ಊರಿನ ಉಸಾಬರಿ ನನಗ್ಯಾಕೆ?

Must Read

ಲೋಕದಲ್ಲಿ ಏನೇನೊ ಅನಾಹುತ ಗಳು ,ಪ್ರಾಕೃತಿಕ ಇರಲಿ ಇಲ್ಲ ಮನುಷ್ಯ ಹುಟ್ಟು ಹಾಕಿದ್ದೇ ಇರಲಿ, ನಡೆಯುತ್ತವೆ.ಸಮಯ ಸಮಯಕ್ಕೆ ಅನಿರೀಕ್ಷಿತವಾಗಿ.ಅವೆಲ್ಲದರ ಬಗ್ಗೆ ನಾವು ತಲೆಕೆಡಿಸಿ ಆಗೋದಾದರೂ ಏನು?ದೇವರು ನೋಡಿ ಕೊಳ್ಳುತ್ತಾನೆ. ನಮಗ್ಯಾಕೆ ಅವೆಲ್ಲದರ ಉಸಾಬರಿ? ನಾವಾಯ್ತು ನಮ್ಮ ಮನೆ ಕುಟುಂಬ ಹಾಯಾಗಿದ್ದರೆ ಸಾಲದೇ?ಅದರ ಬಗ್ಗೆ ತಲೆ ಕೆಡಿಸಿ ಕೊಂಡರೆ ಸಮಸ್ಯೆ ಕೊನೆಗೊಳ್ಳುತ್ತದೆಯೇ? ಅದನ್ನೆಲ್ಲ ಪರಿಹರಿಸಲು.ಸಂಬಂಧ ಪಟ್ಟವರಿಲ್ಲವೇ?

ನಮ್ಮ ಮಾನ್ಯ ಪ್ರಧಾನಿ ಮೋದಿಜಿ ಅವರು ಸ್ವಚ್ಛತೆಯ ಬಗ್ಗೆ ಕಾಳಜಿ ಇರಿಸಿ ‘ಸ್ವಚ್ಚ ಭಾರತ’ ಕರೆ ನೀಡಿದರು. ತಾವೇ ಸ್ವತಃ ಕಸಬರಿಕೆ ಕೈಗೆತ್ತಿ ರಸ್ತೆಯ ಕಸ ತೆಗೆದರು.ಹಾಗ0ತ ದೇಶವನ್ನೆಲ್ಲ ತಾನೇ ಸ್ವಚ್ಚ್ಗ ಮಾಡುವ ಹೊಣೆ ಅವರದಲ್ಲ.ಅವರು ಮಾದರಿ ಯಾಗಿ ಮುನ್ನುಡಿ ಬರೆದರು. ಉಳಿದ ನಾಗರಿಕರಿಗೆ ಸಂದೇಶ ರವಾನೆ ಮಾಡಿದರು. ಅದನ್ನು ಅನುಸರಿಸುವುದು ನಮ್ಮ ಕರ್ತವ್ಯ ಹೊರತು ಅವರೇ ಸ್ವತಹ ಬಂದು ನಿಮ್ಮ ಊರು ಕೇರಿ ಗುಡಿಸುವುದು ನಿಮ್ಮ ನಿರೀಕ್ಷೆ ಆದರೆ ಮೂರ್ಖತನ ಆಗುತ್ತದೆ. ನಮಗ್ಯಾಕೆ ಊರಿನ ಉಸಾಬರಿ. I don’t worry ಅಂದರೆ ಹೇಗೆ?ಜಪಾನಿನ ಶಾಲೆಯಲ್ಲಿ ಪುಟ್ಟ ಮಕ್ಕಳು ಕೂಡಾ ಕಕ್ಕಸು ಶುಚಿ ಮಾಡುವುದು ,ನೆಲ ಒರಸುವುದು ಇತ್ಯಾದಿ ಕಡ್ಡಾಯವಾಗಿ ಮಾಡುತ್ತಾರೆ.ಪರಿಣಾಮ ವಾಗಿ ಮುಂದೆ ಅವರಲ್ಲಿ ಅದರ ಪ್ರಜ್ಞೆ ಆಜೀವನ ಪರ್ಯಂತ ಇರುತ್ತದೆ.

ನಮ್ಮ ನೆರೆಹೊರೆಯಲ್ಲಿ.ಅಕಸ್ಮಾತ್ ಏನಾದರೂ ದುರ್ಘಟನೆ, ಅಗ್ನಿ ಆಕಸ್ಮಿಕ,ಗ್ಯಾಸ್ ಸಿಲಿಂಡರ್ ಸ್ಫೋಟ ನಡೆಯಿತು ಅಂತ ಊಹಿಸಿಕೊಳ್ಳಿ. ಆಗ ನಮ್ಮಲ್ಲೇ ಕೆಲವು ನೆರೆಹೊರೆಯ ಮಂದಿ ಏನೂ ನಡೆದಿಲ್ಲ ಎಂಬ ನಿಲುವು ತಾಳಿ ಅದೆಲ್ಲ ತಮ್ಮ ಉಸಾಬರಿ ಅಲ್ಲ, ಅಗ್ನಿ ಶಾಮಕ ವಿಭಾಗದ ಉಸ್ತುವಾರಿ ಎನ್ನುತ್ತಾ ತೆಪ್ಪಗೆ ಇದ್ದು ಬಿಡುತ್ತಾರೆ. ಪರಿಣಾಮ ಅಗ್ನಿಯ ಕೆನ್ನಾಲಿಗೆ ತಮ್ಮ ಮನೆಯತ್ತ ಬಂದಾಗ ಎಚ್ಚರ ಗೊಳ್ಳುತ್ತಾರೆ.ಅಂದ್ರೆ ಅದೇ” ಊರಿನ ಉಸಾಬರಿ “ಅಜೆಂಡ. ಇತ್ತೀಚೆಗೆ ಬೆಂಗಳೂರಿನ ಬಡಾವಣೆ ಒ0ದರಲ್ಲಿ 4 ಮಹಡಿಯ ಪ್ಲಾಟ್ ಸಮುಚ್ಚಯಕ್ಕೆ ಬೆಂಕಿ ತಗುಲಿದ ಪರಿಣಾಮ ಅದು ಇನ್ನಿತರ ಫ್ಲ್ಯಾಟ್ ಗಳನ್ನೂ ಆಪೋಷನ ತೆಗೆದುಕೊಂಡು ಬಿಟ್ಟಿತು. ಯಾರದೋ ತಪ್ಪಿಗೆ ಇನ್ಯಾರೋ ತಲೆದಂಡ ಕೊಡುವ ಮುನ್ನ ಯೋಚಿಸಿ. ನಿಮ್ಮ ರಕ್ಷಣೆ ಮಾಡಿಕೊಳ್ಳ ಬೇಕಾದರೆ ನೀವು ಕೂಡಾ ಆ ಘಟನೆಯನ್ನು ನಿಯಂತ್ರಿಸಲು ನೋಡಬೇಕು. ಇಲ್ಲವಾದರೆ ನಿಮ್ಮದೂ ತಲೆದಂಡ ಆದೀತು.

ಭೂಮಿಯಲ್ಲಿ ಮನುಷ್ಯನ ದುರಾಸೆಯಿಂದ. ಪ್ರಕ್ರತಿಯ ಉಷ್ಣಾಂಶ ಏರುಗತಿಯಲ್ಲಿ ಸಾಗುತ್ತಿದೆ ಹಿಮಾಚ್ಚಾದಿತ ಪರ್ವತಗಳು ಕರಗಿ ನೀರು ನದಿಗೆ ಹರಿದು ಕೃತಕ ಮಹಾಪೂರ ಉಂಟಾಗುವ ಭೀತಿ ಇದೆ. ಅದೆಷ್ಟೋ ಜೀವ ಹಾನಿ ಸಂಪತ್ತು ನಾಶ ಆಗುವ ಸಾಧ್ಯತೆ ಇದೆ. ಇದೆಲ್ಲ ನಾವು ನೀವು ಮಾಡಿದ ಕೃತ್ಯಕ್ಕೆ ಸಂಭವಿಸುವ ಅಪಘಾತಗಳಲ್ಲ ಇನ್ನ್ಯಾರೋ ರಾಸಾಯನಿಕ ತ್ಯಾಜ್ಯ ಭೂಮಿಗೆ ಚೆಲ್ಲಿ ಉಂಟಾಗುವ ಅಪಸವ್ಯ.

ಕಲ್ಲಪ್ಪ ಗುಂಡಪ್ಪ ಸೇರಿ ಮೆಣಸಪ್ಪ ಹುಡಿ ಅಂದ ಹಾಗೆ, ಸ್ವಾಭಾವಿಕವಾಗಿ ಮನುಷ್ಯ ಸಮಾಜ ಜೀವಿ.ತನ್ನ ಕುಟುಂಬದವರ ಹೊರತಾಗಿ ಇನ್ನುಳಿದವರೊಂದಿಗೆ ಸಹಬಾಳ್ವೆ, ಸಹಜೀವನ,ಸಹತಾಪ ,ಅನುಕಂಪ ಇತ್ಯಾದಿ ಇಟ್ಟುಕೊಂಡರೆ ಮಾತ್ರ ಬದುಕು ಸುಂದರ ವಾಗುತ್ತದೆ.ಇತರರ ಕಷ್ಟಕ್ಕೆ ನೆರವಿನ ಹಸ್ತ ಚಾಚುವುದು,‌‌ಎನಿಲ್ಲದಿದ್ದರೂ ನಾಲ್ಕು ಸಾಂತ್ವನದ ಮಾತಿನಿಂದ ಅವರ ದುಃಖ ದುಮ್ಮಾನಗಳಿಗೆ ಸ್ಪಂದಿಸುವುದು ಇವೆಲ್ಲ ನಮ್ಮ ಸ್ವಭಾವದಲ್ಲಿ ಹಾಸುಹೊಕ್ಕಾಗಬೇಕು. ಹಾಗಿದ್ದರೆ ಮಾತ್ರ ಬಾಳಿಗೆ ಒಂದು ಅರ್ಥ. ನಮ್ಮ ಪರಿಸರದಲ್ಲಿ ಕಾಣ ಬರುವ ಪ್ರಾಣಿ ಪಕ್ಷಿಗಳ ಜೀವನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಯಾವ ರೀತಿಯಲ್ಲಿ ಪರಸ್ಪರ ಹೊಂದಾಣಿಕೆ,‌‌‌ ಸಹಕಾರ, ಸ್ಪಂದನ ಇದೆ ಎಂಬುದು ಅರಿವಿಗೆ ಬರುತ್ತದೆ.‌ ಹೇಳಿಕೇಳಿ ಮನುಷ್ಯ ಜನ್ಮ ದೊಡ್ಡದು ಎಂದು ದಾಸರು ಕೀರ್ತನೆಗಳಲ್ಲಿ ಬಿಂಬಿಸಿದ್ದಾರೆ. ಆದರೆ ನಮ್ಮಲ್ಲಿ ಅಧಿಕಾಂಶ ಮಂದಿ ತಾವಾಯಿತು, ತಮ್ಮ ಮಕ್ಕಳು ಮರಿ ಆಯಿತು. ಊರಿನ ಉಸಾಬರಿ ನಮಗ್ಯಾಕೆ? ಎಂದು ಪ್ರಶ್ನಿಸುವವರೆ.

ಅದೆಷ್ಟೋ ಅನಾಥಾಲಯಗಳು, ಮಾನಸಿಕ,ದೈಹಿಕ ನ್ಯೂನ್ಯತೆ ಇಂದ ಬಳಲುವ, ತಮ್ಮವರೆ ಕ್ಯಾರೆ ಅನ್ನದ ಲಕ್ಷೋಪಲಕ್ಷ್ಯ ಜನರಿದ್ದಾರೆ ಸಮಾಜದಲ್ಲಿ.ಅವರನ್ನು ಉಚಿತವಾಗಿ ಸಲಹುವ ಸಂಸ್ಥೆಗಳು ಕೂಡಾ ಇವೆ.ಸಾರ್ವಜನಿಕರ ಔದಾರ್ಯದಿಂದ ಸಂಪನ್ಮೂಲ ಕ್ರೋಢೀಕರಿಸಿ ಅವರ ಆರೈಕೆ ಹೊಟ್ಟೆಪಾಡು ಇತ್ಯಾದಿ ನಡೆಯುತ್ತದೆ. ಊರಿನ ಉಸಾಬರಿ ನಮಗೇಕೆ? ಎನ್ನುವ ಜನರೇ ಸಮಾಜದಲ್ಲಿ ತುಂಬಿದ್ದರೆ ಈ ದೀನ ದಲಿತರ ಸ್ಥಿತಿ ಏನಾಗುತಿತ್ತು?

ಕೆಲವೊಮ್ಮೆ ಆದರೂ ನಾವು ಆಸ್ಪತ್ರೆಯ ವಾರ್ಡ್ಗಳಿಗೆ ಭೇಟಿ ನೀಡಿ ಅಪರಿಚಿತ ರೋಗಿಗಳಿಗೆ, ಸಾವಿನ ಅಂಚಿನಲ್ಲಿರುವ ಕ್ಯಾನ್ಸರ್, ಮೂತ್ರಪಿಂಡದ ಕಾಯಿಲೆ ಇತ್ಯಾದಿಗಳ ತೆಕ್ಕೆಗೆ ಬಿದ್ದಿರುವ ಇಂದೋ ನಾಳೆಯೊ ವಿದಾಯ ಹೇಳಲು ಸಿದ್ಧರಾದವರನ್ನು ಭೇಟಿಯಾಗಿ ನಾಲ್ಕು ಸಾಂತ್ವನದ ಮಾತು ಹೇಳಿ ಬಂದರೂ ಅದೊಂದು ದೊಡ್ಡ ಸಮಾಜ ಮುಖೀ ಕ್ರಿಯೆ ಅಲ್ಲವೇ?‌ಆ ನೊಂದ ಜೀವಗಳಿಗೆ ಎಷ್ಟೊಂದು ಹಿತ ಎನಿಸುತ್ತದೆ ನಿಮ್ಮ ಮಾತುಗಳು ಮತ್ತು ಸ್ಪರ್ಶ!ಇದು ಕೂಡ ಒಂದು ರೀತಿಯಲ್ಲಿ ಊರಿನ ಉಸಾಬರಿ. ಯಾವುದಕ್ಕಾದರೂ ನಾವು ತೆರೆದುಕೊಂಡರೆ ಸರಿ.

ಉಡುಪಿಯಲ್ಲಿ ವಿಷು ಶೆಟ್ಟಿ ಎಂಬ ಏಕ ವ್ಯಕ್ತಿ ಸೇನೆ ( One man army)ಇದೆ.ಕೈಯಲ್ಲಿ ಕಾಸಿಲ್ಲದಿದ್ದರೂ ಯಾವನೇ ರಸ್ತೆಯಲ್ಲಿ ಅಡ್ಡಾಡುವ ಕೊಳಕು,ಮಾನಸಿಕ ರೋಗಿಗಳಿಗೆ, ಸಾವಿನ ಅಂಚಿನಲ್ಲಿರುವ ಅನಾಥರಿಗೆ ಆತ ರಕ್ಷಾ ಕವಚ. ಆತನ ಜೀವನವೇ ಊರಿನ ಉಸಾಬರಿ ನೋಡಿಕೊಂಡಿರುವುದು.‌ಇಂತಹ ಸ್ವಯಂ ಸೇವಕರಿಂದಲೇ ಊರಿನ ಉಸಾಬರಿ ನೋಡುವ ಮಹಾನ್ ಕಾಯಕಕ್ಕೆ ಒಂದು ಅರ್ಥ ಬಂದಿರುವುದು.ಯಾವುದೇ ಸಂಸ್ಥೆ ಮಾಡುವ ಕಾಯಕ ಈತ ಒಬ್ಬನೇ ಮಾಡಿ ಯಾವ ನಿರೀಕ್ಷೆ, ಪ್ರತಿಫಲಕ್ಕಾಗಿ ಆಶಿಸದೇ ತನ್ನ ಬಾಳಿಗೆ ಒ0ದು ಸುಂದರ ಚೌಕಟ್ಟು ಕಟ್ಟಿದ್ದಾನೆ. ಇಂಥವರ ಸಂತತಿ ಸಾವಿರವಾಗಲಿ.


ಬಿ ನರಸಿಂಗ ರಾವ್, ಕಾಸರಗೋಡು

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group