ಕವನ : ಮೆಲುಕು

Must Read

ಮೆಲುಕು

ಬೆಳ್ಳಂ ಬೆಳ್ಗೆ ಅವ್ವನ ಕೂಗು
ಕೇಳಿದ್ರೂ ಕೇಳದಂತೆ ಮಲ್ಗೋದು
ಇತ್ತ ನಾನುನೂ ಕಿರುಚಿದೆ
ಅವ್ವ ಕರಿತೈತೆ ಎದ್ದೇಳಣ್ಣಯ್ಯ

ಜಳಕಾ ಮಾಡಿ ಮಡಿಉಟ್ಕೊ
ರಾಕಿ ಕಟ್ಟಸ್ಕೊ ಹಬ್ಬಾ ಐತಿ
ಸೋಂಬೇರಿ ಸೋಮಾರಿ ನೀ
ಹೊರ್ಗ ಹೋಗಬ್ಯಾಡಾ ಅಣ್ಣಯ್ಯ

ಮತ್ತದೇ ಜಗಳಾ ಜಡೆ ಎಳೆದು
ರಿಬ್ಬನ್ ಜಗ್ಗಿ ನೂಕಿ ಓಡೋದು
ಅವ್ವನ ದನಿಗೆ ಮುದುಡಿಕೊಳ್ಳುವ
ಮುದ್ದು ಪೆದ್ದು ಅಣ್ಣಯ್ಯ

ರಾಕಿ ಕಟ್ಟಿ ಸಕ್ಕರೆ ಬದಲು
ಉಪ್ಪು ತಿನಿಸಿ ಗೋಳಾಡಿಸಿ
ತಲೆಗೂದಲ ಜಗ್ಗಿ ತಿವಿದು
ಓಡಿದ ನೆನಪು ಮಾಸಿಲ್ಲ ಅಣ್ಣಯ್ಯ

ಅಪ್ಪಂಗೆ ಚಾಡಿ ಹೇಳಿ
ಅವ್ವಂಗೆ ಮೋಡಿ ಮಾಡಿ
ಅಜ್ಜ ಅಮ್ಮಂಗೆ ಅತ್ತು ಕೇಳಿ
ರೊಕ್ಕ ಇಸ್ಕೊಂಡದ್ದು ಎಷ್ಟ್ ಚಂದ ಅಣ್ಣಯ್ಯ

ದಿನಕ್ಕ ನಾಕಸಲಾ ಜಗಳಾಮಾಡೋದು
ವಾರಕ್ಕ ಎರಡ ಸಲಾ ಮಾತ ಬಿಡೋದು
ಆದ್ರೂ ಎನ್ ಮಜವಾಗಿತ್ತು
ಬಾಲ್ಯದ ಜೀವನ ಅಣ್ಣಯ್ಯ

ಸೂಟಿ ಇದ್ರ ಹೊಲದ ಸುತ್ತ
ನಮ್ಮ ಚಿತ್ತ
ಮಾವಿನಕಾಯಿ ಉಪ್ಪು ಖಾರಾ
ಸೇರಿಸಿ ದವಡೆ ಜುಮ್ ಅಂದ್ರೂ
ತಿಂದ ನೆನಪು ಕಾಡತೈತಿ ಅಣ್ಣಯ್ಯ

ಸಂಜೀ ಮುಂದ ಕಾಕಾನ ಚಕ್ಕಡಿ
ಬರೋದಾರಿಲಿ ನಿಂತ ನಾ ಮುಂದ ನೀ ಮುಂದಂತಾ ಬಿದ್ದಕೊಂಡ ಬೈಸ್ಕೊಂಡ ಕಿಸಿಕಿಸಿ
ನಗೋದಂದ್ರ ಹಬ್ಬಾ ಅಲ್ವೇನಣ್ಣಯ್ಯ

ಕೆಲಸಾ ಹೇಳಿದರ ಸಾಕು
ಓದದ ಬರಿಯೋದ ನೆಪಾ
ನೀ ಹೋಗ ನಾ ಹೋಗ
ಅನ್ನೋದ್ರಾಗ ಬೆಳಕ ಹರಿಯೋದ ಮರ್ತಿಲ್ಲ ಅಣ್ಣಯ್ಯ

ದಿನಾ ಕಳದಂಗ ದೊಡ್ಡವರಾದದ್ ಮರತ್ವಿ
ಮದ್ವಿ ಮಕ್ಕಳು ಅಂತಾ ನಮ್ಮ ಬಾಳೆಕ ನಾವ್ ಹತ್ತಿದ್ವಿ
ಆದ್ರೂ ಅಣ್ಣಾ ತಂಗಿ ಸಂಬಂಧ ಅಂದ್ರ ಬೆಲೆ ಕಟ್ಟಾಕ್ಕಾಗದ್ದೈತಿ ಹೌದ ಅಲ್ಲ್ವೇನಣ್ಣಯ್ಯ

ಶ್ರೀಮತಿ ಜ್ಯೋತಿ ಕೋಟಗಿ ಬೈಲಹೊಂಗಲ
ಬಿ.ಆರ್.ಪಿ ಚನ್ನಮ್ಮನ ಕಿತ್ತೂರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group