spot_img
spot_img

ನರಕ ಚತುರ್ದಶಿ ಹಿನ್ನೆಲೆ ಹಾಗೂ ಪೌರಾಣಿಕ ಮಹತ್ವ

Must Read

- Advertisement -

ದೀಪಾವಳಿ ಹಬ್ಬದ ವಿಶೇಷತೆಯಲ್ಲಿ ನಾವಿವತ್ತು ನರಕ ಚತುರ್ದಶಿಯ ಹಿಂದಿರುವ ಕಥೆಯನ್ನು ತಿಳಿದುಕೊಳ್ಳೋಣ. ದೀಪಾವಳಿ 5 ದಿನಗಳ ಬೆಳಕಿನ ಹಬ್ಬವಾಗಿದೆ. ಅದರಲ್ಲಿ ನರಕ ಚತುರ್ದಶಿ ಎರಡನೇ ದಿನವಾಗಿದೆ. ನರಕ ಚತುರ್ದಶಿಯನ್ನು ಕಾರ್ತಿಕ ಮಾಸದ 14ನೇ ದಿನದಂದು ಆಚರಿಸಲಾಗುತ್ತದೆ ಎಂಬುದು ನಮಗೆಲ್ಲ ಗೊತ್ತು. ಆದರೆ ‌ಯಾಕೆ ಆಚರಿಸುತ್ತೇವೆ ಎಂಬುದು ನಮ್ಮಲ್ಲಿ ಬಹಳಷ್ಟು ಜನರಿಗೆ ಗೊತ್ತಿಲ್ಲ. ಅದನ್ನು ತಿಳಿಸಿ ಕೊಡುವ ಪುಟ್ಟ ಪ್ರಯತ್ನ ಈ ಅಂಕಣ. ಮೊದಲು ನರಕ ಚತುರ್ದಶಿಯ ಮಹತ್ವ ಹಾಗೂ ಆಚರಣೆಯ ಬಗ್ಗೆ ತಿಳಿದುಕೊಳ್ಳೋಣ. ನಂತರ ಅದರ ಹಿನ್ನೆಲೆಯನ್ನು ತಿಳಿದುಕೊಳ್ಳೋಣ.‌

🌹ನರಕ ಚತುರ್ದಶಿಯ ಮಹತ್ವ ಹಾಗೂ ಆಚರಣೆ:

ನರಕ ಚತುರ್ದಶಿ ದೀಪಾವಳಿಯ ಎರಡನೇ ದಿನವಾಗಿದೆ. ಇದನ್ನು ಪ್ರತಿವರ್ಷ ಕಾರ್ತಿಕ ಮಾಸದ 14ನೇ‌ ದಿನದಂದು ಆಚರಿಸಲಾಗುತ್ತದೆ. ಈ ದಿನ ಶ್ರೀಕೃಷ್ಣ ಹಾಗೂ ಸತ್ಯಭಾಮಾ ಇಬ್ಬರು ಸೇರಿ ನರಕಾಸುರ ಎಂಬ ರಾಕ್ಷಸನನ್ನು ಸಾಯಿಸಿದರು. ಅದಕ್ಕಾಗಿ ನರಕ ಚತುರ್ದಶಿ ಆಚರಣೆಗೆ ಬಂತು ಎಂಬ ನಂಬಿಕೆಯಿದೆ. ಭಾಗವತ ಪುರಾಣದಲ್ಲಿ ಇದರ ಬಗ್ಗೆ ವಿವರಣೆಗಳಿವೆ.

ಇದಕ್ಕೆ ವಿರುದ್ಧವಾಗಿ ಕಾಳಿಕಾ ಪುರಾಣದಲ್ಲಿ ಮಹಾಕಾಳಿ ಈ ದಿನದಂದು ನರಕಾಸುರನನ್ನು ಕೊಂದಳು, ಅದಕ್ಕಾಗಿ ನರಕ ಚತುರ್ದಶಿ ಆಚರಣೆಗೆ ಬಂತು ಎಂಬ ಉಲ್ಲೇಖಗಳಿವೆ. ಎರಡಕ್ಕೂ ಸರಿ ಹೊಂದುವ ಸಾಕ್ಷ್ಯಗಳು ಇವೆ‌‌.‌ ಯಾರು ನರಕಾಸುರನನ್ನು ಕೊಂದರು ಎಂಬ ವಾದದಲ್ಲಿ ಟೈಮ್ ವೇಸ್ಟ್ ಮಾಡುವುದಕ್ಕಿಂತ ನರಕ ಚತುರ್ದಶಿಯನ್ನು ಹೇಗೆ ಆಚರಿಸುತ್ತಾರೆ ಹಾಗೂ ಅದರ ಮಹತ್ವದ ಬಗ್ಗೆ ನೋಡೋಣಾ.

- Advertisement -

ನರಕ ಚತುರ್ದಶಿಯನ್ನು ಮನುಷ್ಯನಲ್ಲಿರುವ ಆಲಸ್ಯವನ್ನು ಹಾಗೂ ಮನುಷ್ಯನ ಜೀವನವನ್ನು ನರಕ ಮಾಡುವ ಕೆಟ್ಟತನವನ್ನು ಹೋಗಲಾಡಿಸಲು ಆಚರಿಸುತ್ತಾರೆ. ದೀಪಾವಳಿ ಹಬ್ಬದ ಎರಡನೇ ದಿನವಾಗಿ ಇದನ್ನು ಆಚರಿಸುತ್ತಾರೆ. ಇವತ್ತಿನ ದಿನ ಎಲ್ಲರೂ ಸೂರ್ಯೋದಯಕ್ಕಿಂತ ಮುಂಚೆಯೆದ್ದು ಮೈಗೆಲ್ಲ ಎಣ್ಣೆ ಹಚ್ಚಿ ಅಭ್ಯಂಗ ಸ್ನಾನ ಮಾಡುತ್ತಾರೆ.

ಈ ರೀತಿ ಅಭ್ಯಂಗ ಸ್ನಾನ ಮಾಡುವುದರಿಂದ ಮೈಯಲ್ಲಿರುವ ಆಲಸಿತನ ಹಾಗೂ ಮನಸ್ಸಲ್ಲಿರುವ ದಾರಿದ್ರ್ಯ ದೂರಾಗುತ್ತದೆ. ನಂತರ ಹೊಸ ಬಟ್ಟೆಗಳನ್ನು ಧರಿಸಿ ಸುಗಂಧ ದ್ರವ್ಯ ಲೇಪಿಸಿಕೊಂಡು ತಮ್ಮ ಕುಲ ದೇವರ ಪೂಜೆ ಮಾಡುತ್ತಾರೆ. ಹೆಣ್ಮಕ್ಕಳು ಚೆನ್ನಾಗಿ ಅಲಂಕಾರ ಮಾಡಿಕೊಂಡು ದೇವರ ಪೂಜೆ ಮಾಡುತ್ತಾರೆ. ಕೆಟ್ಟ ಶಕ್ತಿಗಳಿಂದ ರಕ್ಷಿಸಿಕೊಳ್ಳಲು ಕಣ್ಣಿಗೆ ಕಾಡಿಗೆಯನ್ನು ಹಚ್ಚಿಕೊಳ್ಳುತ್ತಾರೆ. ಕುಲ ದೇವರಿಗೆ ವಿಶೇಷ ನೈವೇದ್ಯ ತೋರಿಸಿದ ನಂತರ ಮನೆಮಂದಿಯೆಲ್ಲ ಒಟ್ಟಾಗಿ ಕುಳಿತು ಪ್ರೀತಿಯಿಂದ ಸಿಹಿ ತಿಂಡಿಗಳನ್ನು ತಿನ್ನುತ್ತಾರೆ.

ಸ್ನೇಹಿತರೊಡನೆ, ಸಂಬಂಧಿಕರೊಡನೆ ಶುಭಾಷಯಗಳನ್ನು ಹಂಚಿಕೊಳ್ಳುತ್ತಾರೆ. ಸಂಜೆ ಮನೆಯಲ್ಲಿನ ಬಡತನವನ್ನು, ಅಜ್ಞಾನವನ್ನು, ಅಂಧಕಾರವನ್ನು ಹೋಗಲಾಡಿಸಲು ಮನೆ ಮುಂದೆ ದೀಪಗಳನ್ನು ಹಚ್ಚುತ್ತಾರೆ. ನರಕದಿಂದ ಮುಕ್ತಿ ಹೊಂದಲು, ಪಾಪದಿಂದ ಮುಕ್ತಿ ಹೊಂದಲು, ದಾರಿದ್ರ್ಯದಿಂದ ಮುಕ್ತಿ ಹೊಂದಲು ಸಂಜೆ ಯಮರಾಜನಿಗಾಗಿ ಒಂದು ವಿಶೇಷ ಕನಕಿನ ದೀಪವನ್ನು ಹಚ್ಚುತ್ತಾರೆ.

- Advertisement -

ಈ ದೀಪವನ್ನು ಮನೆಯ ಮೂಲೆಮೂಲೆಗೆ ಬೆಳಗಿದ ನಂತರ ಮನೆಯಾಚೆ ಹಚ್ಚಿ ಯಮದೇವನಿಗೆ ನಮಸ್ಕರಿಸುತ್ತಾರೆ. ಈ ರೀತಿ ಮಾಡುವುದರಿಂದ ಅಕಾಲ ಮೃತ್ಯು ದೋಷ ದೂರವಾಗುತ್ತದೆ. ಮಕ್ಕಳೆಲ್ಲ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ.‌ ಇಲ್ಲಿ ಮತ್ತೊಂದು ವಿಶೇಷ ಏನೆಂದರೆ ಈ ದಿನ ತಂತ್ರಿಗಳು ಮಂತ್ರಗಳನ್ನು ಕಲಿಯುತ್ತಾರೆ‌. ಕೆಲವರು ತಮ್ಮ‌ ಕುಲ ದೇವರ ದರ್ಶನ ಪಡೆದುಕೊಂಡು ಆರ್ಥಿಕವಾಗಿ ಸಾಮಾಜಿಕವಾಗಿ ಬಲಿಷ್ಟರಾಗುತ್ತಾರೆ, ಹೆಚ್ಚಿನ ಆಯಸ್ಸು, ಆರೋಗ್ಯ ಹಾಗೂ ಅಂತಸ್ತನ್ನು ಪಡೆದುಕೊಳ್ಳುತ್ತಾರೆ. ಇದಿಷ್ಟು ನರಕ ಚತುರ್ದಶಿಯ ಮಹತ್ವ ಹಾಗೂ ಆಚರಣೆ.‌

ನರಕ ಚತುರ್ದಶಿ ಹಿನ್ನೆಲೆ – ನರಕಾಸುರನ ಕಥೆ

ಈ ನರಕ ಚತುರ್ದಶಿ ಆಚರಣೆಗೆ ಬರಲು ಮುಖ್ಯ ಕಾರಣವೇ ನರಕಾಸುರ. ಭಗವಾನ್ ವಿಷ್ಣು ವರಾಹ ಅವತಾರದಲ್ಲಿರುವಾಗ ಅವನಿಗೂ ಹಾಗೂ ಭೂದೇವಿಗೂ ಆದ ಪ್ರೇಮದಿಂದ ಈ ನರಕಾಸುರನ ಜನನವಾಯಿತು. ಹುಟ್ಟಿದ ಮಗುವಿನಲ್ಲಿ ರಾಕ್ಷಸಿ ಗುಣ ಇರುವುದನ್ನು ಕಂಡು ವರಾಹ ಆ ಮಗುವನ್ನು ಕೊಲ್ಲಲು ಮುಂದಾದನು‌. ಆದರೆ ಭೂದೇವಿ ತನ್ನ ಮಗುವನ್ನು ಕೊಲ್ಲದಂತೆ ವರಾಹನನ್ನು ತಡೆದಳು‌ ಹಾಗೂ ತನ್ನ ಮಗನ ದೀರ್ಘಾಯುಷ್ಯಕ್ಕೆ ಬೇಡಿಕೆಯಿಟ್ಟಳು.

ಆಗ ವರಾಹ ಅವತಾರದಲ್ಲಿದ್ದ ವಿಷ್ಣು “ಕೇವಲ ಭೂದೇವಿಯಿಂದ ಮಾತ್ರ ಆ ಮಗು ಸಾಯಬಹುದು, ಅಂದರೆ ನರಕಾಸುರ ಸಾಯಬಹುದು…” ಎಂಬ ವರ ಕೊಟ್ಟನು. ಮುಂದೆ ಆ ಮಗು ಅಂದರೆ ನರಕಾಸುರ ರಾಕ್ಷಸಿತನದಿಂದ ಬೆಳೆಯಿತು. ನರಕಾಸುರನಿಗೆ ಯಾವ ಭಯವೂ ಇಲ್ಲದಾಯಿತು‌. ಆತ ದೇವತೆಗಳ ಮೇಲೆ, ಮಾನವರ ಮೇಲೆ, ದಾನವರ ಮೇಲೆ ಎಲ್ಲರ ಮೇಲೆ‌ ಹಿಡಿತ ಸಾಧಿಸಲು ಪ್ರಾರಂಭಿಸಿದನು.

ನರಕಾಸುರನಿಗೆ ಕಾಮಾಖ್ಯ ದೇವಿಯ ಮೇಲೆ ಮನಸ್ಸಾಯಿತು. ಆತ ಅವಳ ಸೌಂದರ್ಯದಿಂದ ಮೋಹಿತನಾಗಿ ಅವಳನ್ನು ಮದುವೆಯಾಗಲು ಮುಂದಾದನು. ಅವಳಿಗೆ ತನ್ನ ಪ್ರೇಮ ನಿವೇದನೆ ‌ಮಾಡಿದನು. ಆಗ ಕಾಮಾಖ್ಯ ದೇವಿ ಅವನಿಗೆ ಒಂದು ಶರತ್ತನ್ನಿಟ್ಟಳು. ಆ ಶರತ್ತು ಏನೆಂದರೆ “ನರಕಾಸುರ ಒಂದು ರಾತ್ರಿಯಲ್ಲಿ ಮುಂಜಾನೆ ಕೋಳಿ ಕೂಗುವ ಮುಂಚೆಯಷ್ಟರಲ್ಲಿ ಭೂಮಿಯಿಂದ ಅವಳ ಅರಮನೆಗೆ ಏಣಿಯನ್ನು ನಿರ್ಮಿಸಿದರೆ ಆಕೆ ಅವನನ್ನು ಮದುವೆಯಾಗುವಳು…” ಎಂದಿತ್ತು.‌ ತಕ್ಷಣವೇ ನರಕಾಸುರ ಅವಳ ಅರಮನೆಗೆ ಏಣಿ ಕಟ್ಟಲು ಪ್ರಾರಂಭಿಸಿದನು.

ಆತ ಅವನ ಕೆಲಸದಲ್ಲಿ ಬಹುಪಾಲು ಯಶಸ್ವಿಯಾಗಿದ್ದನು. ಆದರೆ ಕಾಮಾಖ್ಯ ದೇವಿಗೆ ಅವನನ್ನು ‌ಮದುವೆಯಾಗುವುದು ಇಷ್ಟವಿರಲಿಲ್ಲ. ಅದಕ್ಕಾಗಿ ಆಕೆ ಉಪಾಯ ಮಾಡಿ ಮಧ್ಯರಾತ್ರಿಯೇ ಕೋಳಿ ಕೂಗಿಸಿದಳು. ಅವನಿಗೆ ಮೋಸ ಮಾಡಿ ಶರತ್ತಿನಲ್ಲಿ ಅವನನ್ನು ಸೋಲಿಸಿ ಕಳುಹಿಸಿದಳು. ಆದರೆ ಇದು ತಡವಾಗಿ ನರಕಾಸುರನಿಗೆ ಗೊತ್ತಾಯಿತು.

ಆಗ ಆತ ಕ್ರೋಧಗೊಂಡು ದೇವಲೋಕದ ಮೇಲೆ, ಭೂಲೋಕದ ಮೇಲೆ ದಂಡಯಾತ್ರೆ ಪ್ರಾರಂಭಿಸಿದನು. ದೇವತೆಗಳ ಮಾತೆ ಅದಿತಿಯ ಕಿವಿಯೋಲೆಗಳನ್ನು ಕದ್ದನು‌‌. ದೇವತೆಗಳ ರಾಜ ದೇವೆಂದ್ರನ ಐರಾವತ ಹಾಗೂ ಕುದುರೆಯನ್ನು ವಶಪಡಿಸಿಕೊಂಡನು. ಹಲವಾರು ದೇವತೆಗಳನ್ನು ‌ಲೂಟಿ ಮಾಡಿದನು. ಭೂಮಿಯ ಮೇಲಿನ ರಾಜರುಗಳನ್ನೆಲ್ಲ ತನ್ನ ಒತ್ತೆಯಾಳಾಗಿಟ್ಟುಕೊಂಡನು. ಅವರ 16,000 ರಾಣಿಯರನ್ನೆಲ್ಲ ಬಂಧನದಲ್ಲಿ ಇಟ್ಟನು. ಆಗ ದೇವೆಂದ್ರ ಈ ನರಕಾಸುರನಿಂದ ಕಾಪಾಡುವಂತೆ ವಿಷ್ಣುವಿನಲ್ಲಿ ಬೇಡಿಕೊಂಡನು.

ಮಹಾವಿಷ್ಣು ಮೊದಲೇ ಕಳೆದ ಅವತಾರದಲ್ಲಿ ನರಕಾಸುರನ ಸಾವು ಅವನ ತಾಯಿ ಭೂದೇವಿಯಿಂದ ಮಾತ್ರ ಸಾಧ್ಯ ಎಂಬ ವರ ಕೊಟ್ಟಿದ್ದನು‌. ಈಗ ವಿಷ್ಣು ಕೃಷ್ಣನ ಅವತಾರದಲ್ಲಿ ‌ಭೂಮಿಗೆ ಬಂದನು. ಭೂದೇವಿ ಸತ್ಯಭಾಮೆಯ ಅವತಾರದಲ್ಲಿ ಭೂಮಿಗೆ ಬಂದಳು. ನರಕಾಸುರನ ಅಂತ್ಯಕ್ಕಾಗಿ ಕೃಷ್ಣ ಅವನ ಮೇಲೆ‌ ಯುದ್ಧ ಸಾರಿದನು.

ಅವರಿಬ್ಬರ ಕಾಳಗವನ್ನು ನೋಡುತ್ತಾ ಸತ್ಯಭಾಮೆ ನಿಂತಳು.‌ ಅವರಿಬ್ಬರ ನಡುವೆ ಘೋರ ಕದನವಾಗಿ ಕೃಷ್ಣ ಮೂರ್ಛೆ ಹೋದನು. ಆಗ ಕೋಪದಲ್ಲಿ ಸತ್ಯಭಾಮೆ ನರಕಾಸುರನ ಮೇಲೆ ಬಾಣಗಳ‌ ಸುರಿಮಳೆಗೈದು ಅವನನ್ನು ‌ಸಾಯಿಸಿದಳು. ನಂತರ ಕೃಷ್ಣ ಅವನ ಬಂಧನದಲ್ಲಿದ್ದ 16,000 ರಾಣಿಯರನ್ನು ಸೆರೆಯಿಂದ ಬಿಡಿಸಿದನು ಆಗ ನರಕಾಸುರ ಸಾಯುವಾಗ ಸತ್ಯಭಾಮೆಯಿಂದ “ನನ್ನ ಸಾವನ್ನು ಬಣ್ಣಬಣ್ಣದ ದೀಪಗಳ ಬೆಳಕಿನಿಂದ ಆಚರಿಸಬೇಕು…” ಎಂದು ವರ ಕೇಳಿದನು.‌ ದೇವಿ ಅವನಿಗೆ ಈ ವರವನ್ನು ಕೊಟ್ಟಳು. ಅದಕ್ಕಾಗಿ ಅವತ್ತಿನಿಂದ ನಾವೆಲ್ಲರೂ ದೀಪಾವಳಿಯಲ್ಲಿ ಈ ನರಕ ಚತುರ್ದಶಿಯನ್ನು ಆಚರಿಸುತ್ತಾ ಬಂದಿದ್ದೇವೆ

ಇದಿಷ್ಟು ನರಕ ಚತುರ್ದಶಿ ಹಿಂದಿರುವ ಕಥೆ, ಮಹತ್ವ ಹಾಗೂ ಆಚರಣೆಯ ಸಣ್ಣ ಮಾಹಿತಿ.‌


ಹೇಮಂತ್ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಉಚಿತ ಕಣ್ಣು ತಪಾಸನೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ

ಸಿಂದಗಿ; ಪೂಜ್ಯ ಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ, ಸಿಂದಗಿ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಜಯಪುರ ಹಾಗೂ ಅನುಗ್ರಹ ವಿಜನ್ ಫೌಂಡೇಶನ್ ಟ್ರಸ್ಟ್, ವಿಜಯಪುರ, ಜಿ.ಪಿ. ಪೋರವಾಲ...
- Advertisement -

More Articles Like This

- Advertisement -
close
error: Content is protected !!
Join WhatsApp Group