ಮೂಡಲಗಿ: ನವ ಮೂಡಲಗಿ ತಾಲೂಕಿನಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪನೆ ಆಗಬೇಕು, ರೈತರಿಗೆ ದಲಾಳಿಗಳು ಇಲ್ಲದೆ ನೇರವಾಗಿ ಯೋಜನೆ ಸಲ್ಲಬೇಕು ಮತ್ತು ಎರಡು ವರ್ಷಗಳಿಂದ ನೆರೆ ಪರಿಹಾರ ತಲುಪದ ಫಲಾನುಭವಿಗಳಿಗೆ ಶೀಘ್ರ ಪರಿಹಾರ ತಲುಪಬೇಕು ಎಂದು ರೈತ ಹಿತರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುರೇಶ ನಾಯಕ ಆಗ್ರಹಿಸಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು, ರೈತರಿಗೆ ಅನುಕೂಲವಾಗುವಂಥ ಸರ್ಕಾರದ ಯೋಜನೆಗಳು ನೇರವಾಗಿ ರೈತರಿಗೆ ಸಿಗದೆ ದಲ್ಲಾಳಿಗಳ ಮೂಲಕ ದೊರೆಯುವದು ವಿಷಾದನೀಯ.
ರೈತರು ಅಮಾಯಕರು ಅವರಿಗೆ ಸಿಗಬೇಕಾದ ಯೋಜನೆಗಳನ್ನು ತಿಳಿಸಲು ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ತಿಂಗಳಿಗೆ ಒಂದು ಸಲ ರೈತ ಸಂಪರ್ಕ ಸಭೆಗಳನ್ನು ಏರ್ಪಡಿಸಿ ಅಧಿಕಾರಿಗಳಿಂದ ನೇರವಾಗಿ ರೈತರಿಗೆ ಯೋಜನೆಗಳನ್ನು ಒದಗಿಸಬೇಕು. ರಾಜ್ಯದ ರೈತರಿಗೆ ಬರುತ್ತಿರುವ ಯೋಜನೆಗಳು ಯಾವುವು ಎಂಬ ಮಾಹಿತಿ ತಹಶೀಲ್ದಾರ ಕಛೇರಿಯಲ್ಲಿ ಸಿಗಬೇಕು ಹಾಗೂ ಎರಡು ವರ್ಷಗಳ ಹಿಂದೆ ನೆರೆ ಪ್ರವಾಹದಿಂದ ಮನೆ ಮಾರು ಕಳೆದು ಕೊಂಡು ಅಕ್ಷರಶಃ ಅನಾಥರಾದ ಎಷ್ಟೋ ಕುಟುಂಬಗಳಿಗೆ ಇನ್ನೂ ಸರಿಯಾದ ಪರಿಹಾರ ಸಿಗದೇ ಪರಡಾದುತ್ತಿದ್ದಾರೆ ಶೀಘ್ರವಾಗಿ ಅವರಿಗೆ ಪರಿಹಾರ ದೂರೆಯುವಂತೆ ಮಾಡಬೇಕು.
ಜೊತೆಗೆ ತಾಲೂಕಾಗಿ ಹೊರಹೊಮ್ಮಿರುವ ಮೂಡಲಗಿ ಪಟ್ಟಣದಲ್ಲಿ ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈತ ಸಂಪರ್ಕ ಕೇಂದ್ರ ಆಗಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ನವ ಮೂಡಲಗಿ ತಾಲೂಕಿನಲ್ಲಿ ಸುಮಾರು ೩೮೦೦೦ ಎಕರೆಗಳಷ್ಟು ಜಮೀನಿದ್ದು ಇಲ್ಲಿ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ರೈತರ ಪ್ರಮಾಣ ಬಹಳವಿದೆ. ರೈತರಿಗೆ ಬೇಕಾಗುವ ಬೀಜ, ಗೊಬ್ಬರ ಹಾಗೂ ಬೆಳೆಯ ಬಗ್ಗೆ ತಿಳಿವಳಿಕೆ ನೀಡಲು ರೈತ ಸಂಪರ್ಕ ಕೇಂದ್ರ, ರೈತರಿಗಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ರೈತರಿಗೆ ಮಾಹಿತಿ ಸಿಗದೇ ಎಷ್ಟೋ ಯೋಜನೆಗಳು ವಾಪಸು ಹೋಗುತ್ತಿವೆ. ಅವುಗಳ ಬಗ್ಗೆ ತಿಳಿಸಿ ಹೇಳಿ ರೈತರಿಗೆ ಅನುಕೂಲ ಮಾಡಿಕೊಡಲು ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಯೊಬ್ಬರು ಇರಬೇಕು ಎಂದು ಅವರು ಹೇಳಿದ್ದಾರೆ.
ಸದ್ಯ ಮೂಡಲಗಿಯ ಎಪಿಎಂಸಿಯಲ್ಲಿ ರೈತರಿಗಾಗಿ ಕೇಂದ್ರವೊಂದನ್ನು ತೆರೆಯಲಾಗಿದ್ದು ಅಲ್ಲಿ ಬಿತ್ತನೆ ಬೀಜ, ಗೊಬ್ಬರಗಳು ಸಿಗುತ್ತವೆಯಾದರೂ ಕೇಂದ್ರಕ್ಕಾಗಿಯೇ ಒಂದು ಸ್ವಂತ ಕಟ್ಟಡ ಹಾಗೂ ಸಾಕಷ್ಟು ಪ್ರಮಾಣದ ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದೆ. ಹಾಗೆಯೇ ಕೆಲವು ವಸ್ತುಗಳು ಅಲಭ್ಯವಿದ್ದು ಅದಕ್ಕಾಗಿ ರೈತರು ಗೋಕಾಕಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ.ಇದನ್ನು ಹೋಗಲಾಡಿಸಲು ಮೂಡಲಗಿಯಲ್ಲಿ ರೈತ ಸಂಪರ್ಕ ಕೇಂದ್ರ ಆಗಬೇಕಾಗಿದೆ.
ಕೃಷಿಯಲ್ಲಿ ಬಳಸಲ್ಪಡುವ ತಾಂತ್ರಿಕ ಸಲಕರಣೆಗಳನ್ನು ಸಬ್ಸಿಡಿ ದರದಲ್ಲಿ ರೈತರಿಗೆ ಒದಗಿಸುವ ಕಾರ್ಯ, ರೈತರ ಬೆಳೆಗೆ ಬೆಂಬಲ ಬೆಲೆ, ಮಾರುಕಟ್ಟೆ ದರದ ಮಾಹಿತಿ, ಬೆಳೆ ಪದ್ಧತಿಯ ಮಾಹಿತಿ ಹಾಗೂ ಇತರೆ ಯಾವುದೇ ಮಾಹಿತಿಗಳು ರೈತರಿಗೆ ಸಿಗಬೇಕಾದರೆ ಇಲ್ಲಿ ರೈತ ಸಂಪರ್ಕ ಕೇಂದ್ರ ಆಗಬೇಕಾದ ಅಗತ್ಯ ಬಹಳ ಇದೆ. ಅದಷ್ಟು ಬೇಗ ಸ್ಥಳೀಯ ಜನಪ್ರತಿನಿಧಿಗಳು, ಶಾಸಕರು ಈ ಬಗ್ಗೆ ಕ್ರಮ ಕೈಗೊಳ್ಳುವರೆಂಬ ಆಶಾಭಾವನೆ ರೈತರಲ್ಲಿ ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರದೀಪ್ ಪಾಟೀಲ್ ಪಾಟೀಲ್, ಭರತೇಶ ಪಾಟೀಲ್ ಅರ್ಜುನ್ ನಾಯಕ್, ಈರಪ್ಪ ನಾಯಕ್ ಭಾಗಿಯಾಗಿದ್ದರು