ಮೂಡಲಗಿ– ಜೀವನದಲ್ಲಿ ನಿರಂತರ ಪ್ರಯತ್ನ ಮತ್ತು ಸತತ ಅಧ್ಯಯನದ ಮೂಲಕ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದು ತುಕ್ಕಾನಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಕುಮಾರ ಮರ್ದಿ ಹೇಳಿದರು.
ಅವರು ತುಕ್ಕಾನಟ್ಟಿ ಪ್ರಾಥಮಿಕ ಶಾಲೆಯ 8 ನೇ ತರಗತಿಯ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಯಾವುದೇ ಕೆಲಸವನ್ನು ಶೃದ್ದೆ ನಿಷ್ಠೆಯಿಂದ ಮಾಡಿದರೆ ಫಲ ಸಿಕ್ಕೇ ಸಿಗುತ್ತದೆ. ಅದರಲ್ಲೂ ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡು ತಮ್ಮ ಜ್ಞಾನ ಬಂಢಾರ ಹೆಚ್ಚಿಸಿಕೊಳ್ಳಬೇಕೆಂದು ಕರೆ ನೀಡಿದರು. ಗ್ರಾಮ ಒನ್ ಹಾಗೂ ಗ್ರಾಮ ಪಂಚಾಯತ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ನೀಡಲಾಗುವದು. ಬಡವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಸಿಕೊಳ್ಳಬೇಕೆಂದರು.
ಅತಿಥಿಗಳಾಗಿ ಮಾತನಾಡಿದ ಗ್ರಾಮ ಪಂಚಾಯತ ಸದಸ್ಯೆ ಸುನಂದಾ ಭಜಂತ್ರಿ ಪಂಚಾಯತಿ ಹಾಗೂ ಧರ್ಮಸ್ಥಳ ಗಾಮಾಭಿವೃದ್ಧಿ ಸಂಸ್ಥೆಯಿಂದ ಶಾಲೆಗೆ ಬೇಕಾಗುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನ ಪಡುತ್ತೇವೆ. ಅಲ್ಲದೇ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ತಾವು ಬಡವರು ಎಂಬುದನ್ನು ತೊಡೆದು ಹಾಕಿ. ನೀವು ಜ್ಞಾನದಿಂದ ಶ್ರೀಮಂತರಾಗಿದ್ದೀರಿ. ನೀವು ಹೃದಯವಂತಿಕೆಯಿಂದ ಶ್ರೀಮಂತರಾಗಿದ್ದೀರಿ. ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಬದುಕಿನಲ್ಲಿ ಸವಾಲುಗಳನ್ನು ಎದುರಿಸಲು ಸಮರ್ಥರಾಗಿರುತ್ತಾರೆ ಎಂದರು.
ಇನ್ನೋರ್ವ ಅತಿಥಿಯಾಗಿದ್ದ ಗ್ರಾಮ ಪಂಚಾಯತ ಉಪಾಧ್ಯಕ್ಷೆ ಮಹಾದೇವಿ ಗದಾಡಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಗುರು ಎ.ವ್ಹಿ.ಗಿರೆಣ್ಣವರ ಮಾತನಾಡಿ ಕರೋನಾ ಹಿನ್ನೆಲೆಯಲ್ಲಿ ಅಭ್ಯಾಸದಲ್ಲಿ ವ್ಯತ್ಯಾಸವಾದರೂ ಕೂಡ 3-4 ತಿಂಗಳಿಂದ ಶಾಲೆಗಳು ಪ್ರಾರಂಭವಾಗಿರುವದರಿಂದ ಚೇತರಿಸಿಕೊಂಡು ಪರೀಕ್ಷೆ ಎದುರಿಸಿ ಮುಂದಿನ ತರಗತಿಗಳಿಗೆ ಹೋಗುತ್ತಿರುವದು ಸಂತಸದ ವಿಷಯ. ಗ್ರಾಮೀಣ ಮಟ್ಟದಲ್ಲಿ ಪ್ರೌಢಶಾಲೆಗಳು ಇಲ್ಲದಿರುವದರಿಂದ ಕೆಲವು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು ಅಲ್ಲದೇ ಅಪ್ರಾಪ್ತ ಬಾಲಕಿಯರು ಬಾಲ್ಯ ವಿವಾಹಕ್ಕೆ ಒಳಗಾಗುತ್ತಿದ್ದಾರೆ. ಕಾರಣ ಇಂತಹ ವಿದ್ಯಾರ್ಥಿಗಳಿಗೆ ಗ್ರಾಮ ಮಟ್ಟದಲ್ಲಿ ಸರ್ಕಾರಿ ಪ್ರೌಢಶಾಲೆಗಳ ಅಗತ್ಯತೆ ತುಂಬಾ ಇದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಕುಮಾರ ಮರ್ದಿ, ಉಪಾಧ್ಯಕ್ಷೆ ಮಹಾದೇವಿ ಗದಾಡಿ ಸದಸ್ಯರಾದ ಸುನಂದಾ ಭಜಂತ್ರಿ, ಭರಮಪ್ಪ ಹರಿಜನ ಪ್ರಧಾನ ಗುರು ಎ.ವ್ಹಿ.ಗಿರೆಣ್ಣವರ, ಶಿಕ್ಷಕರಾದ ವಿಮಲಾಕ್ಷಿ ತೋರಗಲ್. ಶೀಲಾ ಕುಲಕರ್ಣಿ, ಲಕ್ಷ್ಮೀ ಹೆಬ್ಬಾಳ, ಪುಷ್ಪಾ ಭರಮದೆ, ಕುಸುಮಾ ಚಿಗರಿ, ಸಂಗೀತಾ ತಳವಾರ, ಶಿವಲೀಲಾ ಹುಲಕುಂದ, ಖಾತೂನ ನದಾಫ, ಎ.ಡಿ.ಲಮಾಣಿ, ಎಮ್.ಕೆ.ಕಮ್ಮಾರ, ಕೆ.ಅರ್. ಭಜಂತ್ರಿ, ಎಮ್.ಡಿ. ಗೋಮಾಡಿ, ಹೊಳೆಪ್ಪ ಗದಾಡಿ ಉಪಸ್ಥಿತರಿದ್ದರು.
ಶಿಕ್ಷಕ ಮಹಾದೇವ ಗೋಮಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.