ಬೀದರ – ಕೋವಿಡ್ ಸಂದರ್ಭದಲ್ಲಿ ಹಲವು ಪದವಿಧರರು ತಮ್ಮ ಕೆಲಸವನ್ನು ಕಳೆದುಕೊಂಡು ಊರ ಕಡೆ ಮುಖ ಮಾಡಿದರು. ಕೆಲಸ ಇಲ್ಲದೆ ಕುಟುಂಬ ಹೇಗೆ ನಡೆಸಬೇಕು ಎಂದು ಚಿಂತೆ ಮಾಡಿದರು. ಆದರೆ ಇದಕ್ಕೆಲ್ಲ ಅಪವಾದವೆಂಬಂತೆ ಇಲ್ಲಿ ಒಬ್ಬ ಪದವಿಧರ ಯುವಕ ತನ್ನ ನಿರುದ್ಯೋಗದ ಬಗ್ಗೆ ಚಿಂತೆ ಮಾಡದೆ ಏಕಾಂಗಿಯಾಗಿ ಬಾವಿ ತೋಡಿ ಸಾಧನೆ ಮಾಡಿದ್ದಾರೆ.
ಇವರು ಸೂರ್ಯಕಾಂತ. ಎಂಟೆಕ್ ಪದವಿ ಓದಿದ್ದು ತನ್ನ ಸ್ವಂತ ಜಮೀನಿನಲ್ಲಿ ಸತತವಾಗಿ ಐದು ತಿಂಗಳ ಕಾಲ ಬಾವಿ ತೆಗೆದು ಭಗೀರಥನಂತೆ ನೀರು ಹೊರಗೆ ತೆಗೆದು ತನ್ನ ಹೊಲದಲ್ಲಿ ನೀರು ಹಾಯಿಸಿದ್ದಾರೆ.
ಔರಾದ ಪಟ್ಟಣದಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಹಾಹಾಕಾರ ಇರುತ್ತದೆ. ಎಲ್ಲೆಡೆ ಬರದ ಛಾಯೆ ಮೂಡಿರುತ್ತದೆ. ಬಾವಿಗಳು, ಬೋರ್ ವೆಲ್ ಗಳು ಬತ್ತುವ ಪರಿಸ್ಥಿತಿ ಉಂಟಾಗಿರುತ್ತದೆ. ಇಂಥ ಪರಿಸ್ಥಿತಿ ತಮಗೂ ಬರಬಾರದು ಎಂಬ ಮುಂದಾಲೋಚನೆಯಿಂದಲೇ ಸೂರ್ಯಕಾಂತ ಅವರು ಲಾಕ್ ಡೌನ್ ಕಾಲದ ಸಮಯವನ್ನು ಬಾವಿ ತೆಗೆಯಲು ಮೀಸಲಿಟ್ಟು ಯಶಸ್ವಿಯಾಗಿದ್ದಾರೆ
ಕೊರೋನಾ ಸಂಕಟದಲ್ಲಿ ಉದ್ಯೋಗವಿಲ್ಲದೆ ವಿಷಾದ ಪಡುತ್ತಿರುವ ರೈತರ ಮಕ್ಕಳಿಗೆ ಸೂರ್ಯಕಾಂತ ಒಂದು ಉದಾಹರಣೆಯಾಗಿದ್ದಾರೆ. ತಮ್ಮ ಕೃಷಿಗಾಗಿ ಸತತ 5 ತಿಂಗಳಿನಿಂದ ಏಕಾಂಗಿಯಾಗಿ ಬಾವಿ ತೋಡಿದ ಈ ಎಂಟೆಕ್ ಪದವೀಧರ ನೀರು ತಂದು ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ. ಸೂರ್ಯಕಾಂತ್ ಪ್ರಭು ಎಂಟೆಕ್ ಓದಿದ್ದಾರೆ. 25/30 ವಿಸ್ತೀರ್ಣದ 14 ಅಡಿ ಬಾವಿಯನ್ನು ಬಬ್ಬರೇ ತೋಡಿ ನೀರು ತೆಗೆದಿದ್ದಾರೆ. ಎಂಟೆಕ್ ಮಾಡಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸೂರ್ಯಕಾಂತ್ ಲಾಕ್ಡೌನ್ ವೇಳೆ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಛಲದಿಂದ ಈ ಸಾಧನೆಗಿಳಿದ ಅವರು ಅದರಲ್ಲಿ ಯಶಸ್ವಿಯಾಗಿ ಉಳಿದ ಯುವಕರಿಗೆ ಮಾರ್ಗದರ್ಶಿಯಾಗಿದ್ದಾರೆ.
ಮೊದ ಮೊದಲು ಈ ಪದವೀಧರನ ಈ ಸಾಹಸ ನೋಡಿ ಗ್ರಾಮಸ್ಥರು ಹುಚ್ಚು ಎನ್ನುತ್ತಿದ್ದರು. ಈಗ ಅದೇ ಗ್ರಾಮಸ್ಥರು ಅವರ ಬಾವಿಯಿಂದ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ. ಬಾವಿ ನೀರಿನಿಂದ 400 ಗಿಡಗಳನ್ನು ಬೆಳಸಿರುವ ಸೂರ್ಯಕಾಂತ್ ಛಲಕ್ಕೆ ಜಿಲ್ಲೆಯ ಜನರು ಶಹಭಾಷ್ ಎನ್ನುತ್ತಿದ್ದಾರೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ