ಸಿಂದಗಿ; ಯುವಭಾರತ ಮತ್ತು ನವಭಾರತ ನಿರ್ಮಾಣವಾಗಬೇಕಾದರೆ ಸದೃಢ, ಸಶಕ್ತ ಮತ್ತು ಸಮನ್ವಯ ಹೊಂದಿರುವ ಮನಸ್ಸು ಮುಖ್ಯ. ಅಂತಹ ಮನಸ್ಸುಗಳಿಂದ ಮಾತ್ರ ದೇಶ ಕಟ್ಟಲು ಸಾಧ್ಯ ಎಂದು ಮಲಘಾಣದ ಶರಣಬಸವೇಶ್ವರ ಸಂಯುಕ್ತ ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್.ಬಿ. ಜಾಧವ ಹೇಳಿದರು.
ಪಟ್ಟಣದ ಪಿ.ಇ.ಎಸ್. ಸಂಸ್ಥೆಯ ಶ್ರೀಮತಿ ಪ್ರೇಮಾ. ಭೀ. ಕರ್ಜಗಿ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯ ಹಾಗೂ ಪಿ.ಇ.ಎಸ್. ಗಂಗಾಧರ. ಎನ್. ಬಿರಾದಾರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಸ್ವಾಮಿ ವಿವೇಕಾನಂದರ 159ನೇ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿವೇಕಾನಂದರ ವಿಚಾರಧಾರೆಗಳನ್ನು ಹಾಗೂ ತತ್ವ ಸಿದ್ದಾಂತಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ನಡೆದುಕೊಂಡಾಗ ಮಾತ್ರ ಸುಭದ್ರವಾದ ದೇಶಕಟ್ಟಲು ಸಾದ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಳಗಾನೂರದ ಶ್ರೀ ಕೇದಾರಲಿಂಗೇಶ್ವರ ಪ್ರೌಢಶಾಲೆಯ ದೈಹಿಕ ಶಿಕ್ಷಕ ಮಂಜುನಾಥ ಕುಂಬಾರ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಯುವಕರಲ್ಲಿ ಬತ್ತಿ ಹೋಗುತ್ತಿರುವ ಚೈತನ್ಯದ ಚಿಲುಮೆಯನ್ನು ಅಳಿದು ನವಚೈತನ್ಯವನ್ನು ಹುಟ್ಟಿಸಬೇಕು. ಯುವಕರು ಉತ್ಸಾಹಿಗಳಾಗಬೇಕೆಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಬಿ.ಪಿ.ಕರ್ಜಗಿ, ಆಡಳಿತಾಧಿಕಾರಿ ಐ.ಬಿ.ಬಿರಾದಾರ, ಕೆ.ಎಚ್.ಸೋಮಾಪುರ ಸೇರಿದಂತೆ ಹಲವರು ಇದ್ದರು.