ಮೂಡಲಗಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಡಿ.22ರಂದು 25 ಲಕ್ಷ ಜನರನ್ನು ಸೇರಿಸಿ ಬೆಳಗಾವಿಯ ಸುವರ್ಣ ವಿಧಾನ ಸೌಧದ ಮುಂದೆ ಪ್ರತಿಭಟನೆ ಮಾಡುವ ಹಿನ್ನೆಲೆ ನಮ್ಮ ರೊಟ್ಟಿ ನಮ್ಮ ಹಾಸಿಗೆ ಎಂಬ ಉದ್ದೇಶದಿಂದ ರೊಟ್ಟಿ ಸಂಗ್ರಹ ಮಾಡಲಾಗುತ್ತಿದೆ ಎಂದು ಪಂಚಮಸಾಲಿ ರಾಜ್ಯ ಸೈನಿಕ ಘಟಕದ ಅಧ್ಯಕ್ಷ ಬಾಳೇಶ ಶಿವಾಪೂರ ಹೇಳಿದರು.
ರವಿವಾರದಂದು ತಾಲೂಕಿನ ಹಳ್ಳೂರ ಗ್ರಾಮದ ಪಂಚಮಸಾಲಿ ದೈವದ ಮನೆಗೆ ಗ್ರಾಮದ ವಿವಿಧ ಭಾಗಗಳಿಂದ ರೊಟ್ಟಿ ಬುತ್ತಿ ಹೊತ್ತ ಬಂದ ಮಹಿಳೆಯರ ರೊಟ್ಟಿಗಳನ್ನು ಸಂಗ್ರಹಿಸುವ ವೇಳೆ ಮಾತನಾಡಿದ ಅವರು, ಸುವರ್ಣ ವಿಧಾನ ಸೌಧದ ಮುಂದೆ ಪ್ರತಿಭಟನೆ ಮಾಡುವುದು ಅನಿವಾರ್ಯ ಹಾಗೂ ಹೋರಾಟಕ್ಕೆ ಬರುವ ಪಂಚಮಸಾಲಿಗಳಿಗೆ ಊಟದ ವ್ಯವಸ್ಥೆಯ ಸಲುವಾಗಿ ಪ್ರತಿ ಮನೆಗಳಿಂದ 21 ರೊಟ್ಟಿ, ಚಟ್ನಿಯನ್ನು ಸಂಗ್ರಹಿಸಲಾಗುತ್ತಿದ್ದು, ಹೋರಾಟದ ಸಂದರ್ಭದಲ್ಲಿ ಸರ್ಕಾರದಿಂದ ನೀಡುವ ಯಾವುದೇ ಸೌಲಭ್ಯಗಳನ್ನು ತೆಗೆದುಕೊಳ್ಳದೇ ನಮ್ಮ ರೊಟ್ಟಿ ನಮ್ಮ ಹಾಸಿಗೆ ಎಂಬ ಉದ್ದೇಶದಿಂದ ಹೋರಾಟ ಮಾಡಲಾಗುವುದು ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ಶ್ರೀಗಳ ಹಳ್ಳಿಗಳ ಭೇಟಿ ಕಾರ್ಯಕ್ರಮವು ಕೂಡಾ ಮೊದಲು ಇದೇ ಗ್ರಾಮದಿಂದ ಪ್ರಾರಂಭವಾಗಿ ಉತ್ತಮವಾದ ಬೆಂಬಲವನ್ನು ಕೂಡಾ ನೀಡಿದ ಹಾಗೆ ಗ್ರಾಮದ ವಿವಿಧ ನಗರಗಳ ಪಂಚಮಸಾಲಿ ಮಹಿಳೆಯರು 2ಎ ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡುವ ಮೂಲಕ ಸುಮಾರು 50 ಸಾವಿರ ರೊಟ್ಟಿಗಳನ್ನು ನೀಡಿ ಹೋರಾಟಕ್ಕೆ ಮತ್ತಷ್ಟು ಶಕ್ತಿಯನ್ನು ಗ್ರಾಮದ ಮಹಿಳೆಯರು ತುಂಬಿದ್ದಾರೆ ಎಂದರು.
ಪಂಚಮಸಾಲಿ ಸಂಘಟನೆಯ ಬೆಳಗಾವಿ ಜಿಲ್ಲಾ ಕಾರ್ಯಾಧ್ಯಕ್ಷ ನಿಂಗಪ್ಪ ಪಿರೋಜಿ ಮಾತನಾಡಿ, ಹಳ್ಳೂರ ಗ್ರಾಮದಲ್ಲಿ 1972ನೇ ವರ್ಷದಲ್ಲಿ ಪಂಚಮಸಾಲಿಗಳ ಒಗ್ಗಟಿನಿಂದ ಸ್ಥಾಪನೆಯಾದ ಪಂಚಮಸಾಲಿಗಳ ದೈವದ ಮನೆ ಇಡೀ ರಾಜ್ಯದಲ್ಲೇ ಮೊದಲು. ಹಾಗಾಗಿ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಶ್ರೀಗಳ ಹಳ್ಳಿಗಳ ಭೇಟಿ ಕಾರ್ಯಕ್ರಮ ಈ ಗ್ರಾಮದಿಂದ ಪ್ರಾರಂಭವಾಗಿ ಇಡೀ ಜಿಲ್ಲೆಯಲ್ಲೇ ಉತ್ತಮ ಬೆಂಬಲ ದೊರಕಿದೆ. ಈ ಗ್ರಾಮದಲ್ಲಿ ಪುರುಷರಿಗಿಂತ ನಾವೇನು ಕಮ್ಮಿ ಇಲ್ಲಾ ಎಂಬಂತೆ ಮಹಿಳೆಯರು ರೊಟ್ಟಿ ಬುತ್ತಿಯನ್ನು ನೀಡಿ ಹೋರಾಟದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರಾದ ಸುನಂದಾ ಬೋಳನ್ನವರ, ಸೀಮಾ ಹುಬ್ಬಳ್ಳಿ, ಶ್ರೀದೇವಿ ಲೋಕನ್ನವರ, ಮಹಾನಂದ ಹುಬ್ಬಳ್ಳಿ, ಶಿವಲೀಲಾ ಬೋಳನ್ನವರ, ಶಾಂತಾ ಕಂಬಾರ, ಸುಚಿತ್ರಾ ಕಾಡಶೆಟ್ಟಿ, ಲಸಮವ್ವ ಬಳಿಗಾರ, ಲಸಮವ್ವ ಹುಬ್ಬಳ್ಳಿ, ಸುನೀತಾ ಸಂತಿ, ಅನ್ನವ್ವ ಸಂತಿ, ವೀಣಾ ಡಬ್ಬವನ್ನರ, ಲಿಲಾವತಿ ಲೋಕನ್ನವರ ಹಾಗೂ ಗ್ರಾಮದ ಮುಖಂಡರು ಇದ್ದರು.