ಟಿ

Must Read

- Advertisement -

ಕಲೆಯು ಮಾನವನ ಹುಟ್ಟಿನೊಂದಿಗೆ ದೈವದತ್ತವಾಗಿ ಬೆಳೆದು ಬಂದ ಚಮತ್ಕಾರವಾಗಿದೆ. ಒಂದು ಕಾಲದ ಸಂಸ್ಕೃತಿಯಿಂದ ಇನ್ನೊಂದು ಕಾಲದ ಸಂಸ್ಕೃತಿಗೆ ಸಂಬಂಧವನ್ನು ಜೋಡಿಸುವ ಸಂಪರ್ಕ ಸಾಧನವಾಗಿರುವ ಭಾಷೆಯಂತೆ ಕಲೆಯೂ ಸಂಪರ್ಕ ಮಾಧ್ಯಮವಾಗಿದೆ. ವಿಶ್ವದ ಮೊಟ್ಟಮೊದಲ ಚಿತ್ರಕಾರನು ಆದಿಮಾನವನು. ಅದೆಷ್ಟೋ ಕಾಲದವರೆಗೆ ಚಿತ್ರವೇ ಆದಿ ಮಾನವನ ಭಾಷೆಯಾಗಿತ್ತು ಎಂಬುದಕ್ಕೆ ಚೀನಾ, ಜಪಾನ್, ಗ್ರೀಸ್, ಈಜಿಪ್ಟ್ ಹಾಗೂ ಸಿಂಧೂ ಸಂಸ್ಕೃತಿಗಳ ಚಿತ್ರಲಿಪಿ ನಿದರ್ಶನವಾಗಿದೆ.

ಮೂರ್ತಿ ಶಿಲ್ಪಕಲೆಯು ಭಾರತದ ಮಹತ್ವಪೂರ್ಣ ಕಲೆಯಾಗಿದೆ. ದೇವಾಲಯಗಳ ಹೊರಮೈ ಮತ್ತು ಒಳಮೈಗಳ ಮೇಲಿನ ಕೆತ್ತನೆಯ ಅಲಂಕಾರಗಳು ದೊಡ್ಡ ದೊಡ್ಡ ಬೆಟ್ಟಗಳನ್ನು ಕೊರೆದು ನಿರ್ಮಿಸಿದ ಗುಹಾಂತರ ದೇವಾಲಯಗಳ ಹೊರಮೈ ಒಳಮೈಗಳ ಮೇಲಿನ ಕೆತ್ತನೆಯ ಉಬ್ಬು ಚಿತ್ರ ಕಲಾಕೃತಿಗಳು ಗಮನಾರ್ಹವಾಗಿವೆ. ವಾಸ್ತುಶಿಲ್ಪ ಹಾಗೂ ಮೂರ್ತಿಶಿಲ್ಪ ಕಲೆಗಳಂತೆಯೇ ವರ್ಣ ಚಿತ್ರಕಲೆಯು ಸದಾ ಮಹತ್ವಪೂರ್ಣ ಕಲೆಯಾಗಿಯೇ ಭಾರತದಲ್ಲಿ ಬೆಳೆದುಬಂದಿದೆ. ವರ್ಣ ಚಿತ್ರಕಲೆಯ ದೃಷ್ಟಿಯಿಂದ ಅಜಂತಾ ಗುಹಾಂತರ ದೇವಾಲಯಗಳಲ್ಲಿ ಚಿತ್ರಿತವಾದ ಭಿತ್ತಿಪತ್ರಗಳು ವಿಶ್ವಮಾನ್ಯವಾಗಿವೆ. 

ಕ್ರಿ.ಶ.೧೪ನೇ ಶತಮಾನದಲ್ಲಿ ಕಾಗದವು ಬಳಕೆಯಲ್ಲಿ ಬಂದ ನಂತರ ಹಸ್ತಪ್ರತಿಗಳ ಸಂಖ್ಯೆ ಹೆಚ್ಚಾದಂತೆ ಕಲಾಕೃತಿಗಳ ರಚನೆಯೂ ಹೆಚ್ಚಿತು. ೧೬ನೇ ಶತಮಾನದಿಂದ ಪ್ರವರ್ಧಮಾನವಾಗಿ ಬೆಳೆದ ಮೊಗಲ್ ಚಕ್ರವರ್ತಿಗಳ ವರ್ಣ ಚಿತ್ರಕಲೆಯ ಮಹಾ ಪೋಷಕರಾಗಿದ್ದರು. ಮಂಗೋಲಿಯನ್ ಮತ್ತು ಪರ್ಷಿಯನ್ ಕಲಾ ಶೈಲಿಗಳ ಸಂಗಮವೇ ಮೊಗಲ್ ಶೈಲಿಯಾಗಿದೆ. 

- Advertisement -

೧೪ನೇ ಶತಮಾನದಿಂದ ೧೭ನೇ ಶತಮಾನದ ಅವಧಿಯಲ್ಲಿ ಚಿತ್ರಿತವಾದ ವಿಜಯನಗರ ವರ್ಣ ಚಿತ್ರಕಲಾ ಶೈಲಿಯು ಚೋಳ ಮತ್ತು ಪಾಂಡ್ಯ ಸಂಪ್ರದಾಯಗಳ ಮುಂದುವರಿದ ಶೈಲಿಯಾಗಿದೆ. ಲೇಪಾಕ್ಷಿಯ ವೀರಭದ್ರೇಶ್ವರ ದೇವಾಲಯದ ಭಿತ್ತಿ ಚಿತ್ರಗಳು ರಾಮಾಯಣ, ಮಹಾಭಾರತ ಮತ್ತು ಬೇರೆ ಬೇರೆ ಪುರಾಣಗಳ ವಿವಿಧ ಸನ್ನಿವೇಶಗಳ ಚಿತ್ರಗಳು ಅನುಪಮವಾಗಿ ಚಿತ್ರಿಸಲ್ಪಟ್ಟಿರುತ್ತವೆ. 

ಚಾಮರಾಜ ಒಡೆಯರ್ ಮತ್ತು ನಾಲ್ವಡಿ ಕೃಷ್ಣರಾಜರ ಕಾಲದಲ್ಲಿ ಮೈಸೂರು ಶೈಲಿ ಅಪೂರ್ವ ರೀತಿಯಲ್ಲಿ ಬೆಳೆಯಿತು. ಕಾಗದ ಬಟ್ಟೆ ಗಾಜಿನ ಮೇಲೆ ಜಲ ವರ್ಣ ಮತ್ತು ತೈಲ ವರ್ಣಗಳಲ್ಲಿ ಮಹಾರಾಜರ ಭಾವಚಿತ್ರಗಳು, ಪೌರಾಣಿಕ ಚಿತ್ರ ಸಂಯೋಜನೆಗಳು ದೇಶೀಯ ಮೂಲ ವರ್ಣಗಳಿಂದ ಚಿತ್ರಿಸಿ, ಚಿನ್ನ ಬೆಳ್ಳಿಗಳನ್ನು ಲೇಪಿಸಿ ಚಿತ್ರಗಳನ್ನು ಅಂದಗೊಳಿಸಲಾಗಿದೆ. ಟಿಪ್ಪು ಸುಲ್ತಾನರ ಕಾಲದಲ್ಲಿ ಕಟ್ಟಲಾದ ಶ್ರೀರಂಗಪಟ್ಟಣ ದರಿಯಾದೌಲತ್‌ನ ನಕ್ಷಾ ಚಿತ್ರಗಳು ವಿವಿಧ ವರ್ಣಗಳಿಂದ, ಚಿನ್ನದ ಮುಲಾಮಿನಿಂದ ರಚಿತವಾಗಿ ಇಂದಿಗೂ ತಮ್ಮ ಹೊಳಪು ಕಳೆದುಕೊಳ್ಳದೆ ಇವೆ. 

ಕ್ರಿ.ಶ.೧೬೦೦ ರಿಂದ ೧೭೫೦ರ ಅವಧಿಯನ್ನು ಬರೋಕ್ ಇಲ್ಲವೇ ಅಸಮಾಲಂಕೃತ ಕಲಾಶೈಲಿಯ ಕಾಲವೆಂದು ಕರೆಯಲಾಗಿದೆ. ಅಸಮಾಲಂಕೃತ ಕಲಾಶೈಲಿಯ ಕಲಾವಿದರು ವಾಸ್ತುಶಿಲ್ಪ, ಶಿಲ್ಪ ಹಾಗೂ ಚಿತ್ರಕಲೆ ಈ ಮೂರು ಕಲಾ ಪ್ರಕಾರಗಳನ್ನು ಸಮನ್ವಯಗೊಳಿಸಿದರು. ಗಿಯೋವನಿ ರ‍್ನಿನಿ ಎಂಬ ಕಲಾವಿದನು ಈ ಮೂರು ಕಲಾ ಪ್ರಕಾರಗಳಲ್ಲಿಯೂ ಅದ್ವಿತೀಯನೆನಿಸಿದನು. 

- Advertisement -

ಕ್ರಿ.ಶ.೧೭೦೦ರಲ್ಲಿ ರೊಕೊಕೊ ಅಥವಾ ಅತ್ಯಲಂಕಾರ ಕಲಾ ಶೈಲಿಯು ಯುರೋಪಿನಲ್ಲೆಲ್ಲ ಪ್ರಸಿದ್ಧಿಯಾಗಿತ್ತು.  ಈ ಕಲೆಯು ಅಲಂಕಾರ ಪೂರ್ಣವೂ, ಭಾವನಾ ಪ್ರಧಾನವೂ ಆದ ಒಂದು ಕಲಾ ಶೈಲಿಯಾಗಿದೆ. ರೋಮ್ಯಾಂಟಿಕ್ ಅಥವಾ ರಮ್ಯ ಕಲಾ ಶೈಲಿಯು ಕಲ್ಪನಾ ಪ್ರಧಾನವಾದ ಶೈಲಿಯಾಗಿದೆ. ಈ ಕಲೆಯು ಕ್ರಿ.ಶ.೧೭೦೦ ರಿಂದ ೧೮೦೦ರ ಮಧ್ಯಕಾಲದವರೆಗಿನ ಅವಧಿಯಲ್ಲಿ ಯುರೋಪಿನಲ್ಲಿ ಪ್ರಾರಂಭವಾಗಿ ಅಮೇರಿಕೆಯ ಸಂಯುಕ್ತ ಸಂಸ್ಥಾನಗಳ ಕಲಾ ಶೈಲಿಯವರೆಗೂ ತನ್ನ ಪ್ರಭಾವವನ್ನು ಪ್ರಸರಿಸಿತು. ರೋಮ್ಯಾಂಟಿಕ್ ಕಲಾವಿದರು ತಮ್ಮ ಕಲಾಕೃತಿಗಳಲ್ಲಿ ಚಮತ್ಕಾರಗಳನ್ನು ಆಶ್ಚರ್ಯಕರ ಭಾವನೆಗಳನ್ನೂ ತಮ್ಮ ಕಲ್ಪನೆಯಿಂದ ಪರ್ವತ ಶ್ರೇಣಿಗಳು, ಸೂರ್ಯಸ್ಥ ನದಿಗಳು ಮುಂತಾದ ನೈಸರ್ಗಿಕ ಚಿತ್ರಗಳನ್ನು ಚಿತ್ರಿಸುತ್ತಿದ್ದರು. 

ವಾಸ್ತವ ಜೀವನದ ವಾಸ್ತವ ಚಿತ್ರಗಳ ರಚನೆಯು ರಿಯಾಲಿಜಂ ಎಂದು ಕರೆಯಲ್ಪಟ್ಟಿತು. ೧೮೫೫ರಲ್ಲಿ ಕೋರ್ಬೆಟ್‌ನು ಇಂಥ ಕಲಾಕೃತಿಗಳನ್ನು ಫ್ರಾನ್ಸಿನಲ್ಲಿ ಪ್ರದರ್ಶಿಸಿದನು. ೧೯೨೦ರಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಪ್ರಾರಂಭವಾದ 

ರಿಯಾಲಿಜಂ ಕಲಾಕ್ಷೇತ್ರಕ್ಕೂ ವಿಸ್ತರಿಸಿತು. ಸುಪ್ತ ಮನಸ್ಸಿನ ವಿಚಾರಗಳನ್ನು ಸೆರೆ ಹಿಡಿಯುವ ಈ ಶೈಲಿಯು ಸಿಗ್ಮಂಡ್ ಫ್ಲಾಯ್ಡ್ ನ ಮಾನವನ ಅಂತರಾಳದ ವಿಚಾರಗಳು ಸುಪ್ತ ಮನಸ್ಸಿನೊಂದಿಗೆ ಇರಿಸಿಕೊಂಡ ಸಂಬಂಧಗಳನ್ನು ಕುರಿತು ಚೇತೋಹಾರಿ ಎನಿಸುವ ಕನಸುಗಳ ವಿಷಯದಲ್ಲಿ ತಮ್ಮ ಸಂಶೋಧನಾತ್ಮಕ ವೈಜ್ಞಾನಿಕ ಪ್ರಬಂಧಗಳನ್ನು ಮಂಡಿಸಿದನು.  ಸಾಲ್ವಡಾರ್ ಡಾಲಿ ಎಂಬಾತನು ಕನಸುಗಳನ್ನು ಕುರಿತು ಅನೇಕ ವರ್ಣಚಿತ್ರಗಳನ್ನು ಚಿತ್ರಿಸಿದನು. 

ಯಾವುದೇ ವಸ್ತುವನ್ನಾಗಲಿ ಸನ್ನಿವೇಶವನ್ನಾಗಲೀ ಚಿತ್ರಿಸುವಾಗ ಕಣ್ಣಿಗೆ ಕಂಡಂತೆಯೇ ಚಿತ್ರಿಸದೇ ಆ ವಸ್ತು ಸನ್ನಿವೇಶಗಳಿಂದ ಕಲಾವಿದನಿಗೆ ಉಂಟಾಗಬಹುದಾದ ಅನುಭವ ಅನಿಸಿಕೆಗಳನ್ನು ಚಿತ್ರಿಸುವ ಹೊಸ ಶೈಲಿಯನ್ನು ಎಕ್ಸ್ಪ್ರೆಶನಿಜಂ ಎಂದು ಕರೆಯಲಾಗಿದೆ. ೧೮೬೦ರಲ್ಲಿ ಫ್ರಾನ್ಸಿನ ಕಲಾವಿದರು ಇಂಪ್ರೆಶನಿಜಂ ಶೈಲಿಯಲ್ಲಿ ತಮ್ಮ ವರ್ಣಚಿತ್ರಗಳನ್ನು ರಚಿಸಿದರು. ಸೂರ್ಯನು ಬೆಳಗಿನಿಂದ ಸಂಜೆಯವರೆಗೆ ಪ್ರಕೃತಿಯ ಮೇಲೆ ತನ್ನ ಕಿರಣಗಳಿಂದ ಅನೇಕ ರೀತಿಯಲ್ಲಿ ಬೆಳಕಿನ ಪರಿಣಾಮವನ್ನುಂಟು ಮಾಡುತ್ತಾನೆ. ೧೮೭೪ರಲ್ಲಿ ಕ್ಲಾಡ್ ಮೊನೆ ಎಂಬ ಕಲಾವಿದನ ಮುಖಂಡತ್ವದಲ್ಲಿ ಕೆಲವು ಕಲಾವಿದರು ಈ ಶೈಲಿಯಲ್ಲಿ ಚಿತ್ರಿಸಿದರು.  ಕಣ್ಣಿಗೆ ಕಾಣುವ ನೈಸರ್ಗಿಕ ವಿವರಗಳ ಚಿತ್ರಣವನ್ನು ಕೈಬಿಟ್ಟು ಸರಳವಾಗಿ ಆಕೃತಿಗಳನ್ನು ಚಿತ್ರಿಸುವ ಅಬ್‌ಸ್ಟ್ರಾಕ್ಟ್ ಅಥವಾ ಅಮೂರ್ತ ಕಲೆಯ ೧೮೮೦ರಲ್ಲಿ ಫ್ರಾನ್ಸ್ ನಲ್ಲಿ ಆರಂಭವಾಯಿತು. ಕಣ್ಣು ಕೋರೈಸುವ ಉಗ್ರ ವರ್ಣಗಳನ್ನು ಬಳಸಿ ಒರಟೊರಟಾಗಿ ಚಿತ್ರಿಸುವ ಪದ್ಧತಿಯನ್ನು ಫಾವಿಜಂ ಎಂದು ಒರಟು ವರ್ಣ ಚಿತ್ರಕಲಾ ಪಂಥ ಎಂದು ಕರೆಯಲಾಗಿದೆ. ಕಾಗದ ಇಲ್ಲವೇ ಕ್ಯಾನ್‌ವಾಸ್ ಬಟ್ಟೆಯ ಮೇಲೆ ಬಣ್ಣಬಣ್ಣದ ಭೌಮಿತಿಕ ಆಕೃತಿಗಳ ಪಟ್ಟಿಗಳನ್ನು ತುಂಬಿಸಿ ಚಿತ್ರಿಸುವ ರೀತಿಯೇ ಕ್ಯೂಬಿಸಂ. ಸ್ಪೇನಿನ ಪ್ಯಾಬ್ಲೋ ಪಿಕಾಸೋ ಕ್ಯೂಬಿಸ್ಟ್ ಶೈಲಿಯ ಆದ್ಯ ಪ್ರವರ್ತಕ.

ಮನುಷ್ಯರೇ ಇರಲಿ, ಮರವೇ ಇರಲಿ, ಯಾವುದೇ ವಸ್ತುವಿರಲಿ ಅವುಗಳನ್ನು ತ್ರಿಭುಜ, ಚತುರ್ಭುಜ ಮುಂತಾದ ಆಕೃತಿಗಳಲ್ಲಿ ಚಿತ್ರಿಸಿ, ಸ್ವಾಭಾವಿಕ ವಸ್ತುಗಳನ್ನು ವಿರೂಪಗೊಳಿಸಿ ಚಿತ್ರಿಸುವುದೇ ಈ ಪಂಥದ ಆದ್ಯತೆಯಾಯಿತು. 

ಬ್ರಿಟಿಷರು ಭಾರತಕ್ಕೆ ಬಂದು ಕಲಾಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾದವು. ಬ್ರಿಟಿಷ್ ಪ್ರಭುತ್ವವು ೧೯ನೇ ಶತಮಾನದ ಮಧ್ಯಯುಗದಲ್ಲಿ ಕಲ್ಕತ್ತಾ, ಮುಂಬಯಿ, ಮದ್ರಾಸ್ ಮತ್ತು ಲಾಹೋರ್‌ನಲ್ಲಿ ಕಲಾಶಾಲೆಯನ್ನು ಸ್ಥಾಪಿಸಿತು. ಈ ಕಲಾಶಾಲೆಗಳಲ್ಲಿ ಮೂಲಾಭ್ಯಾಸವನ್ನು ಪಾಶ್ಚಿಮಾತ್ಯ ಶೈಲಿಯಲ್ಲಿಯೇ ಮಾಡಿಸಲಾಗುತ್ತಿತ್ತು. ೧೯ನೇ ಶತಮಾನದ ಕೊನೆಯ ವೇಳೆಗೆ ಸುಪ್ರಸಿದ್ಧ ಭಾರತೀಯ ಕಲಾವಿದರಾದ ರಾಜಾ ರವಿವರ್ಮರು ಪಾಶ್ಚಿಮಾತ್ಯ ಶೈಲಿಯಲ್ಲಿ ಭಾರತೀಯ ಕಲೆಯನ್ನು ಪುನಃ ಪ್ರತಿಷ್ಠಾಪಿಸಲು ಪ್ರಯತ್ನಿಸಿದರು. ಪರಂಪರಾನುಗತ ಪೌರಾಣಿಕ ವಿಷಯಗಳು ಮತ್ತು ಭಾರತೀಯ ಜನಜೀವನವನ್ನು ತೈಲವರ್ಣಗಳಲ್ಲಿ ಚಿತ್ರಿಸಿ ಅದ್ಭುತ ಸಾಧನೆ ಮಾಡಿದರು. ೧೯ನೇ ಶತಮಾನದ ಕೊನೆಯ ಎರಡು ದಶಕಗಳ ಅವಧಿಯಲ್ಲಿ ಮದ್ರಾಸಿನ ಕಲಾಶಾಲೆಯಲ್ಲಿ ಶಿಕ್ಷಕನಾಗಿದ್ದ ಈ.ಬಿ.ಹ್ಯಾವೆಲ್‌ನು ಭಾರತೀಯ ಪಾರಂಪರಿಕ ಕಲಾಶೈಲಿಯನ್ನು ಪುನರುಜ್ಜೀವನಗೊಳಿಸಲು ತನ್ನ ಅನಿಸಿಕೆಯಂತೆ ಪ್ರಯೋಗ ಮಾಡಿ ಭಾರತೀಯ ಕಲೆಯ ಉಜ್ವಲವಾದ ಪರಂಪರೆಯನ್ನು ಪ್ರಪಂಚಕ್ಕೆ ತೋರಿಸಿದ ಕೀರ್ತಿಗೆ ಪಾತ್ರನಾದನು. 

ಭಾರತೀಯ ಇಂದಿನ ಕಲೆಯ ರೂಪು ಮತ್ತು ಭಾಷೆಗಳ ಸ್ವರೂಪವೇ ಬದಲಾಗಿದ್ದು ಪ್ರಪಂಚದ ಸಮಕಾಲೀನ ಕಲೆಯ ಸರಿಸಮಾನವಾಗಿ ತಲೆಯೆತ್ತಿ ನಿಲ್ಲಲು ಹಲವಾರು ಕಲಾವಿದರು ಕಲಾ ಪ್ರಪಂಚಕ್ಕೆ ತಮ್ಮದೇ ಮಹತ್ತರ ಕಾಣಿಕೆಗಳನ್ನು ನೀಡಿದ್ದಾರೆ. ಕಲೆಯನ್ನು ವೃತ್ತಿ ಮಾಡಿಕೊಂಡ ಕಲಾವಿದರು, ಕಲಾ ಶಾಲೆಗಳನ್ನು ಸ್ಥಾಪಿಸಿ ಶಿಕ್ಷಣ ನೀಡಿದವರು, ಕಲಾ ಶಿಕ್ಷಕರಾಗಿದ್ದವರು, ತಾವು ರೂಢಿಸಿಕೊಂಡ ಬಂದ ಕಲೆಯಲ್ಲೇ ತನ್ಮಯತೆ ಕಂಡುಕೊಂಡ ಕಲಾವಿದರು ಇದ್ದಾರೆ. ಸಮಕಾಲೀನ ಕಲೆಯಲ್ಲಿ ಕರ್ನಾಟಕ ಕೆಲವು ಕಲಾವಿದರು ರಾಷ್ಟ್ರ ಅಂತರರಾಷ್ಟಿಯ ಮಟ್ಟದ ಪ್ರಶಸ್ತಿ ಗಳಿಸಿದ್ದಾರೆ. ವಿವಿಧ ಮಾಧ್ಯಮಗಳಲ್ಲಿ ನುರಿತವರಾಗಿ ಸಂಶೋಧನೆ ಪ್ರಯೋಗಗಳಲ್ಲಿ ನಿರತರಾಗಿದ್ದಾರೆ. ಕನ್ನಡ ನಾಡಿನ ಕಲಾಕ್ಷೇತ್ರಕ್ಕೆ ತಮ್ಮದೇ ಕಾಣಿಕೆ ನೀಡಿದ್ದಾರೆ. 

ನಾನು ೧೯೮೮ರಲ್ಲಿ ಬಳ್ಳಾರಿಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ನಡೆಸಿದ ಸಣ್ಣ ಕಥೆಗಳ ಕಮ್ಮಟದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಗಜೇಂದ್ರಗಡದ ಕೆರಕಲಮಟ್ಟಿ ಪ್ರಸಾದ್‌ರವರ ಚಿತ್ರಕಲಾ ಪ್ರತಿಭೆ ಕಂಡು ಸಂಯುಕ್ತ ಕರ್ನಾಟಕ ಪತ್ರಿಕೆಗೆ ಪರಿಚಯ ಲೇಖನ ಬರೆದಿದ್ದೆ. ನಂತರದ ದಿನಗಳಲ್ಲಿ ಬಿ.ಎಸ್.ದೇಸಾಯಿ ಹಮ್ಮಿಕೊಂಡ ಕಲಾವಿದರ ಕಲಾ ಪ್ರದರ್ಶನಗಳು ನನ್ನ ಲೇಖನಕ್ಕೆ ವಸ್ತುಗಳಾದವು. ಗೊರೂರಿನಲ್ಲಿದ್ದಾಗ ನವ್ಯ ಚಿತ್ರಕಲಾವಿದರು ಎನ್. ಗೋಪಿನಾಥ್ ಚಿತ್ರಕಲೆಯ  ಕುರಿತಾದ ಪುಸ್ತಕಗಳನ್ನು ಓದಲು ನೀಡಿ ಚಿತ್ರಕಲೆ ಕಲಾವಿದರ ಕುರಿತಾಗಿ ಆಸಕ್ತಿ ಬೆಳೆಯಿತು. ಬಿ.ಕಾಂ.ಪದವಿ ನಂತರ ನಾನು ಎಂ.ಕೃಷ್ಣ ಕಾನೂನು ನೈಟ್ ಕಾಲೇಜಿನಲ್ಲಿ ೩ ವರ್ಷ ಓದಿ ನಂತರ ನಿರ್ಮಲಾ ಚಿತ್ರಕಲಾ ಶಾಲೆಗೆ ಸೇರಿದೆ. ಆದರೆ ಓದಲಿಲ್ಲ. ಚಿತ್ರಕಲಾವಿದರು ಮತ್ತು ಕಲಾಪ್ರದರ್ಶನಗಳ ಬಗ್ಗೆ ನಾನು ಪ್ರಕೃತಿ ವಿಕೃತಿ ಕಲಾಕೃತಿ ಪುಸ್ತಕ ೧೧ ವರ್ಷಗಳ ಹಿಂದೆಯೇ ಪ್ರಕಟಸಿ ಇದರ ಮುಂದುವರಿದ ಭಾಗವೇ ಲೋಕದೃಷ್ಟಿ  ಕಲಾ ಸೃಷ್ಟಿ ಕೃತಿ. ಇದು ಹಾಸನ ಜಿಲ್ಲೆಯ ಎರಡೂವರೆ ದಶಕಗಳ  ಚಿತ್ರಕಲೆಯ ಒಂದು ಹಿನ್ನೋಟ. ನಾನು ಚಿತ್ರ ಕಲಾವಿದನಲ್ಲ. ಆದರೆ ಚಿತ್ರಕಲೆ ಬಗ್ಗೆ ಆಸಕ್ತಿ ವಹಿಸಿ ಬರೆದುಕೊಂಡು ಬಂದವನು.


ಗೊರೂರು ಅನಂತರಾಜು, ಹಾಸನ

ಮೊ: ೯೪೪೯೪೬೨೮೭೯.

ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್,

 ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group