ಮೂಡಲಗಿ: ಮೂಡಲಗಿ ಪಟ್ಟಣದಲ್ಲಿ ಬಿಡಾಡಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಜನತೆಯಲ್ಲಿ ಆತಂಕ ಹೆಚ್ಚಾಗಿದೆ. ದಾರಿಯಲ್ಲಿ ಹೋಗಬರುವ ಜನರನ್ನು ನಾಯಿಗಳು ಕಚ್ಚುತ್ತಿದ್ದು ಜನರು ಈ ಬಗ್ಗೆ ಪುರಸಭೆಯವರಿಗೆ ಹೇಳಿದರೂ ಅವರು ದಿವ್ಯ ನಿರ್ಲಕ್ಷ್ಯ ತಾಳಿದ್ದರಿಂದ ನಾಯಿಗಳಿಂದ ಅಪಾಯ ಹೆಚ್ಚಾಗಿದೆ.
ಈ ನಾಯಿಗಳಿಂದಾಗಿ ಜನರಿಗೆ, ಶಾಲಾ ಮಕ್ಕಳಿಗೆ ಭಯ ಹೆಚ್ಚಾಗಿದೆ. ಈಗಾಗಲೇ ನಾಯಿಗಳು ಹಲವು ಜನರನ್ನು ಕಚ್ಚಿದ್ದು ಪ್ರಾಣಾಪಾಯ ತಲೆದೋರಿದೆ.
ಪುರಸಭೆಯವರು ಕೇವಲ ಮಾತು ಆಡುತ್ತಿದ್ದು ನಾಯಿಗಳ ಹಾವಳಿ ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ, ಮಾಹಿತಿ ಹಕ್ಕು ಕಾರ್ಯಕರ್ತ ರವಿ ಮಾಹಾಲಿಂಗಪೂರ ಆರೋಪಿಸಿದ್ದಾರೆ.
ಮೂಡಲಗಿ ಪಟ್ಟಣದ ಲಕ್ಷ್ಮಿ ನಗರದ ನಿವಾಸಿಯಾದ ರವಿ ಮಹಾಲಿಂಗಪೂರ ಅವರ 9 ವರ್ಷದ ಮಗುವಿಗೆ ಬೀದಿ ನಾಯಿ ಕಚ್ಚಿದ್ದು ಇದರ ಬಗ್ಗೆ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೆ ಪ್ರಯೋಜನೆಯಾಗದಿರುವುದು ಇಲ್ಲಿಯ ಅಧಿಕಾರಿಗಳ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಪುರಸಭೆಯವರು ಮೊದಲು ಬಿಡಾಡಿ ನಾಯಿಗಳ ಹಾವಳಿಯನ್ನು ತಡೆಗಟ್ಟುವ ಕೆಲಸ ಮಾಡಬೇಕು. ಇದರ ಜೊತೆಗೆ ಹಂದಿಗಳ ಕಾಟವೂ ನಗರದಲ್ಲಿ ಹೆಚ್ಚಾಗಿದ್ದು ಎಲ್ಲೆಂದರಲ್ಲಿ ಕಂಡು ಬರುತ್ತಿವೆ. ಈ ಬಗ್ಗೆ ಪುರಸಭೆಯ ಮುಖ್ಯಾಧಿಕಾರಿ ದೀಪಕ ಹರ್ದಿಯವರು ಹೇಳಿಕೆ ನೀಡಿದ್ದು ಸಾರ್ವಜನಿಕರು ತಮ್ಮ ಸಾಕು ನಾಯಿಗಳಿಗೆ ಕೊರಳ ಪಟ್ಟಿ ಹಾಕಬೇಕು ಹಾಗೂ ಮನೆಯಲ್ಲಿಯೇ ಇಟ್ಟುಕೊಳ್ಳಬೇಕು ಇಲ್ಲದಿದ್ದರೆ ಅವುಗಳನ್ನು ಪುರಸಭೆಯ ವತಿಯಿಂದ ಒಯ್ಯಲಾಗುವುದು ಎಂದು ಹೇಳಿದ್ದಾರೆ ಆದರೆ ಬಿಡಾಡಿ ನಾಯಿಗಳನ್ನು ನಿಯಂತ್ರಿಸುವ ಕಾರ್ಯ ಆರಂಭವಾಗಿಲ್ಲ ಎಂದರು.
ಹಂದಿಗಳು ಗಟಾರುಗಳನ್ನು ಕೆದಕುತ್ತಿದ್ದು ಗಟಾರುಗಳಿಂದ ಗಬ್ಬು ವಾಸನೆ ಮೇಲೆದ್ದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದರ ಕುರಿತೂ ಪುರಸಭೆಯವರು ಕ್ಯಾರೆ ಎನ್ನುತ್ತಿಲ್ಲ. ಮಾತೆತ್ತಿದರೆ ಸ್ವಚ್ಛ ಭಾರತ ಅಭಿಯಾನ ಎನ್ನುತ್ತಿರುವ ಪುರಸಭೆಯವರು ಬಿಡಾಡಿ ನಾಯಿಗಳು, ಹಂದಿಗಳಿಂದಾಗಿ ಉಂಟಾಗಿರುವ ಅಸ್ವಚ್ಛತೆಯ ಬಗ್ಗೆ ತುಟಿ ಬಿಚ್ಚುವುದಿಲ್ಲ. ನಗರದ ಜನತೆಯ ಬಗ್ಗೆ ಇವರಿಗೆ ಕಾಳಜಿ ಶೂನ್ಯವಾಗಿದೆ.
ಇನ್ನಾದರೂ ಪುರಸಭೆಯವರು ಗಾಢ ನಿದ್ರೆಯಿಂದ ಎಚ್ಚತ್ತು ನಗರದಲ್ಲಿನ ಬಿಡಾಡಿ ನಾಯಿಗಳು ಹಾಗೂ ಹಂದಿಗಳ ನಿಯಂತ್ರಣ ಮಾಡಬೇಕು. ನಾಯಿಗಳ ಮಾಲೀಕರು ಹಾಗೂ ಹಂದಿಗಳ ಮಾಲೀಕರಿಗೆ ಸೂಚನೆ ನೀಡಿ ಎಲ್ಲೆಂದರಲ್ಲಿ ಅವುಗಳನ್ನು ಬಿಡದಂತೆ ನಿಯಂತ್ರಣ ಮಾಡಬೇಕು ಎಂಬುದು ಪತ್ರಿಕೆಯ ಆಶಯವಾಗಿದೆ ಇದು ಎಷ್ಟರ ಮಟ್ಟಗೆ ಕಾರ್ಯರೂಪಕ್ಕೆ ಬರುವುದೋ ಕಾದು ನೋಡಬೇಕು.