ಬೆಳಗಾವಿ: ಭಾರತೀಯರಿಗೆ ಶಿವನು ಆದಿದೇವನಾಗಿದ್ದಾನೆ. ಶಿವನ ಬಿಟ್ಟು ಭಾರತೀಯರಿಗೆ ಮೂಲ ದೈವವಿಲ್ಲ. ಭಕ್ತಿ ಮತ್ತು ಶ್ರದ್ದೆಗಳಿಂದ ಭಾರತೀಯರು ಶಿವರಾತ್ರಿಯಂದು ಶಿವತತ್ವವನ್ನು ಆಚರಿಸಬೇಕು. ಹಾಗೆ ಆಚರಿಸಿದರೆ ಕಾಶಿ, ಶ್ರೀಶೈಲ, ಕೇದಾರ, ರಾಮೇಶ್ವರ ಕ್ಷೇತ್ರಗಳಿಗೆ ಹೋಗುವ ಅವಶ್ಯಕತೆ ಬರುವುದಿಲ್ಲ. ಪರಿಶುದ್ಧ ಮನಸ್ಸು ಮತ್ತು ಏಕೋಭಾವದಿಂದ ಶಿವನನ್ನು ಅನಂತ ಸ್ಮರಣೆ ಮಾಡಿದಲ್ಲಿ ಅದೇ ಭಾರತೀಯರಿಗೆ ದೈವಿಕತೆ ಮತ್ತು ಧರ್ಮವೆಂದು ಭಾರತೀಯ ಗಾಯನ ಸಮಾಜದ ಅಧ್ಯಕ್ಷರಾದ ವಿದುಷಿ ಡಾ. ರೋಹಿಣಿ ಅಭಿಪ್ರಾಯ ಪಟ್ಟರು. ಅವರು ಬೆಳಗಾವಿಯ ಶಿವಬಸವ ನಗರದಲ್ಲಿರುವ ಭಾರತೀಯ ಗಾಯನ ಸಮಾಜದ ಸಭಾಂಗಣದಲ್ಲಿ ಶಿವರಾತ್ರಿಯಂದು ತಮ್ಮ ಶಿಷ್ಯವೃಂದ ಶಿವರಾತ್ರಿಯ ನಿಮಿತ್ತ ಸಾದರಪಡಿಸಿದ ಶಿವತತ್ವ ಪ್ರಸ್ತುತಿ (ನಾದಮಂತ್ರ ಶಿವೋಪಾಸನೆ) ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಭಾರತೀಯ ಗಾಯನ ಸಮಾಜವು ತಮ್ಮ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಉಪನಿಷತ್ತು, ಭಾರತೀಯ ಭಾಷೆಗಳ ಶಿವ ಭಜನೆಗಳು, ಬಸವಣ್ಣ, ಅಲ್ಲಮಪ್ರಭು, ಮಹಾದೇವಿಯಕ್ಕ, ಮೊಳಿಗೆ ಮಾರಯ್ಯ ಅವರ ವಚನಗಳು, ಆದಿಶಂಕರಾಚಾರ್ಯರ ಕೃತಿಗಳು, ರಾವಣವಿರಚಿತ ಶಿವತಾಂಡವ ಸ್ತೋತ್ರ ಕಾರ್ಯಕ್ರಮದಲ್ಲಿ ಭಜನ್, ದ್ರುಪದ, ಧಮಾರ ಮುಂತಾದ ಶಾಸ್ತ್ರೀಯ ಗಾಯನ ಪ್ರಕಾರಗಳು ಹಾಗೂ ಹದಿನಾರು ರಾಗಗಳು ಭಕ್ತಿರಸಕ್ಕೆ ಜೀವತುಂಬಿ ಜನಮನವನ್ನು ಸೂರೆಗೊಂಡವು. ಶ್ರೀ. ಸತೀಶ ಗಚ್ಚಿ ತಬಲಾ ಸಾತ್ ನೀಡಿದರು. ಮುವತ್ತಾರು ಸ್ವರ ಸಾಧಕರಾದ ಡಾ. ಪೂರ್ಣಿಮಾ, ಅನಿಕಾ, ಸುರೇಖಾ, ದೀಕ್ಷಾ, ಪ್ರಜ್ಞಾ, ಈಶ್ವರಿ, ಸೃಜನಾ, ಸುಚೇತಾ, ಸಾಯೀಶ್, ಅವನೀಶ್, ಸ್ವಾತಿ, ಅನಿರುದ್ದ, ಹರ್ಷಿಲ್ ಮುಂತಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಅನಂತರ ವಿದುಷಿ ಡಾ. ಕೆ ಎಂ ರೋಹಿಣಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀಮತಿ ಸಾವಿತ್ರಿ ಜಡಿಮಠ, ವಿದ್ಯಾ ಗೌಡರ, ದಾಕ್ಷಾಯಿಣಿ ಹೂಗಾರ, ಸಂಜಯ ಚಿಕ್ಕೋಡ, ಬಸವರಾಜ ಹಡಪದ ಮುಂತಾದವರು ಉಪಸ್ಥಿತರಿದ್ದರು. ಅನಂತರ ಭಾರತೀಯ ಗಾಯನ ಸಮಾಜದ ವತಿಯಿಂದ ಫಲಾಹಾರ ವಿತರಿಸಲಾಯಿತು.