ಸಿಂದಗಿ- ದೈಹಿಕ,ಮಾನಸಿಕ, ಭಾವನಾತ್ಮಕ ಸಾಮರ್ಥ್ಯಗಳ ಸಾರ ಯೋಗದಲ್ಲಿ ಅಡಗಿದೆ ಯೋಗ ನಮ್ಮ ಬದುಕನ್ನು ಸುಸ್ಥಿರವನ್ನಾಗಿ ಮಾಡುತ್ತದೆ ಎಂದು ಎಚ್.ಎಜಿ.ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಹೇಳಿದರು.
ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಂ.ಮನಗೂಳಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯ, ಎಚ್.ಜಿ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ‘ಮಹಿಳಾ ಸಬಲೀಕರಣಕ್ಕಾಗಿ ಯೋಗ’ ಎಂಬ ಶಿರ್ಷಿಕೆಯಡಿಯಲ್ಲಿ ಶುಕ್ರವಾರ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಿತ್ಯ ಅರ್ಧ ಘಂಟೆ ಯೋಗ ಮಾಡಿದರೆ ನಾವು ನಿರೋಗಿಗಳಾಗುತ್ತವೆ. ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿ ಇಡಲು ಸಾಧ್ಯ. ಇದರಿಂದ ಹೆಚ್ಚು ಸ್ಮರಣ ಶಕ್ತಿ ಹೆಚ್ಚಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಿ.ಎಂ.ಮನಗೂಳಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಜಿ.ಪಾಟೀಲ ಮಾತನಾಡಿ, ಭಾರತದ ಪವಿತ್ರ ಭೂಮಿಯಲ್ಲಿ ಹುಟ್ಟಿಕೊಂಡಿರುವ ಯೋಗಕ್ಕೆ ವಿಶ್ವದಲ್ಲಿಯೆ ಹೆಚ್ಚು ಮಾನ್ಯತೆ ಸಿಗುತ್ತಲಿದೆ ಎಂದ ಅವರು ಯೋಗದ ಆಚರಣೆ, ಧ್ಯೇಯ ಮತ್ತು ಅದರ ಉಪಯೋಗದ ಕುರಿತು ಮಾತನಾಡಿದರು.
ವೇದಿಕೆ ಮೇಲೆ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಮಸಂಯೋಜನಾಧಿಕಾರಿಗಳಾದ ಡಾ. ಬಿ.ಡಿ.ಮಾಸ್ತಿ, ಡಾ.ಶಾಂತುಲಾಲ ಚವ್ಹಾಣ, ಉಪ ಪ್ರಾಚಾರ್ಯ ಎಸ್.ಬಿ.ಕುಲಕರ್ಣಿ ಇದ್ದರು.
ನಂತರ ದೈಹಿಕ ಉಪನ್ಯಾಸಕರಾದ ಡಾ. ಅಂಬರೀಶ ಬಿರಾದಾರ, ಸತೀಶ ಬಸರಕೋಡ, ಎಸ್.ಎ.ಜಾಗೀರದಾರ ವಿದ್ಯಾರ್ಥಿಗಳಿಗೆ ಯೋಗದ ವಿವಿಧ ಭಂಗಿಗಳ ಕುರಿತು ಆಸನಗಳ ತರಬೇತಿ ನೀಡಿದರು.
ವಿದ್ಯಾರ್ಥಿನಿ ಕಾಶಿಬಾಯಿ ಮಾಶ್ಯಾಳ ಪ್ರಾರ್ಥಿಸಿದರು, ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಅಂಗ ಸಂಸ್ಥೆಗಳ ಉಪನ್ಯಾಸಕರು ಭಾಗವಹಿಸಿದ್ದರು.