ಸವದತ್ತಿ: ಕನ್ನಡ ನಾಡು – ನುಡಿಯನ್ನು ಸಂರಕ್ಷಿಸಿ ಕನ್ನಡ ನಾಡಿನ ಅಸ್ಮಿತೆಯನ್ನು ಉಳಿಸುವದಕ್ಕಾಗಿ ಕಟ್ಟಿದಂತಹ ಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್ತು. ಇದರ ಹಿಂದೆ ಅನೇಕ ಮಹನೀಯರ ದೂರದೃಷ್ಟಿ ಮತ್ತು ಪರಿಶ್ರಮ ಅಡಗಿದೆ ಎಂದು ನರಗುಂದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ.ಎಸ್.ವಿ.ಮನಗುಂಡಿ ನುಡಿದರು.
ಅವರು ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತಾಶ್ರದಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ ೧೦೮ನೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
೧೦೮ ವರ್ಷಗಳ ಹಿಂದೆ ಬೇರೆ ಬೇರೆ ಸಂಸ್ಥಾನಗಳಲ್ಲಿ ಹಂಚಿ ಹೋಗಿದ್ದ ಕನ್ನಡದ ಪ್ರದೇಶಗಳು ಒಂದಾಗಬೇಕೆಂಬ ಮಹದಾಸೆಯಿಂದ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್. ಎಂ. ವಿಶ್ವೇಶ್ವರಯ್ಯ ಇವರುಗಳ ಕನಸಿನ ಫಲವಾಗಿ ಕನ್ನಡ ಸಾಹಿತ್ಯ ಪರಿಷತ್ತು ಜನ್ಮ ತಾಳಿತು.
ಇದು ಬೆಂಗಳೂರಿನ ಶಂಕರಪುರವೆಂಬ ಬಡಾವಣೆಯಲ್ಲಿ ೧೯೧೫ ಮೇ ೫ರಂದು ಕಾರ್ಯಾರಂಭ ಮಾಡಿತು. ಅಂದು ಮೂವತ್ತು ಸದಸ್ಯರಿದ್ದ ಪರಿಷತ್ತು ಇಂದು ಮೂರು ಲಕ್ಷದ ೨೫ ಸಾವಿರ ಸದಸ್ಯರನ್ನೊಳಗೊಂಡ ಸಂಸ್ಥೆಯಾಗಿದೆ. ಆದರೂ ಇನ್ನೂ ಸಾಕಷ್ಟು ಜನರನ್ನು ಸದಸ್ಯತ್ವ ನೋಂದಣಿ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಯ.ರು.ಪಾಟೀಲ ಮಾತನಾಡಿ ನಾಡಿನಲ್ಲಿ ಸಾಂಸ್ಕೃತಿಕ ರಂಗವನ್ನು ಜೀವಂತವಾಗಿಡಲು ಯುವಕರು ಸಿದ್ಧವಾಗಬೇಕಾಗಿದೆ. ಕನ್ನಡದ ಅಸ್ಮಿತೆಯನ್ನು ಉಳಿಸಲು ಇಂದಿನ ಯುವಕರಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಮಾರುತಿ ದೊಂಬರ ವಹಿಸಿದ್ದರು, ರಾಜ್ಬಿ ಬಾವಕ್ಕನವರ್ ಪ್ರಾರ್ಥಿಸಿದರು, ತಾಲೂಕ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಜಿ.ವೈ.ಕರಮಲ್ಲಪ್ಪನವರ ಸ್ವಾಗತಿಸಿದರು, ತಾಲೂಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ವಾಯ್.ಎಂ. ಯಾಕೊಳ್ಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಪ್ರೊ. ಕೆ.ರಾಮರೆಡ್ಡಿ ಅತಿಥಿಗಳನ್ನು ಪರಿಚಯಿಸಿದರು, ಈ ಸಂದರ್ಭದಲ್ಲಿ ಸನ್ಮಾನಿತರಾದ ಝಕೀರ್ ನದಾಫ್ ಅವರು ಸನ್ಮಾನಿತರ ನುಡಿಗಳನ್ನಾಡಿದರು,
ತಾಲೂಕ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡಾ.ವಾಯ್.ಎಂ.ಯಾಕೊಳ್ಳಿಯವರಿಗೆ ಮಹಾವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು, ಮೋಹನ್ ಬೆಣಚಮರ್ಡಿ ವಂದಿಸಿದರು, ಡಾ. ಎ. ಎಫ್. ಬದಾಮಿ ನಿರೂಪಿಸಿದರು. ಈ ಸಂದರ್ಭದಲ್ಲಿ ನಿನ್ನೆ ದೈವಾಧೀನರಾದ ಶ್ರೀಮತಿ ಲಕ್ಷ್ಮೀಬಾಯಿ ಏಣಗಿ ಬಾಳಪ್ಪನವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಬಿ.ಕಿಲ್ಲೆದಾರ, ರಾಜಶೇಖರ ನಿಡವಣಿ, ಬಿ.ಎನ್.ಹೊಸೂರ, ಶ್ರೀಮತಿ ಅನಸೂಯಾ ಕಿಟದಾಳ, ಡಾ.ಪ್ರೇಮಾ ಯಾಕೊಳ್ಳಿ, ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯ ಸದಸ್ಯರು, ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕತೇರ ಸಿಬ್ಬಂದಿ ಉಪಸ್ಥಿತರಿದ್ದರು.