ಉಪಯುಕ್ತ.ಕಾಮ್ ಇ – ಪತ್ರಿಕೆಯಲ್ಲಿ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿರವರು ಅಧಿಕ ಶ್ರಾವಣ ಮಾಸದಲ್ಲಿ ನಡೆಸಿದ ಅಕ್ಷರ ಆರಾಧನೆ – ಶ್ರೀ ಕೃಷ್ಣಾವತಾರ ಲೀಲೆ, ಮಹಿಮೆ, ಸಂದೇಶಗಳನ್ನು ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನವು ತನ್ನ ದಶಮಾನೋತ್ಸವದ ಅಂಗವಾಗಿ ‘ಕೃಷ್ಣನ ಹೆಸರೇ ಲೋಕಪ್ರಿಯ’ ಅನವರತ ಸ್ಫೂರ್ತಿಯ ಸೆಲೆ ಎಂದು ಪುಸ್ತಕ ರೂಪದಲ್ಲಿ ಪ್ರಕಟಿಸಿದೆ.
ಪುಸ್ತಕದ ಲೋಕಾರ್ಪಣೆಯನ್ನು ಇದೇ ಆ. 9 ಬುಧವಾರ ಬೆಳಿಗ್ಗೆ 8.00ಗಂಟೆಗೆ ನಗರದ ಗಾಂಧಿ ಬಜಾರಿನ ಸೋಸಲೆ ಶ್ರೀ ವ್ಯಾಸರಾಜ ಮಠದ ಆವರಣದ ಪ್ರಸನ್ನ ಶ್ರೀನಿವಾಸ ದೇವರ ಸನ್ನಿಧಿಯಲ್ಲಿ ತಮ್ಮ 7ನೇ ಚಾತುರ್ಮಾಸ್ಯ ವ್ರತಾನುಷ್ಠಾನ ಕೈಗೊಂಡಿರುವ ಮುನಿತ್ರಯ ಪೀಠ ಸೋಸಲೆ ಶ್ರೀ ವ್ಯಾಸರಾಜ ಮಠದ ವಿದ್ಯಾಕರ್ನಾಟಕ ಸಿಂಹಾಸನಾಧೀಶ್ವರರಾದ ಪೂಜ್ಯ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರು ಲೋಕಾರ್ಪಣೆಗೊಳಿಸುವರು.
ಉಪಯುಕ್ತ.ಕಾಮ್ ಸಂಪಾದಕ ಚಂದ್ರಶೇಖರ್ ಕುಳಮರ್ವ , ಕೃತಿಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಇನ್ನಿತರ ಗಣ್ಯರು ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿವರಗಳಿಗೆ ಸಂಪರ್ಕಿಸಿ : 90356 18076
ಕೃತಿ ಕುರಿತು:
ಹೊಸಹೊಳಹುಗಳ ಮೂಲಕ ಸ್ಫೂರ್ತಿದಾಯಕ ಓದಿಗೆ ಅನುವು ಮಾಡಿಕೊಡುವ – ಧರ್ಮ – ಸಂಸ್ಕೃತಿ ಬಗ್ಗೆ ಅಪಾರ ಕಾಳಜಿ ಇರುವ ಸಾಂಸ್ಕೃತಿಕ ಸೇವಾಬಂಧು ಲೇಖಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರ ‘ ಕೃಷ್ಣನ ಹೆಸರೇ ಲೋಕಪ್ರಿಯ’ ಹಲವು ಕಾರಣಗಳಿಂದಾಗಿ ಮಹತ್ವದ ಪುಸ್ತಕ. ಕೃಷ್ಣ ತತ್ವದ ಸಾಂಸ್ಕೃತಿಕ, ಪೌರಾಣಿಕ, ಐತಿಹಾಸಿಕ, ಸಾಹಿತ್ಯಕ, ಧಾರ್ಮಿಕ ನೆಲೆಯ ಅಗಣಿತ ಆಯಾಮಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತ 33 ಲೇಖನಗಳ ಸಂಗ್ರಹದಲ್ಲಿ ಸರಳ ಸುಂದರ ನಿರೂಪಣೆಯೊಂದಿಗೆ ಓದಿಸಿಕೊಂಡು ಸತ್ವಭರಿತ ಜ್ಞಾನದೌತಣ ನೀಡುತ್ತದೆ.
ಲೇಖಕರಿಂದ ಅನೇಕ ಸಂಪಾದಿತ ಮತ್ತು ಸ್ವಂತ ಕೃತಿಗಳು ಮೂಡಿಬಂದಿದ್ದು, ಸಾರಸ್ವತ ವ್ಯವಸಾಯದಲ್ಲೇ ತೊಡಗಿಸಿಕೊಂಡು ಕ್ರಿಯಾಶೀಲರಾಗಿ ಚಿರಪರಿಚಿತರಾಗುತ್ತಿದ್ದಾರೆ. ಇಲ್ಲೊಂದು ಜ್ಞಾನವೃಷ್ಟಿ ಇದೆ, ಧರ್ಮದೃಷ್ಟಿ ಇದೆ, ಆಧ್ಯಾತ್ಮದ ಬೆಳಕಿದೆ, ಸಾತ್ವಿಕತೆಯ ರೂಪವಿದೆ. ಶಾಸ್ತ್ರೀಯ ಚೌಕಟ್ಟಿದೆ. ಕೃಷ್ಣನ ಕುರಿತು ವಿಭಿನ್ನ ನೆಲೆಯ ಚಿಂತನೆಗಳನ್ನೊಳಗೊಂಡ ಈ ಕೃತಿಯನ್ನು ಆಸಕ್ತರು ಬಂಧು ಮಿತ್ರರಿಗೆ ಉಡುಗೊರೆಯಾಗಿ ನೀಡಲು ಅತ್ಯುತ್ತಮ ಆಯ್ಕೆ.