ಕಾದಂಬರಿಯ ರೂಪದಲ್ಲಿ ವ್ಯಕ್ತಿಗಳ ಜೀವನಚರಿತ್ರೆಯನ್ನು ಹೃದ್ಯವಾಗಿ ಕಟ್ಟಿಕೊಡುವುದರಲ್ಲಿ ಬಾಬು ಕೃಷ್ಣಮೂರ್ತಿ ಸಿದ್ಧಹಸ್ತರು. ಸುಮಾರು ನಾಲ್ಕೂವರೆ ದಶಕಗಳ ಹಿಂದೆ ಅವರು ಬರೆದ, ಚಂದ್ರಶೇಖರ ಆಜಾದ್ ಜೀವನಕೇಂದ್ರಿತ ಕಾದಂಬರಿ “ಅಜೇಯ” ಅಂದಿನ ಓದುಗರನ್ನು ಎಷ್ಟು ಪ್ರಭಾವಿಸಿತ್ತೆಂದರೆ ಅದನ್ನು ಓದಿದ ಸಾವಿರಾರು ಜನ ತಮ್ಮ ಮಕ್ಕಳಿಗೆ ಕಾದಂಬರಿಯ ಹೆಸರನ್ನೇ ಇಟ್ಟರು! ಈಗಲೂ ಬಹುತೇಕರಿಗೆ ಬಾಬು ಕೃಷ್ಣಮೂರ್ತಿಯವರ ಹೆಸರು ಕೇಳಿದಾಕ್ಷಣ ಅವರ ಕಣ್ಮುಂದೆ ಬರುವುದು ಮೀಸೆ ತಿರುವುತ್ತ ನಿಂತ ಚಂದ್ರಶೇಖರ ಆಜಾದನ ಚಿತ್ರವೇ!
ಅನಂತರದ ದಿನಗಳಲ್ಲಿ ಬಾಬು ಕೃಷ್ಣಮೂರ್ತಿಯವರು ಜೀವನಚರಿತ್ರೆ ಆಧಾರಿತ ಅನೇಕ ಕಾದಂಬರಿಗಳನ್ನು ಬರೆದರು. “ಅದಮ್ಯ” “ರುಧಿರಾಭಿಷೇಕ”, “ಮಹಾಸಾಧಕ ” _ ಈ ಒಂದೊಂದು ಕಾದಂಬರಿಯೂ ಕಥಾನಾಯಕನ ಸಮಗ್ರ ವ್ಯಕ್ತಿತ್ವವನ್ನು ಜೀವನವನ್ನು ಪರಿಚಯಿಸುವ ಜೊತೆಜೊತೆಗೇ ಅವರ ಕಾಲಘಟ್ಟವನ್ನೂ ಪರಿಚಯಿಸುತ್ತವೆ. ಇದು ಬಾಬು ಕೃಷ್ಣಮೂರ್ತಿ ಅವರ ಬರವಣಿಗೆಯ ಅಪೂರ್ವ ಲಕ್ಷಣವೂ ಹೌದು.
ಪ್ರಸ್ತುತ ಶ್ರೀಮದ್ರಾಮಾನುಜರ ಜೀವನವನ್ನು ಆಧರಿಸಿ ಬಾಬು ಕೃಷ್ಣಮೂರ್ತಿಯವರು ಬರೆದಿರುವ ಕಾದಂಬರಿ “ವಿಶಿಷ್ಟ” ಕೂಡಾ ಅವರ ಈ ಹಿಂದಿನ ಎಲ್ಲ ಕಾದಂಬರಿಗಳಂತೆ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಅತ್ಯಂತ ವಿಶಿಷ್ಟವಾದದ್ದು. ಆಚಾರ್ಯ ರಾಮಾನುಜರ ಜೀವನ, ಅವರ ಕಾಲಘಟ್ಟದಲ್ಲಿ ನಡೆದ ಘಟನಾವಳಿಗಳು, ಸಮಾಜಸುಧಾರಣೆಯ ಉದ್ದೇಶದಿಂದ ಅವರು ನಡೆಸಿದ ಕಲಾಪಗಳು _ ಇವನ್ನೆಲ್ಲ ಹೃದ್ಯವಾಗಿ, ಆಪ್ತವಾಗಿ, ಎಲ್ಲರಿಗೂ ಓದಲು ಸುಲಭವಾಗುವ ಸುಲಲಿತ ಶೈಲಿಯಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ.
ಭಾರತೀಯರು ಪ್ರತಿಯೊಬ್ಬರೂ ಓದಲೇಬೇಕಾದ ಕೃತಿಯಿದು.
ನಿಮ್ಮ ಪ್ರತಿಯನ್ನು ಖರೀದಿಸಲು WhatsApp ಮಾಡಿ: 7483681708
ನಿಮ್ಮ ಬಳಗದಲ್ಲಿರುವ ಆಸಕ್ತ ಓದುಗರೊಡನೆ ಈ ಮಾಹಿತಿಯನ್ನು ಹಂಚಿಕೊಳ್ಳಬಹುದು.