ಉತ್ತುವುದು ಬಿತ್ತುವುದು ಮತ್ತೆ ಕಳೆಕೀಳುವುದು
ಹೊತ್ತುಮುಳುಗುವವರೆಗೆ ದುಡಿ ತೋಟದಿ
ನಿನ್ನ ದುಡಿಮೆಗೆ ತಕ್ಕ ಕೈಕೂಲಿ ನೀಡುವನು
ಅವನೊಡೆಯ ನೀನಾಳು- ಎಮ್ಮೆತಮ್ಮ
ಶಬ್ಧಾರ್ಥ
ಉತ್ತು = ಉಳುಮೆ ಮಾಡು . ಬಿತ್ತು = ಬೀಜ ಹಾಕು
ಕೈಕೂಲಿ = ಒಂದು ದಿನ ದುಡಿದರೆ ಕೊಡುವ ದಿನಗೂಲಿ
ತಾತ್ಪರ್ಯ
ಭೂಮಿ ಮಾಲಿಕನ ಹೊಲದಲ್ಲಿ ಕೂಲಿಕಾರ್ಮಿಕನಾಗಿ ಹೊತ್ತು
ಮುಳುಗುವವರೆಗೆ ಹೊಲವನ್ನು ಉಳುವುದು ಅರಗುವುದು ಬೀಜಹಾಕುವುದು ಮತ್ತು ಕಸವನ್ನು ತೆಗೆದುಹಾಕುವುದು
ಮಾಡಿದರೆ ದುಡಿಮೆಗೆ ತಕ್ಕ ಕೂಲಿಯನ್ನು ಕೊಡುತ್ತಾನೆ. ಹಾಗೆ
ಈ ಜಗವೆಂಬ ತೋಟಕ್ಕೆ ಆ ಪರಮಾತ್ಮನೇ ಮಾಲಕ. ಇಂಥ
ತೋಟಕ್ಕೆ ಬಂದ ಮೇಲೆ ನಾವು ಕೆಲಸವನ್ನು ಮಾಡಬೇಕು.
ಮನವನ್ನು ಸರಿಯಾಗಿ ಹದಗೊಳಿಸಿ ಅದರಲ್ಲಿ ಉತ್ತಮವಾದ
ಸದ್ಗುಣಗಳ ಬೀಜಗಳನ್ನು ಬಿತ್ತನೆಮಾಡಬೇಕು. ಮತ್ತು ಆಗಾಗ
ಬಂದು ಸೇರುವ ದುರ್ಗುಣಗಳೆಂಬ ಕಸವನ್ನು ಕಿತ್ತುಹಾಕಬೇಕು. ಸಂಜೆ ಬರುವವರೆಗೆ ಅಂದರೆ ಮುಪ್ಪಾಗಿ ಸಾವು ಬರುವತನಕ ನಿತ್ಯ ಕರ್ಮ ಮಾಡಲೇಬೇಕು. ನಾವು ಮಾಡಿದ ದುಡಿಮೆಗೆ ತಕ್ಕಂತೆ ಪರಮಾತ್ಮ ನಮಗೆ ಪುಣ್ಯಪಾಪವೆಂಬ ಕೂಲಿ ಕೊಡುತ್ತಾನೆ. ಅದನ್ನು ತಂದು ಮರುದಿನ ಕಿರಾಣಿ ಸಂತೆ ಮಾಡಿ ಅಡಿಗೆ ಮಾಡಿಕೊಂಡು ಉಣ್ಣವಂತೆ ಮುಂದಿನ ಜನ್ಮದಲ್ಲಿ ಪುಣ್ಯಪಾಪಗಳ ಫಲವನ್ನು ಅನುಭವಿಸಲೆಬೇಕು.
ಈ ಜಗವೇ ತೋಟ.ಅದರ ಮಾಲಕ ಪರಮಾತ್ಮ. ನಾವು
ಮಾತ್ರ ಆಳುಗಳು.ಅವನು ಹೇಳಿದಂತೆ ಕೆಲಸ ಮಾಡಬೇಕು.
ಅವನು ಮೆಚ್ಚಿ ಕೊಟ್ಟ ಕೂಲಿಯೆ ಸುಖಸಂತೋಷಗಳು
ದುಃಖದುಮ್ಮಾನಗಳು.
ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ
ಗಂಗಾವತಿ