ಸಿಂದಗಿ: ಮನುಷ್ಯ ಜೀವನ ಪವಿತ್ರ ಪಾವನ. ಅರಿತು ಬಾಳಿದರೆ ಜೀವನದಲ್ಲಿ ಸುಖ ಶಾಂತಿಯಿದೆ. ಮನುಷ್ಯನ ಹಲವಾರು ದುಃಖ ದುಮ್ಮಾನಗಳಿಗೆ ಮನಸ್ಸೇ ಕಾರಣ. ಶುದ್ಧವಾದ ಧರ್ಮಾಚರಣೆ ಶ್ರೇಯಸ್ಸಿಗೆ ಸೋಪಾನವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ 27ನೇ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತ, ಮನುಷ್ಯನಲ್ಲಿ ಒಳ್ಳೆಯ ಮತ್ತು ಕೆಟ್ಟ ಗುಣಗಳೆರಡೂ ಇವೆ. ಒಳ್ಳೆಯವರ ನೆರಳಿನಲ್ಲಿ ಬಾಳಿದರೆ ಜೀವನ ವಿಕಾಸಗೊಳ್ಳುತ್ತದೆ. ದುರ್ಜನರ ಒಡನಾಟದಲ್ಲಿ ಬಾಳಿದರೆ ಬದುಕು ಸರ್ವ ನಾಶಗೊಳ್ಳುತ್ತದೆ. ಮನುಷ್ಯ ತನ್ನ ಆಚರಣೆಯಲ್ಲಿ ಮಹತ್ತರ ಬದಲಾವಣೆ ಹೊಂದಬೇಕಾದುದು ಅವಶ್ಯಕ.
ದುರ್ಮಾರ್ಗಕ್ಕೆ ಹಲವು ದಾರಿ. ಆದರೆ ಸನ್ಮಾರ್ಗಕ್ಕೆ ಇರುವುದೊಂದೇ ದಾರಿ. ಮನುಷ್ಯ ಬಾಳಿನಲ್ಲಿ ನೀತಿ ಸಂಹಿತೆ, ಸಂಪನ್ನತೆ, ಧ್ಯಾನ ಮತ್ತು ಜ್ಞಾನ ಅಳವಡಿಕೊಂಡು ಬಾಳಿದರೆ ಜೀವನದಲ್ಲಿ ಸುಖ ಶಾಂತಿ ಪ್ರಾಪ್ತವಾಗುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ. ಸಿಂದಗಿ ಆದಿಶೇಷ ಹಿರೇಮಠ ಕಳೆದ 27 ವರುಷಗಳಿಂದ ಜಾತ್ರಾ ಮಹೋತ್ಸವ ನಡೆಸಿ ಭಕ್ತರ ಬಾಳಿಗೆ ಬೆಳಕು ತೋರುವ ಕಾರ್ಯ ಮಾಡುತ್ತಿದೆ ಎಂದು ಹರುಷ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಅತೃಪ್ತಿ ಅಸಮಾಧಾನದಿಂದ ನರಳುತ್ತಿರುವ ಸಮಾಜಕ್ಕೆ ಧರ್ಮ ಪೀಠಗಳ ಮಾರ್ಗದರ್ಶನ ಅವಶ್ಯವಾಗಿ ಬೇಕಾಗಿದೆ ಎಂದರು.
ಆಲೂರು ಕೆಂಚವೃಷಭೇಂದ್ರ ಶಿವಾಚಾರ್ಯರು, ಮಾಗಣಗೇರಿ ವಿಶ್ವಾರಾಧ್ಯ ಶಿವಾಚಾರ್ಯರು, ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಆಲಮೇಲ ಚಂದ್ರಶೇಖರ ಶಿವಾಚಾರ್ಯರು, ಚಳಗೇರಾ ವೀರಸಂಗಮೇಶ್ವರ ಶಿವಾಚಾರ್ಯರು, ಹರಸೂರು ಸಿದ್ಧರಾಮೇಶ್ವರ ಶಿವಾಚಾರ್ಯರು, ಮಾಡಬಾಳ ಕುಮಾರ ಸ್ವಾಮಿಗಳು ಆಲೂರು ಶ್ರೀಗಳು, ಕೆಂಬಾವಿ ಶ್ರೀಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ವೀರಶೈವ ಮಹಾಸಭಾದ ಅಧ್ಯಕ್ಷ ಅಶೋಕ ವಾರದ, ಗೊಲ್ಲಾಳಪ್ಪಗೌಡ ಪಾಟೀಲ ಮಾಗಣಗೇರಿ, ನಾಗಠಾಣ ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಅರಕೇರಿ, ಸತೀಶಗೌಡ ಬಿರಾದಾರ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.
ಸಮ್ಮುಖ ವಹಿಸಿದ್ದ ಆದಿಶೇಷ ಹಿರೇಮಠದ ಸದ್ಗುರು ವೀರಾಜೇಂದ್ರ ಸ್ವಾಮಿಗಳು ಸೇರಿದಂತೆ ರಾಜಕೀಯ ಧುರೀಣರು ಮತ್ತು ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರು ರಕ್ಷೆಯಿತ್ತು ಶುಭ ಹಾರೈಸಿದರು.
ಸಮಾರಂಭಕ್ಕೂ ಮುನ್ನ ಶ್ರೀ ಸಂಗಮೇಶ್ವರ ದೇವಸ್ಥಾನದಿಂದ ಆದಿಶೇಷ ಸಂಸ್ಥಾನ ಹಿರೇಮಠದ ವರೆಗೆ ಶ್ರೀ ರಂಭಾಪುರಿ ಜಗದ್ಗುರುಗಳ ಸಾರೋಟ ಮೆರವಣಿಗೆ ಜರುಗಿತು. ಸಹಸ್ರಾರು ಜನರು ಪಾಲ್ಗೊಂಡು ದರ್ಶನ ಪಡೆದರು.
ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.