ಬೀದರ: ಬಿದರಿ ಕಲೆಯಲ್ಲಿ ವಿಶೇಷ ಸಾಧನೆ ಮಾಡಿರುವ ಬೀದರನ ಷಾ ಅಹ್ಮದ ಖಾದ್ರಿಯವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ.
1955 ರ ಜೂನ್ ನಲ್ಲಿ ಪ್ರತಿಷ್ಠಿತ ಬಿದ್ರಿ ಕಲೆಗಾರರ ಕುಟುಂಬದಲ್ಲಿ ಜನಿಸಿರುವ ಇವರು ತಮ್ಮ ತಂದೆಯಿಂದಲೇ ಬಿದ್ರಿ ಕರಕುಶಲವನ್ನು ಕಲಿತಿದ್ದಾರೆ.
ತಮ್ಮ ಪೂರ್ವಜರ ಕಾಲದಿಂದಲೂ ಬಿದ್ರಿ ಕರಕುಶಲದಲ್ಲಿ ತೊಡಗಿಸಿಕೊಂಡಿರುವ ಕುಟುಂಬದಿಂದ ಬಂದಿದ್ದರೂ, ಕಲೆಯಲ್ಲಿ ಅಲ್ಪ ಪ್ರಮಾಣದ ದುಡಿಮೆಯಷ್ಟೇ ಬರುತ್ತಿದ್ದುದರಿಂದ ಕುಟುಂಬದ ಸಾಂಪ್ರದಾಯಿಕ ಕಸುಬಿನಲ್ಲಿ ಮುಂದುವರಿಯುವುದು ಅವರ ತಂದೆಗೆ ಇಷ್ಟವಿರಲಿಲ್ಲ… ಆದಾಗ್ಯೂ ಪರಿಸ್ಥಿತಿಯ ಕಾರಣದಿಂದ ಕೊನೆಗೆ ಖಾದ್ರಿ ಅವರು ತಮ್ಮ ತಂದೆಯ ಮೇಲ್ವಿಚಾರಣೆಯಲ್ಲೇ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
‘ಈ ಕರಕುಶಲತೆಯಲ್ಲಿ ತಾನು ತೊಡಗಿಸಿಕೊಂಡ ನಂತರ ತನಗೆ ಸಾಕಷ್ಟು ಪ್ರೋತ್ಸಾಹ ಸಿಕ್ಕಿತು. ಈ ಪ್ರಾಚೀನ ಹಳೆಯ ಕರಕುಶಲತೆಯ ಸುಧಾರಣೆ ಮತ್ತು ಅಭಿವೃದ್ಧಿಗಾಗಿ ಹೊಸ ಮಾದರಿ, ವಿನ್ಯಾಸ ಕಂಡುಹಿಡಿಯಲು ಪ್ರಾರಂಭಿಸಿದೆ’ ಎಂದು ಖಾದ್ರಿ ಅವರು ಹೇಳುತ್ತಾರೆ.
ತಂದೆಯಿಂದ ತರಬೇತಿ ಪಡೆದ ನಂತರ, 1970 ರಿಂದ ಸ್ವತಂತ್ರವಾಗಿ ಕೆಲಸ ಮಾಡಲು ಪ್ರಾರಂಭಿಸಿದ ಅವರು ಈ ಕಲೆಗೆ ಹೊಸ ವಿನ್ಯಾಸದ ಮಾದರಿಗಳನ್ನು ಪರಿಚಯಿಸಿದ್ದು, ಕಠಿಣ ಪ್ರಯತ್ನಗಳೊಂದಿಗೆ ಕರಕುಶಲತೆಯನ್ನು ಅಭಿವೃದ್ಧಿಪಡಿಸಲು ಪ್ರಮುಖ ಪಾತ್ರ ವಹಿಸಿದರು.
ಈ ಸಂಬಂಧ ಪತ್ರಿಕೆಯೊಡನೆ ಮಾತನಾಡಿದ ಷಾ ರಶೀದ್, ಪದ್ಮಶ್ರೀ ಪ್ರಶಸ್ತಿ ಸಿಕ್ಕಿದ್ದು ನನಗೆ ಬಹಳ ಖುಷಿಯಾಗಿದೆ. ಈ ಪ್ರಶಸ್ತಿಯನ್ನು ನಾನು ಬೀದರ ಜನರಿಗೆ ಮತ್ತು ಬಿದರಿ ಕಲೆ ಕುಟುಂಬಕ್ಕೆ ಅರ್ಪಿಸುತ್ತೇನೆ ಎಂದರು.
ಕೋವಿಡ್ ಸಂದರ್ಭದಲ್ಲಿ ಬಿದರಿ ಮಾಡಲು ಸ್ವಲ್ಪ ಕಷ್ಟ ಆಯಿತು. ಭಾರತ ದೇಶದಲ್ಲಿ ೧೦% ಮಾತ್ರ ನನ್ನ ಬಿದರಿ ಕಲೆ ಮಾರಾಟ ಆಗುತ್ತದೆ ಆದರೆ ವಿದೇಶದಲ್ಲಿ ನನ್ನ ಬಿದರಿ ಕಲೆಗೆ ಬಹಳ ಮಹತ್ವ ಪಡೆದಿದೆ ಎಂದು ಹೇಳಿದರು. ಹೊರದೇಶಗಳಲ್ಲಿ ನನ್ನ ಬಿದರಿ ಕಲೆಯ ೯೦% ಮಾರಾಟ ಆಗುತ್ತದೆ ಎಂದು ಷಾ ಹೇಳಿದರು.
ಅಮೇರಿಕ (ಯುಎಸ್ಎ), ಇಟಲಿ, ಸಿಂಗಾಪುರ, ಹಾಲೆಂಡ್, ಸ್ಪೇನ್, ಕಿಂಗ್ಡಮ್ ಆಫ್ ಬಹ್ರೇನ್, ಮಸ್ಕತ್ , ಸ್ವಿಝರ್ಲ್ಯಾಂಡ್ ಸೇರಿದಂತೆ ವಿದೇಶಗಳಲ್ಲೂ ಕರಕುಶಲ ಪ್ರದರ್ಶನ ನಡೆಸಿ ತಮ್ಮ ಛಾಪನ್ನು ಅವರು ಮೂಡಿಸಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ