ಮನೆಯೇಕೆ ? ಮಠವೇಕೆ ? ಗಿರಿಶಿಖರಗವಿಯೇಕೆ ?
ಮನದಲಿ ಸಮಾಧಾನವುಳ್ಳವನಿಗೆ
ಜಪವೇಕೆ ? ತಪವೇಕೆ ? ಧ್ಯಾನಮೌನಗಳೇಕೆ ?
ತನ್ನ ತಾನರಿದವಗೆ – ಎಮ್ಮೆತಮ್ಮ
ಶಬ್ಧಾರ್ಥ
ಗಿರಿಶಿಖರ = ಪರ್ವತದ ತುದಿ
ತಾತ್ಪರ್ಯ
ತನ್ನ ಮನದಲ್ಲಿ ಶಾಂತಿಯಿಲ್ಲದವನು ಮನೆಯಲ್ಲಿಯೋ
ಮಠದಲ್ಲಿಯೋ ಪರ್ವತದ ತುದಿಯಲ್ಲಿಯೋ ಅಥವಾ
ಗವಿಯಲ್ಲಿಯೋ ಹೋಗಿ ಸಾಧನೆಗೆ ಕೂಡುತ್ತಾನೆ. ಆದರೆ
ಮನದಲ್ಲಿ ಶಾಂತಿ ಸಮಾಧಾನ ನೆಮ್ಮದಿಯಿರುವವನು
ಎಲ್ಲಿದ್ದರೇನು ಸದಾಕಾಲ ಆನಂದಭರಿತನಾಗಿರುತ್ತಾನೆ.
ಕೆಲವರು ಆನಂದವನ್ನು ಪಡೆಯಲಿಕ್ಕೆ ಮಂತ್ರಜಪ ಮಾಡುತ್ತಾರೆ, ತಪಸ್ಸಿಗೆ ಕೂಡುತ್ತಾರೆ , ಧ್ಯಾನಿಸುತ್ತಾರೆ ಮತ್ತು ಮೌನಾಚರಣೆ ಮಾಡುತ್ತಾರೆ. ಆದರೆ ತನ್ನನ್ನು ತಾನು
ತಿಳಿದವನಿಗೆ ಇವೆಲ್ಲ ಬೇಕಾಗಿಲ್ಲ. ಏಕೆಂದರೆ ಸಾಕ್ಷಾತ್ಕಾರ
ಆದ ಮೇಲೆ ಜಪತಪ ಧ್ಯಾನಮೌನಗಳ ಅವಶ್ಯಕತೆಯಿಲ್ಲ. ಬಸವಣ್ಣನವರು ಹೀಗೆ ಹೇಳುತ್ತಾರೆ.
ಕಂಗಳು ತುಂಬಿದ ಬಳಿಕ ನೋಡಲಿಲ್ಲ, ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ, ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ ,ಮನ ತುಂಬಿದ ಬಳಿಕ ನೆನೆಯಲಿಲ್ಲ ಮಹಂತ ಕೂಡಲಸಂಗಮದೇವನ. ತಾನೆ ಅಂತರಂಗದಲ್ಲಿ ದೇವರಾದ ಬಳಿಕ ಮನವೇ ಲಿಂಗವಾದ ಬಳಿಕ ಬಹಿರಂಗದ ಆಚರಣೆಗಳು ಮತ್ತೇಕೆ ಎಂಬುದು ಬಸವಣ್ಣನವರ ಅನುಭವದ ನುಡಿ. ತನ್ನ ತಾನು ಅರಿವುದು ಮಾನವನ ಮುಖ್ಯ ಧ್ಯೇಯ. ಅರಿತ ಮೇಲೆ ಬಾಹ್ಯದಲ್ಲಿ ಆಚರಣೆಗಳು ಆಡಂಬರಗಳು ಯಾವುದು ಬೇಕಾಗಿಲ್ಲ. ಮೊದಲು
ತನ್ನ ತಾನು ಅರಿತು ಶಾಂತಿ ಸಮಾಧಾನದಿಂದ ಬದುಕಬೇಕು.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ