ಮೂಡಲಗಿ – ನಗರದ ಎಸ್ಎಸ್ಆರ್ ಕಾಲೇಜು ಪಕ್ಕ ಹಾಗೂ ಗಣೇಶ ಮಾರ್ಟ್ ನಡುವಿನ ರಸ್ತೆಯಲ್ಲಿ ಚರಂಡಿ ನೀರು ತುಂಬಿ ಗಲೀಜಾಗಿದ್ದರೂ ಮೂಡಲಗಿ ಪುರಸಭೆ ಮಾತ್ರ ಇತ್ತ ಕಡೆ ದಿವ್ಯ ನಿರ್ಲಕ್ಷ್ಯ ತಾಳಿದೆ.
ಕಳೆದ ಹಲವು ದಿನಗಳಿಂದ ಇಲ್ಲಿಯ ಗಟಾರು ಬ್ಲಾಕ್ ಆಗಿ ತುಂಬಿಕೊಂಡಿದೆ. ಈಗ ಅದೇ ಚರಂಡಿ ನೀರು ರಸ್ತೆಯ ಮೇಲೆ ಹರಿದು ಬಂದಿದೆ ಆದರೂ ಪುರಸಭೆಯ ಗಮನಕ್ಕೆ ಇದು ಬಂದಿಲ್ಲವೆಂದರೆ ತಮ್ಮ ಆರೋಗ್ಯಕ್ಕೆ ಹೊಣೆ ಯಾರು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಈ ಬಗ್ಗೆ ಪುರಸಭೆಯ ಗಮನಕ್ಕೆ ತಂದಿದ್ದರೂ ಸದರಿ ಚರಂಡಿಯನ್ನು ಸ್ವಚ್ಛಗೊಳಿಸುವ ಕಾರ್ಯ ಆಗುತ್ತಿಲ್ಲ ಇದೇ ಥರ ಮೂಡಲಗಿ ನಗರದ ಹಲವು ಕಡೆ ಚರಂಡಿಗಳು ಬ್ಲಾಕ್ ಆಗಿವೆ. ಗಬ್ಬು ನಾರುತ್ತಿವೆ. ರೋಗಗಳನ್ನು ಹರಡುತ್ತಿವೆ ಈ ಬಗ್ಗೆ ಈಗಾಗಲೇ ಪತ್ರಿಕೆಗಳಲ್ಲಿ ವರದಿಗಳು ಪ್ರಕಟಗೊಂಡಿವೆ.
ಪುರಸಭೆಯ ಆರೋಗ್ಯಾಧಿಕಾರಿಗೆ ಕೂಡ ಇದು ಗಮನಕ್ಕೆ ಬಾರದಿರುವುದು ಪುರಸಭೆಯ ಆಡಳಿತ ವ್ಯವಸ್ಥೆಯಲ್ಲಿ ಗಮನೀಯ ನಿರ್ಲಕ್ಷ್ಯ ಧೋರಣೆಯನ್ನು ತೋರಿಸುತ್ತದೆ. ಆದಷ್ಟು ಬೇಗ ಪುರಸಭೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಚರಂಡಿಯನ್ನು ಸ್ವಚ್ಛಗೊಳಿಸಿ ಜನರ ಆರೋಗ್ಯ ಕಾಪಾಡುವ ಕೆಲಸ ಮಾಡಬೇಕಾಗಿದೆ.
ಉಮೇಶ ಬೆಳಕೂಡ, ಮೂಡಲಗಿ