Homeಕವನಕವನ : ಆಹ್ವಾನ

ಕವನ : ಆಹ್ವಾನ

(ಇದು ಚೀನಾ ಭಾರತ ಯುದ್ಧದ ಸಮಯದಲ್ಲಿ ಬರೆದ ಕವನ. ೧೯೬೪ ರಲ್ಲಿ ಬೆಂಗಳೂರಿನಿಂದ ಪ್ರಕಟಗೊಂಡ “ಸಮರ ಕವನ ಸಂಕಲನ”ದಲ್ಲಿ ಈ ಕವನ ಪ್ರಕಟವಾಗಿತ್ತು. ಈಗಿನ ಸಂದರ್ಭಕ್ಕೂ ಇದು ಅಷ್ಟೇ ಪ್ರಸ್ತುತ)

ಆಹ್ವಾನ
*******
ಆಹ್ವಾನಿಸು ರಣಚಂಡಿಯ ಓ ಭಾರತಪುತ್ರ
ಸಮ್ಮಾನಿಸು ಬಿಸಿರಕ್ತದಿ ಝಳಪಿಸಿ ನೀ ಶಸ್ತ್ರ

ಆ ಉತ್ತರದೆತ್ತರದಲಿ ಬಂದೊತ್ತಿರೆ ಸೈನ್ಯ
ಅದಕುತ್ತರ ನೀಡಲು ನಿನಗೇತಕೆ ಕಾರುಣ್ಯ?

ಗುಡುಗಲಿ ಗುಂಡಿನ ಅಬ್ಬರ ನಡುಗಲಿ ಎದೆಗೂಡು
ತುಡುಕಿದ ನಾಗರ ವಿಷ ಕಕ್ಕುವ ತೆರ ಮಾಡು

ನಿನ್ನಯ‌ ನಡೆಗೆಲ್ಲಿಯ ತಡೆ ಗಡಿಯಾಚೆಗೆ ಅಟ್ಟು
ಅವರಬ್ಬರಕಾಗಲಿ ಕಡೆ ಮತ್ತಿಲ್ಲದ ಹುಟ್ಟು

ಸೊಕ್ಕಿದ ಅರಿಗಳ ಅಕ್ಕಿಸು ನೆಕ್ಕಲಿ ನರಿ- ನಾಯಿ
ಹಕ್ಕಿನ ನೆಲ ದಕ್ಕಿಸಿ ಮೇಲುಕ್ಕಲಿ ನಗೆ- ಬಾಯಿ

ನಾರಿಯರೆದೆಯಲು ಚಿಮ್ಮಿದ ಧೀರತೆಗಿದೆ ಸಾಕ್ಷಿ
ತಾಂಡವವಾಡಲು ತೆರೆಯಲಿ ಆ ರುದ್ರನ ಅಕ್ಷಿ

ಉತ್ತಿಷ್ಠತ, ಜಾಗ್ರತ, ನಿನಗಿದುವೇ ಅವಕಾಶ
ನವಚರಿತೆಯ ಬರೆಯಲಿ ಈ ಭಾರತದಿತಿಹಾಸ !

– ಎಲ್. ಎಸ್. ಶಾಸ್ತ್ರಿ

RELATED ARTICLES

Most Popular

error: Content is protected !!
Join WhatsApp Group