ಮೂಡಲಗಿ: ‘ವಿದ್ಯಾರ್ಥಿಗಳಲ್ಲಿ ದೈಹಿಕ ಮತ್ತು ಮಾನಸಿಕ ಸದೃಢತೆಗಾಗಿ ಕ್ರೀಡೆಗಳು ಅವಶ್ಯವಿದ್ದು, ಮಕ್ಕಳ ಸರ್ವಾಂಗಣ ವಿಕಾಸಕ್ಕೆ ಕ್ರೀಡೆಗಳು ಸಹಕಾರಿಯಾಗುತ್ತವೆ’ ಎಂದು ಗೋಕಾಕ ಲಕ್ಷ್ಮೀ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಇಲ್ಲಿಯ ಎಸ್ಎಸ್ಆರ್ ಪ್ರೌಢ ಶಾಲೆಯ ಆತಿಥ್ಯದಲ್ಲಿ ಜರುಗಿದ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಜರುಗಿದ ತಾಲ್ಲೂಕಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಕ್ರೀಡೆಗಳಿಂದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಉತ್ತಮ ಕ್ರೀಡಾಪಟುಗಳಿದ್ದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲಿಕ್ಕೆ ತಾಲ್ಲೂಕು ಮಟ್ಟದ ಕ್ರೀಡಾಕೂಟಗಳು ವಿದ್ಯಾರ್ಥಿಗಳಿಗೆ ಅವಕಶವನ್ನು ನೀಡುತ್ತವೆ. ವಿದ್ಯಾರ್ಥಿಗಳು ಅಂಥ ಅವಕಾಶವನ್ನು ಸದ್ಬಳಿಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಕ್ರೀಡೆಗಳನ್ನು ಹವ್ಯಾಸವಾಗಿ ಬೆಳೆಸಿಕೊಳ್ಳಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿರುವ ಕ್ರೀಡ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವಂತಾಗಬೇಕು ಎಂದರು.
ಮೂಡಲಗಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಎಸ್.ಆರ್. ಸೋನವಾಲಕರ ಅಧ್ಯಕ್ಷತೆವಹಿಸಿದ್ದರು.
ಅತಿಥಿಗಳಾಗಿ ತಹಶೀಲ್ದಾರ್ ಶಿವಾನಂದ ಬಬಲಿ, ತಾಲ್ಲೂಕಾ ಪಂಚಾಯ್ತಿ ಇಒ ಎಫ್.ಜಿ. ಚಿನ್ನನ್ನವರ, ಸಿಡಿಪಿಒ ಯಲ್ಲಪ್ಪ ಗದಾಡಿ, ಪುರಸಭೆ ಸದಸ್ಯರಾದ ಹಣಮಂತ ಗುಡ್ಲಮನಿ, ಬಿಇಒ ಕಚೇರಿಯ ತಾಲ್ಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಎ.ಎ. ಜುನೇದಿಪಟೇಲ, ಬಿಆರ್ಸಿ ಆರ್.ಎಂ. ಆನಿ, ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ವೈ.ಬಿ. ಪಾಟೀಲ, ಸಿದ್ರಾಮ್ ಲೋಕನ್ನವರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆನಂದ ಹಂಜ್ಯಾಗೋಳ, ಸಿದ್ದು ಗಡ್ಡೇಕರ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರವಿ ಹೊಸಟ್ಟಿ, ಎ.ಪಿ. ಪರಸನ್ನವರ ಇದ್ದರು.
ಕೆ.ಎಚ್. ಪಾಟೀಲ ನಿರೂಪಿಸಿದರು, ದೈಹಿಕ ಶಿಕ್ಷಣ ಪರಿವೀಕ್ಷಕ ಎ.ಎ. ಜುನೇದಪಟೇಲ ವಂದಿಸಿದರು.
ಕ್ರೀಡಾ ಜ್ಯೋತಿ: ಅತಿಥಿಗಳು ಪ್ರಾರಂಭದಲ್ಲಿ ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿದರು. ಸಮಾರಂಭದ ಪೂರ್ವದಲ್ಲಿ ಕ್ರೀಡಾಪಟುಗಳು ತಂದ ಕ್ರೀಡಾ ಜ್ಯೋತಿಯನ್ನು ಅತಿಥಿಗಳು ಸ್ವಾಗಿತಿಸಿ ವೇದಿಕೆ ಬಳಿಯಲ್ಲಿ ಪ್ರತಿಷ್ಠಾಪಿಸಿದರು.
ಸನ್ಮಾನ: ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಸರ್ಕಾರಿ ಶಾಲೆಗಳಿಗೆ ದೇಣಿಗೆ ಸಂಗ್ರಹಿಸಿದ ಮುಖ್ಯ ಶಿಕ್ಷಕರನ್ನು ಹಾಗೂ ಕಲ್ಲೋಳಿಯ ಸಡ್ಲ್ಯಾರಮಡ್ಡಿ ಸರ್ಕಾರಿ ಶಾಲೆಗೆ ಭೂದಾನ ಮಾಡಿದ ಕಲ್ಲೋಳಿ ಅಡಿವೆಪ್ಪ ಸಡ್ಲಿ, ಗುರುನಾಥ ಸಡ್ಲಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿದರು.