ಬೀದರ – ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನ ಪಕ್ಕದ ಸಿಪಿಎಸ್ ಶಾಲೆಯಲ್ಲಿ ಸೋಮವಾರ ವ್ಯಕ್ತಿಯೊಬ್ಬನ ಕೊಲೆ ನಡೆದಿದೆ.
ಕೊಲೆಗೀಡಾದ ವ್ಯಕ್ತಿಯನ್ನು ಹುಡಗಿ ಗ್ರಾಮದ ಕೆ.ಎಂಎಫ್ ನೌಕರ ಪ್ರಭಾಕರ ನರಸಿಂಗರಾವ ಜಾಧವ್(48) ಎಂದು ಗುರುತಿಸಲಾಗಿದೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಹುಮನಾಬಾದ ಶಾಸಕ ರಾಜಶೇಖರ ಬಿ.ಪಾಟೀಲ ಪಟ್ಟಣದಲ್ಲಿ ಅನಧಿಕೃತ ಚಟುವಟಿಕೆ ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಹುಮನಾಬಾದ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಪೊಲೀಸ ಇಲಾಖೆ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ರಾಜಶೇಖರ ಪಾಟೀಲ, ಸಿಪಿಎಸ್ ಶಾಲೆ ಪ್ರಾಂಗಣದಲ್ಲಿ ವ್ಯಕ್ತಿ ಕೊಲೆ ಆಗಿದೆ ಎಂದರೆ ತಾಲೂಕಿನ ನಲ್ಲಿ ಕಾನೂನು ವ್ಯವಸ್ಥೆ ಇಲ್ಲ ಎಂದು ಹೇಳಿದರು.
ತಹಶೀಲ್ದಾರ ನಾಗಯ್ಯಸ್ವಾಮಿ ಹಿರೇಮಠ, ಡಿ.ವೈ.ಎಸ್.ಪಿ ಸೋಮಲಿಂಗ ಕುಂಬಾರ, ಸಿಪಿಐ ಮಲ್ಲಿಕಾರ್ಜುನ ಯಾತನೂರ, ಸಂಚಾರ ಠಾಣೆ ಪಿ.ಎಸ್.ಐ ಸುಜಾತಾ ಹಾಗೂ ಸಿಬ್ಬಂದಿ ಇದ್ದರು.