spot_img
spot_img

ಹೊಸ ಪುಸ್ತಕ ಓದು

Must Read

- Advertisement -

ಸಾಹಿತ್ಯ ಚರಿತ್ರೆಗೆ ವಿನೂತನ ಕೊಡುಗೆ
* * * * * * *
ಪುಸ್ತಕದ ಹೆಸರು : ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ
ಲೇಖಕರು : ಡಾ. ಶಿವಾನಂದ ವಿರಕ್ತಮಠ
ಪ್ರಕಾಶಕರು : ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ, ೨೦೨೪
ಪುಟ : ೪೮೦ ಬೆಲೆ : ರೂ. ೬೦೦
* * * * * * *

ಕನ್ನಡ ಸಾಹಿತ್ಯ ಚರಿತ್ರೆಯನ್ನು ಬರೆಯಲು ಹೊರಟ ಕೆಲವು ವಿದ್ವಾಂಸರು ಆಯಾ ಕಾಲದ ಪ್ರಭಾವಿ ವ್ಯಕ್ತಿಗಳ ಹೆಸರಿನ ಕಾಲಘಟ್ಟಗಳ ಅಡಿಯಲ್ಲಿ ವಿಷಯ ನಿರೂಪಿಸುವ ಪ್ರಯತ್ನ ಮಾಡಿದರು. ರಂ.ಶ್ರೀ.ಮುಗಳಿ ಅವರು ಪಂಪ ಯುಗ, ಬಸವ ಯುಗ, ಕುಮಾರವ್ಯಾಸ ಯುಗ ಎಂದು ಕರೆದರು. ವಿಜಯನಗರ ಅರಸರ ಕಾಲದ ಸಾಹಿತ್ಯವನ್ನು ಮುಗಳಿ ಅವರು ಕುಮಾರವ್ಯಾಸ ಯುಗದ ಹೆಸರಿನಲ್ಲಿ ಪ್ರಸ್ತಾಪಿಸಿದರು. ಕುಮಾರವ್ಯಾಸ ಯುಗ ಎಂಬ ಪದವನ್ನೇ ಅನೇಕ ವಿದ್ವಾಂಸರು ವಿರೋಧಿಸಿದರು. ಎಸ್. ವಿದ್ಯಾಶಂಕರ್ ಅವರು ಬರೆದ ವೀರಶೈವ ಸಾಹಿತ್ಯ ಚರಿತ್ರೆಯ ಮೂರನೆಯ ಭಾಗವನ್ನು ‘ಪ್ರೌಢದೇವರಾಯನ ಯುಗ’ ಎಂಬ ಹೆಸರಿನಿಂದ ಕರೆದು, ಅದಕ್ಕೊಂದು ಯೋಗ್ಯ ನ್ಯಾಯ ದೊರಕಿಸಿಕೊಟ್ಟರು. ಐದು ದಶಕಗಳ ಹಿಂದೆ ೧೯೭೧ರಲ್ಲಿ ಶಿವಾನಂದ ವಿರಕ್ತಮಠ ಅವರು ಡಾ. ಆರ್. ಸಿ. ಹಿರೇಮಠ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ‘ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ’ ಎಂಬ ಬೃಹತ್ ಮಹಾಪ್ರಬಂಧವನ್ನು ಅರ್ಪಿಸಿ, ಪಿಎಚ್.ಡಿ. ಪದವಿ ಪಡೆದರು. ಈ ಕೃತಿ ೧೯೭೮ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟವಾಗಿ ಕನ್ನಡ ಸಾಹಿತ್ಯ ಚರಿತ್ರೆ ನಿರ್ಮಾಪಕರಿಗೆ ಒಂದು ಮಾರ್ಗವನ್ನೇ ತೋರಿಸಿಕೊಟ್ಟಿತು.

ಈ ಮಹಾಪ್ರಬಂಧದ ಅನುಸರಣೆಯೆಂಬಂತೆ ಮುಂದೆ ರಾಷ್ಟ್ರಕೂಟರ ಕಾಲದ ಸಾಹಿತ್ಯ, ಮೈಸೂರು ಅರಸರ ಕಾಲದ ಸಾಹಿತ್ಯ ಎಂಬ ಬಗೆಬಗೆಯ ಕೃತಿಗಳು ಕನ್ನಡದಲ್ಲಿ ಹೊರಬಂದವು. ಕೃತಿ ಪ್ರಕಟವಾಗಿ ೪೬ ವರ್ಷಗಳಾದರೂ ವಿದ್ವಜ್ಜನರ ಪ್ರೀತಿಗೆ, ಸಂಶೋಧಕರಿಗೆ ಪ್ರಮುಖ ಆಕರವಾಗಿ ಇಂದಿಗೂ ಜೀವಂತಿಕೆಯನ್ನು ಕಾಯ್ದುಕೊಂಡಿದೆ. ಅಂತೆಯೆ ಗದುಗಿನ ತೋಂಟದಾರ್ಯಮಠವು ಪ್ರಸ್ತುತ ಕೃತಿಯನ್ನು ಮರುಮುದ್ರಣ ಮಾಡಿರುವುದು ಕೃತಿಯ ಮೌಲಿಕತೆಗೆ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ಸಂಶೋಧನ ಪ್ರಬಂಧಗಳು ಒಮ್ಮೆ ಪ್ರಕಟವಾದರೆ, ಮತ್ತೊಮ್ಮೆ ಮರುಮುದ್ರಣವಾಗುವ ಸಂಭವ ತುಂಬ ವಿರಳ. ಆದರೆ ಶಿವಾನಂದ ವಿರಕ್ತಮಠ ಅವರು ಇಂದು ನಮ್ಮ ಮಧ್ಯದಲ್ಲಿ ಇರದಿದ್ದರೂ ಅವರ ಈ ಕೃತಿ ಮರುಪ್ರಕಟಣೆಯಾಗಿರುವುದು ಅದರ ಸತ್ವ-ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

- Advertisement -

ಇಂದು ಕರ್ನಾಟಕದ ಬಹುತೇಕ ವಿಶ್ವವಿದ್ಯಾಲಯಗಳಿಗೆ ಸಮರ್ಪಿತವಾಗುತ್ತಿರುವ ಪಿಎಚ್.ಡಿ. ಪ್ರಬಂಧಗಳನ್ನು ಗಮನಿಸಿದರೆ, ಅದರಲ್ಲಿ ನೂರಕ್ಕೆ ತೊಂಬತ್ತರಷ್ಟು ಭಾಗ ತುಂಬ ಕಳಪೆಗುಣಮಟ್ಟದವು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಶೋಧಗಂಗಾ ಎಂಬ ವೆಬ್ಸೈಟ್ನಲ್ಲಿ ಲಕ್ಷಾಂತರ ಪಿಎಚ್.ಡಿ. ಪ್ರಬಂಧಗಳನ್ನು ಸಾದರ ಪಡಿಸಿದ್ದಾರೆ, ಕನ್ನಡ ಪಿಎಚ್.ಡಿ. ಕೃತಿಗಳನ್ನು ಈಗ ಯಾರು ಬೇಕಾದರೂ ನೋಡಬಹುದು. ಅವುಗಳಲ್ಲಿ ತೊಂಬತ್ತು ಭಾಗ ಜೊಳ್ಳೇ ತುಂಬಿಕೊಂಡಿರುವುದು ನಿಜಕ್ಕೂ ವಿಷಾದ ಪಡುವ ಸಂಗತಿಯಾಗಿದೆ. ಐದು ದಶಕಗಳ ಹಿಂದೆ ಡಾ. ಆರ್. ಸಿ. ಹಿರೇಮಠ, ಎಂ. ಎಸ್. ಸುಂಕಾಪುರ ಅವರಂತಹ ಧೀಮಂತ ಕನ್ನಡ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಎಂತೆಂಥ ಮೌಲಿಕ ಮಹಾಪ್ರಬಂಧಗಳು ಹೊರಬಂದವು, ಕನ್ನಡ ಸಾಹಿತ್ಯದ ಕ್ಷಿತಿಜವನ್ನು ವಿಸ್ತಾರಗೊಳಿಸಿದವು ಎಂಬುದನ್ನು ಗಮನಿಸಿದರೆ, ಇಂದಿನ ಕನ್ನಡ ದುಸ್ಥಿತಿ ಬಗ್ಗೆ ಕನಿಕರವುಂಟಾಗುತ್ತದೆ.

ಡಾ. ಶಿವಾನಂದ ವಿರಕ್ತಮಠ ಅವರ ಮಹಾಪ್ರಬಂಧದ ಪರಿಶೀಲನೆಗೂ ಮೊದಲು ಅವರ ವೈಯಕ್ತಿಕ ಜೀವನದ ಕುರಿತು ಒಂದಿಷ್ಟು ಹೇಳಲೇಬೇಕಾದ ಅವಶ್ಯಕತೆ ಇದೆ. ಕನ್ನಡದ ಒಬ್ಬ ಪ್ರಜ್ಞಾವಂತ ಸಂಶೋಧಕರಾಗಿದ್ದ ಡಾ. ಶಿವಾನಂದ ಅವರು ಉತ್ತರಭಾರತದ ಕಾಶಿಯ ಬನಾರಸ ಹಿಂದೂ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ನಾಡಿನಾಚೆಗೂ ಕನ್ನಡ ಕಟ್ಟುವ ಕೆಲಸವನ್ನು ಸದ್ದುಗದ್ದಲವಿಲ್ಲದೆ ಮಾಡಿದವರು. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕನಮಡಿ ಗ್ರಾಮದಲ್ಲಿ ೧-೫-೧೯೪೧ರಂದು ಶಿವಾನಂದರು ಜನಿಸಿದರು. ತಂದೆ ಗುರುಪಾದಯ್ಯ, ತಾಯಿ ರಾಚಮ್ಮ. ಶಿವಾನಂದರು ಅಧ್ಯಯನ ಮಾಡಿದ್ದು ಹೆಚ್ಚಾಗಿ ಕಲಬುರ್ಗಿಯಲ್ಲಿ. ಜೇವರ್ಗಿ ಷಣ್ಮುಖ ಶಿವಯೋಗಿಗಳ ಮಠಕ್ಕೆ ಶಿವಾನಂದರ ಸಹೋದರ ಶಾಂತಲಿಂಗ ಸ್ವಾಮಿಗಳು ಪೀಠಾಧಿಪತಿಯಾಗಿದ್ದರು. ೧೯೬೩ರಲ್ಲಿ ಬಿ.ಎ. ಪದವಿ ಪಡೆಯುವರೆಗೂ ಅವರು ಕಲಬುರ್ಗಿಯಲ್ಲಿದ್ದರು. ೧೯೬೫ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಸಂಪಾದಿಸಿದರು. ಡಾ. ಆರ್. ಸಿ. ಹಿರೇಮಠರ ಮಾರ್ಗದರ್ಶನದಲ್ಲಿ ೧೯೭೧ರಲ್ಲಿ ಪಿಎಚ್.ಡಿ. ಅಧ್ಯಯನವನ್ನು ಪೂರೈಸಿದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಹಾಯಕ ಸಂಶೋಧಕರೆಂದು ವೃತ್ತಿಜೀವನ ಪ್ರಾರಂಭಿಸಿ, ಹುಬ್ಬಳ್ಳಿ ಕಾಡಸಿದ್ಧೇಶ್ವರ, ಗದುಗಿನ ಜೆ.ಟಿ. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ೧೯೭೫ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಪೀಠದಲ್ಲಿ ಅಧ್ಯಾಪಕರಾದರು. ತದನಂತರ ಕಲಬುರ್ಗಿ ಸ್ನಾತಕೋತ್ತರ ಕೇಂದ್ರಕ್ಕೆ ಹೋಗಿ, ಅಲ್ಲಿಂದ ಕಾಶಿ ಬನಾರಸ ಹಿಂದೂ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದರು. ೧೯೮೩ರಿಂದ ೧೯೯೮ರವರೆಗೆ ಕಾಶಿಯಲ್ಲಿದ್ದರು. ೧೯-೮-೧೯೯೮ರಂದು ಕಾಶಿಯಲ್ಲಿಯೇ ಲಿಂಗೈಕ್ಯರಾದರು. ೧೯೬೬ರಲ್ಲಿಯೇ ಸಾಹಿತ್ಯ ಕೃಷಿ ಪ್ರಾರಂಭ ಮಾಡಿದರು. ‘ಸೀಮಾಪುರುಷ ಷಡಕ್ಷರದೇವ’ ಅವರು ಬರೆದ ಮೊದಲ ಕೃತಿ. ಶಾಸನ-ಹಸ್ತಪ್ರತಿಗಳ ಸಂಗ್ರಹ, ಸೂಚಿ ನಿರ್ಮಾಣ ಕಾರ್ಯದಲ್ಲಿ ಹೆಚ್ಚು ಕೆಲಸ ಮಾಡಿದರು. ಹೈದರಾಬಾದ ಕರ್ನಾಟಕದ ಕನ್ನಡ ಶಿಲಾಶಾಸನಗಳು, ಸಗರನಾಡಿನ ಶಿವಶರಣರು, ಅಮಾತ್ಯ ಶಿರೋಮಣಿ ಲಕ್ಕಣ್ಣ ದಂಡೇಶ, ಕನ್ನಡ ಸಾಹಿತ್ಯಕ್ಕೆ ಗದುಗಿನ ಕಾಣಿಕೆ, ವಚನ ಸಾಹಿತ್ಯದಲ್ಲಿ ಸಮಾಜೋಭಾಷಿಕ ಚಿಂತನೆಗಳು, ಉತ್ತರ ಭಾರತದ ಕನ್ನಡ ಹಸ್ತಪ್ರತಿ ಇತರ ದಾಖಲೆಗಳ ಸೂಚಿ ಮೊದಲಾದ ಮಹತ್ವದ ಕೃತಿಗಳನ್ನು ರಚಿಸಿದ್ದರು. ಕೆಲವು ಭಾಷಾವಿಜ್ಞಾನದ ಕೃತಿಗಳನ್ನು ಕನ್ನಡ ಇಂಗ್ಲಿಷ್ ಭಾಷೆಯಲ್ಲಿ ಬರೆದಿದ್ದರು. ಅನೇಕ ಪುರಾಣ ಕಾವ್ಯಗಳನ್ನು ಶಾಸ್ತ್ರಶುದ್ಧವಾಗಿ ಸಂಪಾದಿಸಿ, ವಿಸ್ತೃತವಾದ ಪ್ರಸ್ತಾವನೆಯನ್ನು ಬರೆದು ಪ್ರಕಟಿಸಿದ್ದರು. ಗದುಗಿನ ತೋಂಟದಾರ್ಯಮಠದ ಪ್ರಸಾರಾಂಗ ಪ್ರಾರಂಭವಾದಾಗ ವಿರಕ್ತ ತೋಂಟದಾರ್ಯನ ಕರ್ನಾಟಕ ಶಬ್ದ ಮಂಜರಿ ಸಂಪಾದಿಸಿ ಕೊಟ್ಟಿದ್ದರು. ತೋಂಟದಾರ್ಯಮಠವು ಲಿಂಗಾಯತ ಪುಣ್ಯಪುರುಷ ರತ್ನಮಾಲೆ ಪ್ರಾರಂಭಮಾಡಿದಾಗ, ಈ ಮಾಲೆಗೆ ‘ವಾರದ ಮಲ್ಲಪ್ಪನವರು’ ಕೃತಿ ಬರೆದು ಕೊಟ್ಟಿದ್ದರು. ಜೇವರ್ಗಿ ಷಣ್ಮುಖ ಶಿವಯೋಗಿಗಳ ಮಠಕ್ಕೆ ತಮ್ಮ ಸಹೋದರ ಶಾಂತಲಿಂಗ ಸ್ವಾಮಿಗಳೇ ಪೀಠಾಧಿಪತಿಗಳಾದ ಕಾರಣ, ಷಣ್ಮುಖ ಶಿವಯೋಗಿಗಳ ಅಖಂಡೇಶ್ವರ ವಚನಗಳು, ಅಖಂಡೇಶ್ವರ ವಚನ ಮಂಜರಿ, ಜೇವರ್ಗಿ ಜ್ಯೋತಿ ಮೊದಲಾದ ಮಹತ್ವದ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದರು.

ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ ಕೃತಿಗೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿ ಗೌರವಿಸಿತು. ಆದರೆ ಅವರ ಪ್ರೀತಿಯ ಆಸಕ್ತಿ ಕ್ಷೇತ್ರ ಭಾಷಾಶಾಸ್ತ್ರವಾಗಿದ್ದ ಕಾರಣ, ‘ಗುಲಬರ್ಗಾ ಜಿಲ್ಲೆಯ ಒಕ್ಕಲುತನದ ವೃತ್ತಿ ಪದಗಳು’ ಎಂಬ ವಿಷಯ ಕುರಿತು ಸಂಶೋಧನಾ ಪ್ರಬಂಧ ಬರೆದು, ಡಾ. ಕೆ. ಕುಶಾಲಪ್ಪಗೌಡರ ಮಾರ್ಗದರ್ಶನದಲ್ಲಿ ಮದ್ರಾಸ ವಿಶ್ವವಿದ್ಯಾಲಯದಿಂದ ಮತ್ತೊಂದು ಪಿಎಚ್.ಡಿ. ಪದವಿ ಪಡೆದರು. ಇದು ಅವರ ಅಧ್ಯಯನ ಪ್ರೀತಿಗೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ, ನೇಪಾಳಿ ಭಾಷೆಯನ್ನು ಕಲಿತು, ಬಸವಣ್ಣನವರ ವಚನಗಳನ್ನು ನೇಪಾಳಿ ಭಾಷೆಗೂ ಅನುವಾದಿಸುವ ಕಾರ್ಯ ಮಾಡಿದರು. ಕನ್ನಡವನ್ನು ಉಳಿಸಿ-ಬೆಳೆಸುವ ತವಕದಲ್ಲಿ ತಮ್ಮ ವೈಯಕ್ತಿಕ ಸುಖ ಸಂತೋಷಗಳನ್ನು ಬದಿಗೊತ್ತಿ ದೂರದ ಕಾಶಿಗೆ ಹೋಗಿ ನೆಲೆಸುವ ನಿರ್ಧಾರ ಮಾಡಿದ್ದು, ಅವರ ಅಪ್ರತಿಮ ಕನ್ನಡ ಪ್ರೀತಿ-ಕಾಳಜಿಯನ್ನು ತೋರಿಸುತ್ತದೆ.

- Advertisement -

ಡಾ. ವಿ. ಶಿವಾನಂದ ಅವರು ೧೯೬೯ರಲ್ಲಿ ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ ವಿಷಯ ಕುರಿತು ಸಂಶೋಧನೆಗೆ ತೊಡಗಿದ ಸಂದರ್ಭದಲ್ಲಿ, ಕನ್ನಡದಲ್ಲಿ ಇನ್ನೂ ಆ ಕಾಲದ ಬಹುತೇಕ ಕೃತಿಗಳು ಮುದ್ರಣ ರೂಪ ಕಂಡಿರಲಿಲ್ಲ. ಅನೇಕ ಕೃತಿಗಳು ಹಸ್ತಪ್ರತಿ ರೂಪದಲ್ಲಿದ್ದವು. ಪ್ರೌಢದೇವರಾಯನ ಆಳ್ವಿಕೆಯ ಕಾಲ ೧೪೨೪ರಿಂದ ೧೪೪೬. ಈ ೨೨ ವರುಷಗಳ ಕಾಲಾವಧಿಯಲ್ಲಿ ವಿಜಯನಗರ ಪರಿಸರದಲ್ಲಿ ರಚನೆಗೊಂಡ ಸಾಹಿತ್ಯದ ವಿಹಂಗಮನೋಟವನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ನೂರೊಂದು ವಿರಕ್ತರು, ೧೧ ಜನ ಜೈನ ಕವಿಗಳು, ಕೆಲವು ಬ್ರಾಹ್ಮಣ ಕವಿಗಳು ಒಟ್ಟು ೬೦ಕ್ಕೂ ಹೆಚ್ಚು ಕೃತಿಗಳ ವಿವರಣೆ ಇಲ್ಲಿದೆ. ವಿಜಯ ನಗರದ ಅರಸರಲ್ಲಿ ಕೃಷ್ಣದೇವರಾಯನಿಗಿಂತ ಹೆಚ್ಚು ಪ್ರಭಾವಶಾಲಿಯಾದವನು ಪ್ರೌಢದೇವರಾಯ. ಆತನ ಕನ್ನಡ ಪ್ರೀತಿ ಅನನ್ಯ-ಅಪರೂಪ. ಕೃಷ್ಣದೇವರಾಯ ಕನ್ನಡಕ್ಕೆ ಕೊಟ್ಟ ಕಾಣಿಕೆ ಶೂನ್ಯ. ತನ್ನ ಆಸ್ಥಾನದಲ್ಲಿ ಎಂಟು ಜನ ತೆಲುಗು ಪಂಡಿತರನ್ನೇ ನೇಮಿಸಿಕೊಂಡಿದ್ದ, ತಾನೂ ಕೂಡ ‘ಅಮುಕ್ತಮಾಲ್ಯ’ ಎಂಬ ತೆಲುಗು ಭಾಷೆಯ ಕೃತಿಯನ್ನೇ ರಚಿಸಿದ. ಇದನ್ನೆಲ್ಲ ನೋಡಿದಾಗ ಆತ ತೆಲುಗು ಭಾಷೆಯನ್ನೇ ಪ್ರೀತಿಸಿದ್ದೂ ಸ್ಪಷ್ಟವಾಗಿ, ಕನ್ನಡವನ್ನು ನಿರ್ಲಕ್ಷಿಸಿದ ಎಂಬುದು ಸಾಮಾನ್ಯರ ಅರಿವಿಗೂ ಬರುತ್ತದೆ. ಹಂಪಿಯಲ್ಲಿರುವ ಮೂಲ ದೈವ ವಿರೂಪಾಕ್ಷನನ್ನು ಮರೆತು, ತಿರುಪತಿಗೆ ನಡೆದುಕೊಂಡ. ಇತಿಹಾಸದಲ್ಲಿ ಈತನನ್ನು ಸುಮ್ಮನೆ ವೈಭವೀಕರಣ ಮಾಡುತ್ತ ಬರಲಾಗಿದೆ ಎಂಬುದು ಇದರಿಂದ ಮನದಟ್ಟಾಗುತ್ತದೆ. ಕೃಷ್ಣದೇವರಾಯನ ಈ ತೆಲುಗು ಪ್ರೀತಿ, ಕನ್ನಡ ನಿರ್ಲಕ್ಷ್ಯ ವಿಷಯವಾಗಿ ಡಾ. ಶಿವಾನಂದ ಅವರು ಐದು ದಶಕಗಳ ಹಿಂದೆಯೇ ಈ ಮಹಾಪ್ರಬಂಧದಲ್ಲಿ ಬರೆದಿರುವುದು ಗಮನಿಸಬೇಕಾದ ಸಂಗತಿ. ಇದೇ ಸಂಗತಿಯನ್ನು ಡಾ. ಎಂ. ಎಂ. ಕಲಬುರ್ಗಿ ಅವರು ‘ಕನ್ನಡ ಅರಸರ ಅಕನ್ನಡಪ್ರಜ್ಞೆ’ ಎಂಬ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ. (ಡಾ. ಕಲಬುರ್ಗಿ ಅವರ ಮಾರ್ಗ ಸಂಪುಟದ ಅನೇಕ ಬರಹಗಳ ಹಿಂದೆ ವಿ. ಶಿವಾನಂದ ಅವರ ಈ ಮಹಾಪ್ರಬಂಧದ ಹೊಸವಿಚಾರಗಳ ಛಾಯೆ ಬಹಳಷ್ಟಿದೆ ಎಂಬುದನ್ನು ಗಮನಿಸಬಹುದು) ಹೀಗಾಗಿ ವಿಜಯನಗರ ಇತಿಹಾಸದಲ್ಲಿ ಪ್ರೌಢದೇವರಾಯನಂತಹ ಅರಸ ಮತ್ತಾರೂ ಆಗಲಿಲ್ಲ ಎಂಬುದನ್ನು ವಿದೇಶ ಪ್ರವಾಸಿಗರೂ, ಶಾಸನಗಳು, ಕಾವ್ಯಗಳು ನಮಗೆ ಸಾಕ್ಷಿ ಒದಗಿಸುತ್ತವೆ. ಅಷ್ಟೇ ಅಲ್ಲ, ಅದೃಶ್ಯ ಕವಿ ‘ಪ್ರೌಢದೇವರಾಯ ಕಾವ್ಯ’ ಬರೆದಿರುವುದು ಇನ್ನೂ ವಿಶೇಷ ಸಂಗತಿ. (ಇಂತಹ ಯಾವ ಕನ್ನಡ ಕಾವ್ಯಗಳು ಕೃಷ್ಣದೇವರಾಯನ ಬಗ್ಗೆ ಬಂದಿಲ್ಲ ಎಂಬುದನ್ನೂ ಗಮನಿಸಬೇಕು) ಹೀಗಾಗಿ ವಿಜಯನಗರ ಕಾಲದ ಕನ್ನಡ ಸಾಹಿತ್ಯವೆಂದರೆ, ಪ್ರೌಢದೇವರಾಯನ ಕಾಲದ ಸಾಹಿತ್ಯವನ್ನೇ ಪರಿಗಣಿಸಬೇಕು ಎನ್ನುವಷ್ಟರ ಮಟ್ಟಿಗೆ ಈ ಕಾಲದ ಸಾಹಿತ್ಯದ ಹಾಸು ಬೀಸುಗಳು ವ್ಯಾಪಕವಾಗಿರುವುದನ್ನು ಡಾ. ಶಿವಾನಂದ ಅವರು ಈ ಕೃತಿಯಲ್ಲಿ ಅತ್ಯಂತ ತಲಸ್ಪರ್ಶಿಯಾಗಿ ಕಟ್ಟಿಕೊಟ್ಟಿದ್ದಾರೆ.

ಡಾ. ಶಿವಾನಂದ ಅವರು ಮೂರು ಭಾಗಗಳಲ್ಲಿ ಈ ಕೃತಿಸೌಧವನ್ನು ನಿರ್ಮಿಸಿದ್ದಾರೆ. ಮೊದಲ ಭಾಗ-ಚಾರಿತ್ರಿಕ ಹಿನ್ನೆಲೆ ಭಾಗದಲ್ಲಿ ವಿಜಯನಗರದ ಚಾರಿತ್ರಿಕ ಹಿನ್ನೆಲೆ, ಪ್ರೌಢದೇವರಾಯನ ಮತ ವಿಚಾರ, ವಿಜಯನಗರದ ಇತಿಹಾಸದಲ್ಲಿ ಆತನ ಸ್ಥಾನ, ಆ ಕಾಲದ ಧಾರ್ಮಿಕ ಜೀವನ, ಪ್ರೌಢದೇವರಾಯನ ಕಾಲದ ಸಾಂಸ್ಕೃತಿಕ ಸಂವರ್ಧನೆ, ಶಾಸನ, ಕಾವ್ಯ, ವಿದೇಶಿ ಯಾತ್ರಿಕರ ವರದಿಗಳಲ್ಲಿ ಪ್ರೌಢದೇವರಾಯನ ಕುರಿತು ಬಂದ ಉಲ್ಲೇಖಗಳನ್ನು ದಾಖಲಿಸಿ, ಆತನ ಮಹತ್ವವನ್ನು ವಿಶದೀಕರಿಸುವ ಕಾರ್ಯವನ್ನು ಮಾಡಿದ್ದಾರೆ.

ಬಹಳ ಮುಖ್ಯವಾಗಿ ಗಮನಿಸಬೇಕಾದುದು ಎಂದರೆ, ವಿಜಯನಗರ ಸ್ಥಾಪನೆಗೆ ಆಶೀರ್ವವದಿಸಿದವರು ವಿದ್ಯಾರಣ್ಯರು ಎಂಬ ಅಭಿಪ್ರಾಯವೇ ಹೆಚ್ಚಾಗಿದೆ. ಆದರೆ ಅನೇಕ ದಾಖಲೆಗಳ ಮೂಲಕ ಡಾ. ಶಿವಾನಂದ ಅವರು ಈ ಸಾಮ್ರಾಜ್ಯ ಸ್ಥಾಪನೆಗೆ ಆಶೀರ್ವದಿಸಿದವರು ‘ರಾಜಗುರು ಕ್ರಿಯಾಶಕ್ತಿ ದೇಶಿಕೇಂದ್ರ’ರೆಂಬ ಪಾಶುಪತ ಗುರುಗಳು(ಈ ಪಾಶುಪತ ಮುಂದೆ ಲಿಂಗಾಯತದಲ್ಲಿ ವಿಲೀನವಾಯಿತು) ಎಂಬುದನ್ನು ಸಿದ್ಧಪಡಿಸಿದ್ದಾರೆ.

ಮಹಾಪ್ರಬಂಧದ ಹೃದಯ ಭಾಗ ‘ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ’ ಎಂಬ ಎರಡನೆಯ ಭಾಗ. ಈ ಕಾಲದ ಲಿಂಗಾಯತ ಸಾಹಿತ್ಯ, ಈ ಕಾಲದ ಬ್ರಾಹ್ಮಣ ಸಾಹಿತ್ಯ, ಈ ಕಾಲದ ಜೈನ ಸಾಹಿತ್ಯ, ಈ ಕಾಲದ ಇತರ ಸಾಹಿತ್ಯ ಎಂಬ ವಿಭಾಗದಲ್ಲಿ ಸುದೀರ್ಘವಾಗಿ ಚರ್ಚಿಸಿದ್ದಾರೆ. ಅದರಲ್ಲೂ ಈ ಕಾಲದ ಲಿಂಗಾಯತ ಸಾಹಿತ್ಯ ವಿಭಾಗದಲ್ಲಿ ಮುಖ್ಯವಾಗಿ ನೂರೊಂದು ವಿರಕ್ತರ ವಿಷಯವಾಗಿ ಮೊದಲ ಬಾರಿಗೆ ಇಲ್ಲಿ ತುಂಬ ಗಂಭೀರವಾಗಿ ಚರ್ಚಿಸಿದ್ದಾರೆ. ನೂರೊಂದು ವಿರಕ್ತರು ಯಾರು, ಅವರ ಸಂಖ್ಯಾ ನಿರ್ಣಯ, ಹೆಸರಿನ ಬಗೆಗಿರುವ ಗೊಂದಲಗಳು, ನೂರೊಂದು ವಿರಕ್ತರ ಸಾಹಿತ್ಯ ಸೃಷ್ಟಿ ಕುರಿತು ಅತ್ಯಂತ ಸ್ಪಷ್ಟವಾಗಿ ದಾಖಲೆಗಳನ್ನು ಪರಿಶೀಲಿಸಿ, ಹೊಸ ಹೊಳವುಗಳನ್ನು ಕೊಟ್ಟಿದ್ದಾರೆ. ‘ನೂರೊಂದು ವಿರಕ್ತರು ಇದ್ದರೆಂಬುದು ತ್ರಿಕಾಲ ಸತ್ಯ, ಆದರೆ ಇದು ಅವರ ಅಭಿಧಾನಗಳನ್ನು ಕುರಿತ ಸಮಸ್ಯೆ ಅಷ್ಟೆ’ (ಪು.೯೩) ಎಂದು ಕೊನೆಯಲ್ಲಿ ಹೇಳುವ ಮೂಲಕ ನೂರೊಂದು ವಿರಕ್ತರು ಚಾರಿತ್ರಿಕವಾಗಿ ಇದ್ದರೆಂಬುದನ್ನು ಸಿದ್ಧಪಡಿಸಿದ್ದಾರೆ.

ನೂರೊಂದು ವಿರಕ್ತರಲ್ಲಿ ‘ಗುರುಬಸವ’ ಎಂಬ ವ್ಯಕ್ತಿ ಬರುತ್ತಾನೆ. ಆತ ಏಳು ಕೃತಿಗಳನ್ನು ರಚಿಸಿ, ಸಪ್ತಕಾವ್ಯದ ಗುರುಬಸವ ಎಂಬ ಕೀರ್ತಿಗೆ ಪಾತ್ರನಾದವನು. ಅಷ್ಟೇ ಅಲ್ಲ, ಆತ ತನ್ನ ಬದುಕಿನ ಪೂರ್ವಾರ್ಧದಲ್ಲಿ ಅವಧೂತನೂ, ವೇದಾಂತಿಯೂ ಆಗಿದ್ದ. ಕೊನೆಗೆ ಶರಣನಾಗಿ ಲಿಂಗಾಯತ ಧರ್ಮದ ಮಹಿಮೆಯನ್ನು ಸಾರಿದ. ಇನ್ನೂ ವಿಶೇಷವೆಂದರೆ ಆ ಕಾಲಘಟ್ಟದಲ್ಲಿ ತಮ್ಮ ಮತವೇ ಶ್ರೇಷ್ಠವೆಂಬ ವಿಷಯವಾಗಿ ಅನೇಕ ಧರ್ಮದವರೊಡನೆ ವಾದ-ಸಂವಾದಗಳು ನಡೆಯುತ್ತಿದ್ದವು. ಈ ವಾದದಲ್ಲಿ ಗೆದ್ದವರು ಸೋತವರ ಸ್ವತ್ತಿಗೆ ಹಕ್ಕುದಾರರಾಗುತ್ತಿದ್ದರು. ಈ ಸಪ್ತಕಾವ್ಯದ ಗುರುಬಸವ ಶೃಂಗೇರಿ ಶಾರದಾ ಪೀಠವನ್ನು ವಾದದಲ್ಲಿ ಗೆದ್ದು, ಆ ಶಾರದಾ ಪೀಠವನ್ನು ಆರೋಹಣ ಮಾಡಿ, ಅದರಲ್ಲೂ ವೈರಾಗ್ಯ ತಾಳಿ, ಅದನ್ನು ಮರಳಿ ಶೃಂಗೇರಿ ವೇದಾಂತಿಗಳಿಗೆ ಮರಳಿ ಕೊಟ್ಟು ಬಂದನೆಂದು ವಿರೂಪಾಕ್ಷ ಪಂಡಿತ ತನ್ನ ಚನ್ನಬಸವ ಪುರಾಣದಲ್ಲಿ ಹೇಳುತ್ತಾನೆ. ಈ ವಿಷಯ ಕುರಿತು ಲಿಂಗಾಯತರು ಹೆಮ್ಮೆ ಪಡಬೇಕು. ಅದ್ವೈತಮಠವೊಂದರ ಶ್ರೇಷ್ಠ ಪೀಠವೊಂದನ್ನು ಲಿಂಗಾಯತನೊಬ್ಬ ಏರಿದ ಘಟನೆ ನಿಜಕ್ಕೂ ಅಭಿಮಾನ ಪಡುವ ಸಂಗತಿ. ಈ ವಿಷಯ ಕುರಿತು ಡಾ. ಶಿವಾನಂದರ ಮಾತುಗಳಲ್ಲಿಯೇ ಕೇಳಬೇಕು.

“ಶೃಂಗೇರಿ ಪೀಠವು ಅಂದು ಅದ್ವೆöÊತ ಮತ ಪ್ರಸಾರ ಕೇಂದ್ರವಾಗಿತ್ತು. ಗುರುಬಸವನ ಕಾಲಕ್ಕೆ ಅಲ್ಲಿ ಅನೇಕ ಪಂಡಿತರು ಅದ್ವೈತ ತತ್ವಗಳನ್ನು ಚರ್ಚಿಸುತ್ತಿದ್ದರೆಂದು ಕಾಣುತ್ತದೆ. ತನ್ನ ಕಾವ್ಯಗಳಲ್ಲಿ ಅದ್ವೆöÊತ ತತ್ವದ ಸುರಿಮಳೆಗರೆದ ಗುರುಬಸವ ಅಂದಿನ ಪ್ರಕಾಂಡ ಪಂಡಿತರನ್ನು ಸೋಲಿಸಿ ಪೀಠಾರೋಹಣ ಮಾಡಿ ಅದ್ವೈತಾಚಾರ್ಯ ಪ್ರಶಸ್ತಿಗೆ ಕಾರಣವಾಗಿರಬೇಕು. ವಿರೂಪಾಕ್ಷ ಪಂಡಿತನು ‘ಶಾರದೆಯ ಪೀಠವನ್ನೇರಿ ಮರಳಿ ಬಂದು ಪ್ರೌಢನರಮನೆಯಲ್ಲಿದ್ದ ಯೋಗಿಯನ್ನು ಸೋಲಿಸಿದನೆಂದು’ ಸ್ಪಷ್ಟವಾಗಿ ಹೇಳಿರವುದರಿಂದ, ಈ ಪೀಠವು ನಾರಾಯಣ ಶಾಸ್ತ್ರಿಗಳು ಹೇಳುವಂತೆ ಹಂಪೆಯಲ್ಲಿರದೆ ಶೃಂಗೇರಿಯದೇ ಆಗಿರಬೇಕು. ಅಲ್ಲಿಂದ ಅವನು ‘ಮರಳಿ’ ಬಂದಿರಬೇಕು. ಗುರುಬಸವನ ಓಲಗವು ಸಕಲ ವೇದಾಂತಿಗಳ ಬೀಡಾಗಿತ್ತೆಂದು ಹೇಳುವುದರಿಂದ ವೇದಾಂತಕ್ಕೆ ಒಲಿದ ಗುರುಬಸವ ಅದ್ವೈತ ಸಿದ್ಧಾಂತದ ಶ್ರೀರೋಹಣ ಗಿರಿಯಾದ ಶೃಂಗೇರಿಯ ಶಾರದಾಪೀಠವನ್ನೇ ಏರಿರುವುದು ಖಂಡಿತ. ಅದು ಲಿಂಗಾಯತ ಯೋಗಿಗಳ ಅಂದಿನ ವಿದ್ಯೆ, ಅನುಭಾವ, ಪ್ರಭಾವಗಳ ಪ್ರತೀಕ.” (ಪು. ೧೩೭)

ಗುರುಬಸವನಂತಹ ಸಾಧಕರು ತಮ್ಮ ಸಾಧನೆಯಿಂದ ಲಿಂಗಾಯತದ ಹಿರಿಮೆ ಗರಿಮೆಗಳನ್ನು ಎತ್ತರೆತ್ತರಕ್ಕೆ ಬೆಳೆಸಿದರೆಂಬ ಸಂಗತಿಯನ್ನು ಮೊದಲ ಬಾರಿಗೆ ಡಾ. ಶಿವಾನಂದ ಅವರು ಅನೇಕ ಆಧಾರಗಳಿಂದ ಸಿದ್ಧಪಡಿಸಿ ತೋರಿಸಿರುವುದು ಅವರ ಸಂಶೋಧನಾ ವಿಚಕ್ಷಣತೆಗೆ ಸಾಕ್ಷಿಯಾಗಿದೆ. ಡಾ. ಶಿವಾನಂದ ಅವರ ಸಂಶೋಧನಾ ಜಾಣ್ಮೆಗೆ ಮತ್ತೊಂದು ನಿದರ್ಶನವನ್ನು ಹೇಳುವುದಾದರೆ, ೧೯೬೬ರಲ್ಲಿ ಶಿವರಾಮ ಕಾರಂತರು ಬತ್ತಲೇಶ್ವರ ಕವಿಯ ‘ಕೌಶಿಕ ರಾಮಾಯಣ’ ಎಂಬ ಕೃತಿಯನ್ನು ಸಂಪಾದಿಸಿ ಪ್ರಕಟಿಸಿದ್ದರು. ಬತ್ತಲೇಶ್ವರ ಒಬ್ಬ ಲಿಂಗಾಯತ ಕವಿ. ಅಷ್ಟೇ ಅಲ್ಲ ನೂರೊಂದು ವಿರಕ್ತರಲ್ಲಿ ಒಬ್ಬ. ಹೀಗಿದ್ದೂ ಕಾರಂತರು ವಿತಂಡವಾದ ಮಾಡಿ, ಇದು ಲಿಂಗಾಯತ ಕವಿಕೃತವಲ್ಲವೆಂದು ವಾದಿಸಿದ್ದರು. ಈ ವಿಷಯವಾಗಿ ಡಾ. ಶಿವಾನಂದ ಅವರು ಅನೇಕ ಸೂಕ್ಷ್ಮಾತಿಸೂಕ್ಷ್ಮ ಆಧಾರಗಳನ್ನು ಒದಗಿಸಿ ಕಾರಂತರ ವಿಚಾರಗಳು ಸಂಶೋಧನೆಯ ಕಲ್ಪಕತೆಗೆ ನಿದರ್ಶನವೆಂದು ತೋರಿಸಿಕೊಟ್ಟಿದ್ದಾರೆ. ಕತೆ-ಕಾದಂಬರಿಯAತಹ ಸೃಜನಶೀಲ ಕೃತಿ ಬರೆಯುವ ಕಾರಂತರು ಗ್ರಂಥಸAಪಾದನಾ ತಳಬುಡ ಗೊತ್ತಿಲ್ಲದೆ, ಈ ಕೃತಿಯನ್ನು ಸಂಪಾದಿಸಿ, ಕವಿಕಾವ್ಯ ಜೀವನ ಮತ ವಿಚಾರವಾಗಿ ಅಸಂಬದ್ಧವಾಗಿ ಆಧಾರವಿಲ್ಲದೆ ಏನೇನೋ ಬರೆದಿದ್ದರು. ಕಾರಂತರ ಗ್ರಂಥಸAಪಾದನ ವಿಷಯ ಕುರಿತಾದ ಅಜ್ಞಾನವನ್ನು ಡಾ. ಶಿವಾನಂದ ಅವರು ಎತ್ತಿ ತೋರಿಸಿದ್ದಾರೆ. ಸಂಶೋಧನೆಯೇ ಬೇರೆ, ಸೃಜನಶೀಲ ಕೃತಿ ರಚನೆಯೇ ಬೇರೆ ಎಂಬುದನ್ನು ಡಾ. ಶಿವಾನಂದ ಅವರು ತೋರಿಸಿಕೊಟ್ಟ ಪರಿಣಾಮವೋ ಏನೋ ಮುಂದೆ ಎಂದೂ ಕಾರಂತರು ಮಧ್ಯಕಾಲೀನ ಯಾವ ಗ್ರಂಥವನ್ನು ಸಂಪಾದನೆ ಮಾಡಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

ಏಕೋತ್ತರ ಶತಸ್ಥಲ ಕೃತಿಗಳ ವಿಷಯವಾಗಿ ತುಂಬ ಸುದೀರ್ಘವಾಗಿ ಚರ್ಚಿಸಿದ್ದಾರೆ. ಮಹಾಲಿಂಗದೇವ, ಜಕ್ಕಣ್ಣಾರ್ಯ ಮೊದಲಾದವರು ಈ ಏಕೋತ್ತರ ಶತಸ್ಥಲ ಕೃತಿಗಳನ್ನು ರಚಿಸಿದ್ದಾರೆ. ಏಕೋತ್ತರ ಶತಸ್ಥಲ ಮತ್ತು ಸಿದ್ಧಾಂತ ಶಿಖಾಮಣಿ ಕುರಿತು ಎಂಟು ಅಮೂಲ್ಯವಾದ ನಿರ್ಣಯಗಳನ್ನು ಡಾ. ಶಿವಾನಂದ ಅವರು ನೀಡಿ, ಸಿದ್ಧಾಂತ ಶಿಖಾಮಣಿಗಿಂತಲೂ ಏಕೋತ್ತರ ಶತಸ್ಥಲ ಗುಣಮಟ್ಟದಲ್ಲಿ ಎಷ್ಟು ಎತ್ತರವಾಗಿದೆ ಎಂಬುದರತ್ತ ನಮ್ಮ ಗಮನ ಸೆಳೆಯುತ್ತಾರೆ. ಹೀಗಿದ್ದೂ ಕೆಲವು ನೂನ್ಯತೆಗಳು ಇದರಲ್ಲಿ ನುಸುಳಿವೆ. ಐದು ದಶಕಗಳ ಹಿಂದೆ ಇನ್ನೂ ಅನೇಕ ಕೃತಿಗಳು ಮುದ್ರಣಗೊಳ್ಳದ ಕಾರಣವಾಗಿ, ಕೆಲವು ಅಭಿಪ್ರಾಯಗಳನ್ನು ಹೇಳುವಲ್ಲಿ ಡಾ. ಶಿವಾನಂದ ಅವರು ಅಲ್ಲಲ್ಲಿ ಸೋತಿರುವುದು ಕಂಡು ಬರುತ್ತದೆ. ಉದಾ: ‘ಸಿದ್ಧಾಂತ ಶಿಖಾಮಣಿಯ ಮಾದರಿಯಲ್ಲಿ ಕನ್ನಡ ಏಕೋತ್ತರ ಶತಸ್ಥಲ ರಚಿತವಾಗಿದೆ’(ಪು. ೨೧೪) ಎಂಬ ಅವರ ಅಭಿಪ್ರಾಯ ಇಂದು ಬಿದ್ದು ಹೋಗಿದೆ. ಇಮ್ಮಡಿ ಶಿವಬಸವ ಸ್ವಾಮಿಗಳು ‘ಸಿದ್ಧಾಂತ ಶಿಖಾಮಣಿ ಶ್ರೀಕರ ಭಾಷ್ಯ : ನಿಜದ ನಿಲುವು’ ಎಂಬ ಸಂಶೋಧನಾತ್ಮಕ ಕೃತಿಯ ಮೂಲಕ ನೂರೊಂದು ಸ್ಥಲಗಳಿಗೆ ಮೂಲ ವಚನಗಳೇ ಎಂಬುದನ್ನು ಸಿದ್ಧಪಡಿಸಿ, ಸಿದ್ಧಾಂತ ಶಿಖಾಮಣಿಯು ೩೫೮ ಬೇರೆ ಬೇರೆ ಸಂಸ್ಕೃತ ಕೃತಿಗಳಿಂದ ಆಯ್ದ ಒಂದು ಸಂಪಾದನಾ ಕೃತಿಯೆಂದು ಸಾಬೀತುಪಡಿಸಿದ್ದಾರೆ. ಏಕೋತ್ತರ ಶತಸ್ಥಲಗಳ ತೌಲನಿಕ ಅಧ್ಯಯನ ಮಾಡಿದ ಡಾ. ಶಿವಾನಂದ ಅವರು ಕೂಡ ನೂರೊಂದು ಸ್ಥಲಗಳ ಪರಿಕಲ್ಪನೆಯು ವಚನಗಳ ಮೂಲದಿಂದಲೇ ಹುಟ್ಟಿರುವುದು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಭಾಷಾಶಾಸ್ತçವನ್ನು ಅಧ್ಯಯನ ಮಾಡಿದ ಕಾರಣವಾಗಿ, ಕೆಲವು ಕೃತಿಗಳ ಭಾಷಿಕ ವಿವೇಚನೆ ಮಾಡಿದ್ದಾರೆ. ಇದು ಈ ಮಹಾಪ್ರಬಂಧದ ಚೌಕಟ್ಟಿಗೆ ಹೊರತಾದ ವಿಷಯವೆಂದು ನನ್ನ ಭಾವನೆ.

ಕೃತಿಗಳ ಮೌಲ್ಯಮಾಪನ ಮಾಡುವುದರಲ್ಲಿಯೂ ಡಾ. ಶಿವಾನಂದ ಅವರು ಸಮತೂಕದ ಸಮಚಿತ್ತದ ನಿಲುವು ತಾಳಿದ್ದಾರೆ. ವಸ್ತುನಿಷ್ಠವಾಗಿ ಕೃತಿಗಳ ತೌಲನಿಕ ಚಿಂತನೆಯ ಮೂಲಕ, ಅವುಗಳ ಸತ್ವ ಸಾಮರ್ಥ್ಯವನ್ನು ಒರೆಗಲ್ಲಿಗೆ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಉದಾ: ಕಲ್ಲುಮಠದ ಪ್ರಭುದೇವನ ಟೀಕಿನ ವಚನಗಳಿಗಿಂತ, ಬಂಕನಾಥನ ಟೀಕಿನ ವಚನಗಳು ಹೆಚ್ಚು ಸಶಾಸ್ತ್ರಿಯವಾಗಿವೆ ಎಂಬುದನ್ನು ತಿಳಿಸಿದ್ದಾರೆ. “ಉಕ್ಕಿನ ಕಡಲೆಗಳಾದ ಪ್ರಭುದೇವನ ವಚನಗಳಿಗೂ ಸಹ ಕುಮಾರ ಬಂಕನಾಥ ಟೀಕೆ ಬರೆದುದು ಅವನ ವೈಚಾರಿಕತೆ, ಶಾಸ್ತçನಿಪುಣತೆ, ವಿದ್ಯೆ, ಅನುಭವಗಳ ಮೇಲ್ಮೆಗೆ ಪ್ರತೀಕವಾಗಿದೆ. ಪ್ರಭುದೇವರ ವಚನಗಳ ಕ್ಲಿಷ್ಟತೆ ಇವನ ವ್ಯಾಖ್ಯಾನದಿಂದ ಪರಿಹಾರವಾಗಿದೆ. ಕುಮಾರ ಬಂಕನಾಥನ ವ್ಯಾಖ್ಯಾನ ಕೃತಿಗೆ ಉನ್ನತ ಸ್ಥಾನ ದೊರೆಯುತ್ತದೆ” (ಪು. ೨೪೭) ಎಂದು ಕೃತಿಗಳ ಗುಣಮಟ್ಟವನ್ನು ಕುರಿತ ಸ್ಪಷ್ಟ ನಿಲುವು ತಾಳಿದ್ದಾರೆ.

‘ಲಿಂಗಲೀಲಾ ವಿಲಾಸ ಚಾರಿತ್ರ’ ಕೃತಿಯಲ್ಲಿಯ ವಚನಗಳ ಸಂಖ್ಯಾನಿರ್ಣಯದಲ್ಲಿ ಡಾ. ಶಿವಾನಂದ ಅವರು ತೋರಿದ ವಿಶ್ಲೇಷಣಾ ಜಾಣ್ಮೆ ಮೆಚ್ಚುವಂತಹದು. ಪ್ರಾಯಶಃ ಗುಮ್ಮಳಾಪುರದ ಸಿದ್ಧಲಿಂಗನ ಶೂನ್ಯಸಂಪಾದನೆ ಪೂರ್ವದಲ್ಲಿಯೇ ಪ್ರಭುದೇವನ ಈ ಕೃತಿ ರಚನೆಗೊಂಡಿದೆ. ಸಿದ್ಧರಾಮನ ಲಿಂಗದೀಕ್ಷಾ ಪ್ರಸಂಗವನ್ನು ಮೊದಲು ಪ್ರಸ್ತಾಪ ಮಾಡಿದವನು ಕಲ್ಲುಮಠದ ಪ್ರಭುದೇವ. ಈ ಸಂಗತಿಯನ್ನೇ ಮುಂದಿನ ಶೂನ್ಯಸಂಪಾದನಾಕಾರರು ಯಥಾವತ್ತಾಗಿ ಪ್ರತಿಪಾದಿಸಿದರು ಎಂಬುದನ್ನು ಅನೇಕ ಆಧಾರಗಳಿಂದ ಖಚಿತಪಡಿಸಿದ್ದಾರೆ. ಡಿ.ಎಲ್.ಎನ್. ಆದಿಯಾಗಿ ಅನೇಕ ವಿದ್ವಾಂಸರು ಸಿದ್ಧರಾಮನ ಲಿಂಗದೀಕ್ಷಾ ಪ್ರಸಂಗ ಶೂನ್ಯಸಂಪಾದನೆಕಾರರು ಸೃಷ್ಟಿ ಎಂದು ಭಾವಿಸಿದ್ದರು. ಆದರೆ ಡಾ. ಶಿವಾನಂದ ಅವರ ಈ ಸಂಶೋಧನೆ ಮೂಲಕ ಸಿದ್ಧರಾಮನ ಲಿಂಗದೀಕ್ಷಾ ಪ್ರಸಂಗ ಶೂನ್ಯಸಂಪಾದನಾಕಾರರಿಗಿಂತ ಮೊದಲೆ ಪ್ರಸ್ತಾಪವಾಗಿರುವುದನ್ನು ತೋರಿಸಿಕೊಟ್ಟಿದ್ದಾರೆ.

ನೂರೊಂದು ವಿರಕ್ತರಲ್ಲಿ ಪ್ರಮುಖರಾದ ಕರಸ್ಥಲ ವೀರಣ್ಣೊಡೆಯರು ಮೊದಲುಗೊಂಡು ನಾಗಿದೇವ, ಗುರುಬಸವ, ಬತ್ತಲೇಶ್ವರ, ನಿವಾರ್ಣ ಬೋಳೇಶ, ಲಕ್ಕಣ್ಣ ದಂಡೇಶ, ಅದೃಶ್ಯ ಕವಿ, ಮಾಯಿದೇವ, ಶ್ರೀಗಿರೀಂದ್ರ, ಚಾಮರಸ ಮೊದಲಾದ ಲಿಂಗಾಯತ ಕವಿಗಳ ಕೃತಿಗಳನ್ನು ಆಮೂಲಾಗ್ರವಾಗಿ ಪರಿಶೀಲಿಸಿದ್ದಾರೆ. ವಚನ ಸಂಕಲನಗಳ ವಿಷಯದಲ್ಲಿ ಆಳವಾದ ಅಧ್ಯಯನ ಮಾಡಿದ್ದಾರೆ. ಇವರು ಸಂಶೋಧನೆ ಮಾಡುವ ಕಾಲಕ್ಕೆ ಅನೇಕ ಸಂಕಲನಗಳು ಇನ್ನೂ ಪ್ರಕಟವಾಗಿರಲಿಲ್ಲ, ಅದರಲ್ಲೂ ಮಾಯಿದೇವನ ಪ್ರಭುಗೀತಾ ಕುರಿತು ಇವರಿಗೆ ಹೆಚ್ಚಿನ ಮಾಹಿತಿ ದೊರೆಯದೆ ಕಾರಣ, ಸಿಕ್ಕಷ್ಟು ಮಾಹಿತಿ ಬರೆದಿದ್ದಾರೆ. ಆದರೆ ಈ ಕೃತಿಯನ್ನು ಸಿ. ಮಹಾದೇವಪ್ಪನವರು ಸಂಪಾದಿಸಿ ಪ್ರಕಟಿಸಿದರು. ಹೀಗೆ ಶಿವಾನಂದರ ಈ ಮಹಾಪ್ರಬಂಧ ಪ್ರಕಟವಾದ ತರುವಾಯ ಗದುಗಿನ ತೋಂಟದಾರ್ಯಮಠದಿAದ ಅನೇಕ ವಚನ ಸಂಕಲನಗಳು ಪ್ರಕಟವಾದವು ಎಂಬುದು ಗಮನಿಸುವ ಅಂಶ. ಹೀಗಾಗಿ ಪ್ರಕಟಿತ ಸಾಹಿತ್ಯವನ್ನೇ ಹೆಚ್ಚು ಆಳವಾದ ಅಧ್ಯಯನದ ಕಕ್ಷೆಗೆ ಒಳಗು ಮಾಡಿಕೊಂಡು ತಮ್ಮ ಮಹಾಪ್ರಬಂಧವನ್ನು ವಿಸ್ತರಿಸುವ ಪ್ರಯತ್ನ ಮಾಡಿದ್ದಾರೆ. ಅದರಲ್ಲೂ ಚಾಮರಸನ ಪ್ರಭುಲಿಂಗಲೀಲೆ ಕುರಿತಾದ ಅವರ ವಿಚಾರಗಳು ನಿತ್ಯನೂತನವಾಗಿವೆ. ಪ್ರೌಢದೇವರಾಯನ ಕಾಲದ ೨೨ ವರುಷಗಳ ಈ ಅವಧಿಯನ್ನು ‘ವಚನ ಸಾಹಿತ್ಯದ ಪುನರುತ್ಥಾನದ ಯುಗ’ವೆಂದು ಡಾ. ಶಿವಾನಂದ ಅವರು ಕರೆದಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ.

ಕೃತಿಯ ಮೂರನೆಯ ಅಧ್ಯಾಯದಲ್ಲಿ ಪ್ರೌಢದೇವರಾಯನ ಕಾಲದ ಸಾಹಿತ್ಯದ ಸ್ವರೂಪ ಮತ್ತು ಸಾಹಿತ್ಯದ ವೈಲಕ್ಷಣಗಳನ್ನು ಕುರಿತು ಹೇಳುವುದರ ಜೊತೆಗೆ, ಕೆಲವು ಗುಣದೋಷಗಳನ್ನೂ ಮುಕ್ತವಾಗಿ ಹೇಳಿಕೊಂಡಿರುವುದು ಡಾ. ಶಿವಾನಂದ ಅವರ ಗುಣಗ್ರಾಹಕತ್ವಕ್ಕೆ ಸಾಕ್ಷಿಯಾಗಿದೆ. ಕುಮಾರವ್ಯಾಸನ ಕಾಲ ವಿಚಾರವಾಗಿ ಸುದೀರ್ಘವಾಗಿ ಚರ್ಚಿಸಿ, ಕುಮಾರವ್ಯಾಸ ಪ್ರೌಢದೇವರಾಯನಿಗಿಂತ ಐವತ್ತುವರ್ಷ ಚಿಕ್ಕವನು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ಕುಮಾರವ್ಯಾಸನ ಕೃತಿ ಪರಿಶೀಲನೆಗೆ ಇಲ್ಲಿ ಹೋಗಿಲ್ಲ. ಐದು ದಶಕಗಳ ಹಿಂದೆ ಯಾವುದೇ ತಂತ್ರಜ್ಞಾನದ ಸಹಾಯವಿಲ್ಲದೆ, ಆಕರ ಗ್ರಂಥಗಳ ಕೊರತೆ ಇದ್ದರೂ, ನಾಡಿನ ತುಂಬ ಕ್ಷೇತ್ರಕಾರ್ಯ ಮಾಡಿ, ವಿದ್ವಜ್ಜನರನ್ನು ಭೇಟಿಮಾಡಿ, ಹಸ್ತಪ್ರತಿಗಳನ್ನು ಸಂಗ್ರಹಿಸಿ, ಹಸ್ತಪ್ರತಿಗಳ ಸಹಾಯದಿಂದ ಮೂಲ ಕೃತಿಗಳನ್ನು ಅವಲೋಕಿಸಿ ಬರೆದಿರುವುದು ಡಾ. ಶಿವಾನಂದ ಅವರ ತಾಳ್ಮೆ-ಸಹನೆ-ಸೂಕ್ಷ್ಮತೆಗಳ ಅರಿವು ನಮಗಾಗುತ್ತದೆ.

ನಿರಂತರ ಅಧ್ಯಯನಶೀಲರಾಗಿದ್ದ ಡಾ. ಶಿವಾನಂದರು ತಮ್ಮ ಪಿಎಚ್.ಡಿ. ಮಹಾಪ್ರಬಂಧ ಪ್ರಕಟವಾದ ನಂತರವೂ ಈ ವಿಷಯದ ಕುರಿತು ಅಧ್ಯಯನವನ್ನು ಮುಂದುವರಿಸಿದ್ದರು. ಪ್ರೌಢದೇವರಾಯನ ಕಾಲಘಟ್ಟವನ್ನು ೧೪೦೧ರಿಂದ ೧೫೦೦ರವರೆಗೆ ಗುರುತಿಸಿ, ‘ಶತಮಾನ ಕನ್ನಡ ಸಾಹಿತ್ಯ ಚರಿತ್ರೆ’ ಎಂಬ ಕೃತಿಯನ್ನು ಬರೆದು, ೧೯೭೬ರಲ್ಲಿ ಪ್ರಕಟಿಸಿದರು. ಈ ಕೃತಿ ಅವರ ಮಹಾಪ್ರಬಂಧದ ಮುಂದುವರಿದ ಭಾಗವಾಗಿದೆ.

೧೦ ಮೇ ೨೦೨೪ರಂದು ಗದಗಿನ ಜಗದ್ಗುರು ತೋಂಟದಾರ್ಯಮಠದಲ್ಲಿ ಬಸವ ಜಯಂತಿ ನಿಮಿತ್ಯ ಈ ಕೃತಿ ಲೋಕಾರ್ಪಣೆಯಾಯಿತು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಪರಮಶಿವಮೂರ್ತಿ ಅವರ ಅಧ್ಯಕ್ಷತೆಯಲ್ಲಿ, ಡಾ. ಕೆ. ರವೀಂದ್ರನಾಥ ಈ ಕೃತಿಯನ್ನು ಬಿಡುಗಡೆ ಮಾಡಿದರು. ಕೃತಿಯ ಔಚಿತ್ಯ ಕುರಿತು ಡಾ. ರವೀಂದ್ರನಾಥ ಅವರು ಮಾತನಾಡುತ್ತ- “ವಚನ ಸಾಹಿತ್ಯ ಸಂಕಲನಗೊಂಡು ಕೇವಲ ಸಂಕಲನವೆAದರೆ ಕೂಡಿ ಹಾಕುವುದಲ್ಲ. ವಚನ ಸಾಹಿತ್ಯವನ್ನು ತಾತ್ವಿಕ ತಳಹದಿಯ ಮೇಲೆ ನಿರೂಪಿಸಿದ ಕಾಲ. ಷಟಸ್ಥಳಗಳ ಹಿನ್ನೆಲೆಯಲ್ಲಿ ಅಷ್ಟಾವರಣಗಳ ಹಿನ್ನೆಲೆಯಲ್ಲಿ ಟೀಕು ವ್ಯಾಖ್ಯಾನ ಭಾವಾರ್ಥ ನಡು ನಡುವೆ ಸ್ವರವಚನಗಳ ಜೋಡಣೆ ಮುಖ್ಯವಾಗಿ ಚಂದ್ರಶೇಖರ ಕವಿ, ಶಿವಾನುಭವಿಗಳಾದ ಕಲ್ಲುಮಠದ ಪ್ರಭುದೇವರು ವಿರುಪಾಕ್ಷ ಪಂಡಿತ ಗುಬ್ಬಿ ಮಲ್ಲಣಾರ್ಯ ಮುಂತಾದವರ ಚರಿತ್ರೆಯನ್ನು ಅವರ ಸಾಹಿತ್ಯ ಸ್ವರೂಪವನ್ನು ಯಾವುದೇ ಆತರಗಳ ಪ್ರಖರತೆ ಇಲ್ಲದ ಸಂದರ್ಭದಲ್ಲಿ ವಿದ್ಯುತ್ ಪೂರ್ಣವಾಗಿ ಸಿದ್ಧಪಡಿಸಿದ ಡಾ. ಶಿವಾನಂದ ಅವರ ವಿದ್ವತ್ತು ಅದಕ್ಕೆ ಮಾರ್ಗದರ್ಶನ ಮಾಡಿದ ಆರ್.ಸಿ. ಹಿರೇಮಠರ ಅಧ್ಯಯನದ ದೂರ ದೃಷ್ಟಿ ಇವೆಲ್ಲವೂ ಕೂಡ ಬಹುಕಾಲ ಇತಿಹಾಸದಲ್ಲಿ ಉಳಿಯುವಂತವು. ಇಂತಹ ಬಹುಶ್ರುತ ವಿದ್ವಾಂಸರು ೧೯೯೬ರಲ್ಲಿ ನಾನು ‘ಮಠಗಳು ಮತ್ತು ಕನ್ನಡ ಸಾಹಿತ್ಯ’ ಎಂಬ ವಿಷಯ ಕುರಿತು ಪಿಎಚ್.ಡಿ. ಪ್ರಬಂಧ ಬರೆದಾಗ, ಪದವಿಗೆ ಯೋಗ್ಯವೆಂದು ಡಾ. ಶಿವಾನಂದ ಅವರು ಶಿಫಾರಸ್ಸು ಮಾಡಿದ್ದರು. ಇಂತಹ ವಿದ್ವತ್ ಪ್ರತಿಭಾ ಸಂಪನ್ನರ ಈ ಕೃತಿಯನ್ನು ಲೋಕಾರ್ಪಣೆ ಮಾಡುವ ಭಾಗ್ಯ ನನಗೆ ದೊರೆಕಿರುವುದು ಸಂತಸ” ಎಂದು ಮನದುಂಬಿ ಹೇಳಿದರು.

ಕನ್ನಡ ಸಾಹಿತ್ಯ ಚರಿತ್ರೆಗೆ ಅತ್ಯಪೂರ್ವ ಕಾಣಿಕೆ ಸಲ್ಲಿಸಿದ ಧೀಮಂತ ಸಂಶೋಧಕನೊಬ್ಬ ನೇಪಥ್ಯಕ್ಕೆ ಸರಿದುಹೋಗುತ್ತಿದ್ದ ಈ ಸಂಧಿಕಾಲದಲ್ಲಿ ಈ ಕೃತಿಯನ್ನು ಮರುಮುದ್ರಣ ಮಾಡುವ ಮೂಲಕ, ಶಿವಾನಂದರ ಸಾಹಿತ್ಯದ ಮೇಲ್ಮೆಯನ್ನು ಈ ಪೀಳಿಗೆಗೂ ಪರಿಚಯಿಸುವ ಕಾರ್ಯ ಮಾಡಿದ ತೋಂಟದಾರ್ಯಮಠದ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಅವರಿಗೆ ಶರಣು-ಶರಣಾರ್ಥಿಗಳು.

ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ತಲೆಬಾಗು ಗುರುಗಳಿಗೆ ಗಣ್ಯರಿಗೆ ಮಾನ್ಯರಿಗೆ ಶಿರಬಾಗು ಹಿರಿಯರಿಗೆ ಹೆತ್ತವರಿಗೆ ಶರಣಾಗು ಸಂಪೂರ್ಣ ಮದವಳಿದು ದೈವಕ್ಕೆ ಬಾಗಿದವ ಬಾಳುವನು - ಎಮ್ಮೆತಮ್ಮ ಶಬ್ಧಾರ್ಥ ಗಣ್ಯರು = ಗಣನೀಯವಾದವರು ಮಾನ್ಯರು = ಮನ್ನಣೆಗೆ ಪಾತ್ರರಾದವರು ತಾತ್ಪರ್ಯ ಗುರುಗಳಲ್ಲಿ‌ ಗಣ್ಯರಲ್ಲಿ‌ ಮಾನ್ಯರಲ್ಲಿ‌‌...
- Advertisement -

More Articles Like This

- Advertisement -
close
error: Content is protected !!
Join WhatsApp Group