spot_img
spot_img

ರೆವರೆಂಡ್ ಉತ್ತಂಗಿ ಚನ್ನಪ್ಪನವರು

Must Read

- Advertisement -

ಈ ಫೋಟೋದಲ್ಲಿರುವ ಮೊದಲನೇ ವ್ಯಕ್ತಿ ಡಾ. ಫ  ಗು. ಹಳಕಟ್ಟಿ, ವಚನ ಸಂಗ್ರಹ ಮಾಡಿ ಸಮಗ್ರ ವಚನ ಸಂಪುಟಗಳಿಗೆ ನಾಂದಿಹಾಡಿದವರು.

ಎರಡನೇ ವ್ಯಕ್ತಿ ಶ್ರೀ. ಹರ್ಡೇಕರ ಮಂಜಪ್ಪನವರು, ಅವರೊಬ್ಬ ವೇಶ್ಯೆಯ ಮಗನಾಗಿದ್ದಕ್ಕೆ ಯಾವ ಸ್ವಾಮಿಗಳು, ಮಠವು ಲಿಂಗದೀಕ್ಷೆ ಕೊಡದಿದ್ದಾಗ ಅಥಣಿ ಶಿವಯೋಗಿಗಳಿಂದ ದೀಕ್ಷೆ ಪಡೆದವರು. ಮಹಾತ್ಮಾ ಗಾಂಧಿ ಬೆಳಗಾವಿ ಅಧಿವೇಶನಕ್ಕೆ ಬಂದಾಗ ಅವರಿಗೆ ಬಸವಣ್ಣನವರ ಬಗ್ಗೆ ತಿಳಿಸಿಕೊಟ್ಟವರು ಹಾಗೂ ಪ್ರಪ್ರಥಮವಾಗಿ ಕರ್ನಾಟಕದಲ್ಲಿ ಬಸವಜಯಂತಿಯನ್ನು ಆಚರಣೆಯಲ್ಲಿ ತಂದವರು.

ಇನ್ನು ಮೂರನೇ ವ್ಯಕ್ತಿ ಯಾರು ಅಂತ ಬಹುತೇಕ ಲಿಂಗಾಯತರಿಗೆ ಗೊತ್ತಿಲ್ಲ ಆದ್ದರಿಂದ ಅವರ ಬಗ್ಗೆ ವಿವರವಾಗಿ ಮಾಹಿತಿ ಹಂಚಿ ಕೊಳ್ಳುತ್ತಿರುವೆ..ಇವರು ರೇವರೆಂಡ್ ಉತ್ತಂಗಿ ಚೆನ್ನಪ್ಪನವರು..20ನೆ ಶತಮಾನದಲ್ಲಿ ಮೊದಲಾರ್ದದಲ್ಲಿ ಲಿಂಗಾಯತ ಹಣತೆಯನ್ನ ಬೆಳಗಿದ ಫ. ಗು. ಹಳಕಟ್ಟಿ, ಹರ್ಡೇಕರ ಮಂಜಪ್ಪ ಅವರೊಂದಿಗೆ ರೇವರೆಂಡ್ ಉತ್ತಂಗಿ ಚೆನ್ನಪನವರು ಕೂಡ ಒಬ್ಬ ದಿಗ್ಗಜ, ನಿಜಶರಣ…

- Advertisement -

ಉತ್ತಂಗಿ ಚನ್ನಪ್ಪನವರು ‘ತಿರುಳ್ಗನ್ನಡದ ತಿರುಕ’ ಎಂದು ಕರೆಯಿಸಿಕೊಂಡು  ‘ಸರ್ವಜ್ಞನ ವಚನ’ಗಳ ಸಂಪಾದನೆಗಾಗಿ ಖ್ಯಾತರಾದವರು. ‘ಸರ್ವಜ್ಞನ ಪದಗಳನ್ನು’ ಪ್ರಸಿದ್ಧಿಪಡಿಸಿದ ಕೀರ್ತಿ  ರೆವರೆಂಡ್ ಫಾದರ್ ಉತ್ತಂಗಿ ಚನ್ನಪ್ಪನವರಿಗೆ ಸಲ್ಲುತ್ತದೆ. 

ಚನ್ನಪ್ಪ ದಾನಿಯೇಲಪ್ಪ ಉತ್ತಂಗಿಯವರು  1881ರ ಅಕ್ಟೋಬರ್ 28ರಂದು ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ, ಉತ್ತಂಗಿ ಗ್ರಾಮದಲ್ಲಿ ಜನಿಸಿದರು. ಅವರ ಪೂರ್ವಜರು ಕ್ರೈಸ್ತಧರ್ಮವನ್ನು ಸ್ವೀಕರಿಸಿ ಅನೇಕ ದಶಕಗಳೇ ಆಗಿದ್ದವು. ಗದಗ ಮತ್ತು ಬೆಟಗೇರಿಗಳ “ಕೈಸ್ತ ಅನಾಥಾಶ್ರಮಗಳ” ಮೇಲ್ವಿಚಾರಣೆಯ ಜವಾಬ್ದಾರಿಯು ಇವರ ಮನೆತನಕ್ಕೆ ಬಂದಿತ್ತು. ತಮಗೆ ಒಪ್ಪಿಗೆಯಾಗದ ಯಾವುದನ್ನೂ ಕಣ್ಣುಮುಚ್ಚಿಕೊಂಡು ಅನುಸರಿಸುವ ಸ್ವಭಾವ ಉತ್ತಂಗಿ ಅವರದಾಗಿರಲಿಲ್ಲ.

ಉತ್ತಂಗಿಯವರು ವಿದೇಶಿ ಮಿಷಿನರಿಗಳು ವಿಧಿಸಿದ್ದ ಸಮವಸ್ತ್ರಗಳನ್ನು ತಿರಸ್ಕರಿಸಿ ತಮ್ಮ ಜೀವಮಾನವನ್ನೆಲ್ಲಾ ಖಾದಿಬಟ್ಟೆಯಲ್ಲೇ ಕಳೆದರು. 1904ರಲ್ಲಿ ಕೊನೆಯ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದರು. ಧಾರವಾಡದಲ್ಲಿ ಅವರಿಗೆ ಉಪನ್ಯಾಸಕರ ಹುದ್ದೆ ಸಿಕ್ಕಿತು. ಶಾಲೆಯಲ್ಲಿ ಓದುತ್ತಿದ್ದಾಗಲೇ ಬಾಸೆಲ್ ಮಿಶನ್ನಿನ ಕೆಲವು ಗೆಳೆಯರ ಸಹಕಾರದಿಂದ ಒಂದು ಪತ್ರಿಕೆಯನ್ನು ಪ್ರಕಟಿಸುವ ಧೈರ್ಯ ಮಾಡಿದರು. ರೆವರೆಂಡ್ ಫಾದರ್ ಉತ್ತಂಗಿ ಚನ್ನಪ್ಪನವರು, ಕ್ರೈಸ್ತಧರ್ಮದ ಉಪದೇಶಕರಾಗಿಯೂ, ತಮ್ಮ ಬೋಧನಕ್ರಮದಲ್ಲಿ ದೇಶೀ ಪದ್ಧತಿಯನ್ನು ಅಳವಡಿಸಿಕೊಂಡರು. ಮತಗಳೆಲ್ಲದರಲ್ಲೂ ಅವರಿಗೆ ಸಮಾನ ಗೌರವ ಮತ್ತು ಶ್ರದ್ಧೆಯಿತ್ತು.  ಪ್ರತಿಯೊಂದು ಮತದ ಒಳ್ಳೆಯ ಅಂಶಗಳನ್ನೂ ಸಮಯೋಚಿತವಾಗಿ ಉಲ್ಲೇಖಿಸುತ್ತಿದ್ದ  ಅವರ ಪ್ರೌಡಿಮೆಯನ್ನು ಬಹಳಷ್ಟು  ಧಾರ್ಮಿಕ ಮೂಲಭೂತವಾದಿಗಳು ಸಹಿಸಲಿಲ್ಲ. ಅವರ ಮೇಲಿನ ಅಧಿಕಾರಿಗಳಿಂದ ಪ್ರತಿಭಟನೆ, ಕಿರುಕುಳಗಳು ನಿರಂತರವಾಗಿ ಅವರ ಬೆನ್ನುಹತ್ತಿದ್ದವು.  ಆದರೆ ಅವ್ಯಾವುದಕ್ಕೂ  ಸೊಪ್ಪು ಹಾಕದೆ ತಮ್ಮ ವಿವೇಚನೆಗೆ ಸರಿಯಾಗಿ ಕಂಡದ್ದನ್ನು ಪಾಲಿಸುವ ಎದೆಗಾರಿಕೆ ಅವರಲ್ಲಿ ಸದಾ ಜಾಗೃತವಾಗಿತ್ತು.  

- Advertisement -

1950ರ ವರ್ಷದಲ್ಲಿ ಉತ್ತಂಗಿಯವರು, ಮಹಾನ್ ವಿದ್ವಾಂಸರಾದ ಎಸ್. ಎಸ್. ಭೂಸನೂರಮಠ ಅವರ  ಜೊತೆಗೆ, ‘ಮೋಳಿಗೆ ಮಾರಯ್ಯ’, ‘ರಾಣಿ ಮಹಾದೇವಿಯರು’, ‘ವಚನಗಳ ಸಂಪಾದನೆ’ಯ ಹೊಣೆಯನ್ನು ಹೊತ್ತುಕೊಂಡರು.  ಅವರು ತಮ್ಮ ವಿರಾಮ ಸಮಯವನ್ನೆಲ್ಲಾ ಕನ್ನಡ ಸಾಹಿತ್ಯದ ಹಲವು ಗ್ರಂಥಗಳ ಸಂಪಾದನೆಗಾಗಿ ಕಳೆದರು. ವಿಮರ್ಶಾತ್ಮಕ ಸಂಶೋಧನೆ ಅವರ ವಿಶೇಷ ಒಲವುಗಳಲ್ಲೊಂದಾಗಿತ್ತು.  ಜಯದೇವಿತಾಯಿ ಲಿಗಾಡೆಯವರ ಆದೇಶದಂತೆ, ರೆ. ಫಾದರ್ ಚನ್ನಪ್ಪ ಉತ್ತಂಗಿಯವರು, ‘ಸಿದ್ಧರಾಮ ಸಾಹಿತ್ಯ’ವನ್ನು ಸಂಗ್ರಹಿಸಿ ವಿಮರ್ಶಾತ್ಮಕ ಮುನ್ನುಡಿಯನ್ನು ಬರೆಯುವ ಜವಾಬ್ದಾರಿಯನ್ನು ಹೊತ್ತುಕೊಂಡರು. ನಾಡಿನುದ್ದಕ್ಕೂ ತಿರುಗಾಡಿ, ಸುಮಾರು  20 ಕೈಬರಹಗಳ ಪ್ರತಿಗಳನ್ನು ಸಂಗ್ರಹಿಸಿದರು. ಒಟ್ಟು 2,000 ವಚನಗಳ ಸಂಗ್ರಹವನ್ನು ಶ್ರಮವಹಿಸಿ ಮಾಡಿದುದಲ್ಲದೆ ಹಲವಾರು ಮಹನೀಯರ ಜೊತೆಗೂಡಿ ಅವುಗಳ ಪ್ರಕಟಣೆಯಲ್ಲೂ ಪ್ರಮುಖ ಜವಾಬ್ಧಾರಿ ನಿರ್ವಹಿಸಿದರು. ಅವರಿಗೆ ತತ್ವಶಾಸ್ತ್ರ ಬಲುಪ್ರಿಯವಾಗಿತ್ತು. ವಿದೇಶಿ ಮತ್ತು ಭಾರತೀಯವಾದ ಎರಡೂ ನಿಲುವುಗಳನ್ನೂ ಮುಕ್ತವಾಗಿ ಸ್ವೀಕರಿಸಿದರು. ಉಪನಿಷತ್ತು,  ಭಗವದ್ಗೀತೆಗಳನ್ನು ಸಹಾ ಆಳವಾಗಿ ಅಧ್ಯಯನ ಮಾಡಿದರು.  

ಫಾದರ್ ಉತ್ತಂಗಿ ಚನ್ನಪ್ಪನವರಿಗೆ ದೇವರಾಜ ಬಹಾದ್ದೂರ ಪ್ರಶಸ್ತಿ ಲಭಿಸಿತು. 1949ರಲ್ಲಿ ಕಲ್ಬುರ್ಗಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ರೆ. ಫಾದರ್ ಉತ್ತಂಗಿ ಬಸಪ್ಪನವರು ಆಯ್ಕೆಯಾಗಿದ್ದರು. ಹಾಸ್ಯಪ್ರಿಯತೆ, ತೀಕ್ಷ್ಣಮತಿತ್ವ, ವಿಮರ್ಶಾತ್ಮಕ ದೃಷ್ಟಿಕೋನ,  ಹೊಸವಿಷಯಗಳನ್ನರಿಯುವ ಶ್ರದ್ಧೆ, ಉಜ್ವಲ ರಾಷ್ಟ್ರಪ್ರೇಮ, ಸಮಾಜದ ಹಿತಚಿಂತನೆ ಇವು ಉತ್ತಂಗಿಯವರ ವೈಶಿಷ್ಟ್ಯಗಳಾಗಿದ್ದು,  ಅವರ ಬಹುಮುಖ ಸಾಧನೆಗಳಲ್ಲಿ  ಮಹತ್ವದ ಪಾತ್ರವನ್ನು ವಹಿಸಿದವು. 33 ವರ್ಷಗಳ ಕಾಲ ಸತತವಾಗಿ ದುಡಿದರು. ಜೀವನದ ಸಂಕಷ್ಟಗಳನ್ನು ಮರೆತು ತಮ್ಮನ್ನು ಕನ್ನಡ ಸಾಹಿತ್ಯ ಸೇವೆಗೆ ಮುಡುಪಾಗಿಟ್ಟುಕೊಂಡರು. ಬಾಸೆಲ್ ಚರ್ಚಿನ ಭಾರತೀಕರಣ ಮತ್ತು ಭಾರತದ ಸ್ವಾತಂತ್ರ್ಯ ಇವೆರಡೂ ಅವರ ಪ್ರಮುಖ ಕನಸುಗಳಾಗಿದ್ದವು. ಅವರ ಜೀವಿತದ ಸಮಯದಲ್ಲೇ ಈ ಎರಡೂ ಕನಸುಗಳು ನನಸಾದವು.

ಉತ್ತಂಗಿ ಚನ್ನಪ್ಪನವರು 1962ರ ಆಗಸ್ಟ್  28ರಂದು ಲಿಂಗೈಕ್ಯರಾದರು.

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group